ವಿಜಯಸಾಕ್ಷಿ ಸುದ್ದಿ, ರೋಣ : ನರೇಗಾ ಯೋಜನೆಯು ಬೇಸಿಗೆಯ ದಿನಗಳಲ್ಲಿ ಬಡವರಿಗೆ ಅಸರೆಯಾಗುವುದರ ಜೊತೆಗೆ ಬದುಕನ್ನು ಕಟ್ಟಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ನೀವೆಲ್ಲರೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಬಡವರು ಕೂಲಿ ಕೆಲಸ ಮಾಡಿ ತಮ್ಮ ಕುಟುಂಬವನ್ನು ಸದೃಢಪಡಿಸಕೊಳ್ಳಬಹುದು ಎಂದು ಸಹಾಯಕ ನಿರ್ದೇಶಕ (ಪಂ.ರಾ) ಶಿವಯೋಗಿ ರಿತ್ತಿ ಅಭಿಪ್ರಾಯಪಟ್ಟರು.
ತಾಲೂಕಿನ ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಕಾಯಕ ಬಂಧುಗಳ ಸಭೆಯಲ್ಲಿ ಮಾತನಾಡಿದ ಅವರು, ಕಾಯಕ ಬಂಧುಗಳು ಕರ್ತವ್ಯ ಹಾಗೂ ಹಕ್ಕುಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು. ಪ್ರತಿಯೊಂದು ಕೂಲಿಕಾರರ ಗುಂಪಿನಲ್ಲಿ ನಿಮ್ಮನ್ನು ಕಾಯಕ ಬಂಧು ಎಂದೇ ಗುರುತಿಸಲಾಗುತ್ತದೆ. ಕಾಯಕ ಬಂಧುಗಳು ಕೆಲಸದ ಬೇಡಿಕೆಯನ್ನು ನಮೂನೆ-೬ರ ಮೂಲಕ ಗ್ರಾಮ ಪಂಚಾಯಿತಿಗೆ ಸಲ್ಲಿಸಬೇಕು. 15 ದಿನಗಳೊಳಗೆ ಕೆಲಸ ದೊರಕುವಂತೆ ಮಾಡಬೇಕು ಮತ್ತು ಕೆಲಸದ ಸ್ಥಳದಲ್ಲಿ ಮಾರ್ಕಿಂಗ್ ಮಾಡಿ ಕೂಲಿಕಾರರಿಗೆ ಮಾಹಿತಿ ನೀಡಬೇಕು.
ಏಪ್ರಿಲ್ 1ರಿಂದ ತಾಲೂಕಿನ ಎಲ್ಲಾ ಗ್ರಾ.ಪಂ.ಗಳಲ್ಲಿ ನರೇಗಾ ಕೆಲಸ ಆರಂಭವಾಗಲಿದ್ದು, ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿಯೂ ಕೆಲಸ ಆರಂಭವಾಗುತ್ತದೆ. ಹಾಗಾಗಿ ತಾವೆಲ್ಲರೂ ನರೇಗಾ ಕೆಲಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರನ್ನು ಸೇರಿಸುವ ಕೆಲಸ ಮಾಡಬೇಕು ಎಂದರು.
ನರೇಗಾ ಕೂಲಿಕಾರರಿಗೆ ಕೂಲಿ ಪರಿಷ್ಕರಣೆಯಾಗಿದ್ದು, ದಿನವೊಂದಕ್ಕೆ ಕೂಲಿ ಮೊತ್ತವನ್ನು 349 ರೂಪಾಯಿಗೆ ಹೆಚ್ಚಿಸಲಾಗಿದೆ. ಆದ್ದರಿಂದ ಕೂಲಿಕಾರರು ನರೇಗಾ ಯೋಜನೆಯಿಂದ ಬರುವ ಹಣವನ್ನು ಮುಂಗಾರಿನ ಕೃಷಿ ಬಿತ್ತನೆಯ ಕಾರ್ಯಕ್ಕೆ ಬಳಸಿಕೊಳ್ಳಲು ನೆರವಾಗುವುದು ಎಂದು ತಿಳಿಸಿದರು. ಜಕ್ಕಲಿ ಗ್ರಾಮ ಪಂಚಾಯಿತಿ BFT, GKM ಕಾಯಕ ಬಂಧುಗಳು, ನರೇಗಾ ಹಾಗೂ ಗ್ರಾ.ಪಂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಕೆಲಸದ ಸ್ಥಳದಲ್ಲಿ ಕೂಲಿಕಾರರಿಗೆ ನೆರಳು, ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಮುಂತಾದ ಸೌಲಭ್ಯವಿರುವಂತೆ ನೋಡಿಕೊಳ್ಳಬೇಕು. ಕಾಯಕ ಬಂಧುಗಳು ಅರೆಕುಶಲ ಕಾರ್ಮಿಕರೆಂದು ನರೇಗಾ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಕೂಲಿಕಾರರ ಜಾಬ್ ಕಾರ್ಡ್ಗಳಲ್ಲಿ ವಿವರ ನಮೂದಿಸಬೇಕೆಂದು ಶಿವಯೋಗಿ ರಿತ್ತಿ ಹೇಳಿದರು.