ವಿಜಯಸಾಕ್ಷಿ ಸುದ್ದಿ, ಗದಗ: ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಮ್ಮ ಕೌಶಲ್ಯಗಳ ಮೂಲಕ ಮತ್ತೊಬ್ಬರನ್ನು ತಮ್ಮೆಡೆಗೆ ಆಕರ್ಷಿಸುವಂತಹ ವ್ಯಕ್ತಿತ್ವವನು ರೂಪಿಸಿಕೊಳ್ಳಬೇಕು. ವ್ಯಕ್ತಿತ್ವ ವಿಕಸನ ನಿತ್ಯದ ಪ್ರಕ್ರಿಯೆಯಾಗಲಿ ಎಂದು ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಹೇಳಿದರು.
ಗದಗ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಡಿ.ಜಿ. ವಿಕಸನ ಕಾರ್ಯಕ್ರಮದಡಿ ಬುಧವಾರ ಜಿಲ್ಲೆಯ ಗದಗ, ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಒಂದು ದಿನದ ವ್ಯಕ್ತಿತ್ವ ವಿಕಸನ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಜಿ.ಪಂ ಯೋಜನಾ ನಿರ್ದೇಶಕ ಎಮ್.ವಿ. ಚಳಗೇರಿ, ಗ್ರಾಮ ಡಿಜಿ ವಿಕಸನ ಜಿಲ್ಲಾ ಸಂಯೋಜಕ ಬಸವರಾಜ್ ಬಡಿಗೇರ್, ತರಬೇತಿದಾರ ಕಲ್ಮೇಶ ಯು, ಶರಣಪ್ಪ ಕಟ್ಟಿಮನಿ ಹಾಜರಿದ್ದರು. ಪ್ರಸ್ತುತ, ಜಿಲ್ಲೆಯಲ್ಲಿ 95 ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳನ್ನು ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ಶಿಕ್ಷಣ ಫೌಂಡೇಶನ್ ಅನುಷ್ಠಾನ ಮಾಡಿರುವುದು ವಿಶೇಷವಾಗಿದೆ.
ವ್ಯಕ್ತಿತ್ವ ವಿಕಸನ ಎನ್ನುವುದು ನಿತ್ಯ ನಡೆಯುವಂತಹ ಪ್ರಕ್ರಿಯೆ, ಶಿಕ್ಷಣ, ಕ್ರೀಡೆ, ಚಿತ್ರಕಲೆ, ಸಂಗೀತ, ನಾಟಕ..ಹೀಗೆ ಪ್ರತಿ ಕ್ಷೇತ್ರದ ಚಟುವಟಿಕೆಯಲ್ಲೂ ನಿತ್ಯ ಭಾಗಿಯಾಗುವ ಮೂಲಕ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತಾ ಸಾಗಬೇಕು. ಆಗ ಮಾತ್ರ ಪರಿಪೂರ್ಣ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ, ಎಲ್ಲರೂ ನಿತ್ಯ ಒಂದೊಂದು ಗುಣಾತ್ಮಕ ಚಿಂತೆಯನ್ನು ಮೈಗೂಡಿಸಿಕೊಳ್ಳಬೇಕು, ಉತ್ತಮ ಆಲೋಚನೆಗಳಿಂದ ಜೀವನ ಯಾವುದೇ ಪರೀಕ್ಷೆಗಳನ್ನು ಧೈರ್ಯವಾಗಿ ಎದುರಿಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣವೇ ಭದ್ರಬುನಾದಿಯಾಗಿದೆ ಇದು ಮನೆ ಹಾಗೂ ಸಮುದಾಯ ಹಂತದಲ್ಲಿ ಸುಭದ್ರವಾಗಿ ನಿರ್ಮಿಸಿದಾಗ ಎಲ್ಲರ ಭವಿಷ್ಯ ಉತ್ತಮವಾಗುತ್ತದೆ ಎಂದರು.



