Home Blog

ಕಡ್ಡಾಯ ಮತದಾನ ನಮ್ಮೆಲ್ಲರ ಜವಾಬ್ದಾರಿ : ವಿಶ್ವನಾಥ ಹೊಸಮನಿ

0

ವಿಜಯಸಾಕ್ಷಿ ಸುದ್ದಿ, ಡಂಬಳ : ಮತದಾನ ಸಂವಿಧಾನ ನಮಗೆ ನೀಡಿದ ವರದಾನ. ಅಂತಹ ಅತ್ಯಮೂಲ್ಯ ಹಕ್ಕನ್ನು ತಪ್ಪದೇ ಚಲಾಯಿಸುವುದು ಎಲ್ಲರ ಜವಾಬ್ದಾರಿ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವಿಶ್ವನಾಥ ಹೊಸಮನಿ ಹೇಳಿದರು.

ಡಂಬಳ ಗ್ರಾಮದ ಹೊರವಲಯದಲ್ಲಿನ ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲಿಸಿದ ನಂತರ ಮತದಾನ ಜಾಗೃತಿ ಮೂಡಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ಗಟ್ಟಿಗೊಳ್ಳಬೇಕಾದರೆ ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು. ಸ್ವಯಂ ಪ್ರೇರಣೆಯಿಂದ ಎಲ್ಲರೂ ನಿಮ್ಮ ನಿಮ್ಮ ನೆರೆಹೊರೆಯವರಲ್ಲೂ ತಪ್ಪದೇ ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ನರೇಗಾ ಕೂಲಿ ಮೊತ್ತ ಈಗ 349 ರೂ.ಗೆ ಹೆಚ್ಚಳವಾಗಿದೆ. ಅಳತೆಗೆ ತಕ್ಕಂತೆ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಎಲ್ಲರೂ ಶ್ರಮಿಸಬೇಕು. ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಿಂದ ಮಣ್ಣಿನ ಫಲವತ್ತತೆ ಹೆಚ್ಚಳವಾಗಿ, ಮಣ್ಣಿನ ಸವಕಳಿ ತಡೆಗಟ್ಟಲು ನೆರವಾಗುತ್ತದೆ.

ಇದರಿಂದ ರೈತರಿಗೆ ಅನುಕೂಲ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಮೋದ ತುಂಬಳ, ಪಿಡಿಓ ಶಶಿಧರ ಹೊಂಬಳ, ಟಿಸಿ ಹರೀಶ ಸೊಬರದ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.

ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

ವಿಜಯಸಾಕ್ಷಿ ಸುದ್ದಿ, ಗದಗ : ಲೋಕಸಭಾ ಸಾರ್ವತ್ರಿಕ ಚುನಾವಣೆ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ ಲಕ್ಷ್ಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕರ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಣದ ತಾಲೂಕಾಧ್ಯಕ್ಷ ಮಹೇಶ ಕಲಘಟಗಿ ಹೇಳಿದರು.

ಈ ಬಗ್ಗೆ ತಹಸೀಲ್ದಾರ ಕಚೇರಿಯಲ್ಲಿ ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಿ ಮಾತನಾಡುತ್ತ, ಏಪ್ರಿಲ್ 17ರ ಸಂಜೆ ಮಾರುಕಟ್ಟೆಯಲ್ಲಿ ಲಕ್ಷ್ಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಸಂಚಾರಿದಳ ಅಧಿಕಾರಿ ಮತ್ತು ಕಿರಿಯ ಆರೋಗ್ಯ ನಿರೀಕ್ಷಕರು ಜೊತೆಯಾಗಿ ಕಸದ ಬುಟ್ಟಿ ವಿತರಣೆ ಕಾರ್ಯಕ್ರಮ ನಡೆಸಿದ್ದಾರೆ. ಈ ಇಬ್ಬರೂ ಜಿಲ್ಲೆಯ ಅಧಿಕಾರಿಗಳಾಗಿದ್ದಾರೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರ್ಕಾರದ ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಅಪರಾಧವಾಗಿರುತ್ತದೆ. ಈ ಇಬ್ಬರೂ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಶ್ರೇಯಾಂಕ ಹಿರೇಮಠ, ನವೀನ ಗುರಿಕಾರ, ಪ್ರವೀಣ ದಶಮನಿ, ಮಂಜುನಾಥ ಗಾಂಜಿ, ಅಂಬರೀಶ ಗಾಂಜಿ, ಮಹಾಂತೇಶ ಗುರಿಕಾರ, ಚಂದ್ರು ಪಾಣಿಗಟ್ಟಿ, ಈಶ್ವರಗೌಡ ಪಾಣಿಗಟ್ಟಿ, ಬಸನಗೌಡ ಮನ್ನಂಗಿ, ತೇಜು ರವಿ ಗುರಿಕಾರ, ಮಲ್ಲನಗೌಡ ಪಾಟೀಲ, ಶಿವರಾಜ್ ಬಾಳಿಹಳ್ಳಿಮಠ, ವೀರೇಶ ಹಗ್ಗರದ, ಬಸನಗೌಡ ಅಡರಕಟ್ಟಿ ಮುಂತಾದವರಿದ್ದರು.

ತರಬೇತಿಯೊಂದಿಗೆ ಭವಿಷ್ಯವನ್ನು ರೂಪಿಸಿಕೊಳ್ಳಿ : ಅರುಣ ಬಿ.ಕುಲಕರ್ಣಿ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಬೆಂಗಳೂರಿನ ಬಿಡದಿಯ ಟೊಯೋಟಾ ಕಂಪನಿಯವರು ಧಾರವಾಡದ ಕನೆಕ್ಟ್ ಸಂಸ್ಥೆಯ ಮೂಲಕ ನಿಮಗೆ ಕೌಶಲ್ಯ ಪರಿಣಿತಿಯನ್ನು ನೀಡಲು ಬಂದಿದ್ದಾರೆ. ಮನೆ ಬಾಗಿಲಿಗೆ ಬಂದಿರುವ ಈ ಅವಕಾಶವನ್ನು ನೀವು ಸದುಪಯೋಗಪಡಿಸಿಕೊಂಡು ನಿಮ್ಮ ಜೀವನವನ್ನು ಉತ್ತಮಗೊಳಿಸಿಕೊಳ್ಳಿ ಎಂದು ಪಟ್ಟಣದ ಶ್ರೀ ಕೊಟ್ಟೂರುಸ್ವಾಮಿ ಐಟಿಐ ಕಾಲೇಜಿನ ಚೇರಮನ್ ವಿ.ಬಿ. ಸೋಮನಕಟ್ಟಿಮಠ ಹೇಳಿದರು.

ಗುರುವಾರ ಕಾಲೇಜಿನಲ್ಲಿ ಧಾರವಾಡದ ಕನೆಕ್ಟ್ ಸಂಸ್ಥೆಯವರು ನಡೆಸಿದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ಇಂತಹ ಸೌಲಭ್ಯಗಳು ಇರಲಿಲ್ಲ. ಈಗ ಅನೇಕ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ನಿಮ್ಮ ಮನೆ ಬಾಗಿಲಿಗೆ ಬರುತ್ತಿವೆ. ನಮ್ಮ ಶ್ರೀ ಕೊಟ್ಟೂರು ಸ್ವಾಮಿ ಐಟಿಐನ ಪ್ರಾಚಾರ್ಯರು ಮತ್ತು ಸಿಬ್ಬಂದಿಯವರು ನಿಮಗೆ ಇಂಥದ್ದೊಂದು ಅವಕಾಶವನ್ನು ಒದಗಿಸಿಕೊಟ್ಟಿದ್ದು, ಈ ಮೂಲಕ ನಿಮ್ಮ ಜೀವನದ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಹೇಳಿದರು.

ಬರುವ ಜೂನ್ ತಿಂಗಳಲ್ಲಿ ಇನ್ನಷ್ಟು ಹೆಚ್ಚಿನ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವಂತೆ ಮಾಡಿ, ಸಹಸ್ರಾರು ಜನರಿಗೆ ಉದ್ಯೋಗ ದೊರಕುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಇದಕ್ಕೆ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರ ಆಶೀರ್ವಾದವೂ ಇದೆ ಎಂದು ಸೋಮನಕಟ್ಟಿ ತಿಳಿಸಿದರು.

ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿ ಮಾತನಾಡಿ, ನೀವು ಪಡೆದ ತರಬೇತಿ ಫಲಪ್ರದವಾಗಬೇಕಾದರೆ ಇಂತಹ ಕೌಶಲ್ಯಾಧಾರಿತ ಪ್ರಾಯೋಗಿಕ ತರಬೇತಿನಿಮಗೆ ಅವಶ್ಯಕ. ನಿಮ್ಮ ಮನೆತನವನ್ನು ಆರ್ಥಿಕವಾಗಿ ಸಬಲಪಡಿಸಲು ನೀವು ಈ ತರಬೇತಿಯನ್ನು ಪಡೆದುಕೊಳ್ಳಿ. ಸಿಕ್ಕ ಅವಕಾಶವನ್ನು ಬಳಸಿಕೊಂಡು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದರು.

ಪ್ರಾಚಾರ್ಯ ಬಸವರಾಜ ಜೋಳದ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಐಟಿಐನಲ್ಲಿ ಒಟ್ಟು ಫಿಟ್ಟರ್, ಇಲೆಕ್ರ್ಟಿಶಿಯನ್, ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ಸ್, ಹೊಲಿಗೆ, ವೈರ್‌ಮನ್ ಹಾಗೂ ಪ್ಲಂಬರ್ ಹೀಗೆ ಆರು ಟ್ರೇಡ್‌ಗಳಿದ್ದು, ನಿಮಗೆ ಇಷ್ಟವಾಗುವ ಟ್ರೇಡ್‌ನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದರು.
ಎಸ್.ಎಂ. ಕಮ್ಮಾರ ಸ್ವಾಗತಿಸಿದರು. ಸುಮಾ ಸೋಮನಕಟ್ಟಿಮಠ ನಿರೂಪಿಸಿದರು. ನಾಗರಾಜ ಗುಡದಾರಿ ವಂದಿಸಿದರು.

ಕನೆಕ್ಟ್ ಸಂಸ್ಥೆಯ ಎಚ್.ಆರ್ ಮಲ್ಲಿಕಾರ್ಜುನ ಗೊಂಡಬಾಳ ಮಾತನಾಡಿ, ಈ ಅಪ್ರೆಂಟಿಸ್ ತರಬೇತಿಯು ಒಂದು ವರ್ಷದ್ದಾಗಿದ್ದು, ಈ ಸಮಯದಲ್ಲಿ ಕಂಪನಿಯ ವತಿಯಿಂದ ನೀವು 16875 ರೂ.ಗಳ ಸ್ಟೆöಪೆಂಡ್‌ನ್ನು ಪಡೆಯುತ್ತೀರಿ. ನೀವು ನಿಗದಿತ ಸಮಯಕ್ಕಿಂತ ಹೆಚ್ಚಿನ ಅವಧಿ ದುಡಿದರೆ ನಿಮಗೆ ಬೋನಸ್ ರೂಪದಲ್ಲಿ ಹೆಚ್ಚಿನ ವೇತನ ದೊರೆಯಲಿದೆ. ತರಬೇತಿ ಸಮಯದಲ್ಲಿ ಉಚಿತ ಸಾರಿಗೆ, ಊಟ, ಸಮವಸ್ತç ಮುಂತಾದವುಗಳನ್ನು ನೀಡಲಾಗುತ್ತಿದೆ ಎಂದರು.

ಜುಲೈ 13ರಂದು ರಾಷ್ಟ್ರೀಯ ಲೋಕ ಅದಾಲತ್

0

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ಆದೇಶದನ್ವಯ ಗದಗ ಜಿಲ್ಲೆಯಲ್ಲಿ 2024ರ ಜುಲೈ 13ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಂಡಿದ್ದು, ಸಾರ್ವಜನಿಕರು, ಪಕ್ಷಗಾರರು ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜೀ ಸಂಧಾನದ ಮೂಲಕ ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ. ರಾಜೀ ಸಂಧಾನದಲ್ಲಿ ಪಾಲ್ಗೊಂಡು ತಮಗಾಗುವ ಆರ್ಥಿಕ ಹೊರೆ ಹಾಗೂ ಸಮಯ ಪೋಲಾಗುವುದನ್ನು ತಪ್ಪಿಸಲು, ಮೊದಲಿನ ಬಾಂದsವ್ಯ ಉಳಿಸಿಕೊಳ್ಳಲು ತಮ್ಮ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಬಸವರಾಜ ತಿಳಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ರಾಜೀ ಸಂಧಾನಕ್ಕಾಗಿ ಸಿವಿಲ್ ದಾವೆಗಳು, ಭೂ ಸ್ವಾಧೀನ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ದರಖಾಸ್ತು ಅರ್ಜಿಗಳು, ಕಾರ್ಮಿಕ ಪ್ರಕರಣಗಳು, ಎಮ್‌ಎಮ್‌ಆರ್‌ಡಿ ಪ್ರಕರಣಗಳು, ಚೆಕ್‌ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪ್ರಕರಣಗಳು, ವೈವಾಹಿಕ ಪ್ರಕರಣಗಳು ಹಾಗೂ ರಾಜೀ ಆಗಲು ಅರ್ಹವಿರುವ ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳು ಸೇರಿದಂತೆ ಹಲವಾರು ಪ್ರಕರಣಗಳನ್ನು ಗುರುತಿಸಲಾಗಿದೆ.

ಪ್ರತಿದಿನ ರಾಜೀಗಾಗಿ ಆಯ್ಕೆ ಮಾಡಿದ ಪ್ರಕರಣಗಳನ್ನು ಸಂಬಂದಪಟ್ಟ ವಕೀಲರು ಹಾಗೂ ಪಕ್ಷಗಾರರೊಂದಿಗೆ ಮುಂಚಿತವಾಗಿಯೇ ರಾಜೀ ಸಂಧಾನದಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿ ಅವರ ಮನವೊಲಿಸಿ ರಾಜೀ ಸಂಧಾನ ಮಾಡಿಕೊಳ್ಳಲು ತಿಳಿಯಪಡಿಸಲಾಗುವುದು. ಪ್ರಕರಣಗಳಿಗೆ ಸಂಬಂದಪಟ್ಟ ವಕೀಲರು, ಕಕ್ಷಿದಾರರು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂದಪಟ್ಟ ಅಧಿಕಾರಿಗಳು, ಇಲಾಖೆಗಳವರು ಜುಲೈ 13ರಂದು ಜರಗುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪಾಲ್ಗೊಂಡು ತಮ್ಮ ವ್ಯಾಜ್ಯಗಳನ್ನು ರಾಜೀ ಸಂಧಾನ ಮೂಲಕ ಪರಿಹರಿಸಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಗುರುಪ್ರಸಾದ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಪಂಚ ಗ್ಯಾರಂಟಿಯಿಂದ ಮಹಿಳೆಯರಿಗೆ ಬಲ:ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ರಾಜ್ಯದಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಮಹಿಳೆಯರಿಗೆ ಬಲ ಬಂದಿದ್ದು, ಲಕ್ಷ್ಮಿಯರನ್ನು ಮಹಾಲಕ್ಷ್ಮಿಯರನ್ನಾಗಿ ಮಾಡಲು ಕೇಂದ್ರದಿಂದ ವರ್ಷಕ್ಕೆ 1 ಲಕ್ಷ ರೂ. ನೀಡುವುದಾಗಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡಿ ಮತ್ತಷ್ಟು ಬಲ ತುಂಬಲಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು.

ಇಲ್ಲಿಯ ಬಜಾರ ರಸ್ತೆಯಲ್ಲಿ ಬಾಗಲಕೋಟ ಲೋಕಸಭಾ ಮತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರ ಪರ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ಸಭೆಯನ್ನು ಉದ್ದೇಶಿಸಿ ಸಚಿವರು ಮಾತನಾಡಿದರು.

ಸಿದ್ಧರಾಮಯ್ಯ ಅವರು ರಾಜ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿದ್ದು, ಮಹಿಳೆಯರ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ತಿಂಗಳು 2000 ರೂ. ಜಮಾ ಮಾಡುತ್ತಿದ್ದೇವೆ. ಪ್ರತಿ ಬಡ ಕುಟುಂಬದ ಮಹಿಳೆಯರನ್ನು ಪ್ರಾಮಾಣಿಕವಾಗಿ ತಲುಪಲು ಅನುಷ್ಠಾನ ಸಮಿತಿ ರಚಿಸಲಾಗಿದ್ದು, ಜಿಲ್ಲೆಯ ಶೇ 99.16 ಮಹಿಳೆಯರಿಗೆ ಈವರೆಗೆ ಯೋಜನೆ ತಲುಪಿದೆ. ಲಕ್ಷ್ಮಿಯರನ್ನು ಮಹಾಲಕ್ಷ್ಮಿಯರನ್ನಾಗಿಸಲು ರಾಹುಲ್ ಗಾಂಧಿ ಕೇಂದ್ರದಿಂದ ಪ್ರತಿ ವರ್ಷ 1 ಲಕ್ಷ ರೂ ನೀಡುವುದಾಗಿ ಗ್ಯಾರಂಟಿ ಘೋಷಿಸಿದ್ದಾರೆ. ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯು ಮಹಿಳೆಯರಲ್ಲಿ ಬಲ ತುಂಬಿದೆ ಎಂದರು.

ಅಭ್ಯರ್ಥಿ ಸಂಯುಕ್ತಾ ಪಾಟೀಲ ಮಾತನಾಡಿ, ಇದು ರಾಜ್ಯದ ರೈತರ, ಮಹಿಳೆಯರ ಪ್ರತಿಷ್ಠೆಯ ಚುನಾವಣೆಯಾಗಿದ್ದು, 2 ಬರಗಾಲದ ಸನ್ನಿವೇಶದಲ್ಲಿ ಸುಮಾರು 35 ಸಾವಿರ ಕೋಟಿ ರೂ ಹಾನಿಯಾಗಿದೆ.

ಇದರಲ್ಲಿ 18 ಸಾವಿರ ಕೋಟಿ ರೂ ಕೊಡಬೇಕು ಎಂದು ಮನವಿ ಮಾಡಿದರೂ ಸಹ ಕೇಂದ್ರ ಸರಕಾರ ಯಾವುದೇ ಅನುದಾನ ನೀಡದೇ ರೈತ ವಿರೋಧಿ ನೀತಿಯನ್ನು ಅನುಸರಿಸಿದೆ. 2014ರಿಂದ 2024ರವರೆಗೆ ದೇಶದ ಉದ್ದಿಮೆಗಳ 14 ಲಕ್ಷ ಕೋಟಿ ರೂ ಸಾಲವನ್ನು ಮನ್ನಾ ಮಾಡಿದ್ದರೂ, ಈ ದೇಶದ ಬೆನ್ನೆಲುಬಾಗಿರುವ ರೈತರ ಸಾಲ ಮನ್ನಾ ಮಾಡಲಿಲ್ಲ. 4 ವರ್ಗದ ಬಗ್ಗೆ ಮಾತನಾಡುವ ಕೇಂದ್ರ ಸರಕಾರ ರೈತ, ಯುವಕ, ಮಹಿಳೆ ಮತ್ತು ಬಡವರ ಬಗ್ಗೆ ನಿಷ್ಕಾಳಜಿ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

pancha

ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಬಿ.ಆರ್. ಯಾವಗಲ್, ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ ಕೇಂದ್ರ ಸರಕಾರದ ಬಡವರ ವಿರೋಧಿ ನೀತಿಯನ್ನು ಖಂಡಿಸಿದರು. ಬಿಜೆಪಿ ಮುಖಂಡರಾದ ಅಜ್ಜಪ್ಪಗೌಡ ಪಾಟೀಲ, ಗ್ರಾ.ಪಂ ಮಾಜಿ ಸದಸ್ಯ ಶಿವನಗೌಡ ಗೌಡ್ರ, ಶ್ರೀಶೈಲಪ್ಪ ಹಗರಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಲಕ್ಕುಂಡಿ ಯುವ ಕಾಂಗ್ರೆಸ್ ವತಿಯಿಂದ ಸಂಯುಕ್ತಾ ಪಾಟೀಲರನ್ನು ಸನ್ಮಾನಿಸಲಾಯಿತು. ಹಾಲುಮತ ಸಮಾಜದಿಂದ ಕಂಬಳಿಯನ್ನು ಹೊದೆಸಿ ಗೌರವಿಸಿದರು.

ಇದಕ್ಕೂ ಮುನ್ನ ಅತ್ತಿಮಬ್ಬೆ ಮಹಾದ್ವಾರದಿಂದ ಅಭ್ಯರ್ಥಿ ಸಂಯುಕ್ತಾ ಪಾಟೀಲ, ಸಚಿವ ಎಚ್.ಕೆ. ಪಾಟೀಲ, ಸಿದ್ದು ಪಾಟೀಲ ಅವರು ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ವಿವೇಕ ಯಾವಗಲ್, ವಿಧ್ಯಾಧರ ದೊಡ್ಡಮನಿ, ಪ್ರಕಾಶ ಕರಿ, ನೀಲಮ್ಮ ಬೋಳನವರ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು. ಜಿ.ಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಸ್ವಾಗತಿಸಿದರು. ನಜೀರಅಹ್ಮದ ಕಿರೀಟಗೇರಿ ನಿರೂಪಿಸಿ ವಂದಿಸಿದರು.

ಪಂಚ ಉಚಿತ ಯೋಜನೆಗಳು ಅನುಷ್ಠಾನಗೊಂಡರೆ ದೇಶ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿಯವರು ಹೇಳಿದ್ದರು. ಆದರೆ ಶ್ರೀಮಂತರ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿಯಾಗುತ್ತದೆ ಎಂದ ಸಚಿವರು, ಎನ್‌ಡಿಎ ಸರಕಾರ 10 ವರ್ಷ ಸುಳ್ಳು ಹೇಳಿ ಅಧಿಕಾರ ನಡೆಸಿದೆ. ಇದೆಲ್ಲವನ್ನೂ ಮತದಾರರು ಅರಿತು, ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರಿಗೆ ಮತ ನೀಡಬೇಕು ಎಂದು ಸಚಿವ ಎಚ್.ಕೆ. ಪಾಟೀಲ ವಿನಂತಿಸಿಕೊಂಡರು.

 

ನಗರಸಭೆ ಉಪಾಧ್ಯಕ್ಷರ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ದುಷ್ಕರ್ಮಿಗಳು..!

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ-ಬೆಟಗೇರಿ ನಗರಸಭೆಯ ಉಪಾಧ್ಯಕ್ಷರ ಪುತ್ರ ಹಾಗೂ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಧಾರುಣ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ.

ಗದಗ ನಗರದ ದಾಸರ ಓಣಿಯಲ್ಲಿ ಇರುವ ನಗರಸಭೆ ಉಪಾಧ್ಯಕ್ಷೆ ಸುನಂದಾ ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ (27) ಕೊಪ್ಪಳ ಮೂಲದ ಪರಶುರಾಮ (55) ಲಕ್ಷ್ಮೀ (45) ಪುತ್ರಿ ಆಕಾಂಕ್ಷ(17) ಹತ್ಯೆಗೊಳಗಾದವರು.

ಮನೆಯ ಮೊದಲ ಮಹಡಿಯ ಕೋಣೆಯಲ್ಲಿ ಮಲಗಿದಲ್ಲೆ ಹತ್ಯೆ ಮಾಡಲಾಗಿದ್ದು, ತೀವ್ರ ರಕ್ತಸ್ರಾವದಿಂದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಎಪ್ರಿಲ್ 17 ರಂದು ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕನ ಮದುವೆ ಫಿಕ್ಸ್ ಮಾಡುವ ಕಾರ್ಯಕ್ರಮಕ್ಕೆ ಕೊಪ್ಪಳದಿಂದ ಸಂಬಂಧಿಗಳು ಆಗಮಿಸಿದ್ದರು.

https://youtu.be/fERzRYa8rMQ

ಸದ್ದು ಕೇಳುತ್ತಿದ್ದಂತೆಯೇ ಅನುಮಾನಗೊಂಡ ಸಂಬಂಧಿಕರು ಪೊಲೀಸರಿಗೆ ಫೋನ್ ಮಾಡುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಘಟನೆ ಕುರಿತು ಪ್ರಕಾಶ್ ಬಾಕಳೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು, ‌ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಸ್ಪಿ ಬಿ.ಎಸ್ ನೇಮಗೌಡ, ಹೆಚ್ಚುವರಿ ಎಸ್ಪಿ‌ ಎಮ್. ಬಿ. ಸಂಕದ, ಡಿವೈಎಸ್ಪಿ ಜೆ.ಎಚ್. ಇನಾಮದಾರ, ನಗರಠಾಣೆಯ ಇನ್ಸ್‌ಪೆಕ್ಟರ್ ಡಿ.ಬಿ.ಪಾಟೀಲ, ಪಿಎಸ್ ಐ ಎಚ್.ಕೆ. ಪಾಟೀಲ ಸೇರಿದಂತೆ ಶ್ವಾನದಳ, ಫಾರಿನ್ ಸಿಕ್ ತಂಡಗಳು ಆಗಮಿಸಿದ್ದು, ಇಂಚಿಂಚೂ ಪರಿಶೀಲನೆ ನಡೆಸಿದೆ.

ಈ ಘಟನೆಯಿಂದ ಸ್ಥಳೀಯ ಜನರು ಬೆಚ್ಚಿಬಿದ್ದಿದ್ದಾರೆ.

ಮನೆಯ ಹಿಂಬಾಗದ ಚರಂಡಿಯಲ್ಲಿ ಜಂಬೆ, ಚಿನ್ನದ ಬಳೆ ಪತ್ತೆಯಾಗಿದೆ, ಒಂದು ಜೊತೆ ಶೋ ಕೂಡ ಪತ್ತೆಯಾಗಿದ್ದು, ಈ ಕೊಲೆ ಯಾವ ಕಾರಣಕ್ಕಾಗಿ ನಡೆದಿದೆ ಎಂಬುದು ಸಧ್ಯಕ್ಕೆ ಗೊತ್ತಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ : ಸಿದ್ದರಾಯ ಕಟ್ಟಿಮನಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : 18 ವರ್ಷ ಮೇಲ್ಪಟ್ಟ, ಮತದಾರರ ಪಟ್ಟಿಯಲ್ಲಿರುವ ಎಲ್ಲ ಅರ್ಹ ಮತದಾರರು ಮತದಾನದಿಂದ ಹೊರಗುಳಿಯಬಾರದೆನ್ನುವ ಉದ್ದೇಶದಿಂದ ಅವರಲ್ಲಿ ಮತದಾನದ ಮಹತ್ವವನ್ನು ತಿಳಿಸುವುದಕ್ಕಾಗಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ಹೇಳಿದರು.

ಅವರು ಗುರುವಾರ ಪ.ಪಂ ವತಿಯಿಂದ ಎಲ್ಲ ಸಿಬ್ಬಂದಿಗಳೊಂದಿಗೆ ಕಚೇರಿಯ ಪ್ರಚಾರ ವಾಹನದ ಮೂಲಕ ಜನದಟ್ಟಣೆಯಿರುವ ಪ್ರದೇಶ ಹಾಗೂ ಪ್ರಮುಖ ಬೀದಿಗಳಲ್ಲಿ ಜಾಗೃತಿಯನ್ನು ಮೂಡಿಸಿ ಮಾತನಾಡಿದರು.

ಇಡೀ ಜಗತ್ತಿನಲ್ಲಿಯೇ ಬೃಹತ್ ಲಿಖಿತ ಸಂವಿಧಾನ ನಮ್ಮದಾಗಿದ್ದು, ಈ ಸಂವಿಧಾನವು ನಮಗೆ ನೀಡಿದ ಮತದಾನದ ಅಧಿಕಾರವನ್ನು ಚಲಾಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಒಂದೊಂದು ಮತವು ಕೂಡಾ ಬಲಿಷ್ಠ ರಾಷ್ಟç ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ. ಆದ್ದರಿಂದ ಯಾವುದೇ ಆಮಿಷಗಳಿಗೆ ಒಳಪಡದೇ ನಿರ್ಭಯವಾಗಿ ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲ ಅರ್ಹರೂ ಮತದಾನ ಮಾಡಬೇಕು. ಈ ಬಗ್ಗೆ ಜಿಲ್ಲಾ ಹಾಗೂ ತಾಲೂಕಾಡಳಿತದ ಹಂತದಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಮುಖ್ಯೋಪಾಧ್ಯಾಯ ಜಿ.ಡಿ. ಈರಕ್ಕನವರ ಮತ್ತು ಪ.ಪಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ಇಂದು

0

ವಿಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ಜನತಾ ಪಾರ್ಟಿಯ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಏ.19ರಂದು ಬೆಳಿಗ್ಗೆ 11 ಗಂಟೆಗೆ ಹಾವೇರಿ ನಗರದ ಐತಿಹಾಸಿಕ ಹುಕ್ಕೇರಿ ಮಠದಿಂದ ಜೆಪಿ ಸರ್ಕಲ್‌ವರೆಗೆ ಬೃಹತ್ ಮೆರವಣಿಗೆಯ ಮೂಲಕ ತೆರಳಿ ಹಾವೇರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕರಾದ ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ, ಮಾಜಿ ಸಚಿವ ಕಳಕಪ್ಪ ಬಂಡಿ, ವಿ.ಪ ಸದಸ್ಯ ಎಸ್.ವಿ. ಸಂಕನೂರ, ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ಯುವ ನಾಯಕ ಅನಿಲ ಮೆಣಸಿನಕಾಯಿ ಸೇರಿದಂತೆ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ.

ಗದಗ ಜಿಲ್ಲೆಯಿಂದ ಪಕ್ಷದ ಕಾರ್ಯಕರ್ತರು, ಹಿರಿಯರು, ಹಿತೈಷಿಗಳು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧ್ಯಕ್ಷ ರಾಜು ಕುರಡಗಿ, ವಕ್ತಾರರಾದ ಎಂ.ಎಂ. ಹಿರೇಮಠ ವಿನಂತಿಸಿದ್ದಾರೆ.

ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿ ನಂತರ ಕರ್ನಾಟಕದಲ್ಲಿ ಪ್ರವಾಸ ಮಾಡಿ

0

ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯದಲ್ಲಿ ಸುಳ್ಳು ಗ್ಯಾರಂಟಿಗಳನ್ನು ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಆಡಳಿತ ನಡೆಸುವಲ್ಲಿ ಸಂಪೂರ್ಣ ಕುಸಿದಿದ್ದು, ನಾವು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ ಹಾಗೂ ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ ರಾಹುಲ್ ಗಾಂಧಿಯವರಿಗೆ ಒತ್ತಾಯಿಸಿದ್ದಾರೆ.

ಅವರು ಪಕ್ಷದ ಕಾರ್ಯಾಲಯದಲ್ಲಿ ಗುರುವಾರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ 11 ತಿಂಗಳು ಕಳೆದರೂ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಆರ್ಥಿಕವಾಗಿ ರಾಜ್ಯ ಸರ್ಕಾರ ದಿವಾಳಿಯಾಗಿದೆ. ವರ್ಗಾವಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ರಾಜ್ಯದಲ್ಲಿ 692 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇದರ ಹೊಣೆ ಹೊರುತ್ತೀರಾ ಎಂದು ರಾಹುಲ್ ಗಾಂಧಿಯವರನ್ನು ಪ್ರಶ್ನಿಸಿದ್ದಾರೆ.

ಗ್ಯಾರಂಟಿ ಹೆಸರಿನಲ್ಲಿ ಬೆಲೆ ಏರಿಕೆ, ವಿದ್ಯುತ್ ದರ ಹೆಚ್ಚಳ, ಸ್ಟ್ಯಾಂಪ್ ಡ್ಯೂಟಿ ದರ ಹೆಚ್ಚಳ ಮಾಡಲಾಗಿದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿ ನಂತರ ಕರ್ನಾಟಕದಲ್ಲಿ ಪ್ರವಾಸ ಮಾಡಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ, ಪ್ರಧಾನ ಕಾರ್ಯದರ್ಶಿ ಪಕ್ಕಿರೇಶ ರಟ್ಟಿಹಳ್ಳಿ, ನಗರ ಅಧ್ಯಕ್ಷ ಅನಿಲ ಅಬ್ಬಿಗೇರಿ, ಮಾಧ್ಯಮ ಪ್ರಮುಖ ರಾಜು ಹೊಂಗಲ ಒತ್ತಾಯಿಸಿದ್ದಾರೆ.

ಕೋಟೆ ವೀರಭದ್ರೇಶ್ವರ ರಥೋತ್ಸವ ನಾಳೆ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಐತಿಹಾಸಿಕ ಕೋಟೆ ವೀರಭದ್ರೇಶ್ವರ ರಥೋತ್ಸವವು ಎಪ್ರಿಲ್ 20ರ ಸಂಜೆ ಸಂಭ್ರಮದಿಂದ ಜರುಗಲಿದೆ. 46ನೇ ವರ್ಷದ ರಥೋತ್ಸವಕ್ಕೆ ಸಂಜೆ 4 ಗಂಟೆಗೆ ಡೋಣಿ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿಗಳು, ಹರ್ಲಾಪೂರ ಡಾ. ಕೊಟ್ಟೂರೇಶ್ವರ ಶ್ರೀಗಳು, ಲಕ್ಕುಂಡಿ ಅಲ್ಲಮಪ್ರಭುದೇವರ ಮಠದ ಸಿದ್ಧಲಿಂಗೇಶ್ವರ ಶ್ರೀಗಳು ಚಾಲನೆ ನೀಡುವರು.

ರಥೋತ್ಸವದಲ್ಲಿ ನಂದಿಕೋಲ ಮೇಳ, ಡೊಳ್ಳು ಮೇಳ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸುವವು. ಇದಕ್ಕೂ ಪೂರ್ವ ಮುಂಜಾನೆ 10ರಿಂದ 1ರವರೆಗೆ ಉಚಿತ ಆರೋಗ್ಯ ತಪಾಸಣೆ, ಚರ್ಮರೋಗ ತಪಾಸಣೆ, ಹೃದಯ ರೋಗ ತಪಾಸಣೆ ಹಾಗೂ ಉಚಿತ ರಕ್ತದಾನ ಶಿಬಿರ ಜರುಗಲಿದೆ.

ಏ.21ರಂದು ಗುಗ್ಗಳೋತ್ಸವ ಕಾರ್ಯಕ್ರಮ ನಡೆಯಲಿದ್ದು, ಪ್ಯಾಟಿ ಹನುಮಂತ ದೇವರ ದೇವಸ್ಥಾನದಿಂದ ಆರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ ದೇವಸ್ಥಾನದ ಮುಂದೆ ಅಗ್ನಿ ಕುಂಡದಲ್ಲಿ ಹಾಯುವ ಕಾರ್ಯಕ್ರಮ ಜರುಗಲಿದೆ. ಸಂಜೆ 5ಕ್ಕೆ ಪಲ್ಲಕ್ಕಿ ಉತ್ಸವ ಜರುಗಲಿದ್ದು, ರಥೋತ್ಸವದ ಅಂಗವಾಗಿ ಪ್ರತಿದಿನ ಪ್ರಾತಃಕಾಲ ರುದ್ರಾಭಿಷೇಕ ಜರುಗಲಿದೆ ಎಂದು ಜಾತ್ರಾ ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.

error: Content is protected !!