ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ರಾಜ್ಯದಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಮಹಿಳೆಯರಿಗೆ ಬಲ ಬಂದಿದ್ದು, ಲಕ್ಷ್ಮಿಯರನ್ನು ಮಹಾಲಕ್ಷ್ಮಿಯರನ್ನಾಗಿ ಮಾಡಲು ಕೇಂದ್ರದಿಂದ ವರ್ಷಕ್ಕೆ 1 ಲಕ್ಷ ರೂ. ನೀಡುವುದಾಗಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡಿ ಮತ್ತಷ್ಟು ಬಲ ತುಂಬಲಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು.
ಇಲ್ಲಿಯ ಬಜಾರ ರಸ್ತೆಯಲ್ಲಿ ಬಾಗಲಕೋಟ ಲೋಕಸಭಾ ಮತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರ ಪರ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ಸಭೆಯನ್ನು ಉದ್ದೇಶಿಸಿ ಸಚಿವರು ಮಾತನಾಡಿದರು.
ಸಿದ್ಧರಾಮಯ್ಯ ಅವರು ರಾಜ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿದ್ದು, ಮಹಿಳೆಯರ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ತಿಂಗಳು 2000 ರೂ. ಜಮಾ ಮಾಡುತ್ತಿದ್ದೇವೆ. ಪ್ರತಿ ಬಡ ಕುಟುಂಬದ ಮಹಿಳೆಯರನ್ನು ಪ್ರಾಮಾಣಿಕವಾಗಿ ತಲುಪಲು ಅನುಷ್ಠಾನ ಸಮಿತಿ ರಚಿಸಲಾಗಿದ್ದು, ಜಿಲ್ಲೆಯ ಶೇ 99.16 ಮಹಿಳೆಯರಿಗೆ ಈವರೆಗೆ ಯೋಜನೆ ತಲುಪಿದೆ. ಲಕ್ಷ್ಮಿಯರನ್ನು ಮಹಾಲಕ್ಷ್ಮಿಯರನ್ನಾಗಿಸಲು ರಾಹುಲ್ ಗಾಂಧಿ ಕೇಂದ್ರದಿಂದ ಪ್ರತಿ ವರ್ಷ 1 ಲಕ್ಷ ರೂ ನೀಡುವುದಾಗಿ ಗ್ಯಾರಂಟಿ ಘೋಷಿಸಿದ್ದಾರೆ. ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯು ಮಹಿಳೆಯರಲ್ಲಿ ಬಲ ತುಂಬಿದೆ ಎಂದರು.
ಅಭ್ಯರ್ಥಿ ಸಂಯುಕ್ತಾ ಪಾಟೀಲ ಮಾತನಾಡಿ, ಇದು ರಾಜ್ಯದ ರೈತರ, ಮಹಿಳೆಯರ ಪ್ರತಿಷ್ಠೆಯ ಚುನಾವಣೆಯಾಗಿದ್ದು, 2 ಬರಗಾಲದ ಸನ್ನಿವೇಶದಲ್ಲಿ ಸುಮಾರು 35 ಸಾವಿರ ಕೋಟಿ ರೂ ಹಾನಿಯಾಗಿದೆ.
ಇದರಲ್ಲಿ 18 ಸಾವಿರ ಕೋಟಿ ರೂ ಕೊಡಬೇಕು ಎಂದು ಮನವಿ ಮಾಡಿದರೂ ಸಹ ಕೇಂದ್ರ ಸರಕಾರ ಯಾವುದೇ ಅನುದಾನ ನೀಡದೇ ರೈತ ವಿರೋಧಿ ನೀತಿಯನ್ನು ಅನುಸರಿಸಿದೆ. 2014ರಿಂದ 2024ರವರೆಗೆ ದೇಶದ ಉದ್ದಿಮೆಗಳ 14 ಲಕ್ಷ ಕೋಟಿ ರೂ ಸಾಲವನ್ನು ಮನ್ನಾ ಮಾಡಿದ್ದರೂ, ಈ ದೇಶದ ಬೆನ್ನೆಲುಬಾಗಿರುವ ರೈತರ ಸಾಲ ಮನ್ನಾ ಮಾಡಲಿಲ್ಲ. 4 ವರ್ಗದ ಬಗ್ಗೆ ಮಾತನಾಡುವ ಕೇಂದ್ರ ಸರಕಾರ ರೈತ, ಯುವಕ, ಮಹಿಳೆ ಮತ್ತು ಬಡವರ ಬಗ್ಗೆ ನಿಷ್ಕಾಳಜಿ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಬಿ.ಆರ್. ಯಾವಗಲ್, ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ ಕೇಂದ್ರ ಸರಕಾರದ ಬಡವರ ವಿರೋಧಿ ನೀತಿಯನ್ನು ಖಂಡಿಸಿದರು. ಬಿಜೆಪಿ ಮುಖಂಡರಾದ ಅಜ್ಜಪ್ಪಗೌಡ ಪಾಟೀಲ, ಗ್ರಾ.ಪಂ ಮಾಜಿ ಸದಸ್ಯ ಶಿವನಗೌಡ ಗೌಡ್ರ, ಶ್ರೀಶೈಲಪ್ಪ ಹಗರಿ ಕಾಂಗ್ರೆಸ್ಗೆ ಸೇರ್ಪಡೆಯಾದರು.
ಲಕ್ಕುಂಡಿ ಯುವ ಕಾಂಗ್ರೆಸ್ ವತಿಯಿಂದ ಸಂಯುಕ್ತಾ ಪಾಟೀಲರನ್ನು ಸನ್ಮಾನಿಸಲಾಯಿತು. ಹಾಲುಮತ ಸಮಾಜದಿಂದ ಕಂಬಳಿಯನ್ನು ಹೊದೆಸಿ ಗೌರವಿಸಿದರು.
ಇದಕ್ಕೂ ಮುನ್ನ ಅತ್ತಿಮಬ್ಬೆ ಮಹಾದ್ವಾರದಿಂದ ಅಭ್ಯರ್ಥಿ ಸಂಯುಕ್ತಾ ಪಾಟೀಲ, ಸಚಿವ ಎಚ್.ಕೆ. ಪಾಟೀಲ, ಸಿದ್ದು ಪಾಟೀಲ ಅವರು ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ವಿವೇಕ ಯಾವಗಲ್, ವಿಧ್ಯಾಧರ ದೊಡ್ಡಮನಿ, ಪ್ರಕಾಶ ಕರಿ, ನೀಲಮ್ಮ ಬೋಳನವರ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು. ಜಿ.ಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಸ್ವಾಗತಿಸಿದರು. ನಜೀರಅಹ್ಮದ ಕಿರೀಟಗೇರಿ ನಿರೂಪಿಸಿ ವಂದಿಸಿದರು.
ಪಂಚ ಉಚಿತ ಯೋಜನೆಗಳು ಅನುಷ್ಠಾನಗೊಂಡರೆ ದೇಶ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿಯವರು ಹೇಳಿದ್ದರು. ಆದರೆ ಶ್ರೀಮಂತರ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿಯಾಗುತ್ತದೆ ಎಂದ ಸಚಿವರು, ಎನ್ಡಿಎ ಸರಕಾರ 10 ವರ್ಷ ಸುಳ್ಳು ಹೇಳಿ ಅಧಿಕಾರ ನಡೆಸಿದೆ. ಇದೆಲ್ಲವನ್ನೂ ಮತದಾರರು ಅರಿತು, ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರಿಗೆ ಮತ ನೀಡಬೇಕು ಎಂದು ಸಚಿವ ಎಚ್.ಕೆ. ಪಾಟೀಲ ವಿನಂತಿಸಿಕೊಂಡರು.