ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಶ್ರಾವಣ ಮಾಸದ ಶ್ರೀ ಜ್ಞಾನೇಶ್ವರಿ ಪಾರಾಯಣದ ರಜತ ಮಹೋತ್ಸವ ಹಾಗೂ ಶ್ರೀ ಪಾಂಡುರಂಗ–ರಕುಮಾಯಿ ನೂತನ ಮೂರ್ತಿಗಳ ಪ್ರತಿಷ್ಠಾಪನಾ ಮಹೋತ್ಸವ ಆ.25ರಿಂದ 29ರವರೆಗೆ ಐದು ದಿನಗಳ ಕಾಲ ಭಕ್ತಿಭಾವದಿಂದ ನಡೆಯಲಿದೆ.
ಮಹೋತ್ಸವದ ಅಂಗವಾಗಿ ಕಾಕಡಾ ಆರತಿ, ಜ್ಞಾನೇಶ್ವರಿ ಪಾರಾಯಣ, ಮಂಚರಿಗಾಥಾ ಭಜನೆ, ಪ್ರವಚನ, ನಾಮಜಪ, ಕೀರ್ತನೆ, ಜಾಗರ ಭಜನೆ ಹಾಗೂ ಭಾರೂಡ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಭಕ್ತರಿಗೆ ಉಪಹಾರ ಹಾಗೂ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಆ.26ರಂದು ಬೆಳಿಗ್ಗೆ 7.50ಕ್ಕೆ ಪಂಡರಪುರದ ಚೈತನ್ಯ ಸದ್ಗುರು ಶ್ರೀ ಗೋಪಾಲ ಮಹಾರಾಜ ಹಾಗೂ ಶ್ರೀ ಪ್ರಭಾಕರ ದಾದಾ ಭುಜಂಗರಾವ್ ಬೋಧಲೆ ಮಹಾರಾಜ ಅವರ ಅಮೃತಹಸ್ತದಿಂದ ಶ್ರೀ ಪಾಂಡುರಂಗ–ರಕುಮಾಯಿ ನೂತನ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ.
ಆ.28ರಂದು ‘ವಾರಕರಿ ರತ್ನ’ ಹ.ಭ.ಪ. ತುಕಾರಾಮ ಪವಾರ, ಕೊಲ್ಲಾಪುರ ಅವರ ಕೀರ್ತನೆ ಹಾಗೂ ರಾತ್ರಿ ಜಾಗರ ಭಜನೆ, ಭಾರೂಡ ನಡೆಯಲಿದೆ. ಆ.29ರಂದು ಬೆಳಿಗ್ಗೆ ಕಾಕಡಾ ಆರತಿ, ಪಾರಾಯಣ ಹಾಗೂ ಮಂಚರಿಗಾಥಾ ಭಜನೆ ಬಳಿಕ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಹ.ಭ.ಪ. ಸುನೀಲ ಬಾಬರ ಗುರೂಜಿ, ಕಲಬುರಗಿ ಅವರಿಂದ ಕಾಲಾ ಕೀರ್ತನೆ ನಡೆಯಲಿದೆ.
ಬಳಿಕ ‘ವಾರಕರಿ ರತ್ನ’ ಹ.ಭ.ಪ. ತುಕಾರಾಮ ಪವಾರ, ಕೊಲ್ಲಾಪುರ ಅವರ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ಶಾಸಕ ರಾಮಣ್ಣ ಲಮಾಣಿ ಹಾಗೂ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಮಹೋತ್ಸವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಪಾಂಡುರಂಗ–ರಕುಮಾಯಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.



