ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಪಂಡಿತ ಪಂಚಾಕ್ಷರ ಗವಾಯಿಗಳವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪರಮ ಪೂಜ್ಯ ಡಾ. ಕಲ್ಲಯ್ಯಜ್ಜನವರ 55ನೇ ಜನ್ಮದಿನದ ಕಾರ್ಯಕ್ರಮ ಹಾಗೂ ಉಚಿತ ರಕ್ತ ಪರೀಕ್ಷೆ, ರಕ್ತದ ಗುಂಪು ವರ್ಗೀಕರಣ, ಎಚ್.ಬಿ ಪರೀಕ್ಷಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪೂಜ್ಯ ಡಾ. ಕಲ್ಲಯ್ಯಜ್ಜನವರು ವಹಿಸಿ ಮಾತನಾಡಿ, ರಕ್ತದಾನ ಶ್ರೇಷ್ಠ ದಾನವಾಗಿದೆ. ಲಕ್ಷಾಂತರ ಜೀವಗಳನ್ನು ಉಳಿಸಲು ರಕ್ತ ಅತ್ಯಗತ್ಯ. ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಅದನ್ನು ದಾನಿಗಳು, ಆರೋಗ್ಯವಂತರು, ಯುವಕರು, ದಾನ ಮಾಡುವುದರಿಂದ ಮಾತ್ರ ಅದನ್ನು ಸಂಗ್ರಹಿಸಿ ಅಗತ್ಯವಿರುವವರಿಗೆ ನೀಡಲು ಸಾದ್ಯಾವಾಗುತ್ತದೆ. ಶ್ರೀ ಬವಸಾರ್ ವಿಷನ್ ಇಂಡಿಯಾ ಗದಗನ ಡಾ. ದತ್ತು ವೈಕುಂಟೆಯವರ ಸೇವೆ ಅನನ್ಯವಾದದು. ಅವರ ನಿಸ್ವಾರ್ಥ ಸೇವೆಯನ್ನು ಸಮಾಜ ಗುರುತಿಸಿ ಗೌರವಿಸಬೇಕು ಎಂದರು.
ಶ್ರೀ ಮಾತಾ ಮಾಣಿಕೇಶ್ವರಿ ಶಾಖಾ ಮಠದ ಶಿವಶರಣೆ ನಂದೀಶ್ವರಿ ಮಾತಾಜಿ ಮಾತನಾಡಿ, ಪೂಜ್ಯರ ಹುಟ್ಟು ಹಬ್ಬವನ್ನು ಕಾಲೇಜಿನ ಸಿಬ್ಬಂದಿಯವರು ಆಚರಿಸುತ್ತಿರುವುದು ಸಂತಸದ ವಿಷಯ. ಮಾನವರು ಈ ಭೂತಾಯಿಯ ಋಣ, ಸಮಾಜದ ಋಣ ತೀರಿಸಲು ಸಾಧ್ಯವಿಲ್ಲ. ಸಮಾಜದ ದೀನ-ದುರ್ಬಲರ ಏಳಿಗೆಗಾಗಿ ಶ್ರಮಿಸುತ್ತಿರುವ ಪೂಜ್ಯರ ಕಾರ್ಯ ಶ್ಲಾಘನೀಯ ಎಂದರು.
ಪ್ರಾಚಾರ್ಯ ಡಾ. ವಿ.ಎ. ಹಿತ್ತಲಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ದತ್ತು ವೈಕುಂಟೆ, ಆರ್.ಎಸ್. ತಿರುಮಲೆ ಹಾಗು ಸಿಬ್ಬಂದಿ ವರ್ಗದವರು, ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು. ಪ್ರಾರ್ಥನೆಯನ್ನು ವೈದೇಹಿ, ಸ್ವಾಗತವನ್ನು ಪ್ರೊ. ಜೆ.ಎಸ್. ಇಟಗಿ ನಿರ್ವಹಿಸಿದರು. ಪ್ರೊ. ಡಿ.ಎಸ್. ಗಾಳಿ ನಿರೂಪಿಸಿದರು. ಡಾ. ಆರ್.ಎಫ್. ಹೂಗಾರ ವಂದಿಸಿದರು.



