ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಮನೆಕೆಲಸ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ಕೆ.ಎಸ್. ಮುದ್ಗಲ್ ಮತ್ತು ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ್ ಅವರ ನ್ಯಾಯಪೀಠವು ಈ ಆದೇಶ ನೀಡಿದ್ದು, ಅರ್ಜಿದಾರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳು ಮತ್ತು ಅಪರಾಧದ ಗಂಭೀರತೆಯನ್ನು ಪರಿಶೀಲಿಸಿರುವುದಾಗಿ ತಿಳಿಸಿದೆ.
ನ್ಯಾಯಪೀಠವು, ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡುವುದು ಸೂಕ್ತವಲ್ಲ ಎಂದು ಹೇಳಿದ್ದು, ವಿಚಾರಣಾಧೀನ ನ್ಯಾಯಾಲಯದಲ್ಲಿ ಈಗಾಗಲೇ ಸಾಕ್ಷಿ ವಿಚಾರಣೆ ನಡೆದಿರುವ ಕಾರಣ, ಹೈಕೋರ್ಟ್ನಲ್ಲಿ ಪುನಃ ಸಾಕ್ಷಿ ವಿಚಾರಣೆ ನಡೆಸಲಾಗದಿರುವುದನ್ನು ಗಮನಿಸಿತು. ಜೊತೆಗೆ, ವಕೀಲರು ಪ್ರಸ್ತುತಪಡಿಸಿದ ಸಾಕ್ಷಿಗಳು ಬಹುಮಟ್ಟಿಗೆ ದುರ್ಬಲವಾಗಿದ್ದು, ಶಿಕ್ಷೆ ರದ್ದುಗೊಳಿಸುವಂತೆ ಪೀಠಕ್ಕೆ ಸಾಬೀತಾಗಿಲ್ಲವೆಂದು ಸ್ಪಷ್ಟಪಡಿಸಿದೆ. ಹೀಗಾಗಿ, ಅರ್ಜಿದಾರರ ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ.
ಪ್ರಕರಣದ ಹಿಂದೆ ನಡೆದ ವಿಚಾರಣೆಯಲ್ಲಿ, ಅರ್ಜಿದಾರರ ಪರ ವಕೀಲರು ರಾಜಕೀಯ ಪ್ರಭಾವ, ತನಿಖಾ ಲೋಪಗಳು ಮತ್ತು ಸಾಕ್ಷಿಗಳ ಅಸಮಗ್ರತೆ ಕುರಿತಂತೆ ವಾದ ಮಂಡಿಸಿದ್ದರು. ಆದರೆ, ಸರ್ಕಾರದ ಪರ ವಿಶೇಷ ಅಭಿಯೋಜಕರಾದ ಪ್ರೊ. ರವಿವರ್ಮ ಕುಮಾರ್ ಮತ್ತು ಅಶ್ವನಿ ಕುಮಾರ್ ಉಪಾಧ್ಯಾಯ ಅವರು, ಪ್ರಜ್ವಲ್ ಮೇಲೆ ಜಾರಿಯಾದ ಶಿಕ್ಷೆ ರದ್ದುಪಡಿಸಿದರೆ ಇತರ ಪ್ರಕರಣಗಳಲ್ಲಿ ಸಾಕ್ಷಿ ತಿರುಚುವ ಅವಕಾಶ ಹೆಚ್ಚಬಹುದು ಎಂದು ಹೈಕೋರ್ಟ್ಗೆ ಹೇಳಿಕೆಯನ್ನು ನೀಡಿದ್ದಾರೆ.



