ವಿಜಯಸಾಕ್ಷಿ ಸುದ್ದಿ, ಗದಗ: 28/09/2025ರಂದು ಗದಗ ಬೆಟಗೇರಿ ಅಂಜುಮನ್-ಏ-ಇಸ್ಲಾಮ್ ಸಂಸ್ಥೆಯ ಚುನಾವಣೆಯಲ್ಲಿ ನಮ್ಮ ತಂಡಕ್ಕೆ ಪ್ರತ್ಯಕ್ಷ-ಪರೋಕ್ಷವಾಗಿ ಬೆಂಬಲಿಸಿ ನಮ್ಮ 11 ಅಭ್ಯರ್ಥಿಗಳಿಗೆ ಮತ ನೀಡಿ, ನಮ್ಮ 3 ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೀರಿ. ಈ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ಅವಳಿ ನಗರದ ಎಲ್ಲಾ ಮುಸ್ಲಿಂ ಸಮಾಜ ಬಾಂಧವರಿಗೆ ಕೃತಜ್ಞತಾ ಸಮಾರಂಭವನ್ನು ಅ. 16ರಂದು ಸಾಯಂಕಾಲ 5 ಗಂಟೆಗೆ ಗದಗ ನಗರದ ಜಾಕೀರ್ ಹುಸೇನ್ ಕಾಲೋನಿ ಹಾಲ್ನಲ್ಲಿ ಏರ್ಪಡಿಸಲಾಗಿದೆ ಎಂದು ಅಲ್ಮದಿನಾ ಗ್ರೂಪ್ನ ನೇತೃತ್ವ ವಹಿಸಿದ್ದ ಭಾಷಾಸಾಬ ಮಲ್ಲಸಮುದ್ರ ತಿಳಿಸಿದರು.
ಈ ಕುರಿತು ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಳಿ ನಗರದ ಎಲ್ಲಾ ಮುಸ್ಲಿಂ ಸಮಾಜ ಬಾಂಧವರು ನಮ್ಮ ಕೃತಜ್ಞತಾ ಸಭೆಯಲ್ಲಿ ಪಾಲ್ಗೊಂಡು ನಮ್ಮ ಮುಂದಿನ ನಡೆಗೆ ಮಾರ್ಗದರ್ಶನ ಮಾಡಬೇಕೆಂದು ನಮ್ಮ ಅಲ್ಮದಿನಾ ಗ್ರೂಪ್ನ ಸದಸ್ಯರಾದ ಆಸೀಫ್ ದಂಡಿನ, ಬಾಬು ನರಸಾಪೂರ, ಬಷೀರಸಾಬ ಸಂಕನಾಳ, ದೌಲಸಾಬ ಮಲ್ಲಸಮುದ್ರ, ಕರಿಮ್ಸಾಬ ಸುಣಗಾರ, ಮೆಹಬೂಬ ಹುನಗುಂದ, ಮೆಹಬೂಬಬಾಷಾ ಗಡಾದ, ಸಾದಿಕ್ ಬುಡ್ಡೇಸಾಬ ನರೇಗಲ್ಲ, ಶಾಕೀರ್ ಕಾತರಕಿ, ಸುಲೇಮಾನ ಮಾಳೇಕೊಪ್ಪ, ಯೂಸೂಫ್ಸಾಬ ಕೊಟ್ಟೂರ ಪರವಾಗಿ ವಿನಂತಿಸುತ್ತೇನೆ ಎಂದರು.
ಈ ಚುನಾವಣೆಯಲ್ಲಿ ಅಲ್ಮದಿನಾ ಗ್ರೂಪ್ 18,189 ಮತ ಪಡೆದಿದೆ. ಇಂಕ್ವಿಲಾಬ್ ಗ್ರೂಪ್ 23,457 ಮತ ಪಡೆದಿದ್ದರೆ, 19 ಪಕ್ಷೇತರ ಅಭ್ಯರ್ಥಿಗಳು 11,829 ಮತ ಪಡೆದಿದ್ದಾರೆ. ಒಟ್ಟು 53,475 ಮತದಾನ ಆಗಿದೆ ಎಂದು ಭಾಷಾಸಾಬ ಮಲ್ಲಸಮುದ್ರ ತಿಳಿಸಿದರು.



