ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಶಿರಹಟ್ಟಿ ತಾಲೂಕಿನಾದ್ಯಂತ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಈ ಬಾರಿ ಮುಂಗಾರು ಉತ್ತಮವಾಗಿರುವ ಲಕ್ಷಣಗಳು ಕಾಣುತ್ತಿರುವುದರಿಂದ ರೈತರು ಕೃಷಿ ಚಟುವಟಿಕೆಯನ್ನು ಚುರುಕುಗೊಳಿಸಿದ್ದಾರೆ. ರೈತರು ಕಳೆದೆರಡು ವರ್ಷಗಳಿಂದ ಬರಗಾಲ ಮತ್ತು ಅತಿವೃಷ್ಟಿಗೆ ಸಿಲುಕಿ ಕಂಗಾಲಾಗಿದ್ದು, ಆಶ್ವಿನಿ, ಭರಣಿ ಮತ್ತು ಕೃತ್ತಿಕಾ ಮಳೆ ಈ ಬಾರಿ ಉತ್ತಮವಾಗಿ ಸುರಿದು ರೈತರ ಮೊಗದಲ್ಲಿ ಹರ್ಷ ತಂದಿದೆ.
ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನಲ್ಲಿ ಒಟ್ಟಾರೆ 94.913 ಭೌಗೋಳಿಕ ಕ್ಷೇತ್ರವಿದ್ದು, ಇದರಲ್ಲಿ 12.943 ಅರಣ್ಯ, 5.997 ಹೆಕ್ಟೇರ್ ಸಾಗುವಳಿ ಅಲ್ಲದ (ಬಂಜರು ಪ್ರದೇಶ) ಹಾಗೂ 74,475 ಹೆಕ್ಟೇರ್ ಸಾಗುವಳಿ ಕ್ಷೇತ್ರವಿದೆ. 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕೃಷಿ ಇಲಾಖೆಯ ಅಂಕಿ-ಅಂಶದ ಪ್ರಕಾರ, ಮುಂಗಾರು ಹಂಗಾಮಿನಲ್ಲಿ ಶಿರಹಟ್ಟಿ ತಾಲೂಕಿನಲ್ಲಿ ಶೇಂಗಾ 3.350 ಹೆಕ್ಟೇರ್, ಹೆಸರು 3.200 ಹೆಕ್ಟೇರ್, ಗೋವಿನಜೋಳ 27.146 ಹೆಕ್ಟೇರ್, ಸೂರ್ಯಕಾಂತಿ 45 ಹೆಕ್ಟೇರ್, ತೊಗರಿ 450 ಹೆಕ್ಟೇರ್, ಅಲಸಂದಿ 55 ಹೆಕ್ಟೇರ್, ಬತ್ತ 460 ಹೆಕ್ಟೇರ್, ಹತ್ತಿ 575 ಹೆಕ್ಟೇರ್, ಕಬ್ಬು 500 ಹೆಕ್ಟೇರ್, ಹೈಬ್ರೀಡ್ ಜೋಳ 125 ಹೆಕ್ಟೇರ್ ಸೇರಿದಂತೆ ಒಟ್ಟು 36.411 ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ರೈತರು ಕೃಷಿ ಭೂಮಿಯನ್ನು ಹದಗೊಳಿಸುವ ಕಾರ್ಯ ಭರದಿಂದ ನಡೆಸಿದ್ದು, ಕೆಲ ರೈತರು ಸಾವಯವ ಗೊಬ್ಬರವನ್ನು ಭೂಮಿಗೆ ಸೇರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಎಲ್ಲ ಕಾರ್ಯ ಸಧ್ಯ ಮುಗಿಯುತ್ತಿದ್ದು, ಭರಣಿ ಮಳೆಗೆ ಬಹುತೇಕ ಬಿತ್ತನೆ ಕಾರ್ಯ ಆರಂಭಗೊಳ್ಳಲಿದೆ. ತಾಲೂಕಿನ ಕಡಕೋಳ, ಹೊಸಳ್ಳಿ, ಮಾಚೇನಹಳ್ಳಿ, ಮಜ್ಜೂರ, ವರವಿ, ತೆಗ್ಗಿನ ಭಾವನೂರ, ಹಡಗಲಿ, ಬನ್ನಿಕೊಪ್ಪ, ಬೆಳ್ಳಟ್ಟಿ, ಮಾಗಡಿ, ಹೊಳಲಾಪೂರ, ಪರಸಾಪೂರ, ಛಬ್ಬಿ, ರಣತೂರ, ನಾಗರಮಡುವು ಗ್ರಾಮಗಳಲ್ಲಿ ಮಳೆ ಉತ್ತಮವಾಗಿರುವುದರಿಂದ ಈ ಭಾಗದಲ್ಲಿ ರೈತರು ಬಿತ್ತನೆಗೆ ಸಿದ್ಧತೆ ನಡೆಸಿದ್ದು, ಬೀಜ, ಗೊಬ್ಬರ ಸಂಗ್ರಹಿಸಲು ಮುಂದಾಗಿದ್ದಾರೆ.
ಈ ಬಾರಿ ತಾಲೂಕಿನಾದ್ಯಂತ ಮುಂಗಾರು ಪೂರ್ವದಿಂದಲೇ ಉತ್ತಮ ಮಳೆಯಾಗುತ್ತಿದ್ದು, ಸಹಜವಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಿಗೆ ಇದೆ. ಈ ಸಂದರ್ಭದಲ್ಲಿ ರೈತರು ಸಾಲ-ಸೋಲ ಮಾಡಿ ಬಿತ್ತನೆಗೆ ಬೀಜ-ಗೊಬ್ಬರಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಹಂತದಲ್ಲಿ ರೈತರಿಗೆ ಬಿತ್ತನೆ ಪೂರ್ವದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಲಾಖೆ ವತಿಯಿಂದ ಹೆಚ್ಚಿನ ಜಾಗೃತಿ ಮೂಡಿಸುವುದು ಅವಶ್ಯವಿದೆ.
“ಈ ಬಾರಿ ವಾಡಿಕೆಗಿಂತ ಹೆಚ್ಚಿಗೆ ಮಳೆಯಾಗಿದ್ದು, ರೈತರು ಬಿತ್ತನೆ ಪೂರ್ವದಲ್ಲಿ ಮಣ್ಣಿನ ತೇವಾಂಶ ನೋಡಿಕೊಳ್ಳಬೇಕು. ಪ್ರಮಾಣೀಕೃತ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದುಕೊಂಡು ಅಗತ್ಯ ಬೀಜೋಪಚಾರ, ಅಣುಜೀವಿ ಗೊಬ್ಬರ ಲೇಪನ ಮಾಡಬೇಕು. ಡಿಎಪಿ ಗೊಬ್ಬರ ಪರ್ಯಾಯವಾಗಿ ಲಭ್ಯವಿರುವ ಸಂಯುಕ್ತ ಗೊಬ್ಬರಗಳನ್ನು (ಕಾಂಪ್ಲೆಕ್ಸ್) ಉಪಯೋಗಿಸಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಸರು, ತೊಗರಿ, ಮೆಕ್ಕೆಜೋಳ ಬೀಜಗಳು ಸಂಗ್ರಹವಿದೆ. ಸಣ್ಣ ಅತೀಸಣ್ಣ ರೈತರಿಗೆ ಶೇ.50ರ ಸಹಾಯಧನ ಅಡಿ ಹೆಸರು, ಗೋವಿನಜೋಳ ಬೀಜಗಳನ್ನು ನೀಡಲಾಗುತ್ತಿದೆ”
– ರೇವಣೆಪ್ಪ ಮನಗೂಳಿ.
ಸಹಾಯಕ ಕೃಷಿ ನಿರ್ದೆಶಕರು.



