HomeGadag Newsಗದಗ ಹಸಿರೀಕರಣಕ್ಕೆ 30 ಸಾವಿರ ಸಸಿಗಳ ಸಜ್ಜು

ಗದಗ ಹಸಿರೀಕರಣಕ್ಕೆ 30 ಸಾವಿರ ಸಸಿಗಳ ಸಜ್ಜು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ತಾಲೂಕಿನಲ್ಲಿ ಹಸಿರು ಪರಿಸರ ನಿರ್ಮಾಣದ ಮಹತ್ವಾಕಾಂಕ್ಷಿ ಗುರಿಯೊಂದಿಗೆ ಗದಗ ಸಾಮಾಜಿಕ ಅರಣ್ಯ ವಲಯ ವ್ಯಾಪ್ತಿಯ ಬಿಂಕದಕಟ್ಟಿ ಹೈಟೆಕ್ ಸಸ್ಯ ಕ್ಷೇತ್ರ ಬರೋಬ್ಬರಿ 30 ಸಾವಿರ ವಿವಿಧ ಜಾತಿಯ ಸಸಿಗಳೊಂದಿಗೆ ಸಜ್ಜಾಗಿ ನಿಂತಿದೆ. ಸಾಮಾಜಿಕ ಅರಣ್ಯ ವಲಯದ ಆರ್.ಎಸ್.ಪಿ.ಡಿ. ಯೋಜನೆಯಡಿ ರೈತರಿಗೆ ಸಹಾಯಧನದ ರೂಪದಲ್ಲಿ ಸಸಿಗಳನ್ನು ವಿತರಿಸಲಾಗುತ್ತಿದ್ದು, ಆಸಕ್ತ ರೈತರು ಹಾಗೂ ಪರಿಸರ ಪ್ರೇಮಿಗಳು ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಸಸಿಗಳನ್ನು ಪಡೆದು ಅವುಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿ ಹಸಿರು ಸಮುದಾಯ ನಿರ್ಮಾಣಕ್ಕೆ ಕೈಜೋಡಿಸುವಂತೆ ಅರಣ್ಯ ಇಲಾಖೆ ಕರೆ ನೀಡಿದೆ.

ಧಾರವಾಡ ಬೀಜ ಅಭಿವೃದ್ಧಿ ಘಟಕದಿಂದ ಬೀಜಗಳನ್ನು ಪಡೆದು ಸಸ್ಯ ಕ್ಷೇತ್ರದಲ್ಲಿ ಬೀಜ ಬಿತ್ತನೆ ಮಾಡಿ, ಒಂದು ವರ್ಷದವರೆಗೆ ಪೋಷಣೆ ಮಾಡಿ ನಂತರ ಸಸಿಗಳನ್ನು ವಿತರಿಸಲಾಗುತ್ತಿದೆ.

ಬಿಂಕದಕಟ್ಟಿ ಸಸ್ಯ ಕ್ಷೇತ್ರದಲ್ಲಿ ಮಹಾಗನಿ, ಶ್ರೀಗಂಧ, ದಾಂಡೇಲಿ ತೇಗ, ಬಿದಿರು, ರಕ್ತಚಂದನ, ಇಲಾಚಿ (ಸಿಹಿ ಹುಣಸೆ), ನೇರಳೆ, ಹೆಬ್ಬೇವು, ನೆಲ್ಲಿ, ಬೇವು, ಕರಿಬೇವು, ಚತುರ್ಮುಖ, ಸಂಪಿಗೆ, ಬಂಗಾಳಿ, ಗಜಗ, ಕಬೂಬಿಯ, ಶಿವನಿ, ಹೊಳೆಮತ್ತಿ, ಚರಿ, ಬಳುಲ, ಹೊಂಗೆ, ಪೇರಳೆ, ಮಾವು, ಲಿಂಬಿ, ಸೀತಾಫಲ, ಅರಳಿ, ಬಸರಿ, ಬಸವನಪಾದ, ಆಕಾಶ ಮಲ್ಲಿಗೆ, ಜವಾನಿಕಾ, ಕಾಡು ಬಾದಾಮಿ, ತಪಸ್, ಅತ್ತಿ, ಚಳ್ಳ, ಗುಲ್ಮೊಹರ್, ಸಿರಸಲ್, ರೇನ್ ಟ್ರೀ ಸೇರಿದಂತೆ ವಿವಿಧ ಜಾತಿಯ ಸಸಿಗಳು ಲಭ್ಯವಿವೆ.

ವಿವಿಧ ಬಗೆಯ ಸಸಿ ತಳಿಗಳಿಗೆ ಹೆಸರುವಾಸಿಯಾಗಿರುವ ಬಿಂಕದಕಟ್ಟಿ ಹೈಟೆಕ್ ಸಸ್ಯ ಕ್ಷೇತ್ರದಲ್ಲಿ ಎಲ್ಲ ತಳಿ ಸಸ್ಯಗಳೂ ಲಭ್ಯವಿದ್ದು, ಬೇಸಿಗೆ ಕಾಲದಲ್ಲಿ ಅಗತ್ಯ ಬೀಜಗಳನ್ನು ಗದಗ ಜಿಲ್ಲೆಯಾದ್ಯಂತ ಸಂಚರಿಸಿ ಸಂಗ್ರಹಿಸಲಾಗುತ್ತದೆ. ಸಿಗದ ಬೀಜಗಳನ್ನು ಹೊರ ಜಿಲ್ಲೆಗಳಿಂದ ತರಿಸಲಾಗುತ್ತದೆ. ಶ್ರೀಗಂಧ, ಕಬೂಬಿಯ, ನುಗ್ಗಿ ಹಾಗೂ ಹೆಬ್ಬೇವು ಬೀಜಗಳನ್ನು ದಾವಣಗೆರೆ, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳಿಂದ ತರಿಸಿ ಬೆಳೆಸಲಾಗುತ್ತಿದೆ.

ಬೀಜದಿಂದ ಬೆಳೆಸಿದ ಸಸಿಗಳನ್ನು ಒಂದು ವರ್ಷದ ಬಳಿಕ ರೈತರಿಗೆ ವಿತರಿಸಲಾಗುತ್ತದೆ. ಗದಗ ತಾಲೂಕು ಸಾಮಾಜಿಕ ಅರಣ್ಯ ವಲಯವು ರೈತರಿಗೆ ಸಹಾಯಧನದ ರೂಪದಲ್ಲಿ ಸಸಿಗಳನ್ನು ವಿತರಿಸಲು ಮುಂದಾಗಿದ್ದು, 30 ಸಾವಿರ ಸಸಿಗಳ ವಿತರಣೆಯ ಗುರಿ ಹೊಂದಿದೆ.

ಸಸಿಗಳ ಗಾತ್ರಕ್ಕೆ ಅನುಗುಣವಾಗಿ ರೈತರು ಹಣ ಪಾವತಿಸಬೇಕಿದ್ದು, ಸಣ್ಣ ಸಸಿಗೆ 3 ರೂ. ಹಾಗೂ ದೊಡ್ಡ ಸಸಿಗೆ 6 ರೂ. ನಿಗದಿಪಡಿಸಲಾಗಿದೆ. ಇದೇ ಸಸಿಗಳಿಗೆ ಮಾರುಕಟ್ಟೆಯಲ್ಲಿ 20 ರೂ.ದಿಂದ 33 ರೂ.ವರೆಗೆ ಬೆಲೆ ಇದೆ.

ಸಬ್ಸಿಡಿ ಯೋಜನೆಯಡಿ ಸಸಿಗಳನ್ನು ಪಡೆಯಲು ರೈತರು ಆರ್.ಟಿ.ಸಿ. ಉತಾರ, ಆಧಾರ್ ಕಾರ್ಡ್ ಹಾಗೂ ಭಾವಚಿತ್ರದೊಂದಿಗೆ ಬಿಂಕದಕಟ್ಟಿ ಸಸ್ಯ ಕ್ಷೇತ್ರವನ್ನು ಸಂಪರ್ಕಿಸಬಹುದಾಗಿದೆ.

24 ಕಿ.ಮೀ. ರಸ್ತೆ ಬದಿಯಲ್ಲಿ ಸಸಿ ನೆಡುವ ಯೋಜನೆ

ಗದಗ ತಾಲೂಕು ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಸುಮಾರು 24 ಕಿಲೋಮೀಟರ್ ಉದ್ದದವರೆಗೆ ಸಸಿ ನೆಡುವ ಯೋಜನೆ ರೂಪಿಸಲಾಗಿದ್ದು, ಈ ಕಾರ್ಯಕ್ಕೆ ಗುತ್ತಿಗೆ ನೀಡಲಾಗುತ್ತದೆ. ಗುತ್ತಿಗೆದಾರರು ಸಸಿ ನೆಡುವುದು, ಒಂದು ವರ್ಷದವರೆಗೆ ರಕ್ಷಣೆ, ನೀರುಣಿಸುವುದು ಹಾಗೂ ಪೋಷಣೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಹಕ್ಕುಪತ್ರ ಪಡೆದ ರೈತರಿಗೆ 3,500 ಸಸಿಗಳು ಉಚಿತ

ಕಬಲಾಯತಕಟ್ಟಿ ತಾಂಡಾ ಸೇರಿದಂತೆ ಅರಣ್ಯ ವ್ಯಾಪ್ತಿಯಲ್ಲಿ ಸಾಗುವಳಿ ಮಾಡುವ ಹಕ್ಕುಪತ್ರಗಳನ್ನು ಪಡೆದ ರೈತರಿಗೆ ಕೇಂದ್ರ ಸರ್ಕಾರದ ಯೋಜನೆಯಡಿ 3,500 ಸಸಿಗಳನ್ನು ಉಚಿತವಾಗಿ ವಿತರಿಸಲಾಗುವುದು.

ಮಾನ್ಸೂನ್ ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ 30 ಸಾವಿರ ಸಸಿಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಮಳೆಗಾಲದಲ್ಲಿ ಸಸಿ ನೆಟ್ಟರೆ ಕಡಿಮೆ ಶ್ರಮದಲ್ಲಿ ಉತ್ತಮ ಬೆಳವಣಿಗೆ ಸಾಧಿಸಿ, ಗದಗ ತಾಲೂಕನ್ನು ಹಸಿರೀಕರಣಗೊಳಿಸಲು ಸಾಧ್ಯವಾಗಲಿದೆ ಎಂದು ಇಲಾಖೆ ತಿಳಿಸಿದೆ.

“ರೈತರು ಮತ್ತು ಪರಿಸರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಗದಗ ತಾಲೂಕಿನಾದ್ಯಂತ ಹಸಿರು ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು. ಗದಗ ಹಸಿರೀಕರಣ ಅಭಿಯಾನವನ್ನು ಜನಸಹಭಾಗಿತ್ವದ ಮೂಲಕ ಯಶಸ್ವಿಗೊಳಿಸೋಣ.”

 ನಮನ ನಾಯ್ಕ, ವಲಯ ಅರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ವಲಯ, ಗದಗ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!