ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಬ್ರಾಹ್ಮಣ ಸಮಾಜ ಸೇವಾ ಸಮಿತಿ ವತಿಯಿಂದ ಮಂಗಳವಾರ ಇಲ್ಲಿನ ಹಿರೇಬಜಾರದ ಮಾರುತಿ ದೇವರ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ಸ್ವಾಮಿಗೆ ವಿಶೇಷ ಪೂಜೆಯೊಂದಿಗೆ ತೊಟ್ಟಿಲೋತ್ಸವ, ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯಿತು.
ಸ್ಥಳೀಯ ಹಿರೇಅಗಸಿ ಬಳಿಯ ಹನುಮಾನ ದೇಗುಲದಲ್ಲಿ ಬೆಳಿಗ್ಗೆ ಹನುಮಾನ ಮೂರ್ತಿಗೆ ಪಂಚಾಮೃತ ಅಭಿಷೇಕ, ಚಂದನ ಅಭಿಷೇಕ ನೆರವೇರಿಸಿದರು. ವಿವಿಧ ಪರಿಮಳ ಪುಷ್ಪ, ವೀಳ್ಯದೆಲೆ ಹಾಗೂ ಚಿನ್ನದ ಆಭರಣಗಳಿಂದ ಶೃಂಗರಿಸಲಾಗಿತ್ತು. ಬಳಿಕ ಆಂಜನೇಯನ ಪಾಲಕಿ ಉತ್ಸವ ನಡೆಯಿತು. ದಿನಪೂರ್ತಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಬೆಳಿಗ್ಗೆಯಿಂದಲೇ ಮಕ್ಕಳು, ಮಹಿಳೆಯರು ತಂಡೋಪತಂಡವಾಗಿ ಹನುಮಂತ ದೇಗುಲಕ್ಕೆ ಆಗಮಿಸಿ ಹಣ್ಣು, ಕಾಯಿ, ಕರ್ಪೂರ ಅರ್ಪಿಸಿ ದೇವರ ದರ್ಶನ ಪಡೆದು ಪುನೀತರಾದರು.
ಈ ಸಂದರ್ಭದಲ್ಲಿ ರಘುನಾಥ ತಾಸಿನ, ಕೆ.ಸತ್ಯನಾರಾಯಣಭಟ್ಟ, ಶಶಿಧರ ಕುಲಕರ್ಣಿ, ಎಂ.ವಿ. ನಾಡಗೇರ, ರವಿ ಕುಲಕರ್ಣಿ, ಶಾರದಾ ತಾಸಿನ, ಸಂಧ್ಯಾ ಕುಲಕರ್ಣಿ, ರಾಧಾ ಉಟಗಿ, ಸವಿತಾ ಕೊಡಗಾನೂರ, ಲಕ್ಷ್ಮಿದೇವಿ ಕುಲಕರ್ಣಿ, ಲತಾ ರಾಜಪುರೋಹಿತ, ರಂಜಿತಾ ಕುಲಕರ್ಣಿ ಸೇರಿ ಇತರರು ಇದ್ದರು.