ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಅಕ್ಕಮಹಾದೇವಿ ವಚನಗಳ ಅಂಶಗಳು ಸಾರ್ವಕಾಲಿಕ ಸತ್ಯ ಮತ್ತು ಕನ್ನಡ ಸಾರಸ್ವತ ಲೋಕದ ಆಧ್ಯಾತ್ಮಿಕ ಸಾಹಿತ್ಯದಲ್ಲಿ ಮಹತ್ತರ ಕೊಡುಗೆಗಳಾಗಿವೆ ಎಂದು ನಿವೃತ್ತ ಶಿಕ್ಷಕಿ, ಸಾಹಿತಿ ದೇವಕಿ ಕೊಡ್ಲಿವಾಡ ಹೇಳಿದರು.
ಅವರು ಮಂಗಳವಾರ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಕದಳಿ ಮಹಿಳಾ ವೇದಿಕೆಯಿಂದ ಹಮ್ಮಿಕೊಂಡಿದ್ದದ ಅಕ್ಕಮಹಾದೇವಿ ಜಯಂತಿ ಆಚರಣೆ ವೇಳೆ ಮಾತನಾಡಿದರು.
ಸಾಮಾಜಿಕ ಸಮಾನತೆ, ಸ್ತ್ರೀಕುಲದ ಏಳಿಗೆಗಾಗಿ ಶ್ರಮಿಸಿದ ಅಕ್ಕಮಹಾದೇವಿ ಪರಮ ವೈರಾಗ್ಯ ಮೂರುತಿಯಾಗಿದ್ದರು. ಅಣ್ಣ ಬಸವಣ್ಣ, ಚನ್ನಬಸವಣ್ಣ, ಅಲ್ಲಮಪ್ರಭು ಸೇರಿದಂತೆ ಅನೇಕ ಶರಣ ಶ್ರೇಷ್ಠರ ಸಮಕಾಲೀನಳಾಗಿ, ಅವರೆಲ್ಲರ ಸಮಕ್ಕೆ ನಿಂತು ಶ್ರೇಷ್ಠ ವಚನಗಳನ್ನು ರಚಿಸಿದ ಕನ್ನಡದ ಪ್ರಥಮ ಕವಯಿತ್ರಿಯಾಗಿ ಅಕ್ಕಮಹಾದೇವಿಯ ಹೆಸರು ಸದಾ ಚಿರಸ್ಥಾಯಿಯಾಗಿದೆ. ಇಂತಹ ಶ್ರೇಷ್ಠ ಮಹಿಳೆಯನ್ನು ಸ್ಮರಿಸುವದು ಅಗತ್ಯವಾಗಿದೆ ಎಂದು ಹೇಳಿದರು.
ತಾಲೂಕಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೂ ಪುರುಷರಷ್ಟೇ ಸಮಾನತೆ ಎಲ್ಲ ಕ್ಷೇತ್ರಗಳಲ್ಲಿ ಸಿಗಬೇಕು ಎಂದು 12ನೇ ಶತಮಾನದಲ್ಲಿಯೇ ಗಟ್ಟಿಯಾಗಿ ಬಿಂಬಿಸುವ ಕಾರ್ಯ ಮಾಡಿದ್ದಾರೆ. ಅಕ್ಕ ಮಹಾದೇವಿ ಮಹಿಳೆಯರ ಬದುಕಿನ ಆದರ್ಶವಾಗಿದ್ದಾರೆ ಎಂದರು.
ಈ ವೇಳೆ ಕದಳಿ ಮಹಿಳಾ ವೇದಿಕೆ ಕಾರ್ಯದರ್ಶಿ ರತ್ನಾ ಕರ್ಕಿ, ಪ್ರಿಯಾ ಕುಂಬಿ, ನಂದಾ ಧರ್ಮಾಯತ, ಲಕ್ಷ್ಮಿ ಕೆರಿಮನಿ, ವಿನುತಾ ಅರಳಿ, ಮಹಾನಂದ ಕೊಣ್ಣೂರ, ಶೋಭಾ ವಡಕಣ್ಣವರ, ಶಾಂತಾ ಅಬ್ಬಿಗೇರಿ, ಗೌರಮ್ಮ ಸಂಗಪಟ್ಟಶೆಟ್ಟರ, ವಿದ್ಯಾ ಗಾಂಜಿ, ಗೌರಮ್ಮ ಯಳಮಲಿ, ಶ್ವೇತಾ ಕೊಣ್ಣೂರ ಸೇರಿ ಹಲವರಿದ್ದರು.