Home Blog

ನೇಹಾ ಹತ್ಯೆ ಖಂಡಿಸಿ ರಾಜ್ಯಪಾಲರಿಗೆ ಮನವಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶಿರಹಟ್ಟಿಯಲ್ಲಿ ಶ್ರೀರಾಮ ಸೇನೆಯ ತಾಲೂಕಾ ಘಟಕದ ವತಿಯಿಂದ ರಾಜ್ಯದಲ್ಲಿ ಸಾಲು ಸಾಲು ಹಿಂದೂಗಳ ಮೇಲೆ ಬರ್ಬರ ಕೊಲೆ, ದಾಳಿ ಖಂಡಿಸಿ ಕುಸಿದು ಬಿದ್ದ ಕಾನೂನು ಸುವ್ಯವಸ್ಥೆಯನ್ನು ಖಂಡಿಸಿ, ರಾಜ್ಯದಲ್ಲಿ ರಾಷ್ಟçಪತಿ ಆಡಳಿತಕ್ಕೆ ಆಗ್ರಹಿಸಿ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾಧ್ಯಕ್ಷ ವಾಸುದೇವ ಜಾಧವ, ಹುಬ್ಬಳ್ಳಿಯಲ್ಲಿ ಬಿವಿಬಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹಾಡುಹಗಲೇ ಫಯಾಜ್‌ನಿಂದ ಬರ್ಬರ ಹತ್ಯೆ, ದಾವಣಗೆರೆ ಜಿಲ್ಲೆ ನಲ್ಲೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಮುಸ್ಲಿಂರಿಂದ 3 ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ, ಚಿತ್ರದುರ್ಗದಲ್ಲಿ ಸಹ ಉದ್ಯೋಗಿ ಹಿಂದೂ ಯುವಕ ಮುಸ್ಲಿಂ ಯುವತಿಗೆ ಡ್ರಾಪ್ ಕೊಟ್ಟಿದ್ದಕ್ಕೆ ಮುಸ್ಲಿಂ ಗೂಂಡಾಗಳಿಂದ ಹಿಗ್ಗಾಮುಗ್ಗಾ ಥಳಿತ, ಬೆಂಗಳೂರು ವಿದ್ಯಾರಣ್ಯಪುರದಲ್ಲಿ ಜೈಶ್ರೀರಾಮ ಘೋಷಣೆ ಕೂಗಿದ ಹಿಂದೂಗಳ ಮೇಲೆ ಮುಸ್ಲಿಂರಿಂದ ಆಕ್ರಮಣ, ಮೈಸೂರು, ಮತ್ತು ಬಾಗಲಕೋಟಿಯಲ್ಲೂ ಸಹ ಮುಸ್ಲಿಂರಿಂದ ದಾಳಿ ನಡೆಯುತ್ತಿದೆ. ಕೂಡಲೇ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಮನವಿ ಸಲ್ಲಿಸಿದರು.

ಪವನ ಕುರಿ, ಸಂತೋಷ ಪರಬತ, ಮಾರುತಿ ಹಾದಿಮನಿ, ಜಗದೀಶ ಸಿಂಧೆ, ಪ್ರದೀಪ ಕಟ್ಟೇಕಾರ, ಬಸವರಾಜ ಹದ್ಲಿ ಮುಂತಾದವರು ಉಪಸ್ಥಿತರಿದ್ದರು.

ತಾಯಿಯ ಸ್ಥಾನಕ್ಕೆ ಯಾರೂ ಸಾಟಿಯಿಲ್ಲ : ಬಸವರಾಜ ಹೊರಟ್ಟಿ

0
ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಯಾವ ದೇಶದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದುವರೆದಿರುತ್ತಾರೋ ಆ ದೇಶ ಅಭಿವೃದ್ಧಿ ಪಥದತ್ತ ಸಾಗುವುದು ನಿಶ್ಚಿತ. ಜೊತೆಗೆ ಆ ದೇಶದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆಯೊಂದಿಗೆ ಎಲ್ಲ ಸೌಭಾಗ್ಯಗಳನ್ನು ಕಾಣಲು ಸಾಧ್ಯ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ಅವರು ಇಲ್ಲಿಯ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ಗುರವ್ವ ಶಿವಲಿಂಗಪ್ಪ ಹೊರಟ್ಟಿಯವರ ಸ್ಮರಣೆಗಾಗಿ ಸ್ಥಾಪಿಸಿದ ದತ್ತಿನಿಧಿ ಕಾರ್ಯಕ್ರಮದಲ್ಲಿ ಜಂಗಮ ಪುಂಗವ ಅಲ್ಲಮ ಪ್ರಭುಗಳ, ಅಕ್ಕಮಹಾದೇವಿ ಜಯಂತಿ ಮತ್ತು ಶ್ರೀಮಠದ 9ನೇ ಪೀಠಾಧಿಪತಿಗಳ 57ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ವಹಿಸಿ, ಕಳೆದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 101ನೇ ಸ್ಥಾನ ಗಳಿಸಿದ ಹಾಗೂ ರಾಜ್ಯಕ್ಕೆ 2ನೇ ಸ್ಥಾನ ಪಡೆದ ಮುಧೋಳ ಗ್ರಾಮದ ಸೌಭಾಗ್ಯ ಬೀಳಗಿಮಠ ಹಾಗೂ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಿ ಮಾತನಾಡಿದರು.
ಒಬ್ಬ ತಾಯಿ ಮನೆಯಲ್ಲಿದ್ದರೆ ನೂರು ಶಾಲೆಗಳನ್ನು ತೆರೆದಷ್ಟು ಮಕ್ಕಳು ಸಂಸ್ಕಾರವಂತರಾಗುತ್ತಾರೆ. ತಾಯಿ ದೇವರಾಗಬಹುದು. ಆದರೆ ದೇವರು ತಾಯಿಯಾಗಲು ಸಾಧ್ಯವಿಲ್ಲ. ಈ ಸ್ಥಾನಕ್ಕೆ ಯಾರೂ ಸಮನಲ್ಲ.
ನಮ್ಮನ್ನು ಹೊತ್ತು, ಹೆತ್ತು, ಸಾಕಿ, ಸಲುಹಿ ದೊಡ್ಡವರನ್ನಾಗಿ ಮಾಡಿದ ನಮ್ಮ ತಂದೆ-ತಾಯಿಯವರನ್ನು ನೋಯಿಸದೇ ಅವರ ಕೊನೆಗಾಲದಲ್ಲಿ ಪ್ರೀತಿ, ವಿಶ್ವಾಸ, ಗೌರವ ಆದರಾತಿಥ್ಯಗಳಿಂದ ನೋಡಿಕೊಳ್ಳಬೇಕು.
ಮಹಿಳೆಯರು ಸಬಲರಾದರೆ ಸದೃಢ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ. ಅಂತಹ ಸಾಧನೆ ಮಾಡಿದ ಸೌಭಾಗ್ಯ ಬೀಳಗಿಮಠ ಹಾಗೂ ಲತಾ ಮಲ್ಲಿಕಾರ್ಜುನ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ಮಾದರಿಯಾಗಿದ್ದಾರೆ.
ಇವರ ಸಾಧನೆಯನ್ನು ಗೌರವಿಸಲು ಅವ್ವ ಸೇವಾ ಟ್ರಸ್ಟ್ ಬಳಗಕ್ಕೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಶಶಿ ಸಾಲಿ, ನಿವೃತ್ತ ಪ್ರಾಚಾರ್ಯ ಕರಿಭರಮಗೌಡರ, ಡಾ.ಬಸವರಾಜ ಧಾರವಾಡ ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಅಳವಂಡಿ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ, ಕರಬಸಪ್ಪ ಹಂಚಿನಾಳ, ಆರ್.ಬಿ. ಡಂಬಳಮಠ, ವೀರನಗೌಡ ಗುಡದಪ್ಪನವರ, ಆರ್.ಎಲ್. ಪೊಲೀಸ್‌ಪಾಟೀಲ, ಎಸ್.ಎಂ. ಅಗಡಿ, ಎಸ್.ಎಸ್. ಗಡ್ಡದ, ಎಸ್.ಪಿ. ನಿಂಬಿಮಠ, ಎಮ್.ಎಸ್. ಪೂಜಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ. ಬಿ.ಜಿ. ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್. ಇನಾಮತಿ ನಿರೂಪಿಸಿದರು.
ಸಾನ್ನಿಧ್ಯ ವಹಿಸಿದ್ದ ಜ.ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಶ್ರೀಮಠ ಸದಾ ಸಮಾಜಮುಖಿಯಾಗಿ ಸೇವೆ ಮಾಡುವ ಮೂಲಕ ಸಮಾಜದ ಒಳಿತಿಗಾಗಿ ಹಗಲಿರುಳು ಶ್ರಮಿಸುತ್ತಿದೆ.
ವಿಶೇಷವಾಗಿ ಕಳೆದ 2 ವರ್ಷಗಳಿಂದ ಮಾತೋಶ್ರೀ ಗುರಮ್ಮ ಶಿವಲಿಂಗಪ್ಪ ಹೊರಟ್ಟಿಯವರ ಹೆಸರಿನಲ್ಲಿ ವಿಶೇಷ ಶಿವಾನುಭವ ಆಚರಿಸುತ್ತಿರುವುದು ನಮಗೂ, ನಮ್ಮ ಮಠಕ್ಕೂ ಹೆಮ್ಮೆಯ ಸಂಗತಿ ಎಂದು ಹೇಳಿದರು.

ರಾಯರ ಸಂಕಲ್ಪದಂತೆ ಕಿರಟಗೇರಿ ಸುಕ್ಷೇತ್ರವಾಗಲಿದೆ

0
ವಿಜಯಸಾಕ್ಷಿ ಸುದ್ದಿ, ಗದಗ : ಕಿರಟಗೇರಿ ಗ್ರಾಮಸ್ಥರ ಹಾಗೂ ರಾಘವೇಂದ್ರ ಸ್ವಾಮಿಗಳ ಭಕ್ತರ ಸದಿಚ್ಛೆಯಂತೆ ಗದಗ ತಾಲೂಕಿನ ಕಿರಟಗೇರಿ ಗ್ರಾಮ ಪವಾಡದ ಕ್ಷೇತ್ರವಾಗಿ ಹೊರಹೊಮ್ಮಲಿದೆ ಎಂದು ಮಂತ್ರಾಲಯದ ಪೀಠಾಧಿಪತಿಗಳಾದ 108 ಶ್ರೀ ಸುಭುದೇಂದ್ರ ಶ್ರೀಗಳು ಕಿರಟಗೇರಿ ಗ್ರಾಮದಿಂದ ಆಗಮಿಸಿದ್ದ ಭಕ್ತರಿಗೆ ಶ್ರೀಮಠದ ಸಂಕಲ್ಪ ತಿಳಿಸಿದರು.
ಹಲವಾರು ವರ್ಷಗಳಿಂದ ಈ ಕ್ಷೇತ್ರವನ್ನು ಸುಕ್ಷೇತ್ರ ಮಾಡುವ ಉದ್ದೇಶ ಹೊಂದಿದ ಭಕ್ತರು 400 ವರ್ಷಗಳ ಹಿಂದೆ ಗುರುಸಾರ್ವಭೌಮ ರಾಘವೇಂದ್ರ ಸ್ವಾಮಿಗಳು ಕಿರಟಗೇರಿ ಗ್ರಾಮಕ್ಕೆ ಆಗಮಿಸಿ, ದೇಸಾಯಿ ಮನೆತನದ ಮಗು ಅಪಮೃತ್ಯುವಿಗೆ ಈಡಾದ ಸಂದರ್ಭದಲ್ಲಿ ಶ್ರೀಗಳು ಮಂತ್ರಾಕ್ಷತೆ ಮೂಲಕ ಮಗುವಿಗೆ ಪುನರ್ಜನ್ಮ ನೀಡಿದ ಘಟನೆಯನ್ನು ಸ್ಮರಿಸುತ್ತಿದ್ದರು. ವೆಂಕಣ್ಣ ದೇಸಾಯಿಯವರು ತಮಗೆ ಆದ ಸಂತೋಷಕ್ಕೆ ಕಿರಟಗೇರಿ ಗ್ರಾಮವನ್ನು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳಿಗೆ ಉಂಬಳಿ (ಭಕ್ಷೀಸ) ನೀಡಿದ್ದನ್ನು ನೆನೆಪಿಸುತ್ತಾ, ಮಂತ್ರಾಲಯಕ್ಕೆ ಭೇಟಿ ನೀಡಿದ ಭಕ್ತರು ಶ್ರೀಗಳಿಗೆ ಇಲ್ಲಿ ಸಹ ಜಾಗೃತ ಕ್ಷೇತ್ರ ಮಾಡಲು ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಆಸಕ್ತಿ ವಹಿಸಿದ್ದ ಸುಭುದೇಂದ್ರ ತೀರ್ಥರು ಕಿರಟಗೇರಿ ಗ್ರಾಮಕ್ಕೆ ಆಗಮಿಸಿ, ಗುರು ರಾಘವೇಂದ್ರ ಸ್ವಾಮಿಗಳ ಪಾದಸ್ಪರ್ಶವಾದ ಈ ಕ್ಷೇತ್ರವನ್ನು ಸುಕ್ಷೇತ್ರ ಮಾಡುವ ಸಂಕಲ್ಪದೊಂದಿಗೆ ಆಶೀರ್ವದಿಸಿದ್ದರು.
ಕಿರಟಗೇರಿ ಗ್ರಾಮದ ಮಹೇಶಗೌಡ ಪಾಟೀಲ, ಶಿವಕುಮಾರಗೌಡ ಪಾಟೀಲ, ಕಲ್ಮೇಶ್ವರಯ್ಯ ಹಿರೇಮಠ, ಶ್ರೀನಿವಾಸ ಹುಬ್ಬಳ್ಳಿ ಮುಂತಾದವರಿದ್ದರು.
ಇನ್ನು ಕೆಲವೇ ದಿನಗಳಲ್ಲಿ ಕಿರಟಗೇರಿ ಸುಕ್ಷೇತ್ರಕ್ಕೆ ಆಗಮಿಸಿ, ಶೀಘ್ರದಲ್ಲಿ ದೇಸಾಯಿ ವಾಡೆಯಲ್ಲಿ ಮತ್ತೆ ಹೊಸರೂಪದೊಂದಿಗೆ ರಾಘವೇಂದ್ರ ಸ್ವಾಮಿಗಳ ಇಚ್ಛಾನುಸಾರ ಭಕ್ತರಿಗೆ ಸಕಲ ಕಷ್ಟ ಪರಿಹಾರಾರ್ಥವಾಗಿ ಪ್ರಾಣ ಪ್ರತಿಷ್ಠೆಯೊಂದಿಗೆ ಎಲ್ಲರ ಸಹಕಾರ ಪಡೆದು ಶ್ರೀಮಠದಿಂದ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶ್ರೀಗಳು ಆಶೀರ್ವಾದ ಮೂಲಕ ತಿಳಿಸಿದರು.

ಅಕ್ಕನ ಬಳಗದಲ್ಲಿ ನಾಲ್ಕನೇ ದಿನದ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಅಕ್ಕನ ಬಳಗದಲ್ಲಿ ಅಕ್ಕನ ಜಯಂತಿ ಉತ್ಸವದ ಅಂಗವಾಗಿ 4ನೇ ದಿನವಾದ ಮಂಗಳವಾರ ಅಕ್ಕಮಹಾದೇವಿಯನ್ನು ತೊಟ್ಟಲಿಗೆ ಹಾಕಿ ಹೆಸರಿಡುವ ಹಾಗೂ ಮುತ್ತೈಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಉಡಿ ತುಂಬುವ ಸೇವೆಯನ್ನು ಅನುಪಮಾ ಅಮರೇಶ್ವರ ಮಾಳೆಕೊಪ್ಪಮಠ ವಹಿಸಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷೆ ಅನ್ನಪೂರ್ಣ ಮಾಳೆಕೊಪ್ಪಮಠ, ಕಾರ್ಯದರ್ಶಿ ರೇಣುಕಾ ಎಲ್.ಅಮಾತ್ಯ, ಖಜಾಂಚಿ ಜಯಲಕ್ಷ್ಮಿ ವಿ.ಬಳ್ಳಾರಿ, ಟ್ರಸ್ಟಿಗಳಾದ ನಾಗರತ್ನ ಹುಬ್ಬಳ್ಳಿಮಠ, ಗೀತಾ ಮಾನ್ವಿ, ಶಶಿರೇಖಾ ಶಿಗ್ಲಿಮಠ, ಶಾರದಾ ಹಿರೇಮಠ, ಶಾಂತ ಸಂಕನೂರು, ಶಿವಲೀಲಾ ಕುರುಡಗಿ, ಸದಸ್ಯರಾದ ಪ್ರೀತಿ ಶಿವಪ್ಪನಮಠ, ಮಂಗಳ ನಲವತವಾಡಮಠ, ಶಿವಲೀಲಾ ಅಕ್ಕಿ, ಸುವರ್ಣ ಹೊಸಂಗಡಿ, ವಿದ್ಯಾ ತಡಿ. ಮಹಾಂತ ಹಿರೇಮಠ, ಖುಷಿ ಮುದೇಗಣ್ಣವರ, ಶಿವಲೀಲಾ ಹಿರೇಮಠ, ಶೋಭಾ ಪಟ್ಟಣಶೆಟ್ಟಿ, ಮಾಧುರಿ ಮಳೆಕೊಪ್ಪ, ಸುಜಾತ ಬಳ್ಳಾರಿ, ಕಮಲ ಭೂಮಾ, ಗಿರಿಜಾ ನಲವತವಾಡಮಠ, ಮಂಜುಳಾ ಹುಬ್ಬಳ್ಳಿಮಠ, ಪ್ರಭಾವತಿ ಯಳಮಲಿ ನಿರ್ಮಲ ಹುಬ್ಬಳ್ಳಿಮಠ, ಸುಜಾತಾ ಬಳ್ಳಾರಿ, ಲತಾ ಪತ್ತಾರ, ಶಿವಲೀಲಾ ಹಿರೇಮಠ ಶಕುಂತಲಾ ಉಪಸ್ಥಿತರಿದ್ದರು.

ಸಂಭ್ರಮದ ಹನುಮ ಜಯಂತಿ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಬ್ರಾಹ್ಮಣ ಸಮಾಜ ಸೇವಾ ಸಮಿತಿ ವತಿಯಿಂದ ಮಂಗಳವಾರ ಇಲ್ಲಿನ ಹಿರೇಬಜಾರದ ಮಾರುತಿ ದೇವರ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ಸ್ವಾಮಿಗೆ ವಿಶೇಷ ಪೂಜೆಯೊಂದಿಗೆ ತೊಟ್ಟಿಲೋತ್ಸವ, ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯಿತು.

ಸ್ಥಳೀಯ ಹಿರೇಅಗಸಿ ಬಳಿಯ ಹನುಮಾನ ದೇಗುಲದಲ್ಲಿ ಬೆಳಿಗ್ಗೆ ಹನುಮಾನ ಮೂರ್ತಿಗೆ ಪಂಚಾಮೃತ ಅಭಿಷೇಕ, ಚಂದನ ಅಭಿಷೇಕ ನೆರವೇರಿಸಿದರು. ವಿವಿಧ ಪರಿಮಳ ಪುಷ್ಪ, ವೀಳ್ಯದೆಲೆ ಹಾಗೂ ಚಿನ್ನದ ಆಭರಣಗಳಿಂದ ಶೃಂಗರಿಸಲಾಗಿತ್ತು. ಬಳಿಕ ಆಂಜನೇಯನ ಪಾಲಕಿ ಉತ್ಸವ ನಡೆಯಿತು. ದಿನಪೂರ್ತಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಬೆಳಿಗ್ಗೆಯಿಂದಲೇ ಮಕ್ಕಳು, ಮಹಿಳೆಯರು ತಂಡೋಪತಂಡವಾಗಿ ಹನುಮಂತ ದೇಗುಲಕ್ಕೆ ಆಗಮಿಸಿ ಹಣ್ಣು, ಕಾಯಿ, ಕರ್ಪೂರ ಅರ್ಪಿಸಿ ದೇವರ ದರ್ಶನ ಪಡೆದು ಪುನೀತರಾದರು.

ಈ ಸಂದರ್ಭದಲ್ಲಿ ರಘುನಾಥ ತಾಸಿನ, ಕೆ.ಸತ್ಯನಾರಾಯಣಭಟ್ಟ, ಶಶಿಧರ ಕುಲಕರ್ಣಿ, ಎಂ.ವಿ. ನಾಡಗೇರ, ರವಿ ಕುಲಕರ್ಣಿ, ಶಾರದಾ ತಾಸಿನ, ಸಂಧ್ಯಾ ಕುಲಕರ್ಣಿ, ರಾಧಾ ಉಟಗಿ, ಸವಿತಾ ಕೊಡಗಾನೂರ, ಲಕ್ಷ್ಮಿದೇವಿ ಕುಲಕರ್ಣಿ, ಲತಾ ರಾಜಪುರೋಹಿತ, ರಂಜಿತಾ ಕುಲಕರ್ಣಿ ಸೇರಿ ಇತರರು ಇದ್ದರು.

ವಿಜೃಂಭಣೆಯ ಕಾಲಕಾಲೇಶ್ವರ ರಥೋತ್ಸವ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಸಮೀಪದ ಸುಕ್ಷೇತ್ರ ಕಾಲಕಾಲೇಶ್ವರ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಸಂಜೆ ಸಕಲ ವ್ಯಾದ ವೈಭವಗಳೊಂದಿಗೆ, ಅಸಂಖ್ಯಾತ ಸದ್ಭಕ್ತರ ಮಧ್ಯೆ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.

ದವನದ ಹುಣ್ಣಿಮೆ ದಿನದಂದು ವಿಶೇಷ ಪೂಜೆಯೊಂದಿಗೆ ಉತ್ಸವ ಮೂರ್ತಿಗೆ ದವನಾರ್ಪಣೆ, ತೆಂಗಿನ ಕಾಯಿ, ಉತ್ತತ್ತಿ, ಬಾಳೆಹಣ್ಣು, ಕಬ್ಬು ದವಸ-ಧಾನ್ಯ ಸಮರ್ಪಿಸಿದ ನಂತರ ಪಲ್ಲಕ್ಕಿ ಸೇವೆ ಹಾಗೂ ದುರ್ಗಾದೇವಿಯ ವಿಶೇಷ ಪೂಜೆಯೊಂದಿಗೆ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ನಕ್ಷತ್ರ ದರ್ಶನದೊಂದಿಗೆ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಕಾಲಕಾಲೇಶ್ವರ ರಥೋತ್ಸವ ಹಿನ್ನೆಲೆಯಲ್ಲಿ ಬೆಳಿಗ್ಗೆ ಹಾಗೂ ಮಧ್ಯಾಹ್ನದ ಸುಡು ಬಿಸಿಲನ್ನೂ ಲೆಕ್ಕಿಸಿದೆ ಪಾದಾಯಾತ್ರೆ ಮೂಲಕ ಆಗಮಿಸುತ್ತಿದ್ದ ಭಕ್ತರಿಗೆ ರಸ್ತೆ ಪಕ್ಕದ ಕೆಲ ಹೊಲದ ಮಾಲಿಕರು ಹಾಗೂ ಪಟ್ಟಣದ ವಿವಿಧ ಸಂಘ-ಸಂಸ್ಥೆಗಳಿಂದ ಆರಂಭಿಸಿದ್ದ ನೀರಿನ ಅರವಟಿಗೆಗಳು ಭಕ್ತರ ನೀರಿನ ದಾಹವನ್ನು ನೀಗಿಸಿದ್ದು ವಿಶೇಷವಾಗಿತ್ತು.

ರಾಜ್ಯದ ವಿವಿಧ ಭಾಗಗಳಿಂದ ಹರಿದು ಬಂದ ಭಕ್ತರು ಎತ್ತಿನ ಚಕ್ಕಡಿ, ಟಂಟಂ, ಲಾರಿ ಇತ್ಯಾದಿ ವಾಹನಗಳ ಮೂಲಕ ಆಗಮಿಸಿ, ಕಾಲಕಾಲೇಶ್ವರನ ದರ್ಶನ ಪಡೆದರು.

ತೋಂಟದಾರ್ಯ ಮಠಕ್ಕೆ ಬಸವರಾಜ ಬೊಮ್ಮಾಯಿ ಭೇಟಿ

0

ವಿಜಯಸಾಕ್ಷಿ ಸುದ್ದಿ, ಗದಗ : ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಬುಧವಾರ ಗದುಗಿನ ಶ್ರೀ ತೋಂಟದಾರ್ಯ ಮಠಕ್ಕೆ ಭೇಟಿ ನೀಡಿ ಮಠದ ಪೀಠಾಧಿಪತಿಗಳಾದ ತೋಂಟದ ಶ್ರೀ ಸಿದ್ದರಾಮ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡರು. ನಂತರ ಮಠಕ್ಕೆ ಆಗಮಿಸಿದ್ದ ಭಕ್ತರೊಡನೆ ಕೆಲಹೊತ್ತು ಮಾತುಕತೆ ನಡೆಸಿ, ಪ್ರಧಾನಿ ಮೋದಿ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿ, ಚುನಾವಣೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ನಿಮ್ಮ ಮತದಾನ ದೇಶದ ಭವಿಷ್ಯ ನಿರ್ಮಾಣಕ್ಕೆ ಅತಿ ಮುಖ್ಯ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕುಷ್ಟಗಿ ದೊಡ್ಡನಗೌಡರ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ, ಮುಖಂಡರಾದ ಬಸವಣ್ಣೆಪ್ಪ ಚಿಂಚಲಿ, ಅಶೋಕ ಸಂಕಣ್ಣವರ, ಭದ್ರೇಶ ಕುಸಲಾಪುರ, ದ್ಯಾಮಣ್ಣ ನೀಲಗುಂದ, ಬೂದಪ್ಪ ಹಳ್ಳಿ, ಎಚ್.ಸಿ. ಮಂಜುನಾಥಸ್ವಾಮಿ, ಫಕ್ಕಿರೇಶ್ವ ರಟ್ಟಿಹಳ್ಳಿ, ಲಿಂಗರಾಜ ಪಾಟೀಲ, ಆರ್.ಕೆ. ಚವ್ಹಾಣ, ರವಿಂದ್ರನಾಥ ದಂಡಿನ, ಕೆ.ಪಿ. ಕೋಟಿಗೌಡರ, ರಮೇಶ ಸಜ್ಜಾಗಾರ, ಅಮರನಾಥ ಬೆಟಗೇರಿ, ಅಮರನಾಥ ಗಡಗಿ, ಸುಧೀರ ಕಾಟಿಗಾರ, ವೆಂಕಟೇಶ ಹಬೀಬ, ಬಸವರಾಜ ಹಡಪದ, ಸಂತೋಷ ಮೇಲಗಿರಿ, ಗಂಗಾಧರ ಮೇಲಗಿರಿ, ಸುರೇಶ ಮರಳಪ್ಪನವರ, ಸುರೇಶ ಹೆಬಸೂರ, ಶಂಕರ, ಪಂಚಾಕ್ಷರಿ ಅಂಗಡಿ, ವಿನಾಯಕ ಹಬೀಬ, ಸಂತೋಷ ಅಕ್ಕಿ, ಟಿ.ಡಿ. ಪೂಜಾರ, ಬಾಗಪ್ಪ ವಗ್ಗರ, ಮಂಜುನಾಥ ಹಳ್ಳ್ಳೂರಮಠ, ವಿಠ್ಠಲ ತೋಟದ, ಶರಣಪ್ಪ ಚಿಂಚಲಿ, ಪರಮೇಶ ನಾಯಕ, ಭೋಜಪ್ಪ ಲಮಾಣಿ, ಕುಮಾರ ಕಟ್ಟಿಮನಿ, ಮಂಜು ವಡ್ಡರ, ಮುತ್ತು ಇಟಗಿಮಠ, ಗಣೇಶ ಗಂಟಿ, ಶರಣಪ್ಪ ಚಿಂಚಲಿ, ಸುರೇಶ ಚವ್ಹಾಣ, ರಾಜೇಂದ್ರಪ್ರಸಾದ ಹೊಂಗಲ್ ಸೇರಿದಂತೆ ಕಾರ್ಯಕರ್ತರು ಇದ್ದರು.

ಮತದಾನ ಪ್ರತಿ ಅರ್ಹ ವ್ಯಕ್ತಿಯ ಕರ್ತವ್ಯ : ಎಸ್.ಕೆ. ಇನಾಮದಾರ

0

ವಿಜಯಸಾಕ್ಷಿ ಸುದ್ದಿ, ರೋಣ : ಲೋಕಸಭಾ ಚುನಾವಣೆ ನಿಮಿತ್ತ ಮತದಾನದ ಮಹತ್ವ ಸಾರುವ ಉದ್ದೇಶದಿಂದ ರೋಣ ತಾಲೂಕ ಪಂಚಾಯತ ತಾಂತ್ರಿಕ ಸಂಯೋಜಕ ಪ್ರವೀಣ ಸೂಡಿ ಅವರ ಮದುವೆ ಸಮಾರಂಭದಲ್ಲಿ ರೋಣ ತಾ.ಪಂ ಕಾರ್ಯನಿರ್ವಾಹಕ ಎಸ್.ಕೆ. ಇನಾಮದಾರ ಅಧ್ಯಕ್ಷತೆಯಲ್ಲಿ ವಿಶಿಷ್ಟ ರೀತಿಯಲ್ಲಿ ಮತದಾನ ಜಾಗೃತಿ ಮಾಡಲಾಯಿತು.

ಗದಗ ನಗರದ ಶಿವಾನಂದ ಕಲ್ಯಾಣ ಮಂಟಪದಲ್ಲಿ ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದ ವೀರಪ್ಪ ಹಾಗೂ ಶಿವಪ್ಪ ಸೂಡಿ ಅವರ ಮಕ್ಕಳಾದ ಪ್ರಕಾಶ ಹಾಗೂ ಪ್ರವೀಣ ಅವರ ಮದುವೆಯಲ್ಲಿ ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವಧು-ವರರು ತಮ್ಮ ವಿವಾಹಕ್ಕೆ ಬಂದ ಅತಿಥಿಗಳಿಗೆ ಮತದಾನ ಮಾಡುವಂತೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೋಣ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ, ಮತದಾನ ಪ್ರತಿ ಅರ್ಹ ವ್ಯಕ್ತಿಯ ಕರ್ತವ್ಯವಾಗಿದೆ. ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು. ಮತದಾನದ ಅಧಿಕಾರವನ್ನು ಸರಿಯಾಗಿ ಬಳಸಿಕೊಂಡು ಯೋಗ್ಯ ವ್ಯಕ್ತಿಯನ್ನು ಚುನಾಯಿಸಬೇಕು ಎಂದರು.

ಅರ್ಹ ಮತದಾರರು ಯಾವುದೇ ಆಮಿಷಗಳಿಗೆ ಬಲಿಯಾಗದೇ ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಮತದಾನದ ದಿನ ರಜೆ ಮೇಲೆ ಊರಿಗೆ ತೆರಳದೆ ಮತದಾನ ಮಾಡಬೇಕು ಎಂದು ಮದುವೆಗೆ ಬಂದ ಅಥಿತಿಗಳಿಗೆ ಸಂದೇಶ ನೀಡಿದರು.

ನಾನು ನಮ್ಮ ತಾಲೂಕಿನ ಸ್ವೀಪ್ ಸಮಿತಿ ಅಧ್ಯಕ್ಷನಾಗಿದ್ದು, ತಾಲೂಕಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಮಾಡುತ್ತೇವೆ. ನಮ್ಮ ಟಿಸಿ ಪ್ರವೀಣರ ಆಶಯದಂತೆ ಅವರ ಮದುವೆಯಲ್ಲಿ ಮೂರು ಸಾವಿರ ಜನರ ನಡುವೆ ಮತದಾನ ಜಾಗೃತಿ ಮಾಡಿದ್ದು ಎಲ್ಲಿಲ್ಲದ ಖುಷಿ ತಂದಿದೆ.
-ಎಸ್.ಕೆ. ಇನಾಮದಾರ.
ರೋಣ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ.

ಕಾರ್ಮಿಕರಿಗಾಗಿ ಕಬಡ್ಡಿ, ಖೋಖೋ ಆಟ

0

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯ ಮುಂಡರಗಿ ತಾಲೂಕು ಪಂಚಾಯಿತಿ ವಿಭಿನ್ನ ಮತ್ತು ವಿಶಿಷ್ಟ ನಡೆ ಅನುಸರಿಸಿ, ನರೇಗಾ ಯೋಜನೆಗೆ ಸಾಂಸ್ಕೃತಿಕ, ಜನಪದ ಮೆರುಗು ನೀಡುತ್ತಿದೆ. ನರೇಗಾ ಯೋಜನೆಯಡಿ ಹೆಚ್ಚು ಮಾನವ ದಿನಗಳನ್ನು ಸೃಜಿಸಿ ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರನ್ನು ಕೆಲಸದಲ್ಲಿ ತೊಡಗಿಸಲು ಮುಂಡರಗಿ ತಾ.ಪಂ ಮುಂದಾಗಿದ್ದು, ಕೃಷಿ ಕಾರ್ಮಿಕರನ್ನು ಸೆಳೆಯಲು ಕೆಲಸ ಮುಗಿಸಿದ ನಂತರ ದೇಸಿ ಆಟಗಳನ್ನು ಆಡಿಸಲಾಗುತ್ತಿದೆ.

ಮಹಿಳಾ ಕಾರ್ಮಿಕರಿಂದ ಸೋಬಾನ ಪದ (ಜನಪದ ಹಾಡು) ಹಾಡಿಸಿ ಮನರಂಜನೆಯನ್ನೂ ನೀಡಲಾಗುತ್ತಿದೆ. ಜೊತೆಗೆ ಕಬ್ಬಡ್ಡಿ, ಖೋಖೋದಂತಹ ಕ್ರೀಡೆಗಳಿಗೆ ನರೇಗಾ ಕಾಮಗಾರಿ ಮೂಲಕ ಜನಪ್ರಿಯಗೊಳಿಸುತ್ತಿದೆ. ಅದರಲ್ಲೂ ದೇಸಿ ಕ್ರೀಡೆಗಳನ್ನು ಆಯ್ದುಕೊಂಡು ಕೂಲಿಕಾರ ಮಹಿಳೆಯರನ್ನು ಸಕ್ರಿಯಗೊಳಿಸಿರುವುದು ವಿಶೇಷವಾಗಿದೆ.

ದುಡಿಯುವ ಕೂಲಿಕಾರರಿಗೆ ಮನರಂಜನೆಯೂ ಮುಖ್ಯ. ಮಳೆಗಾಲ ಮರೀಚಿಕೆಯಾದ ಈ ದಿನಗಳಲ್ಲಿ ನರೇಗಾ ಯೋಜನೆ ಗ್ರಾಮೀಣ ಜನರಿಗೆ ದಾರಿದೀಪ. ಇದನ್ನು ಮನಗಂಡ ಮುಂಡರಗಿ ತಾ.ಪಂ ಸುಸ್ಥಿರ ನರೇಗಾ ಅಂಕೆ-ಸಂಖ್ಯೆ ಅಭಿವೃದ್ಧಿಯತ್ತ ಸಾಂಸ್ಕೃತಿಕ, ಜನಪದ ಚಟುವಟಿಕೆಗಳ ಮೂಲಕ ಗಮನ ಹರಿಸಿ ಜನರಿಗೆ ಮಾಹಿತಿ ತಲುಪಿಸುತ್ತಿರುವುದು ಮಾದರಿಯಾಗಿದೆ.

ಗ್ರಾಮೀಣ ಪ್ರದೇಶದ ಪುರುಷರಿಗಿಂತ ಮಹಿಳೆಯರೇ ಈ ಆಟದಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ಹೀಗಾಗಿ, ಮುಂಡರಗಿ ತಾಲೂಕು ಪಂಚಾಯಿತಿ ಕಳೆದ ವರ್ಷ ನರೇಗಾ ಕಾಮಗಾರಿಗಳಲ್ಲಿ ಮಹಿಳಾ ಭಾಗವಹಿಸುವಿಕೆ ಪ್ರಮಾಣದಲ್ಲಿ ಶೇ.50ರಷ್ಟು ಯಶಸ್ಸು ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ನರೇಗಾ ಕಾಮಗಾರಿಗಳ ಜೀವನಾಡಿ, ಭಾರತ ಹಳ್ಳಿಗಳಿಂದ ಕೂಡಿದ ದೇಶ. ಬೇಸಿಗೆ ಕಾಲದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರಿಗೆ ಕೆಲಸ ಸಿಕ್ಕರೆ ಆಗುವ ಅನುಕೂಲ ನೂರೆಂಟು. ಆ ದಿಶೆಯಲ್ಲಿ ಮುಂಡರಗಿ ತಾ.ಪಂ ಕಾರ್ಯನಿರತವಾಗಿದೆ.
– ವಿಶ್ವನಾಥ ಹೊಸಮನಿ.
ತಾ.ಪಂ ಇಓ, ಮುಂಡರಗಿ.

ಮತ ಚಲಾಯಿಸಿ ಸೌಲಭ್ಯ ಕೇಳಿ : ಡಾ. ಹಂಪಣ್ಣ ಸಜ್ಜನ

0

ವಿಜಯಸಾಕ್ಷಿ ಸುದ್ದಿ, ನರಗುಂದ : ಯುವ ಮತದಾರರಲ್ಲಿ ಕಡ್ಡಾಯ ಮತದಾನ ಜಾಗೃತಿ ಮೂಡಿಸಲು ತಾಲೂಕು ಸ್ವೀಪ್ ಸಮಿತಿ ವತಿಯಿಂದ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಹಿ ಸಂಗ್ರಹ ಅಭಿಯಾನ ಆಯೋಜಿಸಲಾಗಿತ್ತು. ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗಿಯಾದ ಯುವ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಸಂಕಲ್ಪ ಮಾಡಿ ಸಹಿ ಸಂಗ್ರಹ ಅಭಿಯಾನದಲ್ಲಿ ರುಜು ಹಾಕಿದರು.

ಅಭಿಯಾನದಲ್ಲಿ ನರಗುಂದ ವಿಧಾನಸಭೆ ಸಹಾಯಕ ಚುನಾವಣಾ ಅಧಿಕಾರಿ ಡಾ. ಹಂಪಣ್ಣ ಸಜ್ಜನ ಮಾತನಾಡಿ, ಸಂವಿಧಾನ ನೀಡಿರುವ ಮತದಾನ ಹಕ್ಕನ್ನು ಚಲಾಯಿಸದೆ ಜನಪ್ರತಿನಿಧಿಗಳನ್ನು ಸೌಲಭ್ಯ ಒದಗಿಸಿ ಎಂದು ಕೇಳುವುದಕ್ಕಿಂತ, ಮತ ಚಲಾಯಿಸಿ ಸೌಲಭ್ಯ ಕೇಳುವುದು ಉತ್ತಮ ಮತದಾರನ ನಡೆಯಾಗಿದೆ. ಸಮಾಜದಲ್ಲಿ ವಿವಿಧ ಸೌಲಭ್ಯಗಳಿಗಾಗಿ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಮತದಾರರ ಸಂಖ್ಯೆ ದೊಡ್ಡದಿದೆ. ಹಲವು ಮತದಾರರು ಮತದಾನದ ದಿನ ಮತ ಚಲಾಯಿಸದೇ ಚುನಾವಣೆ ಬಳಿಕ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಸಂಪ್ರದಾಯ ಹೊಂದಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದಾರ ಮಾತನಾಡಿ, ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸ್ವೀಪ್ ಸಮಿತಿ ವತಿಯಿಂದ ಕಡ್ಡಾಯ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಯುವ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲು ಸಹಿ ಸಂಗ್ರಹ ಅಭಿಯಾನದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಮೊದಲ ಬಾರಿಗೆ ಮತದಾನ ಮಾಡುತ್ತಿರುವ ವಿದ್ಯಾರ್ಥಿಗಳು ಯಾವುದೇ ಆಮಿಷಕ್ಕೆ ಒಳಗಾಗದೇ ದೇಶಕ್ಕೆ ಕೀರ್ತಿ ತರುವ ಸಂಸದರನ್ನು ಆಯ್ಕೆಗೊಳಿಸಲು ಮುಂದಾಗಿ ಎಂದರು.

ಅಭಿಯಾನದಲ್ಲಿ ಭಾಗವಹಿಸಿದ್ದ 250ಕ್ಕೂ ಅಧಿಕ ಯುವ ಮತದಾರರಿಗೆ ಕಾಲೇಜಿನ ಎನ್‌ಎಸ್‌ಎಸ್ ಸಂಯೋಜಕ ಬಸವರಾಜ ಹೊಸಕೋಟಿ ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು.
ಯುವ ಮತದಾರರ ಸಹಿ ಸಂಗ್ರಹ ಅಭಿಯಾನದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಸಿದ್ದನಗೌಡ ಪಾಟೀಲ್, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ತಾಲೂಕು ಪಂಚಾಯತ ಸಿಬ್ಬಂದಿ ವರ್ಗದವರು ಹಾಜರಿದ್ದರು. ತಾ.ಪಂ ಸಿಬ್ಬಂದಿ ಪ್ರದೀಪ್ ಕದಮ್ ನಿರೂಪಿಸಿ ವಂದಿಸಿದರು.

ನರಗುಂದ ತಹಸೀಲ್ದಾರ ಶ್ರೀಶೈಲ ತಳವಾರ ಮಾತನಾಡಿ, ಆಧುನಿಕ ತಂತ್ರಜ್ಞಾನ ಯುಗದಲ್ಲಿರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆ ಬಗ್ಗೆ ತಿಳಿದುಕೊಂಡಿರಬೇಕು. ಮತ ಯಂತ್ರಗಳ ಕಾರ್ಯಕ್ಷಮತೆ, ಗೌಪ್ಯತೆ ಹಾಗೂ ಚುನಾವಣೆ ನಡೆಯುವ ಪ್ರತಿ ಹಂತಗಳನ್ನು ತಿಳಿದಿರಬೇಕು. ಜೊತೆಗೆ ಕೇವಲ ಮಾಹಿತಿಯನ್ನು ತಿಳಿದುಕೊಳ್ಳದೇ ಸುತ್ತಮುತ್ತಲಿನ ಜನರಿಗೂ ಪಾರದರ್ಶಕ ಚುನಾವಣೆ ಪ್ರಕ್ರಿಯೆ ಬಗ್ಗೆ ವಿದ್ಯಾರ್ಥಿಗಳು ತಿಳಿಸುವ ಕಾರ್ಯ ಮಾಡಬೇಕು ಎಂದರು.

error: Content is protected !!