ವಿಜಯಸಾಕ್ಷಿ ಸುದ್ದಿ, ನರಗುಂದ: ಅಖಿಲ ಭಾರತ ವೀರಶೈವ ಮಹಾಸಭಾದ ಗದಗ ಜಿಲ್ಲಾ ಘಟಕದ ಆಜೀವ ಸದಸ್ಯರನ್ನು ಹೆಚ್ಚಿಸುವ ಮೂಲಕ ಮಹಾಸಭಾದ ಸಂಘಟನೆಯನ್ನು ಬಲವರ್ಧನೆಗೆ ಕ್ರಮ ಜರುಗಿಸಲಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ ಹೇಳಿದರು.
ಅವರು ಮಂಗಳವಾರ ನರಗುಂದದ ಪ್ರವಾಸಿ ಮಂದಿರದಲ್ಲಿ ನರಗುಂದ ತಾಲೂಕಾ ಮಹಾಸಭಾ ಘಟಕ ಏರ್ಪಡಿಸಿದ್ದ ಸದಸ್ಯತ್ವ ಅಭಿಯಾನ-ಸಂಘಟನ ಬಲವರ್ಧನೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಗದಗ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಮಹಾಸಭಾದ ಸದಸ್ಯತ್ವವನ್ನು ಹೆಚ್ಚಿಸುವ, ಸಂಘಟನೆಯನ್ನು ಬಲಪಡಿಸುವ ಮೂಲಕ ಮಹಾಸಭಾವನ್ನು ಸಮಾಜಮುಖಿ ಕಾರ್ಯಕ್ಕೆ ಅಣಿಗೊಳಿಸುವ ಎಲ್ಲ ರೀತಿಯ ಪ್ರಯತ್ನಗಳು ಆಯಾ ತಾಲೂಕಿನ ಗುರು-ಹಿರಿಯರ, ಸಂಘಟನೆಯ ಪದಾಧಿಕಾರಿಗಳ ಹಾಗೂ ಸಮಾಜ ಮುಖಂಡರ ಮೂಲಕ ಮಾಡಲಾಗುತ್ತಿದ್ದು, ಇದಕ್ಕೆ ಸಮಾಜಬಾಂಧವರು ಸಹಕಾರ ನೀಡಬೇಕೆಂದರು.
ನರಗುಂದದಲ್ಲಿ ಹಿರಿಯರಾದ ಚನ್ನಬಸಪ್ಪ ಕಂಠಿ, ತಾಲೂಕಾಧ್ಯಕ್ಷರಾದ ಅಪ್ಪಣ್ಣ ನಾಯ್ಕರ್ ಅವರ ನೇತೃತ್ವದಲ್ಲಿ ಎಲ್ಲ ಪದಾಧಿಕಾರಿಗಳು, ನಿರ್ದೇಶಕರು ಸಂಘಟನೆಯನ್ನು ಬಲಗೊಳಿಸಬೇಕೆಂದು ವಿನಂತಿಸಿದ್ದು, ನೂರಕ್ಕೂ ಹೆಚ್ಚು ಮಹನೀಯರು ಮಹಾಸಭಾದ ಆಜೀವ ಸದಸ್ಯತ್ವ ಪಡೆದುಕೊಳ್ಳಲು ಮುಂದೆ ಬಂದಿರುವದು ಸಂತೋಷ ಎಂದು ಗುಡಿಮನಿ ಹೇಳಿದರು.
ನರಗುಂದ ತಾಲೂಕಾಧ್ಯಕ್ಷರಾದ ಅಪ್ಪಣ್ಣ ನಾಯ್ಕರ್, ಉಪಾಧ್ಯಕ್ಷ ಚನ್ನಬಸಪ್ಪ ಕಂಠಿ ಮಾತನಾಡಿ, ನರಗುಂದ ತಾಲೂಕಿನಲ್ಲಿ ಸಂಘಟನೆಯನ್ನು ಹೆಚ್ಚು ಕ್ರಿಯಾಶೀಲಗೊಳಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಇನ್ನೂ ಪ್ರಯತ್ನ ಮುಂದುವರೆಸುವದಾಗಿ ಹೇಳಿದರು.
ಸಭೆಯಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷ ಸಂಗಳಮಠ, ಕಾರ್ಯದರ್ಶಿ ಮುರುಘರಾಜೇಂದ್ರ ಬಡ್ನಿ, ಕೋಶಾಧ್ಯಕ್ಷ ಚನ್ನವೀರಪ್ಪ ಹುಣಶೀಕಟ್ಟಿ, ನಿರ್ದೇಶಕ ಶ್ರೀಶೈಲಪ್ಪ ಚಳಗೇರಿ ಸೇರಿದಂತೆ ನರಗುಂದ ತಾಲೂಕಾ ಘಟಕದ ಪದಾಧಿಕಾರಿಗಳು, ಹಿರಿಯರು ಉಪಸ್ಥಿತರಿದ್ದು ಸಲಹೆ-ಸೂಚನೆ ನೀಡಿದರು.
ಮುಂದಿನ ವಾರ ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನಲ್ಲಿ ಮಹಾಸಭಾದ ಸದಸ್ಯತ್ವ ಅಭಿಯಾನ-ಸಂಘಟನ ಬಲವರ್ಧನೆ ಸಭೆಯನ್ನು ಹಮ್ಮಿಕೊಳ್ಳಲಾಗುವದು ಎಂದು ಕಾರ್ಯದರ್ಶಿ ಮುರುಘರಾಜೇಂದ್ರ ಬಡ್ನಿ ತಿಳಿಸಿದ್ದಾರೆ.



