ದಾವಣಗೆರೆ: ನಾಳೆ ಬೆಂಗಳೂರಿನಲ್ಲಿ ಉಸ್ತುವಾರಿ ಸಮಿತಿ ಸಭೆ ನಡೆಯಲಿದ್ದು, ಶನಿವಾರ ಅಭ್ಯರ್ಥಿ ಟಿಕೆಟ್ ಘೋಷಣೆ ಆಗುವ ನಿರೀಕ್ಷೆಯಿದೆ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದ್ದಾರೆ.
ದಾವಣಗೆರೆಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿದ್ದು, ಶ್ರೀನಿವಾಸ್ ತಮ್ಮ ಉತ್ತಮ ಸ್ನೇಹಿತರು. ಚುನಾವಣೆ ಸ್ನೇಹಪೂರ್ವಕವಾಗಿ ನಡೆಯಲಿ ಎಂದು ಹೇಳಿದರು.
ದಾವಣಗೆರೆ ಜನತೆಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡುವುದು ಮುಖ್ಯ ಉದ್ದೇಶವಾಗಿದ್ದು, ಪಕ್ಷ ಯಾರನ್ನೇ ಅಭ್ಯರ್ಥಿಯಾಗಿ ಘೋಷಿಸಿದರೂ ಅವರನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಸಭೆಗೆ ತಮ್ಮನ್ನು ಆಹ್ವಾನಿಸದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಅಭ್ಯರ್ಥಿ ಪರವಾಗಿ ಮಾತನಾಡಿದಂತೆ ಆಗುತ್ತದೆ ಎಂದು ತಿಳಿಸಿ, ಭಾಗವಹಿಸಬೇಡಿ ಎಂದು ಹೇಳಿದರು. ಆದ್ದರಿಂದ ನಾನು ಭಾಗವಹಿಸಲಿಲ್ಲ. ಪಕ್ಷದ ಯಾವುದೇ ನಿರ್ಣಯಕ್ಕೂ ಬದ್ದನಾಗಿದ್ದೇನೆ ಎಂದು ಉಸ್ತುವಾರಿ ಸಮಿತಿಗೆ ತಿಳಿಸಿದ್ದೇನೆ” ಎಂದು ಹೇಳಿದರು.
ಉಸ್ತುವಾರಿ ಸಮಿತಿ ಸಭೆಯಲ್ಲಿ ನಡೆದ ಗಲಾಟೆ ಕುರಿತು ಪ್ರತಿಕ್ರಿಯಿಸಿದ ಅವರು, “ಅಲ್ಲಿಗೆ ಬಂದು ಗೊಂದಲ ಸೃಷ್ಟಿಸಿದವರು ನಮ್ಮ ಪಕ್ಷದ ಕಾರ್ಯಕರ್ತರು ಅಲ್ಲ. ಅವರನ್ನು ನಾವು ಈ ಹಿಂದೆ ಪಕ್ಷದಲ್ಲಿ ನೋಡಿಲ್ಲ. ಇತ್ತೀಚೆಗೆ ಸೇರಿರುವ ಕೆಲವರು ಈ ರೀತಿಯ ಘಟನೆಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ” ಎಂದು ಹೇಳಿದರು.



