ಬಿಗ್ ಬಾಸ್ ಹಾಗೂ ಕಿಚ್ಚ ಸುದೀಪ್ ವಿರುದ್ಧ ಈಗ ಗಂಭೀರ ಆರೋಪ ಕೇಳಿಬಂದಿದೆ. ರಣಹದ್ದು ಕುರಿತು ತಪ್ಪು ಮಾಹಿತಿ ಹರಡಿದ್ದಾರೆ ಎಂಬ ಆರೋಪದಡಿ ಪರಿಸರ ಪ್ರಿಯರು ರಾಮನಗರ ಅರಣ್ಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ, ಸ್ಪರ್ಧಿಯೊಬ್ಬರ ಕುತ್ತಿಗೆಗೆ ರಣಹದ್ದು ಫೋಟೋ ಹಾಕಿಸಿ “ಹೊಂಚುಹಾಕಿ, ಸಂಚು ಮಾಡಿ, ಸರಿಯಾದ ಸಮಯದಲ್ಲಿ ಲಬಕ್ ಅಂತ ಹಿಡಿಯುವವರು ಯಾರು?” ಎಂದು ಪ್ರಶ್ನಿಸಿದ್ದನ್ನು ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ತೀವ್ರವಾಗಿ ಖಂಡಿಸಿದೆ.
ಟ್ರಸ್ಟ್ ಹೇಳುವಂತೆ, ರಣಹದ್ದು ಯಾವುದೇ ಜೀವಿಗೆ ಹಾನಿ ಮಾಡುವ ಪಕ್ಷಿ ಅಲ್ಲ. ಅದು ಸತ್ತ ಪ್ರಾಣಿಗಳನ್ನು ಮಾತ್ರ ಸೇವಿಸಿ, ಪರಿಸರದ ಸ್ವಚ್ಛತೆ ಮತ್ತು ಸಮತೋಲನ ಕಾಪಾಡುವ ಅತ್ಯಂತ ಉಪಯುಕ್ತ ಪಕ್ಷಿ. ಈಗಾಗಲೇ ಅಳಿವಿನಂಚಿನಲ್ಲಿರುವ ಈ ಪಕ್ಷಿ ಬಗ್ಗೆ ತಪ್ಪು ಸಂದೇಶ ಹರಡುವುದು ಜನರಲ್ಲಿ ಭ್ರಾಂತಿ ಉಂಟುಮಾಡುತ್ತದೆ ಎಂಬ ಆತಂಕ ವ್ಯಕ್ತಪಡಿಸಲಾಗಿದೆ.
ಈ ಹಿನ್ನೆಲೆ ಬಿಗ್ ಬಾಸ್ ಸಂಸ್ಥೆ ಮತ್ತು ಕಿಚ್ಚ ಸುದೀಪ್ ಅವರಿಗೆ ರಣಹದ್ದು ಕುರಿತು ಸರಿಯಾದ ಅರಿವು ಮೂಡಿಸುವಂತೆ ರಾಮನಗರ ಡಿಸಿಎಫ್ ಮತ್ತು ಆರ್ಎಫ್ಓ ಮನ್ಸೂರ್ ಅವರಿಗೆ ಅಧಿಕೃತ ದೂರು ನೀಡಲಾಗಿದೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.



