ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ನೇಮಕಾತಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ವತಿಯಿಂದ ಬ್ಲಾಕ್ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಿಸುವ ಪ್ರಕ್ರಿಯೆ ಆರಂಭವಾಗಿದ್ದು, ಗದಗ ಜಿಲ್ಲೆಯ ವಿವಿಧ ಬ್ಲಾಕ್ಗಳಲ್ಲಿ ಆ.9ರಿಂದ 11ರವರೆಗೆ ಅಭಿಪ್ರಾಯ ಸಂಗ್ರಹಣಾ ಸಭೆಗಳು ನಡೆಯಲಿವೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್. ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗಾಗಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಂದ ನೇರವಾಗಿ ಅಭಿಪ್ರಾಯ ಪಡೆಯಲಾಗುವುದು. ಇದಕ್ಕಾಗಿ ಎಐಸಿಸಿ ಕಾರ್ಯದರ್ಶಿ ವಿವೇಕ ಬನ್ಸಾಲ ಅವರನ್ನು ವೀಕ್ಷಕರಾಗಿ ನೇಮಕ ಮಾಡಲಾಗಿದೆ. ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸತೀಶ ಮೆಹರವಾಡೆ ಹಾಗೂ ರಾಬರ್ಟ್ ದದ್ದಾಪೂರಿ ಸಹವೀಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಆ.9ರಂದು ಮೂರು ಬ್ಲಾಕ್ಗಳಲ್ಲಿ ಸಭೆ
ಆ.9ರಂದು ಬೆಳಿಗ್ಗೆ 10ಕ್ಕೆ ಶಿರಹಟ್ಟಿ ಬ್ಲಾಕ್, ಮಧ್ಯಾಹ್ನ 1ಕ್ಕೆ ಲಕ್ಷ್ಮೇಶ್ವರ ಬ್ಲಾಕ್ ಹಾಗೂ ಸಂಜೆ 4ಕ್ಕೆ ಮುಂಡರಗಿ ಬ್ಲಾಕ್ ಕಾಂಗ್ರೆಸ್ ಕಚೇರಿಗಳಲ್ಲಿ ಅಭಿಪ್ರಾಯ ಸಂಗ್ರಹಣಾ ಸಭೆಗಳು ನಡೆಯಲಿವೆ.
ಆ.10ರಂದು ನಾಲ್ಕು ಬ್ಲಾಕ್ಗಳಲ್ಲಿ
ಆ.10ರಂದು ಬೆಳಿಗ್ಗೆ 10ಕ್ಕೆ ರೋಣ ಮತ್ತು ನರೇಗಲ್ ಬ್ಲಾಕ್, ಮಧ್ಯಾಹ್ನ 2ಕ್ಕೆ ಹೊಳೆಆಲೂರು ಬ್ಲಾಕ್ ಹಾಗೂ ಸಂಜೆ 4ಕ್ಕೆ ನರಗುಂದ ಬ್ಲಾಕ್ನಲ್ಲಿ ಸಭೆ ನಡೆಯಲಿದೆ.
ಆ.11ರಂದು ಗದಗ, ಮುಳಗುಂದ
ಆ.11ರಂದು ಬೆಳಿಗ್ಗೆ 11ಕ್ಕೆ ಗದಗ ಮತ್ತು ಮುಳಗುಂದ ಬ್ಲಾಕ್ ಹಂತದಲ್ಲಿ ಅಭಿಪ್ರಾಯ ಸಂಗ್ರಹಣಾ ಸಭೆ ನಡೆಯಲಿದೆ. ವೀಕ್ಷಕರು ಹಾಗೂ ಸಹವೀಕ್ಷಕರು ಪ್ರತಿಯೊಂದು ಬ್ಲಾಕ್ಗೆ ಭೇಟಿ ನೀಡಿ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ದಾಖಲಿಸಿಕೊಳ್ಳಲಿದ್ದಾರೆ.
ಜಿಲ್ಲೆಯ ಎಲ್ಲ ಕಾಂಗ್ರೆಸ್ ಮುಖಂಡರು, ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ಪದಾಧಿಕಾರಿಗಳು, ಮುಂಚೂಣಿ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಭೆಗಳಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ನೀಡಬೇಕು ಎಂದು ಜಿ.ಎಸ್. ಪಾಟೀಲ ಮನವಿ ಮಾಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಸಕ್ತಿ ಹೊಂದಿರುವವರು ತಮ್ಮ ಅರ್ಜಿಗಳನ್ನು ಇದೇ ಸಂದರ್ಭದಲ್ಲಿ ಸಲ್ಲಿಸಬಹುದಾಗಿದೆ. ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ ಎಲ್ಲರೂ ಸಭೆಗಳಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

