ವಿಜಯಸಾಕ್ಷಿ ಸುದ್ದಿ, ಗದಗ : ನಿರಂತರ 28 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ, ಮರಳಿ ತಾಯ್ನಾಡಿಗೆ ಆಗಮಿಸಿದ ವೀರಯೋಧ ಸುಬೇದಾರ್ ಪ್ರಕಾಶ್ಗೌಡ ಕೆಂಚನಗೌಡ್ರರನ್ನು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಮುಂಡರಗಿ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಗದುಗಿನ ಹಳೆ ಡಿಸಿ ಆಫೀಸ್ ಸರ್ಕಲ್ ಹತ್ತಿರವಿರುವ ಫೀಲ್ಡ್ ಮಾರ್ಷಲ್ ಜನರಲ್ ಕೆ.ಎಂ. ಕಾರ್ಯಪ್ಪ ಸರ್ಕಲ್ನಿಂದ ಭವ್ಯ ಮೆರವಣಿಗೆ ಪ್ರಾರಂಭಗೊಂಡು ನಿವೃತ್ತ ಯೋಧನ ಸ್ವಗೃಹದವರೆಗೆ ಕರೆತಂದು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಮುಂಡರಗಿ ಮಾತನಾಡಿ, ದೇಶದ ಗಡಿಯಲ್ಲಿ ನಿಂತು ನಮ್ಮನ್ನು ಯೋಧರು ಹೇಗೆ ರಕ್ಷಿಸುತ್ತಿದ್ದಾರೆಯೋ, ಅದೇ ರೀತಿ ಅವರು ನಿವೃತ್ತಿ ಹೊಂದಿ ಬಂದ ನಂತರ ನಾವೆಲ್ಲರೂ ಅವರ ಸಾಮಾಜಿಕ ಜೀವನದಲ್ಲಿ ನೆಮ್ಮದಿಯಿಂದ ಬಾಳಲು ಸಹಕರಿಸೋಣ. ಅಂದಾಗ ಮಾತ್ರ ನಮ್ಮ ದೇಶ ಸುಭದ್ರವಾಗಿರಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಎನ್.ಆರ್. ದೇವಂಗಮಠ, ಪ್ರ.ಕಾರ್ಯದರ್ಶಿ ವಿಜಯ್ ಬಡಿಗೇರ, ಸಹ ಕಾರ್ಯದರ್ಶಿ ವೆಂಕಪ್ಪ ಕಲಹಾಳ, ಖಜಾಂಚಿ ಮಲ್ಲೇಶಪ್ಪ ಕೊಣ್ಣೂರ, ಗದಗ ಜಿಲ್ಲಾ ಘಟಕದ ವೀರನಾರಿಯರ ಅಧ್ಯಕ್ಷೆ ಇಂದಿರಾ ಹೆಬಸೂರ, ಸಂಘಟನಾ ಕಾರ್ಯದರ್ಶಿ ಜಯಲಕ್ಷ್ಮಿ ಹೂಗಾರ, ಪದಾಧಿಕಾರಿಗಳು, ಸದಸ್ಯರು, ಅರೆಸೇನಾಪಡೆಗಳ ಯೋಧರು, ಕೆಂಚನಗೌಡ್ರ ಬಂಧು-ಬಳಗದವರು ಉಪಸ್ಥಿತರಿದ್ದರು.



