ತುಮಕೂರು: ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಜೂಜಾಟ ಪ್ರಕರಣದ ಸಂಬಂಧ ವಿಚಾರಣೆಗೆ ಪೊಲೀಸರು ಕರೆತಂದಿದ್ದ ಆರು ಮಂದಿಯ ಪೈಕಿ ಕಾಂತರಾಜು ಎಂಬವರು ಮೃತಪಟ್ಟಿದ್ದರು. ಈ ಘಟನೆ ಅನುಮಾನಾಸ್ಪದವಾಗಿದ್ದು, ಮೃತರ ಕುಟುಂಬಸ್ಥರು ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವಿಚಾರಣೆ ನೆಪದಲ್ಲಿ ಹಲ್ಲೆ ನಡೆಸಿ ಕೊಲೆಗೈಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಯಳನಾಡು ಗ್ರಾಮದ ನಿವಾಸಿಯಾದ ಕಾಂತರಾಜು ಜೊತೆ ಇದ್ದ ಪ್ರದೀಪ್ ಹೇಳುವಂತೆ, ಜೂಜಾಟದಲ್ಲಿ ಭಾಗಿಯಾಗದಿದ್ದರೂ ಕಾಂತರಾಜು ಸೇರಿ ಐವರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಬಂದಿದ್ದರು. ಠಾಣೆಗೆ ಬಂದಾಗ ಕಾಂತರಾಜು ತುಂಬಾ ಸುಸ್ತಾಗಿದ್ದು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವಂತೆ ಕಂಡರೂ ಪೊಲೀಸರು ಗಮನ ಹರಿಸಲಿಲ್ಲ ಎಂದು ಆರೋಪಿಸಲಾಗಿದೆ.
ಹೇಳಿಕೆ ಪಡೆಯಲು ಬಂದಿದ್ದ ಸರ್ಕಲ್ ಇನ್ಸ್ಪೆಕ್ಟರ್, ಠಾಣೆಯಲ್ಲೇ ಮಲಗಿದ್ದ ಕಾಂತರಾಜು ಅವರನ್ನು ಕಾಲಿನಿಂದ ಒದ್ದು ಎಬ್ಬಿಸಿದ್ದಾರೆಯೆಂದು ಹೇಳಲಾಗಿದೆ. ಬಳಿಕ ಎಲ್ಲಾ ಪ್ರಕ್ರಿಯೆಗಳು ಮುಗಿಸಿ ಹೊರಬರುತ್ತಿದ್ದ ವೇಳೆ ಕಾಂತರಾಜು ಠಾಣೆಯ ಬಾಗಿಲಿನ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಮಾಹಿತಿ ದೊರೆತಿದೆ.
ಇನ್ನೊಂದೆಡೆ, ಕಾಂತರಾಜು ಕುಟುಂಬದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳು ತೀವ್ರ ಆಕ್ರಂದನದಲ್ಲಿದ್ದಾರೆ. ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೃತನ ಮಗಳು ನಂದಿತಾ ಆಗ್ರಹಿಸಿದ್ದಾರೆ.
ಮೃತನ ಮಗ ತಿಲಕ್ ಗೌಡ ತಮ್ಮ ತಂದೆಯ ಸಾವಿಗೆ ಪೊಲೀಸರೇ ಹೊಣೆ ಎಂದು ದೂರು ನೀಡಿದ್ದು, ಆರೋಗ್ಯ ಸಮಸ್ಯೆ ಬಗ್ಗೆ ತಿಳಿಸಿದ್ದರೂ ಚಿಕಿತ್ಸೆ ನೀಡದೆ, ತಲೆ, ಕಾಲು ಮತ್ತು ಎದೆ ಭಾಗಕ್ಕೆ ಬೂಟ್ ಕಾಲಿನಿಂದ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಘಟನೆ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಇದೀಗ ಸಿಐಡಿ ತನಿಖೆ ಮುಂದುವರಿಯಲಿದೆ.



