ವಿಜಯಸಾಕ್ಷಿ ಸುದ್ದಿ, ಗದಗ : ಶಿಕ್ಷಕ ಹುದ್ದೆ ಅತ್ಯಂತ ಪವಿತ್ರವಾದದ್ದು. ಇದೊಂದು ವೃತ್ತಿಯಾಗಿರದೇ ಸೇವಾ ಭಾಗವಾಗಿದೆ. ಎಲ್ಲ ಕ್ಷೇತ್ರದ ಪ್ರಮುಖರಿಗೆ, ಸಾಧಕರಿಗೆ, ಆಧ್ಯಾತ್ಮ ಗುರುಗಳಿಗೆ, ಸಂಶೋಧಕರಿಗೆ ಅಕ್ಷರ ಕಲಿಸಿದಾತ ಶಿಕ್ಷಕ. ಆದರೆ ಶಿಕ್ಷಕ ಕೊನೆಯವರೆಗೂ ಶಿಕ್ಷಕನಾಗಿಯೇ ಉಳಿಯುವುದು ವಿಪರ್ಯಾಸ. ಇವರ ಸೇವೆ ಎಂದೂ ಯಾರೂ ಮರೆಯಲಾರರು. ನಾನು ಶಿಕ್ಷಕನಾಗಿಯೇ ಸೇವೆ ಆರಂಭಿಸಿದವ ಇಂದು ಶಿಕ್ಷಕ ಬಳಗದಿಂದ ಗೌರವ ಸನ್ಮಾನ ಸಿಕ್ಕಿದ್ದು ಅವಿಸ್ಮರಣೀಯ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಹಾಗೂ ನಗರಸಭೆ ಆಯುಕ್ತರಾದ ಮಹೇಶ ಪೋತದಾರ ನುಡಿದರು.
ಅವರು ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳು ದತ್ತು ಪಡೆದ ಸಿದ್ದಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ ‘ಮಾತೃನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಿಕ್ಷಕ ಸಮಾಜದ ಆಸ್ತಿ. ಲಕ್ಷಾಂತರ ಮಕ್ಕಳ ಬಾಳಿಗೆ ಬೆಳಕಾಗುವ ಶಕ್ತಿ ಇರುವುದು ಶಿಕ್ಷಕನಿಗೆ ಮಾತ್ರ. ಅಂತಹ ಶಿಕ್ಷಕನ ಸೇವೆಯನ್ನು ವಿದ್ಯಾರ್ಥಿಗಳು, ಸಮಾಜ ಪಡೆಯಬೇಕು. ಇಂದು ಶಿಕ್ಷಕ ಬಳಗ ನೀಡಿದ ಗೌರವವನ್ನು ನನ್ನ ಜೀವಮಾನದಲ್ಲಿ ಸದಾಕಾಲ ಗೌರವ ಆದರಗಳೊಂದಿಗೆ ಸ್ಮರಿಸುತ್ತಾ ಇರುತ್ತೇನೆ ಎಂದರು.
ಡಾ. ಬಸವರಾಜ ಧಾರವಾಡ, ಎಚ್.ಆರ್. ಪೆಟ್ಲೂರ್, ಉಪನ್ಯಾಸಕ ಶಂಕರ ಹಡಗಲಿ ಸೇರಿದಂತೆ ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಮುಖ್ಯೋಪಾಧ್ಯಾಯೆ ಜಯಲಕ್ಷ್ಮಿ ಅಣ್ಣಿಗೇರಿ ಮುಂತಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಸುಭಾಸ ನಿಡಸನೂರ, ಎ.ಎಮ್. ಸಂಗನಾಳ, ಶಂಕ್ರಮ್ಮ ಆರ್. ಹಣಮಗೌಡ್ರು, ಎಂ.ಐ. ಶಿವನಗೌಡ್ರು, ಮಂಜುಳಾ ಪಿ.ಸಾಮ್ರಾಣಿ, ಸುಮಂಗಲ ಎಂ.ಪತ್ತಾರ್, ಶೋಭಾ ಎಸ್. ಗಾಳಿ, ರಮೇಶ್ ಬಸರಿ, ಸಾವಿತ್ರಿ ಎ.ಗದ್ದನಕೇರಿ, ಎನ್.ಆರ್. ಶಿರೋಳ್, ಸಬಿಯಾ ಯು.ಕುಷ್ಟಗಿ, ಸಂಜೀವಿನಿ ಕೂಲಗುಡಿ, ಮಂಜುಳಾ ಟಿ, ಪದ್ಮಾ ವಿ.ದಾಸರ್, ಲಕ್ಷ್ಮಮ್ಮ ಮಾಳೋತ್ತರ್ ಮುಂತಾದವರು ಉಪಸ್ಥಿತರಿದ್ದರು. ಶಶಿಕಲಾ ಬಿ.ಗುಳೇದ ಸ್ವಾಗತಿಸಿದರು. ಗಂಗಾ ಎಂ.ಅಳವಂಡಿ ನಿರೂಪಿಸಿದರು. ಕಾರ್ಯಕ್ರಮ ಆಯೋಜಕಿ ಶಾರದಾ ಬಾಣದ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.
Advertisement