ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ದಂಪತಿ ಮೇಲೆ ದುಷ್ಕರ್ಮಿಗಳು ರಾಡ್ ನಿಂದ ಹಲ್ಲೆ ಮಾಡಿದ್ದು, ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಪತಿ ಗಂಭೀರ ಗಾಯವಾಗಿ ಸ್ಥಿತಿ ಚಿಂತಾಜನಕವಾಗಿದ್ದು, ಗಂಗಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೂಲತಃ ಜಮಖಂಡಿಯ ಖಾಸಗಿ ಬ್ಯಾಂಕ್ ಉದ್ಯೋಗಿ ತ್ರಿವೇಣಿ(28) ಮೃತ ಮಹಿಳೆ. ಐಡಿಎಫ್ ಸಿ ಬ್ಯಾಂಕ್ ಕಾರಟಗಿ ಶಾಖೆಯ ಉದ್ಯೋಗಿ ಯಲಬುರ್ಗಾ ತಾಲೂಕು ಮುಧೋಳ ಗ್ರಾಮದ ವಿನೋದ(35) ಗಂಭೀರವಾಗಿ ಗಾಯಗೊಂಡಿದ್ದಾನೆ.
ಈ ಮೊದಲು ಯಲಬುರ್ಗಾ ತಾಲೂಕು ಮುಧೋಳ ಗ್ರಾಮದಲ್ಲಿನ ಸಹಕಾರಿ ಬ್ಯಾಂಕ್ ವೊಂದರ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ತ್ರಿವೇಣಿ ಮತ್ತು ವಿನೋದ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ನಂತರ ಮೃತ ತ್ರಿವೇಣಿ ಬಳ್ಳಾರಿ ಜಿಲ್ಲೆ ಸಿರುಗುಪ್ಪ ಶಾಖೆಗೆ ವರ್ಗಾವಣೆ ತೆಗೆದುಕೊಂಡಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಮರ್ಯಾದೆ ಹತ್ಯೆ: ದುಷ್ಕರ್ಮಿಗಳು ಇವರ ಮನೆ ಹತ್ತಿರವೇ ಬಂದು ಹಲ್ಲೆ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಪೊಲೀಸರಿಗೆ ದೊರೆತ ಫುಟೇಜ್ ನಲ್ಲಿ ಆರೋಪಿಗಳ ಚಹರೆ ಸ್ಪಷ್ಟವಾಗಿ ಕಾಣುತ್ತಿಲ್ಲ ಎನ್ನಲಾಗಿದೆ. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದು, ಮಹಿಳೆಯ ಕುಟುಂಬದವರಿಗೆ ಈ ಮದುವೆಗೆ ವಿರೋಧವಿತ್ತು. ಈ ಹಿನ್ನೆಲೆಯಲ್ಲಿ ಇದು ಮರ್ಯಾದೆ ಹತ್ಯೆ ಇರಬಹುದು ಎನ್ನಲಾಗಿದೆ.
ಸ್ಥಳಕ್ಕೆ ಎಸ್ಪಿ ಟಿ.ಶ್ರೀಧರ, ಗಂಗಾವತಿ ಡಿವೈಎಸ್ಪಿ ಆರ್.ಎಸ್. ಉಜ್ಜಿನಕೊಪ್ಪ, ಗಂಗಾವತಿ ಗ್ರಾಮೀಣ ಸಿಪಿಐ ಉದಯರವಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.