ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗೋವಿನಜೋಳ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ಲಕ್ಷ್ಮೇಶ್ವರ ನಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ 3ನೇ ದಿನದಂದು ಸರ್ಕಾರಗಳಿಗೆ ರೈತಪರ ನಿಲುವು ತಾಳುವ ಬುದ್ಧಿಯನ್ನು ದೇವರು ಕರುಣಿಸಲಿ, ರೈತರ ಎಲ್ಲ ಸಂಕಷ್ಟಗಳು ನಿವಾರಣೆಯಾಗಲಿ ಎಂದು ಧರಣಿ ಸ್ಥಳದಲ್ಲಿ ಸೋಮವಾರ ಬೆಳಿಗ್ಗೆ ವಿಶೇಷ ಹೋಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸೋಮವಾರ ಗೋಪೂಜೆ ಸಲ್ಲಿಸಿದ ನಂತರ ಲಕ್ಷ್ಮೇಶ್ವರ ದ ಶ್ರೀ ಹಾವಳಿ ಆಂಜನೇಯ ದೇವಸ್ಥಾನದ ಅರ್ಚಕರಾದ ಮುರಘೇಂದ್ರಸ್ವಾಮಿ ಹಿರೇಮಠ ಅವರ ನೇತೃತ್ವದಲ್ಲಿ ಹೋಮ ಕಾರ್ಯಕ್ರಮ ನಡೆಸಿದ ರೈತರು, ಸರಕಾರಕ್ಕೆ ಒಳ್ಳೆಯ ಬುದ್ಧಿ ನೀಡುವಂತೆ ಸಾಮೂಹಿಕವಾಗಿ ಪ್ರಾರ್ಥಿಸಿದರು. ಸತ್ಯಾಗ್ರಹ ನಡೆಯುವ ಪೆಂಡಾಲ್ನಲ್ಲಿಯೇ ಹೋಮ ಕುಂಡವನ್ನು ಸ್ಥಾಪಿಸಿ ಪೂರ್ಣಾಹುತಿ ಅರ್ಪಿಸಿದರು.
ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವತೆಗೆ ಒತ್ತಾಯಿಸಿ ಅನೇಕ ರೈತಪರ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು, ವ್ಯಾಪಾರಸ್ಥರ ಸಂಘ, ಕೃಷಿ ಪರಿಕರಗಳ ಮಾರಾಟಾಗಾರರು, ಶ್ರೀರಾಮ ಸೇನೆ, ಎಬಿವಿಪಿ, ಅಟೋ ಚಾಲಕರ ಸಂಘ, ದಸರಾ ಉತ್ಸವ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ, ತಾಲೂಕಾ ವೈದ್ಯರ ಸಂಘ ಸೇರಿದಂತೆ ವಿವಿಧ ಮಠಾಧೀಶರು, ವಿವಿಧ ರಾಜಕೀಯ ಪಕ್ಷಗಳ ಮಾಜಿ ಶಾಸಕರು, ಮುಖಂಡರು ಪ್ರತಿಭಟನಾ ವೇದಿಕೆಗೆ ಬಂದು ಬೆಂಬಲ ಸೂಚಿಸುತ್ತಿದ್ದಾರೆ.
ಸರತಿ ಅನ್ನ ಸತ್ಯಾಗ್ರಹದ ಮೊದಲಿಗರಾಗಿ ಆದರಹಳ್ಳಿ ಗವಿಮಠದ ಕುಮಾರ ಮಹಾರಾಜರು, ರೈತ ಮುಖಂಡ ಬಸವರಾಜ ಬೆಂಡಿಗೇರಿ, ನಿವೃತ್ತ ಶಿಕ್ಷಕ ಪೂರ್ಣಾಜಿ ಕರಾಟೆ ಮುಂಜಾನೆಯಿದಲ್ಲೇ ಸಂಪೂರ್ಣ ಉಪವಾಸ ಪ್ರಾರಂಭಿಸಿದ್ದಾರೆ.
ಹೋರಾಟದಲ್ಲಿ ಮುಕ್ತಿ ಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು, ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಡಾ. ವಚನಾನಂದ ಶ್ರೀಗಳು, ಕುಂದಗೋಳದ ಕಲ್ಯಾಣಪುರದ ಶ್ರೀಗಳು, ಆದರಹಳ್ಳಿಯ ಗವಿಮಠದ ಡಾ. ಕುಮಾರ ಮಹಾರಾಜರು ಹಾಗೂ ಜಮಖಂಡಿಯ ಶ್ರೀಗಳು ಆಗಮಿಸಿ, ಬೆಂಬಲ ಸೂಚಿಸಿದ್ದಾರೆ. ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ ರಾಮಕೃಷ್ಣ ದೊಡ್ಡಮನಿ ರಾಮಣ್ಣ ಲಮಾಣಿ, ಟಿ.ಈಶ್ವರ, ಯುವ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ, ಚನ್ನಪ್ಪ ಜಗಲಿ, ಮಹೇಶ ಹೊಗೆಸೊಪ್ಪಿನ, ಉದ್ಯಮಿ ಲೋಹಿತ ನೆಲವಿಗಿ, ಸಣ್ಣಿರಪ್ಪ ಹಳ್ಳೆಪ್ಪನವರ, ಪಾಪನಾಶಿ ಬಂಜಾರ ಸಮಾಜದವರು ಸೇರಿದಂತೆ ಪಕ್ಷಾತೀತವಾಗಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿದೆ.
ಈ ವೇಳೆ ಚನ್ನಪ್ಪ ಷಣ್ಮುಖಿ, ಟಾಕಪ್ಪ ಸಾತಪೂತೆ, ಎಂ.ಎಸ್. ದೊಡ್ಡಗೌಡ್ರ, ಶಂಕರ ಬ್ಯಾಡಗಿ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ, ಹೊನ್ನಪ್ಪ ಒಡ್ಡರ, ಶಿವಾನಂದ ದೇಸಾಯಿ, ಸುರೇಶ ಹಟ್ಟಿ, ನಿಂಬಣ್ಣ ಮಡಿವಾಳರ, ಗುರುಪ್ಪ ಮುಳಗುಂದ, ಶಿವಾನಂದ ಲಿಂಗಶೆಟ್ಟಿ, ಮಂಜುನಾಥ ಬಟ್ಟೂರ, ಕಾಶಪ್ಪ ಮುಳಗುಂದ, ಚಂಬಣ್ಣ ಬಾಳಿಕಾಯಿ, ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
ಸರ್ಕಾರ ಯಾರು ಕೇಳದಿದ್ದರೂ ಪಂಚ ಗ್ಯಾರಂಟಿಗಳನ್ನು ಕೊಟ್ಟಿರುವಂತೆ ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಗ್ಯಾರಂಟಿ ಕೊಡಲಿ. ರೈತರು ತಾವು ಬೆಳೆದ ಬೆಳೆಗೆ ಯೋಗ್ಯ ಬೆಲೆ ನೀಡುವಂತೆ ನ್ಯಾಯಯುತವಾಗಿ ಕೇಳುತ್ತಿದ್ದಾರೆ. ಇದು ಕೇವಲ ಲಕ್ಷ್ಮೇಶ್ವರ ಭಾಗದ ರೈತರ ಬೇಡಿಕೆಯಾಗಿರದೇ ಮೆಕ್ಕೆಜೋಳ ಬೆಳೆದ ರಾಜ್ಯದ ಎಲ್ಲ ರೈತರ ಒಕ್ಕೊರಲ ಬೇಡಿಕೆಯಾಗಿದೆ. ರೈತರ ನ್ಯಾಯಯುತ, ಶಾಂತಿಯುತ ಹೋರಾಟಕ್ಕೆ ನಮ್ಮ ಬೆಂಬಲವಿದೆ.
ಶ್ರೀ ವಚನಾನಂದ ಜಗದ್ಗುರುಗಳು.
ಹರಿಹರ ಪಂಚಮಸಾಲಿ ಪೀಠ.
ರೈತರ ನ್ಯಾಯಯುತ ಹೋರಾಟಕ್ಕೆ ನಾಡಿನ ಮಠಾಧೀಶರು ಬೆಂಬಲವಾಗಿ ನಿಲ್ಲಲಿದ್ದಾರೆ. ಅದೆಷ್ಟೇ ದಿನ ಆಗಲಿ, ರೈತರ ಹೋರಾಟಕ್ಕೆ ಜಯ ಸಿಗುವವರೆಗೂ ಹನಿ ನೀರೂ ಸಹ ಸೇವಿಸದೇ ಧರಣಿ ಸ್ಥಳದಲ್ಲಿಯೇ ಇರುತ್ತೇನೆ. ಯಾರೆಷ್ಟೇ ನಮ್ಮನ್ನು ಹೆದರಿಸಿದರೂ ರೈತರ ಸಲುವಾಗಿ ಪ್ರಾಣ ಬಿಡಲೂ ಸಿದ್ಧ. ರೈತರ ಹೋರಾಟಕ್ಕೆ ಎಲ್ಲರೂ ಪಕ್ಷಾತೀತವಾಗಿ ಬೆಂಬಲ ನೀಡಬೇಕು.
ಡಾ. ಕುಮಾರ ಮಹಾರಾಜರು.
ಆದರಹಳ್ಳಿ, ಗವಿಮಠ.



