ವಿಜಯಸಾಕ್ಷಿ ಸುದ್ದಿ, ಬೀದರ್
ಇತ್ತೀಚಿನ ದಿನಗಳಲ್ಲಿ ಬೀದರ್ ನಗರದಲ್ಲಿ ಮನೆಗಳ್ಳತನದ ಪ್ರಕರಣಗಳು ಹೆಚ್ಚಿದ್ದು, ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ಸಂಖ್ಯೆಯ ದೂರುಗಳು ದಾಖಲಾಗುತ್ತಿರುವದು ಇಲಾಖೆಯ ನಿದ್ದೆಗೆಡಿಸಿತ್ತು.
ಇಂಥ ಪ್ರಕರಣಗಳನ್ನು ನಿಯಂತ್ರಿಸಿ, ಮನೆಗಳ್ಳತನದಲ್ಲಿ ಭಾಗಿಯಾದ ಕಳ್ಳರನ್ನು ಪತ್ತೆಮಾಡುವ ಉದ್ದೇಶದಿಂದ ಬೀದರ್ ಉಪವಿಭಾಗದಿಂದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣವರ್, ಪೊಲೀಸ್ ಉಪ ಅಧೀಕ್ಷಕ ಕೆ,ಎಂ, ಸತೀಶ್ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನೇ ರಚಿಸಲಾಗಿತ್ತು. ಈ ತಂಡವು ಸೆ.19ರಂದು ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಯಿಂದ 10 ಲಕ್ಷ ರೂ. ಬೆಲೆಬಾಳುವ 200 ಗ್ರಾಂ. ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದು, ಬೀದರ ನಗರದ ಆದರ್ಶ ಕಾಲೋನಿ, ಜ್ಯೋತಿ ಕಾಲೋನಿಯಲ್ಲಿ ನಡೆದಿದ್ದ ಮೂರು ಸರಣಿ ಮನೆಗಳ್ಳತನದಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿಸಿದ್ದಾರೆ. ಈ ಆರೋಪಿಯ ವಿರುದ್ಧ ಸೋಲಾಪುರ, ರಾಯಚೂರು, ಗದಗ, ಹುಬ್ಬಳ್ಳಿ, ಧಾರವಾಡ, ಬಾದಾಮಿ, ಬಾಗಲಕೋಟ, ವಿಜಯಪುರ ಜಿಲ್ಲೆಗಳಲ್ಲಿಯೂ ಹಲವು ಕಳ್ಳತನದ ಪ್ರಕರಣಗಳು ದಾಖಲಾಗಿವೆ. ಬಂಧಿತ ಆರೋಪಿಯ ವಿರುದ್ಧ ಗಾಂಧಿಜಂಗ್ ಪೊಲೀಸ್ ಠಾಣೆಯಲ್ಲಿ 134/2022, 138/2022 ಹಾಗೂ ಬೀದರ್ ನ ನೂತನ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 155/2022, ಕಲಂ 457, 380 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತನು ನಟೋರಿಯಸ್ ಅಪರಾಧಿಯಾಗಿದ್ದು, ಅಂತರ್ ರಾಜ್ಯ ಕಳ್ಳನಾಗಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದರು.
ಪೊಲೀಸ್ ಕಾರ್ಯಾಚರಣೆಯ ತಂಡದಲ್ಲಿ ಕಾರ್ಯನಿರ್ವಹಿಸಿದ ಪೊಲೀಸ್ ನಿರೀಕ್ಷಕ ಜಿ.ಎಸ್. ಬಿರಾದಾರ, ಬೀದರ್ ಗ್ರಾಮೀಣ ವೃತ್ತದ ಸಿಪಿಐ ಶ್ರೀಕಾಂತ ಅಲ್ಲಾಪೂರೆ, ಪಿಎಸ್ಐ ಸೈಯದ್ ಪಟೇಲ್, ಪಿಎಸ್ಐ ದಯಾನಂದ ಮಡಿವಾಳ ಹಾಗೂ ಸಿಬ್ಬಂದಿಗಳಾದ ಆರೀಫ್, ನವೀನ್, ಅನಿಲ್, ಇರ್ಫಾನ್, ಗಂಗಾಧರ, ಪ್ರವೀಣ್, ಶ್ರೀನಿವಾಸರ ಕಾರ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.