ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಶಹರದ ಕಳಸಾಪೂರ ಗ್ರಾಮದ ಹುಡ್ಕೋ ಬಡಾವಣೆಯನ್ನು ಅಭಿವೃದ್ಧಿಪಡಿಸುವಂತೆ ಕಳಸಾಪೂರ ಹುಡ್ಕೋ ನಿವೇಶನ ಮತ್ತು ಮನೆ ಪಡೆದ ಸದಸ್ಯರ ಸಂಘದ ಅಧ್ಯಕ್ಷ ಡಾ. ಆರ್.ಎಚ್. ಕಬಾಡಿ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳಸಾಪೂರ ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿಯವರು ಸುಮಾರು 100 ಮನೆಗಳು ಸಹಿತ 2900ಕ್ಕೂ ಹೆಚ್ಚು ನಿವೇಶನಗಳನ್ನು ಜನಸಾಮಾನ್ಯರಿಗೆ ಹಂಚಿಕೆ ಮಾಡಿ 12 ವರ್ಷಗಳೇ ಕಳೆದಿದ್ದರೂ ಇದುವರೆಗೆ ಅಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಗೃಹಮಂಡಳಿಯವರು ಕಟ್ಟಿಕೊಟ್ಟ ಮನೆಗಳಲ್ಲಿ ವಾಸವಿದ್ದ ಜನರೂ ಕೂಡ ಮನೆ ಬಿಟ್ಟು ಹೋಗಿದ್ದಾರೆ. ನೀರು, ದೀಪಗಳ ಸೌಕರ್ಯವಿಲ್ಲದೆ, ಯಾರೂ ಮನೆ ಕಟ್ಟಿಕೊಳ್ಳಲು ಮತ್ತು ಇದ್ದ ಮನೆಗಳಲ್ಲಿ ವಾಸಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ
ಈ ಬಗ್ಗೆ ಕರ್ನಾಟಕ ಗೃಹ ಮಂಡಳಿಯವರು ಮುತುರ್ವಜಿ ವಹಿಸಿ ಅಲ್ಲಿಯ ನಿವೇಶನದ ಕಸಕಡ್ಡಿ, ಕಂಟಿಗಳನ್ನು ತೆಗೆಯಿಸಿ ನಿವೇಶನ ಸಂಖ್ಯೆಗಳನ್ನು ಸರಿಯಾಗಿ ಗುರುತಿಸಿ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಪ್ರೊ. ಬೀರಕಬ್ಬಿ, ಲುಕ್ಕಣಸಾ ರಾಜೋಳಿ, ಪಿ.ಜಿ. ಮಹೇಂದ್ರಕರ, ಐ.ಎಸ್. ಕುಬಸದ, ಬಿ.ಆರ್. ಬದಿ, ಕೆ.ಎನ್. ಜಿತೂರಿ, ಈಶ್ವರಪ್ಪ ಕುಬಸದ, ಟಿ.ಪಿ. ಚಿಗರಿ ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು.



