ವಿಜಯಸಾಕ್ಷಿ ಸುದ್ದಿ, ರೋಣ: ಗದಗ ಜಿಲ್ಲೆ ಸೌಹಾರ್ದತೆಯ ತವರೂರು ಎಂದು ಗುರುತಿಸಿಕೊಂಡಿದ್ದು, ಇಲ್ಲಿ ವಿವಿಧ ಮಠಾಧೀಶರು ಮತ್ತು ಧಾರ್ಮಿಕ ಚಿಂತಕರು ಸಮುದಾಯ ಏಕತೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲರು ಹೇಳಿದರು.
ಬುಧವಾರ ರಾತ್ರಿ ಮಾರನಬಸರಿ ಗ್ರಾಮದ ಸಿದ್ಧಶ್ರೀ ಸರ್ವಧರ್ಮ ಸಮುದಾಯ ಭವನ ಕಟ್ಟಡದ ಭೂಮಿಪೂಜೆಯನ್ನು ಶಾಸಕರು ನೆರವೇರಿಸಿದರು. ಈ ಗ್ರಾಮದಲ್ಲಿ ಸಹೋದರತೆ ಮತ್ತು ಸೌಹಾರ್ದತೆಯ ಉನ್ನತ ಸಾಂಸ್ಕೃತಿಕ ಮೌಲ್ಯಗಳು ಇದ್ದು, ಸಿದ್ದಯ್ಯಜ್ಜನವರು ಮತ್ತು ಇಲಕಲ್ ದರ್ಗಾದ ಅಜ್ಜನವರು ಆತ್ಮೀಯರಾಗಿ ಈ ಏಕತೆಗೆ ಅಪಾರ ಕೊಡುಗೆ ನೀಡಿರುವರು.
ಗ್ರಾಮದಲ್ಲಿ 70 ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಮಲಪ್ರಭಾ ನದಿಯ ಮೂಲಕ ಬೃಹತ್ ಕೆರೆಯನ್ನು ತುಂಬಿಸುವ ಕಾರ್ಯ ಶೀಘ್ರಾರಂಭವಾಗಲಿದೆ. ಜೊತೆಗೆ 40 ಲಕ್ಷ ರೂ. ವೆಚ್ಚದಲ್ಲಿ ಜಕ್ಕಲಿ ರಸ್ತೆ ಸೇತುವೆಯಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಸಿಸಿ ರಸ್ತೆ, 15 ಲಕ್ಷ ರೂ. ವೆಚ್ಚದಲ್ಲಿ ರೇವಣ ಸಿದ್ದೇಶ್ವರ ಸಮುದಾಯ ಭವನ ಮತ್ತು 20 ಲಕ್ಷ ರೂ. ಅಲ್ಪಸಂಖ್ಯಾತ ಕಾಲೋನಿಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಶಿವಮೂರ್ತಿ ಮುರುಘರಾಜೇಂದ್ರ ಶ್ರೀಗಳು, ಸಿದ್ದನಕೊಳ್ಳದ ಡಾ. ಶಿವಕುಮಾರ ಶ್ರೀಗಳು, ಅಂದಪ್ಪ ಮರಡಿ ಮುಂತಾದವರು ಸಾನ್ನಿಧ್ಯ ವಹಿಸಿದ್ದರು. ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ, ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶರಣಪ್ಪ ಬೆಟಗೇರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
“ನಮ್ಮ ಕನ್ನಡ ನಾಡು ಎಂದಿಗೂ ಜನರಲ್ಲಿ ಬೇಧ-ಭಾವ ಕಲಿಸಿಲ್ಲ. ಸಾಧು ಸಂತರು, ಸೂಫಿಗಳು, ಮಠಾಧೀಶರು ಏಕತೆಯನ್ನು ಬಿತ್ತುವ ಕೆಲಸ ಮಾಡಿದ್ದಾರೆ. ಈ ಭವ್ಯ ಸಂಸ್ಕೃತಿಯ ಹೃದಯದಲ್ಲಿ ಅಕ್ಷರ ಜ್ಞಾನವನ್ನು ಎಲ್ಲ ವರ್ಗದ ಜನರಿಗೆ ತಲುಪಿಸುವುದೇ ನಮ್ಮ ನಾಡಿನ ವೈಶಿಷ್ಟ್ಯ.”
— ಶಿವಮೂರ್ತಿ ಮುರುಘರಾಜೇಂದ್ರ ಶ್ರೀ, ಸರ್ವಧರ್ಮ ಸಮನನ್ವಯ ಪೀಠ, ಮಾರನಬಸರಿ
“ಸಿದ್ಧಶ್ರೀ ಸರ್ವಧರ್ಮ ಸಮುದಾಯ ಭವನ ನಿರ್ಮಾಣದ ಕಾರ್ಯ ಸಂಪೂರ್ಣ ನನ್ನ ಜವಾಬ್ದಾರಿಯಾಗಿದೆ. ಅನುದಾನದ ಬಗ್ಗೆ ಸಂಶಯಬೇಡಿರಿ, ಎಲ್ಲಾ ಕಾರ್ಯಗಳನ್ನು ಮುಗಿಸಿ ಶ್ರೀಮಠದ ಸುಪರ್ಥಿಗೆ ವಹಿಸುವೆನು.”
— ಜಿ.ಎಸ್. ಪಾಟೀಲ, ಶಾಸಕ, ರೋಣ



