HomeArt and Literatureಗದಗನ್ನು ಸಹಕಾರ ಕಾಶಿಯನ್ನಾಗಿ ಕಟ್ಟಿದ ಸೃಷ್ಟಿ ಬ್ರಹ್ಮ ದಿವಂಗತ ಕೆ.ಎಚ್. ಪಾಟೀಲರು

ಗದಗನ್ನು ಸಹಕಾರ ಕಾಶಿಯನ್ನಾಗಿ ಕಟ್ಟಿದ ಸೃಷ್ಟಿ ಬ್ರಹ್ಮ ದಿವಂಗತ ಕೆ.ಎಚ್. ಪಾಟೀಲರು

For Dai;y Updates Join Our whatsapp Group

Spread the love

ಸರಕಾರ ಆಂದೋಲನ ಭಾರತೀಯ ಬದುಕಿಗೆ ಹೊಸದಲ್ಲ. ನಾವು ಪರಾವಲಂಬಿಗಳಾಗಿರಲಿಲ್ಲ, ಪರಸ್ಪರ ಅವಲಂಬಿತರಾಗಿದ್ದೆವು. ಕಮ್ಮಾರ, ಕುಂಬಾರ, ಬಡಗಿ, ಕ್ಷೌರಿಕ, ಸೇರಿ ಅನೇಕ ವೃತ್ತಿ ಬಾಂಧವರು ಕೃಷಿಯೊಂದಿಗೆ ಬೆಸೆದುಕೊಂಡು ಬದುಕುತ್ತಿದ್ದರು. ಇಲ್ಲಿ ಅವಲಂಬನೆ ಇರಲಿಲ್ಲ. ಪರಸ್ಪರ ಅವಲಂಬನೆ ಇದ್ದಿತು. ಅವರ ಕೂಲಿಕಾರರಾಗಿರಲಿಲ್ಲ, ಒಂದು ರೀತಿಯಲ್ಲಿ ಪಾಲುಗಾರರಾಗಿದ್ದರು. ಇಲ್ಲಿ ಕಾನೂನು ಇರಲಿಲ್ಲ. ಪರಸ್ಪರ ವಿಶ್ವಾಸ ಇದ್ದಿತು.

ಪಶ್ಚಿಮದ ದೇಶಗಳು ನಮ್ಮ ದೇಶದಲ್ಲಿ ವ್ಯಾಪಾರ ಮಾಡಲು ಆಗಮಿಸಿದ ನಂತರ ಪರಿಸ್ಥಿತಿ ಬದಲಾಯಿತು. ಪರಸ್ಪರ ಅವಲಂಬನೆ ಕಡಿಮೆಯಾಯಿತು. ಕಾನೂನಿನ ಬಲ ಬೇಕಾಯಿತು. ಅದು ಸಾಧ್ಯವಾದದ್ದು 1904ರಲ್ಲಿ ಭಾರತದಲ್ಲಿ ಸಹಕಾರ ಆಂದೋಲನದ ಭಾಗೀರಥಿಗೆ ಗದಗ ಗಂಗೋತ್ರಿ ಇದರ ಭಗೀರಥ ದಿವಂಗತ ಶಿವರಾಮ ಕುಲಕರ್ಣಿಯಾದರೆ, ಗದಗನ್ನು ಸಹಕಾರ ಕಾಶಿಯನ್ನಾಗಿ ಕಟ್ಟಿದ ಸೃಷ್ಟಿ ಬ್ರಹ್ಮ ದಿವಂಗತ ಕೆ.ಎಚ್. ಪಾಟೀಲರು.

ದಿವಂಗತ ಶಿವರಾಮ ಕುಲಕರ್ಣಿ ಬುದ್ಧಿವಂತರು, ಕ್ರಿಯಾಶೀಲರಾಗಿದ್ದರು. ಅವರು ತಮ್ಮ ಗ್ರಾಮದ ಎಸ್.ಎಸ್. ಪಾಟೀಲರನ್ನು ಸಿದ್ಧಗೊಳಿಸಿದ್ದರು. ಆನಂತರ ಅವರ ಸಂಬಂಧಿಕರಾದ ಡಿ.ಎಸ್. ಕುಲಕರ್ಣಿ ಹಾಗೂ ಹುಲಕೋಟಿ ದಿವಂಗತ ರಂಗನಗೌಡ ಪಾಟೀಲರನ್ನು ಸಹಕಾರ ಸಂಸ್ಥೆ ಸ್ಥಾಪಿಸಲು ಸಿದ್ದರಾಗುವಂತೆ ಮಾಡಿದರು. ರೆವಿಂಗಟನ್ ಸಾಹೇಬರೇ 1905ರಲ್ಲಿ ಬೆಟಗೇರಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪಿಸಿದರು. ಇದು ಕನ್ನಡ ನಾಡಿನ ಮೊದಲ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಖ್ಯಾತಿ ಹೊಂದಿದೆ ಹಾಗೂ ಕಣಗಿನಹಾಳದ ಸಹಕಾರಿ ಸಂಘದ ಸ್ಥಾಪಕ ಸಣ್ಣ ರಾಮನಗೌಡ ಸಿದ್ದನಗೌಡ ಪಾಟೀಲರನ್ನು ಭಾರತದ ಸಹಕಾರ ಪಿತಾಮಹ ಎಂದು ಕರೆಯುತ್ತಾರೆ.

`ಎಲ್ಲರಿಗಾಗಿ ನಾನು-ನನಗಾಗಿ ಎಲ್ಲರೂ’ ಇದು ಸಹಕಾರದ ಮೂಲ ಮಂತ್ರ. ಈ ತತ್ವ ಆಧರಿತವಾಗಿ ಸಹಕಾರಿ ಆಂದೋಲನ ಕಟ್ಟಲ್ಪಟ್ಟಿದೆ. ನಮ್ಮ ರಾಜ್ಯದಲ್ಲಿ ಸಹಕಾರ ಸಚಿವರು ಸಹಕಾರ ಆಂದೋಲನದ ಚಳುವಳಿಗೆ ಮಾರ್ಗದರ್ಶಕರಾಗಿದ್ದಾರೆ. ಕಾಲ ಕಾಲಕ್ಕೆ ಸಹಕಾರ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. 1912 ಹಾಗೂ 1917ರ ಸಹಕಾರ ಕಾಯ್ದೆ ತಿದ್ದುಪಡಿಯಿಂದಾಗಿ ರಾಜ್ಯದಲ್ಲಿ ಸಹಕಾರ ಚಳುವಳಿ ವಿಸ್ತರಣೆಯಾಯಿತೆಂದು ಹೇಳಬಹುದು. ನಂತರ ನಮ್ಮ ರಾಜ್ಯದಲ್ಲಿ ಜಾತಿ ಆಧಾರಿತ ಬ್ಯಾಂಕುಗಳು ಹುಟ್ಟಿಕೊಂಡವು. ರೆಡ್ಡಿ ಬ್ಯಾಂಕ್, ಕುರುಬರ ಬ್ಯಾಂಕ್ ಆರ್ಯವೈಶ್ಯ ಬ್ಯಾಂಕ್, ಮರಾಠ ಬ್ಯಾಂಕ್ ಮೊದಲಾದವುಗಳು ಹುಟ್ಟಿಕೊಂಡವು. ಸಮಾಜದ ಹಿರಿಯರು ತಮ್ಮ ತಮ್ಮ ಸಮಾಜದ ಬಡವರ ಹಿತ ರಕ್ಷಣೆ ಮಾಡಲು ಅವರನ್ನು ಆರ್ಥಿಕ ಶೋಷಣೆಯಿಂದ ಪಾರು ಮಾಡಲು ಬ್ಯಾಂಕುಗಳನ್ನು ಸ್ಥಾಪಿಸಿದರು.

ಒಂದು ಜಿಲ್ಲೆಯ ಇಂತಹ ಎಲ್ಲಾ ಪ್ರಾಥಮಿಕ ಸಹಕಾರ ಸಂಘಗಳ ಒಟ್ಟು ರೂಪವೇ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್. ರಾಜ್ಯದಲ್ಲಿ ಒಟ್ಟು 21 ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳವೆ. ಕೆಲವಡೆ ಜಿಲ್ಲೆಗೊಂದು ಬ್ಯಾಂಕ್ ಇದ್ದರೆ, ಇನ್ನು ಕೆಲವಡೆ ಎರಡು ಮುಖ್ಯ ಜಿಲ್ಲೆಗಳಿಗೆ ಒಂದೇ ಬ್ಯಾಂಕ್ ಇದೆ, ಉದಾಹರಣೆ ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಿಗೆ ಒಂದೇ ಬ್ಯಾಂಕ್ ಇದೆ.

ಎಲ್ಲ ಡಿಸಿಸಿ ಬ್ಯಾಂಕುಗಳ ಸದಸ್ಯತ್ವದ ರಾಜ್ಯ ಅಪೆಕ್ಸ್ ಬ್ಯಾಂಕ್ ಇದೆ. ಅಪೆಕ್ಸ್ ಬ್ಯಾಂಕ್ ತನ್ನ ಮೂಲ ನಿಧಿ ಹಾಗೂ ನಬಾರ್ಡ್ ನೀಡುವ ಹಣವನ್ನು ಡಿಸಿಸಿ ಬ್ಯಾಂಕುಗಳ ಮುಖಾಂತರ ಹಂಚಿಕೆ ಮಾಡುತ್ತದೆ. ರಾಜ್ಯದಲ್ಲಿ ಇಂದು 4848 ಕೃಷಿ ಪತ್ತಿನ ಸಹಕಾರ ಸಂಘಗಳವೆ. 70 ಸಾವಿರಕ್ಕೂ ಹೆಚ್ಚು ಸ್ವ-ಸಹಾಯ ಗುಂಪುಗಳು ಸಹಕಾರ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ನಗರ ಪ್ರದೇಶದಲ್ಲಿ 290 ಪಟ್ಟಣ ಸಹಕಾರಿ ಬ್ಯಾಂಕುಗಳು 28 ಮಹಿಳಾ ಸಹಕಾರಿ ಬ್ಯಾಂಕುಗಳಿವೆ.

ಸಹಕಾರ ಚಳುವಳಿಯ ಹುಟ್ಟು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳು ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆಗೆ ಖ್ಯಾತವಾಗಿರುವಂತೆ ಸಹಕಾರಿ ಬ್ಯಾಂಕುಗಳು ಬೆಳವಣಿಗೆಗೆ ಸಹ ಹೆಸರಾಗಿವೆ. ಡಿಸಿಸಿ ಬ್ಯಾಂಕ್, ಪಿ.ಎಲ್.ಡಿ ಬ್ಯಾಂಕ್ ಜನರ ಪೂರ್ಣ ವಿಶ್ವಾಸಕ್ಕೆ ಪಾತ್ರವಾಗಿವೆ. ಕರಾವಳಿ ಜಿಲ್ಲೆಗಳಲ್ಲಿ ಸಹಕಾರಿ ಬ್ಯಾಂಕಿಂಗ್ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ನಂಬಿಕೆ-ವಿಶ್ವಾಸದ ಮೇಲೆ ಎಲ್ಲ ಸಹಕಾರಿ ಸಂಸ್ಥೆಗಳ ಭವಿಷ್ಯ ಅಡಗಿದೆ. ನಂಬಿಕೆಯೇ ಸಹಕಾರ ಕ್ಷೇತ್ರದ ಬುನಾದಿ. ಅದನ್ನು ಶಿಥಿಲಗೊಳಿಸಿದರೆ, ಆ ಸಂಸ್ಥೆ ಅವಸಾನದತ್ತ ಸಾಗುವುದರಲ್ಲಿ ಯಾವ ಸಂದೇಹವಿಲ್ಲ.

– ಜಗನ್ನಾಥ ಜಮಾದಾರ.

ಗದಗ.

ಯಾವುದೇ ಸಹಕಾರ ಬ್ಯಾಂಕ್ ಯಶಸ್ವಿಯಾಗಲು ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಮೊಟ್ಟಮೊದಲು ಪಾರದರ್ಶಕ ಆಡಳಿತ ಹೊಂದಿರಬೇಕು, ಗ್ರಾಹಕರ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು, ಸಾಲಗಾರನ ಮರುಪಾವತಿ ಸಾಮರ್ಥ್ಯ ಪೂರ್ಣ ತಿಳುವಳಿಕೆ ಇರಬೇಕು. ಭಾರತದ ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ 25 ಕೋಟಿ ರೂ ಶೇರು ಬಂಡವಾಳ ಹಾಗೂ 100 ಕೋಟಿ ರೂ ಠೇವಣಿ ಹೊಂದಿದರೆ, ಯಾವುದೇ ಸಂಘ ಬ್ಯಾಂಕ್ ಸ್ಥಾನಮಾನ ಹೊಂದಬಹುದು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!