ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಸೆಪ್ಟೆಂಬರ್ 1ರಿಂದ ಕಾಣೆಯಾಗಿದ್ದ ಅರುಣಾಚಲಪ್ರದೇಶದ ಐವರು ಯುವಕರನ್ನು ಚೀನಾ ಸೇನೆ ಭಾರತೀಯ ಸೇನೆಯ ಸುಪರ್ದಿಗೆ ಶನಿವಾರ ಒಪ್ಪಿಸಿದೆ.
ಸುಹಾನಸಿರಿ ಜಿಲ್ಲೆಯ ಈ ಯುವಕರು ಬೇಟೆಗಾರರಾಗಿದ್ದು, ಬೇಟೆಯಾಡುವ ಸಂದರ್ಭದಲ್ಲಿ ವಾಸ್ತವ ನಿಯಂತ್ರಣ ರೇಖೆ ದಾಟಿ ಚೀನಾ ಪ್ರದೇಶವನ್ನು ತಲುಪಿದ್ದರು. ಭಾರತೀಯ ಸೇನೆ ಮತ್ತು ಸಚಿವ ಕಿರಣ್ ರಿಜು ಐವರನ್ನು ಸುರಕ್ಷಿತವಾಗಿ ಮರಳಿಸಲು ಚೀನಾ ಸೇನೆಗೆ ಮನವಿ ಮಾಡಿದ್ದರು.
ಶುಕ್ರವಾರ ಹಾಟ್ಲೈನ್ ಮೂಲಕ ಸಂಪರ್ಕಿಸಿದ್ದ ಚೀನಾ ಸೇನೆ ಶನಿವಾರ ಯುವಕರನ್ನು ಒಪ್ಪಿಸುವುದಾಗಿ ತಿಳಿಸಿತ್ತು. ಭಾರತೀಯ ಸೇನೆಯು ಈ ಯುವಕರು ಬೇಟೆಗಾರರು ಎಂದಿದ್ದರೆ, ಸ್ಥಳೀಯರು ಅವರನ್ನು ‘ಪೋಟರ್ಸ್’ ಎಂದಿದೆ. ಸೇನೆಯು ದುರ್ಗಮ ಪ್ರದೇಶದಲ್ಲಿ ತನ್ನ ಲಗೇಜ್ ಸಾಗಿಸಲು ನೇಮಿಸಿಕೊಳ್ಳುವ ಸ್ಥಳೀಯ ಸಹಾಯಕರನ್ನು ಪೋಟರ್ಸ್ ಎನ್ನಲಾಗುತ್ತದೆ.
ಪೋರ್ಟರ್ಗಳು ತಮ್ಮ ಕೆಲಸದ ನಂತರ ಇನ್ನೂ ಎತ್ತರದ ಪ್ರದೇಶಗಳಿಗೆ ಹೋಗಿ ಜಿಂಕೆ ಬೇಟೆಯಾಡುವುದು ಆಗಾಗ ನಡೆದಿದೆ. ಈ ಯುವಕರು ಪೋರ್ಟರ್ಗಳಾಗಿದ್ದು, ತಮ್ಮ ಕೆಲಸದ ನಂತರ ಅವರು ಬೇಟೆಗೆ ಹೋಗಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ.
‘ಮಾಸ್ಕೆಂಬ್ ತಳಿಯ ಜಿಂಕೆಯ ಮಾಂಸ ಮತ್ತು ಚರ್ಮಕ್ಕೆ ಕಾಳಸಂತೆಯಲ್ಲಿ ದೊಡ್ಡ ಬೇಡಿಕೆಯಿದ್ದು, ಅರುಣಾಚಲ ಪ್ರದೇಶದ ಯುವಕರು ಗಡಿಯಲ್ಲಿ ಇಂತಹ ಜಿಂಕೆಗಳನ್ನು ಬೇಟೆಯಾಡುವುದು ಸಾಮಾನ್ಯ ಸಂಗತಿಯಾಗಿದೆ.