ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ನಗರದ ರೇಸ್ಕೋರ್ಸ್ ರಸ್ತೆಯ ಆನಚಿದರಾವ್ ವೃತ್ತದ ಬಳಿಯಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಮೇ 4ರ ಬೆಳಿಗ್ಗೆ 10 ಗಂಟೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭ ಜರುಗಲಿದೆ.
ಸಮಾಜದಲ್ಲಿ ಅತ್ಯುನ್ನತ ಸೇವೆಗೈದವರಿಗೆ ಸಂಸ್ಥೆಯಿಂದ ಕೊಡಮಾಡುವ `ಶ್ರೀ ಜಗದ್ಗುರು ರೇಣುಕ ಸಿರಿ’ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಪ್ರದಾನ ಮಾಡಲಾಗುವುದು. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ಧಾರವಾಡದ ಡೀನ್ ಡಾ. ಎ.ಸಿ. ವಾಲಿ ‘ಶ್ರೀ ಜಗದ್ಗುರು ರೇಣುಕರ ಕ್ರಾಂತಿಗಳು’ ವಿಷಯವಾಗಿ ಉಪನ್ಯಾಸ ನೀಡುವರು. ಇದೇ ಸಂದರ್ಭದಲ್ಲಿ ಸಿದ್ಧಾಂತ ಶಿಖಾಮಣಿ (ರೇಣುಕ ಗೀತೆ) ಗ್ರಂಥ ಬಿಡುಗಡೆಗೊಳ್ಳಲಿದ್ದು, ಗ್ರಂಥ ಪರಿಚಯವನ್ನು ಶ್ರೀ ಬಸವೇಶ್ವರ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಸಿ. ಶಿವಕುಮಾರಸ್ವಾಮಿ ಮಾಡುವರು. ತುಮಕೂರು ವಿ.ವಿ. ವಿಶ್ರಾಂತ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ಖಂಡಿಮಠ `ಆದಿ ಜಗದ್ಗುರು ಶ್ರೀ ರೇಣುಕರು ಮತ್ತು ವೀರಶೈವ ಸಿದ್ಧಾಂತ’ ಕುರಿತು ಉಪನ್ಯಾಸ ನೀಡುವರು.
ಇದೇ ಸಂದರ್ಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳಿಂದ ವಿವಿಧ ವಿಶ್ವವಿದ್ಯಾಲಯಗಳಿಂದ ಅತ್ಯುನ್ನತ ಪದವಿ ಪಡೆದ ಮಹಾಮಹೋಪಾಧ್ಯಾಯರಿಗೆ, ವಿವಿಧ ಸ್ಪರ್ಧಾ/ಪರೀಕ್ಷೆಗಳಲ್ಲಿ ಅತ್ಯುನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಂಸಾ ಪ್ರಮಾಣಪತ್ರ ಪ್ರದಾನ, ಸಂಸ್ಥೆಯ ಸಿಬ್ಬಂದಿಗೆ ಗುರುರಕ್ಷಾ ಕವಚ ಅನುಗ್ರಹಿಸುವ ಕಾರ್ಯಕ್ರಮ ನಡೆಯುವುದು. ಸಮಾರಂಭದಲ್ಲಿ ಸರ್ವರೂ ಪಾಲ್ಗೊಳ್ಳುವಂತೆ ಸಂಸ್ಥೆಯ ಅಧ್ಯಕ್ಷ ಯು.ಎಂ. ಬಸವರಾಜ ವಿನಂತಿಸಿದ್ದಾರೆ.



