ವಿಜಯಸಾಕ್ಷಿ ಸುದ್ದಿ, ಗದಗ: ಮುಂಬೈ ಕರ್ನಾಟಕದ ಇತಿಹಾಸ ನೋಡಬೇಕಾದರೆ ಕುರುಬರ ಸಂಘಗಳ ಇತಿಹಾಸ ಗಮನಿಸುವುದು ಅವಶ್ಯವಾಗಿದೆ. ಸ್ವಾತಂತ್ರ್ಯದಹೋರಾಟದಲ್ಲಿ ಕುರುಬ ಸಮಾಜದ ಕೊಡುಗೆ ಬಹುಜನರಿಗೆ ಗೊತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ದಿ. ಕರ್ನಾಟಕ ಕುರುಬರ ಸಂಘ ಆಯೋಜಿಸಿದ್ದ ಕರ್ನಾಟಕ ಕುರುಬರ ಸಹಕಾರ ಪತ್ತಿನ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಈ ಬಗ್ಗೆ ಇತಿಹಾಸದಲ್ಲಿ ಕಡಿಮೆ ಪ್ರಮಾಣದಲ್ಲಿ ದಾಖಲಿಸಲಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕುರುಬ ಸಮಾಜದ ಮಹಿಳೆಯರಾದ ಶಿರಹಟ್ಟಿಯ ಯಲ್ಲಮ್ಮ ಕಮಿತ ಹಾಗೂ ಈರಮ್ಮ ಕರಿಯಪ್ಪ ಏರೆಸೀಮೆ ಅವರುಗಳು ಗರ್ಭಿಣಿಯಾಗಿದ್ದರೂ ಹೋರಾಟದಲ್ಲಿ ಪಾಲ್ಗೊಂಡು ಜೈಲಿನಲ್ಲಿ ಮಕ್ಕಳನ್ನು ಹೆತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿರುವದು ಇತಿಹಾಸದಿಂದ ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್, ಅಜ್ಜಂಪಿರ್ ಖಾದ್ರಿ, ಶಾಸಕರಾದ ಬಸವರಾಜ ಶಿವಣ್ಣನವರ, ಶಾಸಕರಾದ ಸಿ.ಸಿ. ಪಾಟೀಲ, ಜಿ.ಎಸ್. ಪಾಟೀಲ, ಎನ್.ಎಚ್. ಕೋನರಡ್ಡಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಸಲೀಂ ಅಹಮ್ಮದ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ರಾಮಣ್ಣ ಲಮಾಣಿ, ಕುಸುಮ ಶಿವಳ್ಳಿ ಮುಂತಾದವರು ಉಪಸ್ಥಿತರಿದ್ದರು. ಡಾ. ಶ್ರೀಧರ ಕುರುಡಗಿ ಸ್ವಾಗತಿಸಿದರು. ಅಧ್ಯಕ್ಷತೆ ವಹಿಸಿದ್ದ ವಾಸಣ್ಣ ಕುರಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಹುಬಲಿ ಜೈನರ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಶತಮಾನೋತ್ಸವದ ನೆನಪಿನ ಕಾಣಿಕೆ, ಶತಮಾನೋತ್ಸವದ ಲಾಂಛನ, ಶತಮಾನೋತ್ಸವದ ಕೈಪಿಡಿಗಳನ್ನು ಬಿಡುಗಡೆ ಮಾಡಲಾಯಿತು.
ಈ ಹಿಂದೆ ರಜಾಕರ ಹಾವಳಿ ಹೆಚ್ಚಾದಾಗ ಸ್ವಾತಂತ್ರ್ಯ ಹೋರಾಟಗಾರ ಕೋಲೂರು ಮಲ್ಲಪ್ಪ ಅವರಿಗೆ ಇದೇ ಹನುಮಂತಪ್ಪ ಕುರಡಗಿ ಅವರ ಕುಟುಂಬವು ಆಶ್ರಯ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಅಲ್ಲದೆ, ಸಹಕಾರ ಚಳುವಳಿ ಹುಟ್ಟು ಹಾಕಿದ್ದು ಗದಗ ಜಿಲ್ಲೆಯ ಕಣಗಿನಹಾಳದ ಸಿದ್ದನಗೌಡ ಪಾಟೀಲರು ಕುರುಬ ಸಮುದಾಯದವರು ಎನ್ನುವುದು ನಾವೆಲ್ಲರೂ ಹೆಮ್ಮೆ ಪಡುವ ವಿಷಯವಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.



