ವಿಜಯಸಾಕ್ಷಿ ಸುದ್ದಿ, ರೋಣ : ಶನಿವಾರ ಬೆಳಗಿನ ಜಾವ ಸುರಿದ ಭಾರೀ ಮಳೆಯಿಂದ ತಾಲೂಕಿನ ಬಹುತೇಕ ಹಳ್ಳಕೊಳ್ಳಗಳು ತುಂಬಿ ಹರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಶನಿವಾರ ರಾತ್ರಿ 3 ಗಂಟೆಯಿಂದ ಗುಡುಗು ಸಿಡಿಲಿನೊಂದಿಗೆ ಪ್ರಾರಂಭವಾದ ಮಳೆಯು ಬೆಳಿಗ್ಗೆ 8 ಗಂಟೆಯವರೆಗೂ ಸುರಿಯಿತು. ಇದರಿಂದ ಬಹುತೇಕ ಹಳ್ಳಗಳು ತುಂಬಿ ಹರಿದಿದ್ದಲ್ಲದೆ, ಕೃಷಿ ಹೊಂಡಗಳು ಸಹ ನೀರಿನಿಂದ ಭರ್ತಿಯಾಗತೊಡಗಿವೆ.
ಕಳೆದ ಜೂನ್ ತಿಂಗಳಿನಿಂದ ಬಿಟ್ಟು ಬಿಡದೆ ಸುರಿದ ಮಳೆಯಿಂದ ರೈತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿತ್ತು. ಕಾರಣ ರಭಸದ ಮಳೆಯಾಗದೆ ಜಿಟಿಜಿಟಿ ಮಳೆಯಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಹೆಸರು ಬೆಳೆಯು ರೋಗ ಭಾದೆಗೆ ತುತ್ತಾಗಿತ್ತು. ಇದರಿಂದ ರೈತ ಸಮುದಾಯ ಕೈ ಸುಟ್ಟುಕೊಳ್ಳುವಂತಾಗಿತ್ತು.
ಆದರೆ ಶನಿವಾರ ಸುರಿದ ಮಳೆಯು ಬಾಡುತ್ತಿದ್ದ ಈರುಳ್ಳಿ ಸೇರಿದಂತೆ ಮಿಶ್ರ ಬೆಳೆಗೆ ಜೀವ ತುಂಬಿದೆ. ಇದರಿಂದ ತಾಲೂಕಿನ ರೈತ ಸಮುದಾಯದಲ್ಲಿ ಸಂತಸ ಮೂಡಿದೆ. ಮಳೆಗೆ ಮಾರನಬಸರಿ ಗ್ರಾಮದ ಸಂಗಪ್ಪ ಬಿಂಗಿ ಎನ್ನುವರ ಮನೆಯ ಗೊಡೆ ಸಂಪೂರ್ಣ ಕುಸಿದಿದೆ.



