ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: 1926ರಲ್ಲಿ ಆರಂಭವಾಗಿ 2026ಕ್ಕೆ ಶತಮಾನ ಪೂರೈಸಲಿರುವ ಪಟ್ಟಣದ ಪುರಸಭೆ ಉಮಾ ವಿದ್ಯಾಲಯ ಪ್ರೌಢಶಾಲೆಯ ಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಇಲ್ಲಿನ ಜಗದ್ಗುರು ವೀರಗಂಗಾಧರ ರಂಭಾಪುರಿ ಸಮುದಾಯ ಭವನದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ನೂರು ವರ್ಷ ಪೂರೈಸುತ್ತಿರುವ ಪುರಸಭೆಯ ಉಮಾ ವಿದ್ಯಾಲಯ ಪ್ರೌಢಶಾಲೆ ಸಹಸ್ರಾರು ಜನರಿಗೆ ವಿದ್ಯೆ-ಬದುಕು ನೀಡಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಕಲಿಸಿದ ಗುರುಗಳು ಮತ್ತು ಕಲಿತ ಶಾಲೆಯನ್ನೂ ಎಂದಿಗೂ ಮರೆಯಬಾರದು ಮತ್ತು ಈ ಬಗ್ಗೆ ಅಭಿಮಾನವಿರಲಿ. ಸಧ್ಯ ನಾವು ಕಲಿತ ಶಾಲೆ ಶತಮಾನೋತ್ಸವದ ಸಂಭ್ರಮದ ಹೊಸ್ತಿಲಲ್ಲಿ ಇರುವುದು ನಮಗೆಲ್ಲ ಸಂತಸದ ವಿಷಯ. ಆದರೆ ಇದೀಗ ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆಯಿಂದ ಈ ಶಾಲೆಯಲ್ಲಿ ಮಕ್ಕಳ ಕೊರತೆಯ ಜೊತೆಗೆ ಹತ್ತಾರು ಸಮಸ್ಯೆಗಳು ತಲೆದೋರಿರುವುದು ನೋವಿನ ಸಂಗತಿ. ಕಾರಣ ಈವರೆಗೆ ಶಾಲೆಯಲ್ಲಿ ಓದಿದ ಎಲ್ಲ ಹಳೆಯ ವಿದ್ಯಾರ್ಥಿಗಳು ಸೇರಿ ಶಾಲೆಯ ಸಮಗ್ರ ಅಭಿವೃದ್ಧಿ, ಶ್ರೇಯೋಭಿವೃದ್ಧಿಗೆ ಕಟಿಬದ್ಧರಾಗುವ ಮೂಲಕ ಶತಮಾನೋತ್ಸವ ಸಂಭ್ರಮವನ್ನು ಸಡಗರದಿಂದ ಆಚರಿಸೋಣ ಎಂದು ಹೇಳಿದರು.
ವಕೀಲ ಬಿ.ಎಸ್. ಬಾಳೇಶ್ವರಮಠ ಮಾತನಾಡಿ, ನಾವು ಕಲಿತ ಶಾಲೆ ನೂರು ವರ್ಷ ಪೂರೈಸಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಶಾಲೆಯ ಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಣೆಯ ವಿವಿಧ ಸಮಿತಿಗಳನ್ನು ರಚಿಸಬೇಕು. ಈಗಾಗಲೇ ಹಳೇ ವಿದ್ಯಾರ್ಥಿಗಳ ಹತ್ತಾರು ಸಂಘಟನೆಗಳು ಇದ್ದು, ಅವುಗಳನ್ನು ಒಟ್ಟುಗೂಡಿಸಿ ಹೊಸ ವಾಟ್ಸಾಪ್ ಗ್ರೂಪ್ ರಚಿಸಿ ಎಲ್ಲರಿಗೂ ಮಾಹಿತಿ ತಲುಪುವಂತೆ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.
ಚನ್ನಪ್ಪ ಜಗಲಿ ಮಾತನಾಡಿ, ನಾವು ಅಭ್ಯಾಸ ಮಾಡಿದ ಶಾಲೆಯ ಕಟ್ಟಡ ಸಾಕಷ್ಟು ಶಿಥಿಲಗೊಂಡಿದ್ದು, ಮೊದಲು ಅದನ್ನು ದುರಸ್ತಿ ಮಾಡಿಸಲು ಕ್ರಮ ಕೈಗೊಳ್ಳಬೇಕು. ನಂತರ ಸಮಾರಂಭದ ಕುರಿತು ಸಮಿತಿಗಳನ್ನು ಮಾಡಿ ಆಯಾ ಸಮಿತಿಗೆ ಜವಾಬ್ದಾರಿ ಒಪ್ಪಿಸಬೇಕು ಎಂದರು. ನಿವೃತ್ತ ಶಿಕ್ಷಕ ಸಾಹಿತಿ ಪೂರ್ಣಾಜಿ ಖರಾಟೆ ಮಾತನಾಡಿ, ಉನ್ನತ ಸ್ಥಿತಿಯಲ್ಲಿದ್ದ ಪುರಸಭೆ ಉಮಾ ವಿದ್ಯಾಲಯ ಇಂದು ವಿದ್ಯಾರ್ಥಿಗಳಿಲ್ಲದೆ ನರಳುತ್ತಿದೆ. ಆದರೆ ಶಾಲೆಗೆ ಮತ್ತೆ ಹಳೆಯ ವೈಭವ ತಂದುಕೊಡಲು ಎಲ್ಲರೂ ಪ್ರಾಮಾಣಿಕವಾಗ ಪ್ರಯತ್ನಿಸೋಣ ಎಂದು ತಿಳಿಸಿದರು.
ಡಿ.ಬಿ. ಬಳಿಗಾರ, ಬಸವೇಶ ಮಹಾಂತಶೆಟ್ಟರ, ಓಂಪ್ರಕಾಶ ಜೈನ, ಆರ್.ಸಿ. ಪಾಟೀಲ, ಆನಂದ ಮೆಕ್ಕಿ, ಬಸವರಾಜ ಬೆಂಡಿಗೇರಿ, ಸೋಮೇಶ ಉಪನಾಳ, ನಾಗರಾಜ ಹಣಗಿ, ರಮೇಶ ನವಲೆ, ಎಸ್.ಎಫ್. ಆದಿ ಮತ್ತಿತರರು ಮಾತನಾಡಿದರು. ಶಾಲೆಯಲ್ಲಿ ಕಲಿತ ನೂರಾರು ಹಳೆಯ ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, ಒಂದು ಕಾಲದಲ್ಲಿ ಅತ್ಯಂತ ಉತ್ತುಂಗದಲ್ಲಿದ್ದ ನಮ್ಮ ಶಾಲೆ ಇಂದು ಮಕ್ಕಳಿಲ್ಲದೆ ಕೊರಗುತ್ತಿದೆ. ಅದರೊಂದಿಗೆ ಶಾಲೆಯ ಕಟ್ಟಡವೂ ಹಾಳಾಗಿದೆ. ಎಲ್ಲರ ಸಹಾಯ-ಸಹಕಾರದಿಂದ ಶಾಲೆಯನ್ನು ಜೀರ್ಣೋದ್ಧಾರಗೊಳಿಸಿ ಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸೋಣ. ಅದಕ್ಕಾಗಿ ಎಲ್ಲರೂ ಬೇಧ-ಭಾವ ಮರೆತು ಒಗ್ಗಟ್ಟಿನಿಂದ ಸ್ವಪ್ರೇರಣೆಯೊಂದಿಗೆ ಪಾಲ್ಗೊಂಡು ಶತಮಾನೋತ್ಸವ ಯಶಸ್ವಿಗೊಳಿಸೋಣ ಎಂದು ತಿಳಿಸಿದರು.



