ವಿಜಯಸಾಕ್ಷಿ ಸುದ್ದಿ, ಗದಗ : ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ನರಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಸಂಬಂಧ ಚುನಾವಣಾ ಸಾಮಾನ್ಯ ವೀಕ್ಷಕರಾದ ಇ. ಶರವಣ ವೆಲ್ರಾಜ್ ಐಎಎಸ್, ಪೊಲೀಸ್ ವೀಕ್ಷಕರಾದ ಎಂ.ಆರ್ಶಿ ಐಪಿಎಸ್, ವೆಚ್ಚ ವೀಕ್ಷಕರಾದ ಇಪ್ತಿಕಾರ್ ಅಹಮ್ಮದ್ ಐಆರ್ಎಸ್ ಅವರು ಲೋಕಸಭಾ ಚುನಾವಣಾ ಸಿದ್ಧತೆ ಸಂಬಂಧಿಸಿದಂತೆ ಮಂಗಳವಾರ ಮಾಹಿತಿ ಪಡೆದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ನಿಯಂತ್ರಣ ಕೊಠಡಿ ವೀಕ್ಷಿಸಿದ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಸಾಮಾನ್ಯ ವೀಕ್ಷಕ ಶರವಣ ವೆಲ್ರಾಜ್, ನರುಗುಂದ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರ ವಿವರ, ಯುವ ಮತದಾರರ ಸಂಖ್ಯೆ, ಮತಗಟ್ಟೆಗಳ ವಿವರ, ಅಂಚೆ ಮತಪತ್ರ, ವಿದ್ಯುನ್ಮಾನ ಮತಯಂತ್ರ, ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಸೇರಿದಂತೆ ಹಲವು ಮಾಹಿತಿ ಪಡೆದರು.
ಪೊಲೀಸ್ ವೀಕ್ಷಕರಾದ ಎಂ.ಆರ್ಸಿ, ಲೋಕಸಭಾ ಚುನಾವಣೆಯನ್ನು ನಿಷ್ಪಕ್ಷಪಾತ ಮತ್ತು ಶಾಂತಿಯುತವಾಗಿ ನಡೆಸಬೇಕು ಎಂದರಲ್ಲದೆ, ಮತಗಟ್ಟೆ ಕೇಂದ್ರಗಳಲ್ಲಿ ವಿದ್ಯುತ್, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸೂಚಿಸಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ನರುಗುಂದ ವಿಧಾನಸಭಾ ಕ್ಷೇತ್ರದಲ್ಲಿನ ಮತದಾರರ ಸಂಖ್ಯೆ, ಯುವ ಮತದಾರರ ಸಂಖ್ಯೆ, ಮತಗಟ್ಟೆ ವಿವರ, ವಿದ್ಯುನ್ಮಾನ ಮತಯಂತ್ರ, ಭದ್ರತಾ ಕೊಠಡಿ, ಮತಗಟ್ಟೆ ಅಧಿಕಾರಿಗಳ ನಿಯೋಜನೆ, ಮೈಕ್ರೋ ವೀಕ್ಷಕರ ನೇಮಕ, ಅಂಚೆ ಮತದಾನ ಸೇರಿದಂತೆ ಲೋಕಸಭಾ ಚುನಾವಣೆ ಬಗ್ಗೆ ಮಾಹಿತಿ ನೀಡಿದರು.
ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಅಮಿನಸಾಬ್ ಅತ್ತಾರ, ನಿಯಂತ್ರಣ ಕೊಠಡಿಯ ನೋಡಲ್ ಅಧಿಕಾರಿ ಸೈಯದ್ ಸೇರಿದಂತೆ ವಿವಿಧ ವಿಭಾಗದ ನೋಡಲ್ ಅಧಿಕಾರಿಗಳು ಇದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಚೆಕ್ಪೋಸ್ಟ್ಗಳ ಸಂಖ್ಯೆ, ಪೊಲೀಸರ ನಿಯೋಜನೆ ಸೇರಿದಂತೆ ಚುನಾವಣೆ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಜಿ.ಪಂ ಸಿಇಓ ಎಸ್.ಭರತ್ ಮಾತನಾಡಿ, ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಹೆಚ್ಚಳಕ್ಕೆ ಸಂಬಂಧಿಸಿದಂತೆ ವಿವಿಧ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.