ರಾಮಾಯಣವು ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಪ್ರಮುಖವಾದುದು. ಈ ಬೃಹದ್ಕಾವ್ಯವು ವಾಲ್ಮೀಕಿ ಮಹರ್ಷಿಗಳಿಂದ ರಚಿಸಲ್ಪಟ್ಟಿದೆ. ರಾಮಾಯಣವನ್ನು ತತ್ಪುರುಷ ಸಮಾಸವಾಗಿ ವಿಭಜಿಸಿದರೆ (ರಾಮನ+ಅಯನ=ರಾಮಾಯಣ) `ರಾಮನ ಕಥೆ’ ಎಂಬ ಅರ್ಥ ಬರುತ್ತದೆ. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ, ರಾಮ ಹಿಂದೂ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ 7ನೇ ಅವತಾರ. ರಾಮನ ಅವತಾರದ ಉದ್ದೇಶ ಭೂಮಿಯ ಮೇಲೆ ಧರ್ಮವನ್ನು ಸ್ಥಾಪಿಸುವುದು.
ಜನರು ನಂಬಿರುವ ಹೃದಯ ಸಾಮ್ರಾಟ, ಮರ್ಯಾದಾ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಹುಟ್ಟಿದ ದಿನವನ್ನು ಶ್ರೀರಾಮನವಮಿ ಹಬ್ಬವೆಂದು ಆಚರಣೆ ಮಾಡಲಾಗುತ್ತಿದ್ದು, ಈ ಹೊಸ ಸಂವತ್ಸರದಲ್ಲಿ ಬರುವ ಮೊದಲ ಹಬ್ಬವೇ ಶ್ರೀರಾಮ ನವಮಿ. ರಾಮ ಹುಟ್ಟಿದ ದಿನವನ್ನು ರಾಮ ನವಮಿ ಎಂದು ಆಚರಿಸಲಾಗುತ್ತದೆ. ಈ ದಿನವನ್ನು ಯುಗಾದಿಯ ಎಂಟು ದಿನಗಳ ನಂತರ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಆಚರಿಸಲಾಗುತ್ತದೆ.
ತ್ರೇತಾಯುಗದಲ್ಲಿ ಅಯೋಧ್ಯೆಯಲ್ಲಿ ರಾಣಿ ಕೌಸಲ್ಯೆ ಮತ್ತು ರಾಜ ದಶರಥನಿಗೆ ಈ ದಿನದಂದು ವಿಷ್ಣುವಿನ ಅವತಾರವಾದ ಭಗವಂತ ಶ್ರೀ ರಾಮನು ಭೂಮಿಗೆ ಕಾಲಿಟ್ಟ ಎಂಬುದು ಭಕ್ತರ ನಂಬಿಕೆಯಾಗಿದೆ.
ಧರ್ಮವನ್ನು ರಕ್ಷಿಸಲು ಮತ್ತು ಉತ್ತಮ ನಡತೆಯ ಮಾದರಿಯನ್ನು ಹೊಂದಿಸಲು ರಾಮ ತಮ್ಮ ಇಡೀ ಜೀವನವನ್ನು ಪಣಕ್ಕಿಟ್ಟ. ಈ ಕಾರಣದಿಂದ ಅವನನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮ ಎಂದು ಕರೆಯುತ್ತಾರೆ. ಕಷ್ಟಕಾಲದಲ್ಲಿಯೂ ಶ್ರೀರಾಮನು ಧರ್ಮ ಮಾರ್ಗವನ್ನು ಅರ್ಧಕ್ಕೆ ಬಿಡದೆ ಸಮಾಜದ ಮುಂದೆ ತಾನೊಬ್ಬ ಪರಿಪೂರ್ಣ ವ್ಯಕ್ತಿ ಎಂದು ಸಾಬೀತುಪಡಿಸಿದ.
ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣವನ್ನು ಭಕ್ತಿ, ಶ್ರದ್ಧೆಗಳಿಂದ ಪಾರಾಯಣ ಮಾಡಿ, ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಶ್ರೀರಾಮ ಜನಿಸಿದ ಸ್ಥಳ ಅಯೋಧ್ಯೆಯಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಹಬ್ಬದ ದಿನದಂದು ರಾಮನ ಭಜನೆ, ಕೀರ್ತನೆ ಹಾಗೂ ಮೆರವಣಿಗಳನ್ನು ನಡೆಸಲಾಗುತ್ತದೆ. ರಾಮನವಮಿಯಂದು ಸೂರ್ಯ ದೇವನ ಪ್ರಾರ್ಥನೆಯೊಂದಿಗೆ ಹಬ್ಬ ಆರಂಭವಾಗುತ್ತದೆ. ಏಕೆಂದರೆ, ಶ್ರೀರಾಮನು ಸೂರ್ಯವಂಶಸ್ಥನಾಗಿದ್ದು, ಶಕ್ತಿಯ ಪ್ರತೀಕವಾಗಿರುವ ಸೂರ್ಯ ದೇವರ ಆರಾಧನೆ ಮೂಲಕ ರಾಮನವಮಿ ಆರಂಭವಾಗುತ್ತದೆ.
ಶ್ರೀ ರಾಮನನ್ನು ಪೂಜಿಸುವಾಗ ಶ್ರೀ ರಾಮನಾಮ ಜಪ, ಸಂಕೀರ್ತನೆ ಕಡ್ಡಾಯ. ರಾಮನಿಗೆ ಮಜ್ಜಿಗೆ, ಪಾನಕ, ಕೋಸಂಬರಿ ಇತ್ಯಾದಿಗಳನ್ನು ನೈವೇದ್ಯವಾಗಿ ಅರ್ಪಿಸಬೇಕು. ನೈವೇದ್ಯವಾದ ಮೇಲೆ ಮನೆಯವರಿಗೆ ಮಾತ್ರವಲ್ಲದೆ, ಮನೆಗೆ ಆಗಮಿಸುವ ಅತಿಥಿಗಳಿಗೆ, ಹೊರಗಿನವರಿಗೆ ಕೂಡ ಪಾನಕ-ಕೋಸಂಬರಿಯನ್ನು ನೀಡಿ ಸತ್ಕರಿಸಬೇಕು.
ಉತ್ಸವದ ಮಹತ್ವವು ದುಷ್ಟರ ಮೇಲೆ ಒಳ್ಳೆಯತನದ ವಿಜಯ. ಅಧರ್ಮವನ್ನು ಸೋಲಿಸಿ ಧರ್ಮದ ಸ್ಥಾಪನೆಯನ್ನು ಮಾಡಿದ ಕಾರ್ಯವನ್ನು ಸೂಚಿಸುತ್ತದೆ. ಶ್ರಿರಾಮನನ್ನು ಸೂರ್ಯದೇವನ ಪೂರ್ವಜನೆಂದೂ ಜನ ನಂಬುತ್ತಾರೆ. ಉತ್ತರ ಭಾರತದಲ್ಲಿ ರಾಮ ನವಮಿಯನ್ನು ರಾಮದೇವರ ಹುಟ್ಟುಹಬ್ಬವೆಂದು ಆಚರಣೆ ಮಾಡುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ರಾಮ-ಸೀತೆಯರ ವಿವಾಹದ ದಿನವಾಗಿ ರಾಮ ನವಮಿಯನ್ನು ಆಚರಣೆ ಮಾಡುತ್ತಾರೆ. ಮಹಿಮಾನ್ವಿತ ದೇವತೆಗಳ ದೈವಿಕ ಬಂಧವಾಗಿ ರಾಮನವಮಿಯನ್ನು ಅವರು ಆಚರಿಸುತ್ತಾರೆ. ಭಗವಂತ ರಾಮನ ಹೆಸರನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಮಾತ್ರವಲ್ಲ, ಜೈನ ಮತ್ತು ಬೌದ್ಧ ಧಾರ್ಮಿಕ ಗ್ರಂಥಗಳಲ್ಲಿಯೂ ಉಲ್ಲೇಖಿಸಲಾಗಿದೆ.
ಒಟ್ಟಾರೆಯಾಗಿ ರಾಮನ ಧೈರ್ಯ, ಕರ್ತವ್ಯನಿಷ್ಠೆ, ಪಿತೃವಾಕ್ಯ ಪರಿಪಾಲನೆ, ರಾಜ್ಯಾಡಳಿತ, ಪ್ರಜಾಪರಿಪಾಲನೆ, ಕರ್ತವ್ಯ, ಗೌರವ, ಏಕಪತ್ನೀವ್ರತ, ಸೋದರಪ್ರೇಮ ಹೀಗೇ ಅನೇಕ ವಿಚಾರದ ಶ್ರೀ ರಾಮ ನಮ್ಮೆಲ್ಲರಿಗೂ ಆದರ್ಶ. ಹೀಗಾಗಿಯೇ ಆತನ ಹುಟ್ಟುಹಬ್ಬವನ್ನು ಹೆಚ್ಚು ಸಂಭ್ರಮದಿಂದ ದೇಶದೆಲ್ಲೆಡೆ ಆಚರಿಸುವ ಮೂಲಕ `ವಸುದೈವ ಕುಟುಂಬಕಂ’ ಅಂದರೆ ಇಡೀ ವಿಶ್ವವೇ ಒಂದು ಕುಟುಂಬ ಎಂಬುದನ್ನು ಜಗತ್ತಿಗೆ ಸಾರಿ ಹೇಳಲು ಇಂತಹ ಹಬ್ಬಗಳು ಮಹತ್ವಪೂರ್ಣವಾಗಿವೆ.
ರಾಮ ನವಮಿ ದಿನದಂದು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಸ್ನಾನ ಮಾಡಿದ ನಂತರ ಶುಭ್ರವಾದ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ ಉಪವಾಸದ ಪ್ರತಿಜ್ಞೆ ಮಾಡಿ, ಗಂಗಾಜಲವನ್ನು ಸಿಂಪಡಿಸಿ ಪೂಜಾ ಸ್ಥಳವನ್ನು ರಾಮನ ಪೂಜೆಯಲ್ಲಿ ತುಳಸಿ ಎಲೆಗಳು ಮತ್ತು ಕಮಲದ ಹೂವು ಕಡ್ಡಾಯವಾಗಿರಬೇಕೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ರಾಮನ ವಿಗ್ರಹವನ್ನು ಹೂಮಾಲೆ ಮತ್ತು ಹೂವುಗಳಿಂದ ಅಲಂಕರಿಸಿ ತೊಟ್ಟಿಲಲ್ಲಿ ತೂಗಾಡಿ. ಇದರ ನಂತರ ರಾಮ ನವಮಿಯ ಷೋಡಶೋಪಚಾರವನ್ನು ಪೂಜಿಸಿ. ಇದರೊಂದಿಗೆ ರಾಮಾಯಣವನ್ನು ಪಠಿಸಿ ಮತ್ತು ರಾಮ ರಕ್ಷಾಸ್ತೋತ್ರವನ್ನೂ ಪಠಿಸಿ. ಶ್ರೀರಾಮನಿಗೆ ಶಾವಿಗೆ ಪಾಯಸ, ಹಣ್ಣುಗಳು ಮತ್ತು ಇತರ ನೈವೇದ್ಯಗಳನ್ನು ಅರ್ಪಿಸಿ. ಪೂಜೆಯ ನಂತರ, ಮನೆಯ ಚಿಕ್ಕ ಹುಡುಗಿಯ ಹಣೆಯ ಮೇಲೆ ತಿಲಕವನ್ನು ಹಚ್ಚಿ ಶ್ರೀರಾಮನ ಆರತಿಯನ್ನು ಮಾಡಿ. ಹೀಗೆ ರಾಮ ನವಮಿಯಂದು ರಾಮನನ್ನು ಪೂಜಿಸುವುದರಿಂದ ಅಥವಾ ರಾಮ ನಮವಿ ವ್ರತವನ್ನು ಆಚರಿಸುವುದರಿಂದ ಭಗವಾನ್ ರಾಮನ ಆಶೀರ್ವಾದವನ್ನು ಪಡೆದುಕೊಳ್ಳಬಹುದು.
– ಬಸವರಾಜ ಎಮ್.ಯರಗುಪ್ಪಿ,
ಬಿಆರ್ಪಿ-ಶಿರಹಟ್ಟಿ, ಲಕ್ಷ್ಮೇಶ್ವರ.