ಚಿತ್ರದುರ್ಗ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಭಾವನನ್ನು ಕಾರು ಬಾಡಿಗೆ ನೆಪದಲ್ಲಿ ಕರೆಸಿ ಕತ್ತು ಕೊಯ್ದು ಹತ್ಯೆ ಮಾಡಿ, ಬಳಿಕ ಶವವನ್ನು ಸುಟ್ಟು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ ಭೀಕರ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವನಿಗಾಗಿ ಬಲೆ ಬೀಸಲಾಗಿದೆ.
ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದ ನಿವಾಸಿ ಹಾಗೂ ಪಾವಗಡ ಸರ್ಕಾರಿ ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನಿಷಿಯನ್ ಶಿವಮೂರ್ತಿ (49) ಅವರನ್ನು ಜೂನ್ 26ರಂದು ಚನ್ನಗಿರಿಗೆ ಕರೆಸಿಕೊಂಡ ಆರೋಪಿಗಳು, ಪೂರ್ವನಿಯೋಜಿತವಾಗಿ ಹತ್ಯೆಗೈದಿದ್ದರು. ನಂತರ ಶವವನ್ನು ಇಂಗಳದಾಳ್ ಗ್ರಾಮದ ಸಮೀಪಕ್ಕೆ ತಂದು ಬೆಂಕಿ ಹಚ್ಚಿ ಸುಟ್ಟು ಪರಾರಿಯಾಗಿದ್ದರು.
ಜುಲೈ 1ರಂದು ಸುಟ್ಟು ಕರಕಲಾದ ಶವ ಪತ್ತೆಯಾದ ಬಳಿಕ ತನಿಖೆ ಆರಂಭಿಸಿದ ಪೊಲೀಸರು, ಕೊಲೆಯ ಹಿಂದಿನ ಸಂಚನ್ನು ಬಯಲಿಗೆಳೆದಿದ್ದಾರೆ. ಮೃತನ ಸಹೋದರನ ಪತ್ನಿ ಸುಮತಿ ಹಾಗೂ ಆಕೆಯ ಪ್ರಿಯಕರ ನೂರ್ ಅಹ್ಮದ್ ನಡುವಿನ ಅಕ್ರಮ ಸಂಬಂಧಕ್ಕೆ ಶಿವಮೂರ್ತಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ಹಿನ್ನೆಲೆ ಅವರನ್ನು ದಾರಿ ಮುಳ್ಳಾಗಿಸಿ ಹತ್ಯೆ ಮಾಡಲಾಗಿದೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಪ್ರಕರಣದಲ್ಲಿ ಸುಮತಿ, ನೂರ್ ಅಹ್ಮದ್, ಅಕ್ಷಯ್ ಮತ್ತು ಜೇಂಕಾರ್ ಅವರನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿಯನ್ನು ಬಂಧಿಸಲು ಪೊಲೀಸರು ಶೋಧ ಮುಂದುವರಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಪ್ರಕರಣದ ತನಿಖೆ ಇನ್ನೂ ಮುಂದುವರಿದಿದೆ ಎಂದು ತಿಳಿಸಿದ್ದಾರೆ.



