ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಸೇರಿದಂತೆ ತಾಲೂಕಿನಾದ್ಯಂತ ಶಿವರಾತ್ರಿ ಹಬ್ಬದ ಆಚರಣೆಯನ್ನು ಬುಧವಾರ ಅತ್ಯಂತ ಶೃದ್ಧಾ ಭಕ್ತಿಯಿಂದ ಆಚರಿಸಲಾಯಿತು. ಶಿವ-ಪಾರ್ವತಿಯರು ನಂದಿ ಮೇಲೆ ಆಸೀನರಾದ ವಿಶೇಷವಾದ ಪುಲಿಗೆರೆ ಸೋಮೇಶ್ವರನ ಮೂರ್ತಿಗೆ ಜಲಾಭಿಷೇಕ, ಪೂಜೆ ನೆರವೇರಿತು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಅಪಾರ ಭಕ್ತ ಸಮೂಹ ದೇವಸ್ಥಾನಕ್ಕೆ ಆಗಮಿಸಿ ಪೂಜೆ, ವೃತಾಚರಣೆ ಕೈಗೊಂಡು ದರ್ಶನ, ಪ್ರಸಾದ ಪಡೆದರು.
ಆರ್ಎಸ್ಎಸ್ ಸ್ವಯಂಸೇವಕರು ಸೇವೆ ಸಲ್ಲಿಸಿದರು. ರಾತ್ರಿ 21 ಋತ್ವಿಜರು ವೇದ ಮಂತ್ರಘೋಷಗಳೊಂದಿಗೆ (ಯಾಮಪೂಜಾ) ಲಘು ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಕ್ಷೀರಾಭಿಷೇಕ, ಮಹಾಮಂಗಳಾರತಿ ನೆರವೇರಿಸಿದರು. ಧಾರವಾಡದ ಜಿಲ್ಲಾಧಿಕಾರಿ ದಿವ್ಯ ಪ್ರಭು ಮತ್ತು ಗದಗ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಕುಟುಂಬ ಸಮೇತ ಸೋಮೇಶ್ವರನ ದರ್ಶನ ಪಡೆದರು.
ಪಟ್ಟಣದ ಗೊಲ್ಲಾಳೇಶ್ವರ, ಸಹಸ್ರಲಿಂಗ, ಲಕ್ಷ್ಮೀಲಿಂಗೇಶ್ವರ ಸೇರಿ ಉಳಿದೆಲ್ಲ ಶಿವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಜಾಗರಣೆ ನೆರವೇರಿತು. ಹಬ್ಬದ ದಿನವೂ ಮಾರುಕಟ್ಟೆಯಲ್ಲಿ ಜನತೆ ಹೂವು-ಹಣ್ಣು ಸೇರಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಒಂದಷ್ಟು ಹಣ್ಣುಗಳ ಬೆಲೆ ಹೆಚ್ಚಳವಾಗಿದ್ದರೆ ಮತ್ತೊಂದಿಷ್ಟು ಹಣ್ಣುಗಳ ಬೆಲೆ ಸಾಮಾನ್ಯವಾಗಿತ್ತು. ಕಲ್ಲಂಗಡಿ ಹಣ್ಣು 30 ರೂ ಕೆಜಿ, ಬಾಳೆಹಣ್ಣು ಡಜನ್-40-50, ಕರಬೂಜ್, ದ್ರಾಕ್ಷಿ ಮತ್ತು ಖರ್ಜೂರ ಕೆಜಿಗೆ-70-80ರಂತೆ ದರವಿತ್ತು. ಗುರುವಾರ ರಾತ್ರಿ ದೇವಸ್ಥಾನದಲ್ಲಿ ಸಂಗೀತ, ಭರತನಾಟ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.



