Home Blog

ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ

0

ವಿಜಯಸಾಕ್ಷಿ ಸುದ್ದಿ, ಗದಗ : ಪ್ರಸ್ತುತ ದಿನಮಾನದ ಆಹಾರ, ಜೀವನಶೈಲಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಹೃದಯಾಘಾತ, ರಕ್ತದ ಒತ್ತಡ, ಸಕ್ಕರೆ ಖಾಯಿಲೆ ಹೆಚ್ಚಾಗುತ್ತಿರುದಕ್ಕೆ ನಮ್ಮ ಜೀವನ ಶೈಲಿಯಲ್ಲಿನ ಬದಲಾವಣೆಗಳೇ ಕಾರಣ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ 2686ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿ, ದೈಹಿಕ ಶ್ರಮಗಳು ಕಡಿಮೆಯಾಗಿ, ಮಾನಸಿಕ ಒತ್ತಡಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಮನುಷ್ಯನ ಆಯುಷ್ಯ ಕೂಡ ಬಹಳಷ್ಟು ಕಡಿಮೆಯಾಗುತ್ತಿದೆ. ದುಶ್ಚಟಗಳನ್ನು ತ್ಯಜಿಸಿ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ‘ಕಿತ್ತೂರು ಚೆನ್ನಮ್ಮ’ ಪ್ರಶಸ್ತಿ ಪಡೆದ ನಿಮಿತ್ತ ವಿ.ವಿ. ಹಿರೇಮಠರನ್ನು ಸಂಮಾನಿಸಲಾಯಿತು. ತಾಲೂಕಾ ಬಣಜಿಗರ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಇಂಗಳಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಣಜಿಗ ಮಹಿಳಾ ಘಟಕದ ಸದಸ್ಯರು ವಚನಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಸ್ನೇಹಾ ಬಳ್ಳೊಳ್ಳಿ, ವಚನ ಚಿಂತನೆಯನ್ನು ದೀಪಾ ಸುರೇಶ ನಿಲೂಗಲ್ ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ವಹಿಸಿಕೊಂಡಿದ್ದ ಬಸವರಾಜ ರಾಮನಕೊಪ್ಪ ಹಾಗೂ ಬಣಜಿಗ ಮಹಿಳಾ ಸಮಾಜ ತಾಲೂಕಾ ಘಟಕ, ಗದಗ ಮತ್ತು ವ್ಯಾಪಾರೋದ್ಯಮಿ ಉಮೇಶ ಗಂಗಾಧರಪ್ಪ ನಾಲ್ವಾಡರನ್ನು ಪೂಜ್ಯರು ಸಂಮಾನಿಸಿದರು.

ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ.ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.

ಹೆಸರಾಂತ ವೈದ್ಯ ಡಾ. ಗಣೇಶ ಕುಂದಾಪೂರ ಉಪನ್ಯಾಸ ನೀಡಿ, ಕ್ಯಾನ್ಸರ್‌ನ್ನು ಮೊದಲನೇ ಹಂತದಲ್ಲಿ ಪತ್ತೆ ಹಚ್ಚಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಕ್ಯಾನ್ಸ್ರ್ ವಾಸಿಯಾಗುವುದು ಖಚಿತ. ಕ್ಯಾನ್ಸ್ರ್ ರೋಗ ಎಂದ ತಕ್ಷಣ ಭಯಪಡಬಾರದು. ಸಿಗರೇಟ್, ಗುಟಕಾ, ಸೇವನೆಯಿಂದ ಕ್ಯಾನ್ಸ್ರ್‌ಗೆ ಬಹಳಷ್ಟು ಜನ ತುತ್ತಾಗುತ್ತಿದ್ದಾರೆ. ಸಾಧ್ಯವಾದಷ್ಟು ದುಶ್ಚಟಗಳಿಂದ ದೂರವಿರಬೇಕು ಎಂದು ತಿಳಿಸಿದ ಅವರು, ಕ್ಯಾನ್ಸ್ರ್ ಕುರಿತು ಅನೇಕ ಮಹತ್ವದ ಸಂಗತಿಗಳನ್ನು ಜನರಿಗೆ ತಿಳಿಸಿಕೊಟ್ಟರು.

 

ಸಾಮಾಜಿಕ ಅಭಿವೃದ್ಧಿಯಲ್ಲಿ ಪತ್ರಿಕೆಗಳ ಶ್ರಮವಿದೆ

0

ವಿಜಯಸಾಕ್ಷಿ ಸುದ್ದಿ, ಧಾರವಾಡ : ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕಾರಂಗದಲ್ಲಿ, ಪತ್ರಿಕೆಗಳು ಸದಾ ತಿಳುವಳಿಕೆ ನೀಡುವ ಮೂಲಕ ಸಾಮಾಜಿಕ ಅಭಿವೃದ್ಧಿಗೆ ಹಗಲಿರಳು ಶ್ರಮಿಸುತ್ತ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ ಎಂದು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಹುಬ್ಬಳ್ಳಿ ಸ್ಥಾನಿಕ ಸಂಪಾದಕ ಷಣ್ಮುಖ ಕೋಳಿವಾಡ ಅಭಿಪ್ರಾಯಪಟ್ಟರು.

ಕವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಭಾಂಗಣದಲ್ಲಿ ಗುರುವಾರ ಪತ್ರಕರ್ತ ದಿ.ಮೊಹರೆ ಹಣಮಂತರಾಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಧಾರವಾಡದಲ್ಲಿ ಮುರುಘಾಮಠದ ಉಚಿತ ಪ್ರಸಾದ ನಿಲಯ, ಕವಿವಿಯಲ್ಲಿ ನಿರಂತರ ಓದಿನ ಮೂಲಕ ಸಾವಿರಾರು ಜನ ವಿದ್ಯಾರ್ಥಿಗಳು ಉನ್ನತ ಹುದ್ದೆಗೆ ಏರಿದ್ದನ್ನು ಸ್ಮರಿಸಿದ ಅವರು, ಪತ್ರಕರ್ತ ಮೊಹರೆ ಹಣಂತರಾಯರು ಕಾಲು ಶತಮಾನ ಕಾಲ ಸಂಯುಕ್ತ ಕರ್ನಾಟಕ ದಿನ ಪತ್ರಿಕೆ ಸಂಪಾದಕರಾಗಿ ಭದ್ರ ಬುನಾದಿ ಹಾಕಿದವರು. ವಯಕ್ತಿಕ ಜೀವನವನ್ನು ಸಂಪೂರ್ಣವಾಗಿ ಪತ್ರಿಕೆಗೆ ಅರ್ಪಿಸಿದವರು ಮತ್ತು ಕರ್ನಾಟಕ ವಿವಿ ಸ್ಥಾಪನೆಗೆ, ಬೆಳವಣಿಗೆಗೆ ಶ್ರಮಿಸಿದವರು ಎಂದರು.

ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಉತ್ತರಿಸಿದ ಅವರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು. ಸಮಾಜದಲ್ಲಿ ತಮ್ಮ ಸುತ್ತ-ಮುತ್ತ ಇರುವ ಕುಂದು ಕೊರತೆಗಳ ಬಗ್ಗೆ ಪತ್ರಿಕೆಗಳಿಗೆ ಪತ್ರ, ಲೇಖನ ಬರೆಯುವುದನ್ನು ರೂಢಿಸಿಕೊಳ್ಳುವ ಮೂಲಕ ಪ್ರಬುದ್ಧ ಪತ್ರಕರ್ತರಾಗಿ ಹೊರಹೊಮ್ಮಲು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಷಣ್ಮುಖ ಕೋಳಿವಾಡ ದಂಪತಿಗಳನ್ನು ಶಾಲು ಹೊದೆಸಿ ಫಲಫುಷ್ಪ ನೀಡಿ ಸನ್ಮಾನಿಸಲಾಯಿತು. ಡಾ.ನಯನಾ ಗಂಗಧರಪ್ಪ ವೇದಿಕೆಯಲ್ಲಿದ್ದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥ ಪ್ರೊ. ಜೆ.ಎಂ. ಚಂದುನವರ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ವಿಚಾರಗಳನ್ನು ಇಟ್ಟುಕೊಂಡು ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಬೇಕು ಎಂದರು.

ಡಾ.ಸಂಜಯ ಕುಮಾರ ಮಾಲಗತ್ತಿ ಸ್ವಾಗತಿಸಿದರು. ಡಾ.ಶಕುಂತಲಾ ಸೊರಟೂರ, ಡಾ. ನಾಗರಾಜ ರೋಣದ, ಪತ್ರಕರ್ತರಾದ ಸುನಿಲ ಪಾಟೀಲ, ರವೀಶ ಪವಾರ, ಪ್ರೊ. ನೀಲಗುಂದ ಉಪಸ್ಥಿತರಿದ್ದರು. ಡಾ.ಮಂಜುನಾಥ ಅಡಿಗಲ್ ಕಾರ್ಯಕ್ರಮ ನಿರೂಪಿಸಿದರು.

ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳು ಸರಿಯಾದ ರೀತಿಯಲ್ಲಿ ನಡೆಯುವಂತೆ ವೈಫಲ್ಯಗಳನ್ನು ಎತ್ತಿ ತೋರಿಸುವ ಕಾರ್ಯವನ್ನು ಪತ್ರಿಕೆಗಳು ಮಾಡುತ್ತಿವೆ. ಪ್ರಾದೇಶಿಕ ಅಸಮಾನತೆ ಹಾಗೂ ಸರಕಾರದ ಅಭಿವೃದ್ಧಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಅಭಿವೃದ್ಧಿ ಪರ ಕೆಲಸ ಮಾಡುತ್ತಿವೆ ಎಂದು ಷಣ್ಮುಖ ಕೋಳಿವಾಡ ನುಡಿದರು.

ಸರಕಾರಿ ಬಸ್‌ನಲ್ಲಿ ಸಾಗಿಸುತ್ತಿದ್ದ ದಾಖಲೆ ರಹಿತ 5ಲಕ್ಷ ರೂ. ಜಪ್ತಿ

0


ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ


ಸೂಕ್ತ ದಾಖಲೆ ಇಲ್ಲದೇ ಸರಕಾರಿ ಬಸ್‌ನಲ್ಲಿ ಸಾಗಿಸುತ್ತಿದ್ದ 5ಲಕ್ಷ ರೂ ಹಣವನ್ನು ತಾಲೂಕಿನ ರಾಮಗೇರಿ ಚೆಕ್‌ಪೋಸ್ಟ್ ನಲ್ಲಿ  ಗುರುವಾರ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.


ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರ ಕಡೆ ಬರುತ್ತಿದ್ದ ಕೆಎಸ್‌ಆರ್‌ಟಸಿ ಬಸ್‌ನಲ್ಲಿ ತಪಾಸಣೆ ವೇಳೆ 5ಲಕ್ಷ ರೂ ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಧಾರವಾಡ ಜಿಲ್ಲೆಯ ಮುಗದ ಗ್ರಾಮದ ಸಯ್ಯದ್ ಅಬ್ದುಲ್‌ರಜಾಕ್ ಪೀರಜಾಧೆ ಎಂಬುವರು ಸೂಕ್ತ ದಾಖಲೆ ಇಲ್ಲದೇ ಹಣ ಸಾಗಿಸುತ್ತಿದ್ದರು.

ತಹಸೀಲ್ದಾರ, ವಾಸುದೇವ ಸ್ವಾಮಿ, ಸಿಪಿಐ ನಾಗರಾಜ್ ಮಾಡಳ್ಳಿ, ಪಿಎಸ್‌ಐ ಈರಪ್ಪ ರಿತ್ತಿ, ವಿನಾಯಕ ವೇತಾಳ, ಮಾರುತಿ ರಾಠೋಡ ಸೇರಿ ಪೊಲೀಸ್, ಕಂದಾಯ ಸಿಬ್ಬಂದಿಗಳು ಇದ್ದರು.

ಪ್ರತ್ಯೇಕ ಪ್ರಕರಣದಲ್ಲಿ 7ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಷರ ಟೆಕ್ನೊ ಶಾಲೆಯಲ್ಲಿ ಗುಬ್ಬಚ್ಚಿ ದಿನಾಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ : ಶಹರ ವಲಯದ ಅಕ್ಷರ ಟೆಕ್ನೊ ಶಾಲೆಯಲ್ಲಿ ಇತ್ತೀಚೆಗೆ ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಯಿತು. ಗುಬ್ಬಚ್ಚಿ ಚಿಕ್ಕ ಪಕ್ಷಿಯಾದರೂ, ಪರಿಸರ ಸಮತೋಲನಕ್ಕೆ ಅತ್ಯವಶ್ಯ.

`ಗುಬ್ಬಚ್ಚಿಯನ್ನು ಪ್ರೇಮಿಸೋಣ’ ಎಂಬ ಘೋಷವಾಕ್ಯದೊಂದಿಗೆ, ಬೊಂಬಿನಲ್ಲಿ ತಯಾರಿಸಿದ ಗುಬ್ಬಚ್ಚಿ ಗೂಡನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಸಂಸ್ಥಾಪಕ ವಿಜಯಕುಮಾರ್ ಹಾಲಮಠ ವಹಿಸಿದ್ದರು. ಈ ಮುಖ್ಯ ಅತಿಥಿಗಳಾಗಿ ಗದಗ ಲಯನ್ಸ್ ಕ್ಲಬ್‌ನ ಅಧ್ಯಕ್ಷ ರಮೇಶ ಶಿಗ್ಲಿ, ಪಕ್ಷಿ ತಜ್ಞ ಕಿರಣ್ ಕಮ್ಮಾರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ ಮಂಗಳೂರು, ಧನಲಕ್ಮೀ ಹಾಲಮಠ, ಲಯನ್ಸ್ ಕ್ಲಬ್‌ನ ಮಹಿಳಾ ಅಧ್ಯಕ್ಷರು, ಪದಾಧಿಕಾರಿಗಳು, ಶಾಲೆಯ ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ದಾಖಲೆ ಇಲ್ಲದ ರೂ. 4,97,600 ನಗದು ವಶಕ್ಕೆ

0

ವಿಜಯಸಾಕ್ಷಿ ಸುದ್ದಿ, ಧಾರವಾಡ : ಮಾರ್ಚ್ 25ರ ರಾತ್ರಿ 11.34 ಗಂಟೆಯ ಸುಮಾರಿಗೆ ತೇಗೂರ ಚೆಕ್ ಪೋಸ್ಟ್ನಲ್ಲಿ ಕೆಎಸ್‌ಆರ್‌ಟಿಸಿ ಬಸ್ ತಪಾಸಣೆ ಮಾಡಿದಾಗ ದಾಖಲೆ ಇಲ್ಲದ 4,97,600 ರೂ ನಗದು ಹಣ ಪತ್ತೆಯಾಗಿದ್ದು, ಹಣ ವಶಕ್ಕೆ ಪಡೆದು ಸೂಕ್ತ ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ನಿಪ್ಪಾಣಿಯಿಂದ ಭದ್ರಾವತಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಕೆಎ-14, ಎಫ್-0083 ಅನ್ನು ನಿಲ್ಲಿಸಿ, ತೇಗೂರ ಚೆಕ್ ಪೋಸ್ಟ್ನಲ್ಲಿ ಎಸ್‌ಎಸ್‌ಟಿ ಮತ್ತು ಎಫ್‌ಎಸ್‌ಟಿ ತಂಡದ ಅಧಿಕಾರಿಗಳು ತಪಾಸಣೆ ಮಾಡಿದಾಗ ಚಿಕ್ಕಮಂಗಳೂರಿನ ಮಸೂದ್ ಎಂಬ ವ್ಯಕ್ತಿ ಬಳಿ ಸೂಕ್ತ ದಾಖಲೆಗಳಿಲ್ಲದ 4,97,600 ರೂ ಹಣ ಪತ್ತೆ ಆಗಿತ್ತು. ವಿಚಾರಣೆ ನಂತರ ಹಣವನ್ನು ವಶಕ್ಕೆ ಪಡೆದು ಜಿಲ್ಲಾ ಖಜಾನೆಯಲ್ಲಿ ಠೇವಣಿ ಮಾಡಲಾಗಿದೆ.

ಜಿಲ್ಲಾ ಎಂಸಿಸಿ ನೋಡಲ್ ಅಧಿಕಾರಿ ಮೋನಾ ರಾವುತ ಮಾರ್ಗದರ್ಶನದಲ್ಲಿ ಎಸಿ ಶಾಲಂ ಹುಸೇನ್, ತಹಸೀಲ್ದಾರ ಡಾ. ಡಿ.ಎಚ್. ಹೂಗಾರ, ಎಂಸಿಸಿ ಅಧಿಕಾರಿ ಶಿವಪುತ್ರಪ್ಪ ಹೊಸಮನಿ, ಮ್ಯಾಜಿಸ್ಟ್ರೇಟ್ ಗಳಾದ ಪ್ರವೀಣ ಶಿಂಧೆ, ಮಂಜುನಾಥ ಹಿರೇಮಠ ಕ್ರಮವಹಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೂಕ್ತ ದಾಖಲೆ ಇಲ್ಲದ ಪ್ಯಾಂಟ್ ಬಟ್ಟೆ ವಶಕ್ಕೆ

0

ವಿಜಯಸಾಕ್ಷಿ ಸುದ್ದಿ, ಧಾರವಾಡ : ಮಾರ್ಚ್ 26ರ ಬೆಳಿಗ್ಗೆ ಅಗ್ರಿ ಯುನಿವರ್ಸಿಟಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆಯಲ್ಲಿ ಕಾರ್ ಒಂದರಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ ರೂ. 3,35,500 ಮೌಲ್ಯದ ಪ್ಯಾಂಟ್ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಾ.26ರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಬೆಳಗಾವಿಯಿಂದ ಗದಗ ನಗರಕ್ಕೆ ತೆರಳುತ್ತಿದ್ದ ಕೆಎ-01, ಎಂ.ಎಲ್-1243 ಸಂಖ್ಯೆಯ ಮಾರುತಿ ಸುಜುಕಿ ಏರ್ಟಿಗಾ ವಾಹನವನ್ನು ಅಗ್ರಿ ಯುನಿವರ್ಸಿಟಿ ಚೇಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡಿದಾಗ ಪ್ರಸಿದ್ದ ಕಂಪನಿಗಳ 1,342 ಪ್ಯಾಂಟ್ ಪೀಸ್ ಬಟ್ಟೆಗಳು ದೊರೆತಿವೆ. ಇವುಗಳ ಮೌಲ್ಯ ರೂ. 3,35,500 ಆಗಿದ್ದು, ಇವು ವಾಹನ ಮಾಲೀಕ ಮೋಹಮ್ಮದ ಶಾಕೀರ್ ಶಾ ಅವರಿಗೆ ಸೇರಿವೆ. ಸೂಕ್ತವಾದ ದಾಖಲೆಗಳನ್ನು ಸಲ್ಲಿಸದಿರುವದರಿಂದ ಇವುಗಳನ್ನು ಚುನಾವಣೆಗೆ ಬಳಸಬಹುದಾದ ಸಂಶಯದ ಮೇಲೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಎಸಿ ಶಾಲಂ ಹುಸೇನ್, ತಹಸೀಲ್ದಾರ ಡಾ. ಡಿ.ಎಚ್. ಹೂಗಾರ ಅವರು ಎಂಸಿಸಿ ನೋಡಲ್ ಅಧಿಕಾರಿ ಮೋನಾ ರಾವುತ್, ಶಿವಪುತ್ರಪ್ಪ ಹೊಸಮನಿ ಅವರ ಮಾರ್ಗದರ್ಶನದಲ್ಲಿ ಎಸ್.ಎಸ್.ಟಿ ಮತ್ತು ಎಫ್.ಎಸ್.ಟಿ ತಂಡಗಳ ಸದಸ್ಯರು ಚೆಕ್ ಪೊಸ್ಟ್ ತಪಾಸಣೆ ಕಠಿಣಗೊಳಿಸಿದ್ದು, ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೋಳಿ ಹಬ್ಬ ಹೊಸತನದ ಸಂಕೇತ

0

ವಿಜಯಸಾಕ್ಷಿ ಸುದ್ದಿ, ಧಾರವಾಡ : ಹೋಳಿ ಹಬ್ಬ ಬಣ್ಣದ ಸಂಕೇತ ಮಾತ್ರವಲ್ಲ, ಅದು ಬದುಕಿಗೆ ಬಣ್ಣ ತುಂಬಿ ಸಂತೋಷ ಮೂಡಿಸುವ ಹಬ್ಬವಾಗಿದೆ. ಪ್ರತಿಯೊಬ್ಬರಲ್ಲಿ ಇರುವ ಕೆಟ್ಟದನ್ನು ಕಳೆದು, ಒಳ್ಳೆಯದನ್ನು ಪಡೆದುಕೊಳ್ಳುವ ಸಂದರ್ಭವಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಅವರು ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಧಾರವಾಡ ಜಿಲ್ಲಾ ಘಟಕ ಆಯೋಜಿಸಿದ್ದ ಹೋಳಿ ಹಬ್ಬದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಭಾರತೀಯರ ಪ್ರತಿ ಹಬ್ಬಗಳಿಗೂ ಒಂದು ಐತಿಹಾಸಿಕ ಕಾರಣ, ಹಿನ್ನೋಟ, ಮುನ್ನೋಟಗಳಿವೆ. ಕಾಮದಹನ ಕೆಟ್ಟದನ್ನು ಸುಡುವ ಪ್ರತೀಕ. ಬಣ್ಣ ಹಚ್ಚಿಕೊಳ್ಳುವುದು ಉತ್ತಮ ಗುಣಗಳೊಂದಿಗೆ ಹೊಸ ಭವಿಷ್ಯ ಕಟ್ಟಿಕೊಳ್ಳುವ ಪ್ರತೀಕವಾಗಿದೆ. ಹೋಳಿ ಹಬ್ಬವನ್ನು ದೇಶದ ನಾನಾ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಆದರೆ ಉತ್ತರ ಕರ್ನಾಟಕದ ಹೋಳಿ ಆಚರಣೆ ವಿಶೇಷ ಮತ್ತು ವಿಶಿಷ್ಟವಾಗಿದೆ ಎಂದು ಅವರು ಹೇಳಿದರು.

ಹಬ್ಬಗಳನ್ನು ಉತ್ತರ ಕರ್ನಾಟಕ ಭಾಗದಲ್ಲಿ ವೈಭವ ಮತ್ತು ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಆಚರಣೆಗಳಿಗೆ ಸಂಸ್ಕೃತಿ, ಸಂಸ್ಕಾರಗಳ ಹಿನ್ನೆಲೆ ಇರುತ್ತದೆ. ಇಂದು ಜರುಗಿದ ಹೋಳಿ ಹಾಡು, ಹಾಸ್ಯ ಕಾರ್ಯಕ್ರಮಗಳು ನೀತಿ ಪಾಠವಾಗಿದ್ದವು ಎಂದರು.

ರಾಜ್ಯ ಸರಕಾರ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಿದೆ ಮತ್ತು ಲೋಕಸಭೆ ಸಾರ್ವತ್ರಿಕ ಚುನಾವಣೆ ಪ್ರಕಟವಾಗಿದೆ. ಇಂತ ಕಾರ್ಯಗಳ ಒತ್ತಡದ ಮಧ್ಯದಲ್ಲಿಯೂ ಜಿಲ್ಲೆಯ ನೌಕರರು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.

ಧಾರವಾಡ ಜಿಲ್ಲಾಡಳಿತದ ವಿವಿಧ ಅಧಿಕಾರಿಗಳು ಪರಸ್ಪರ ಬಣ್ಣಗಳನ್ನು ಎರಚಿ ಹೋಳಿ ಆಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮಂಜುನಾಥ ಯಡಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಖಜಾಂಚಿ ರಾಜಶೇಖರ ಬಾಣದ ವಂದಿಸಿದರು.

ಧಾರವಾಡ ನಗರದ ಕರ್ನಾಟಕ ರಾಜ್ಯ ನೌಕರರ ಸಂಘದ ಆವರಣದಲ್ಲಿ ಜುರುಗಿದ ಹೋಳಿ ಹಬ್ಬದಲ್ಲಿ ಜಿಲ್ಲಾದಿಕಾರಿ ದಿವ್ಯ ಪ್ರಭು ಅವರೊಂದಿಗೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲಾ ಆರ್.ಸಿ.ಎಚ್.ಓ ಅಧಿಕಾರಿ ಡಾ. ಸುಜಾತಾ ಹಸವಿಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ, ಜಿಲ್ಲಾ ನಿರೂಪಣಾಧಿಕಾರಿ ಅಂಗಡಿ, ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯ ದೇವಿದಾಸ ಶಾಂತಿಕರ, ಗೌರವಾಧ್ಯಕ್ಷ ರಮೇಶ ಲಿಂಗದಾಳ, ಹಿರಿಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ, ಸಂಘಟನಾ ಕಾರ್ಯದರ್ಶಿ ಸುಜಾತಾ ಬಡ್ಡಿ, ಪದಾಧಿಕಾರಿಗಳಾದ ಚಂದ್ರಿಕಾ ಡಮ್ಮಳ್ಳಿ, ಪುಷ್ಪಾವತಿ ಮೇದಾರ ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನೌಕರರು, ನೌಕರರ ಕುಟುಂಬ ಸದಸ್ಯರು ಸೇರಿದಂತೆ ಹಲವರು ಭಾಗವಹಿಸಿ, ಪರಸ್ಪರ ಬಣ್ಣ ಹಚ್ಚಿ, ಹೋಳಿ ಹಬ್ಬ ಆಚರಣೆ ಮಾಡಿದರು.

ಜಾನಪದ ಕಲಾ ತಂಡಗಳಾದ ಸ್ನೆಹ ರಂಗ ಕಲಾ ಬಳಗ ಮತ್ತು ಸಿರಿಗಂಧ ಕಲಾ ತಂಡಗಳು ಜಾನಪದ ಗೀತೆ ಹಾಗೂ ಹೋಳಿ ಹಬ್ಬದ ಹಾಡುಗಳನ್ನು ಹಾಗೂ ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ಅವರು ಹಾಸ್ಯಮಯ ಪ್ರಸಂಗಗಳನ್ನು ಪ್ರಸ್ತುತಪಡಿಸಿ ನೆರೆದವರನ್ನು ರಂಜಿಸಿದರು.

 

ನಿಗದಿತ ಅವಧಿಯಲ್ಲಿ ಮಾಹಿತಿ ಸಲ್ಲಿಸಿ

0

ವಿಜಯಸಾಕ್ಷಿ ಸುದ್ದಿ, ಧಾರವಾಡ : ಭಾರತ ಚುನಾವಣಾ ಆಯೋಗವು ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ವೇಳಾಪಟ್ಟಿಯನ್ನು ಘೋಷಿಸಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾಧಿಕಾರಿಗಳು, ಬೆಂಗಳೂರು ಇವರು ಕಾಲಕಾಲಕ್ಕೆ ನೀಡುವ ನಿರ್ದೇಶನಗಳಂತೆ ಚುನಾವಣಾ ಕಾರ್ಯಗಳನ್ನು ಕೈಗೊಂಡು ನಿಗದಿತ ಅವಧಿಯಲ್ಲಿ ಚುನಾವಣಾ ಮಾಹಿತಿಯನ್ನು ಆದ್ಯತೆ ಮೇರೆಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವುದು ಅವಶ್ಯವಿರುತ್ತದೆ.

ಈಗಾಗಲೇ ಸಾಕಷ್ಟು ಬಾರಿ ಈ ಕುರಿತು ತಿಳಿಸಿದಾಗ್ಯೂ ಸಹ ಕೆಲ ಅಧಿಕಾರಿಗಳು ವಿಡಿಯೋ ಸಂವಾದ, ಸಭೆಗೆ ಹಾಜರಾಗಲು ತಿಳಿಸಿದ ವೇಳೆಯಲ್ಲಿ ಹಾಜರಾಗದೇ ಗೈರು ಉಳಿಯುತಿದ್ದು, ಮೊಬೈಲ್ ಸಂಪರ್ಕ, ವಾಟ್ಸ್ಆಪ್ ಸಂದೇಶ ಹಾಗೂ ಕಚೇರಿ ದೂರವಾಣಿಯ ಸಂಪರ್ಕಕ್ಕೂ ಕೆಲವು ಅಧಿಕಾರಿಗಳು ಯಾವುದೇ ರೀತಿಯಲ್ಲಿ ಸ್ಪಂದಿಸಿರುವುದಿಲ್ಲ.

ಧಾರವಾಡ ಲೋಕಸಭಾ 11ನೇ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಯೋಜನೆಗೊಂಡಿರುವ ಎಲ್ಲ ಅಧಿಕಾರಿಗಳು ಚುನಾವಣಾ ಕರ್ತವ್ಯ ಪೂರ್ಣಗೊಳ್ಳುವವರೆಗೆ ಎಲ್ಲ ಸಮಯದಲ್ಲಿಯೂ ಮೊಬೈಲ್ ಸಂಪರ್ಕ, ವಾಟ್ಸ್ಆಪ್ ಸಂದೇಶ ಹಾಗೂ ಕಚೇರಿ ದೂರವಾಣಿಯ ಸಂಪರ್ಕದಲ್ಲಿ ಲಭ್ಯವಿದ್ದು, ಕಾರ್ಯಾಲಯದಿಂದ ಚುನಾವಣೆಗೆ ಸಂಬಂಧಿಸಿದಂತೆ ಕೋರುವ ಮಾಹಿತಿಯನ್ನು ಆದ್ಯತೆ ಮೇರೆಗೆ ತಯಾರಿಸಿ, ಯಾವುದೇ ವಿಳಂಬಕ್ಕೆ ಆಸ್ಪದ ನೀಡದೆ ಕೋರಿರುವ ಮಾಹಿತಿಯನ್ನು ತುರ್ತು ಸಲ್ಲಿಸಲು ಅಗತ್ಯ ಕ್ರಮವಹಿಸಿ ಚುನಾವಣೆಯನ್ನು ಶಾಂತಿ ಹಾಗೂ ಸುವ್ಯವಸ್ಥೆಯಿಂದ ಜರುಗಿಸಿ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ತಾರತಮ್ಯವಿಲ್ಲದಂತೆ ಕೆಲಸ ನಿರ್ವಹಿಸಿ

0

ವಿಜಯಸಾಕ್ಷಿ ಸುದ್ದಿ, ರೋಣ : ಗ್ರಾಮೀಣ ಭಾಗದಲ್ಲಿ ಬೇಸಿಗೆ ಕಾಲದಲ್ಲಿ ಕೆಲಸವಿಲ್ಲದೇ ಗುಳೆ ಹೋಗುತ್ತಾರೆ.

ಅದನ್ನು ತಪ್ಪಿಸಲು ನಿಮ್ಮೆಲ್ಲರ ಸಹಕಾರ ಬಹಳ ಮುಖ್ಯ. ಪ್ರತಿ ಮನೆಗೆ ಹೋಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಏಪ್ರಿಲ್ 1ರಿಂದ ಸಮುದಾಯ ಕಾಮಗಾರಿ ಪ್ರಾರಂಭವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿ, ಗುಳೇ ತಪ್ಪಿಸಿ ಎಂದು ಜಿಲ್ಲಾ ಮಾಹಿತಿ ಶಿಕ್ಷಣ, ಸಂವಹನ ಸಂಯೋಜಕರಾದ ವಿ.ಎಸ್. ಸಜ್ಜನ ಹೇಳಿದರು.

ರೋಣ ತಾಲೂಕಿನ ಸವಡಿ ಗ್ರಾಮ ಪಂಚಾಯತಿಯಲ್ಲಿ `ವಲಸೆ ಯಾಕ್ರೀ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ-ದುಡಿಮೆ ಖಾತ್ರಿ’ ಅಭಿಯಾನದಡಿ ಕಾಯಕ ಬಂಧುಗಳ, ಸ್ವಸಹಾಯ ಸಂಘಗಳ ಸದಸ್ಯರ, ಕೂಲಿಕಾರರ ಸಭೆಯಲ್ಲಿ ಅವರು ಮಾತನಾಡಿದರು.

ಏಪ್ರಿಲ್ 1ರಿಂದ ನಿಮ್ಮ ಗ್ರಾಮದಲ್ಲಿ ಸಮುದಾಯ ಕಾಮಗಾರಿ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈಗಾಗಲೇ ಎಲ್ಲಾ ಗ್ರಾ.ಪಂ ಅಧಿಕಾರಿಗಳಿಗೆ ಜಿ.ಪಂ ಸಿಇಓ ಅವರು ತಿಳಿಸಿದ್ದಾರೆ. ಹಾಗಾಗಿ, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆಲಸ ಪ್ರಾರಂಭವಾಗುತ್ತದೆ. ಕಾಯಕ ಬಂಧುಗಳಾದ ತಾವೆಲ್ಲರೂ ಕೂಲಿಕಾರರ ಆರ್ಥಿಕ ಸಬಲತೆಗಾಗಿ ದುಡಿಯಬೇಕು. ಬಂಧು ಅಂದರೆ ಜನರಿಗೆ ಹತ್ತಿರ ಇದ್ದವರು ಎಂದರ್ಥ. ದುಡಿಯುವ ವರ್ಗಕ್ಕೆ ಹತ್ತಿರ ಇರುವ ತಮಗೆ ಕಾಯಕ ಬಂಧುಗಳು ಎನ್ನಲಾಗುತ್ತದೆ.

ಕಡ್ಡಾಯವಾಗಿ ಈಬಾರಿ ಗ್ರಾಮ ಪಂಚಾಯಿತಿಯಿಂದ ನೋಂದಾಯಿಸಲ್ಪಟ್ಟ ಕುಟುಂಬಗಳಲ್ಲಿ ನರೇಗಾ ಯೋಜನೆಯಡಿ ಸಕ್ರಿಯವಲ್ಲದೆ ಇರುವವರನ್ನು ಗುರುತಿಸಿ ಸದರಿಯವರನ್ನು ಪಾಲ್ಗೊಳ್ಳುವಂತೆ ಮಾಡಲು ಮನೆ ಮನೆಗೆ ತೆರಳಿ ಯೋಜನೆಯಡಿ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವಂತೆ ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಶ್ರಿಂಗೇರಿ, ತಾಲೂಕಾ ಮಾಹಿತಿ ಶಿಕ್ಷಣ & ಸಂವಹನ ಸಂಯೋಜಕ ಮಂಜುನಾಥ, ಬಿಎಫ್‌ಟಿ ಈರಣ್ಣ ಬೆಲೇರಿ, ಜಿಕೆಎಮ್ ಚಾಂದಬಿ ಕರ್ನಾಚಿ, ಗ್ರಾ.ಪಂ ಸದಸ್ಯರು, ಕಾಯಕ ಬಂಧುಗಳು ಹಾಗೂ ಸಿಬ್ಬಂದಿಗಳು ಇದ್ದರು.

ಕೆಲಸದ ಸ್ಥಳದಲ್ಲಿ ನೀರು, ನೆರಳು ಸೇರಿದಂತೆ ಮಕ್ಕಳಿಗಾಗಿಯೇ ಗ್ರಾಮದಲ್ಲಿ ಕೂಸಿನ ಮನೆ ಸಹ ತೆರಯಲಾಗಿದ್ದು, ಪಾಲಕರು ಮಕ್ಕಳನ್ನು ಅಲ್ಲಿ ಬಿಟ್ಟು ಹೋಗಬೇಕು. ಅದನ್ನು ನೀವು ಜನರಿಗೆ ತಿಳಿಸಬೇಕು. ಮುಖ್ಯವಾಗಿ, ಕೆಲಸಕ್ಕೆ ಬಂದವರಿಗೆ ಅಳತೆ ತಕ್ಕ ಹಾಗೆ ಕಡೆಯುವದು ಕಡ್ಡಾಯ. ತಾರತಮ್ಯವಿಲ್ಲದಂತೆ ಕೆಲಸ ಮಾಡುವದು ತಮ್ಮ ಕರ್ತವ್ಯ ಎಂದು ವಿ.ಎಸ್. ಸಜ್ಜನ ತಿಳಿಸಿದರು.

ಗ್ರಾಹಕರಿಗೆ ನ್ಯಾಯ ಒದಗಿಸುವುದು ಆಯೋಗದ ಕರ್ತವ್ಯ

0

ವಿಜಯಸಾಕ್ಷಿ ಸುದ್ದಿ, ಗದಗ : ಗ್ರಾಹಕರಿಗೆ ಅವರ ಹಕ್ಕು ಮತ್ತು ಜವಾಬ್ದಾರಿಗಳ ಕುರಿತು ಜನಜಾಗೃತಿ ಮೂಡಿಸುವುದು ವಿಶ್ವ ಗ್ರಾಹಕರ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ ತಿಳಿಸಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಬುಧವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತç ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ `ಗ್ರಾಹಕರಿಗಾಗಿ ನ್ಯಾಯಯುತ ಮತ್ತು ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ’ ಎಂಬ ಘೋಷವಾಕ್ಯದಡಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

office

ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಹಿಡಿದು ರಾಷ್ಟçಪತಿಯವರೆಗೆ ಪ್ರತಿಯೊಬ್ಬ ವ್ಯಕ್ತಿಯೂ ಒಂದಿಲ್ಲೊಂದು ರೀತಿಯಲ್ಲಿ ಗ್ರಾಹಕರಾಗಿರುತ್ತಾರೆ. ಇಂದಿನ ದಿನಮಾನಗಳಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ( ಕೃತಕ ಬುದ್ಧಿಮತ್ತೆ) ಬಳಕೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಬೇಕಾಗುವಂತಹ ವಸ್ತುಗಳನ್ನು ಖರೀದಿ ಮಾಡಬೇಕಾಗುತ್ತದೆ. ಮೊಬೈಲ್ ಫೋನ್ ಕೂಡ ಕೃತಕ ಬುದ್ಧಿಮತ್ತೆಯ ಒಂದು ಭಾಗವಾಗಿದೆ. ಕೃತಕ ಬುದ್ಧಿಮತ್ತೆ ಸಹಾಯದಿಂದ ವೈದ್ಯಕೀಯ ಲೋಕದ ಸವಾಲುಗಳಿಗೆ ಪರಿಹಾರ, ಹವಾಗುಣ ಪರಿಸ್ಥಿತಿ, ರೂಟ್ ಮ್ಯಾಪ್ ಹೀಗೆ ಅನೇಕ ತರಹದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ.

ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ, ಆನ್‌ಲೈನ್ ಮುಖಾಂತರ ಯಾವುದಾದರೂ ವಸ್ತುಗಳನ್ನು ಖರೀದಿ ಮಾಡಿದ್ದರೆ ಅಂತಹ ಸರಕುಗಳಲ್ಲಿ ಲೋಪದೋಷಗಳು ಕಂಡುಬಂದರೆ ಅಥವಾ ಸರಬರಾಜುದಾರರು ತಪ್ಪು ಮಾಹಿತಿ ಕೊಟ್ಟಿದ್ದರೆ ಆಗ ಅವರು ಶಿಕ್ಷೆಗೆ ಒಳಗಾಗುತ್ತಾರೆ. ಕಾರಣ, ಗ್ರಾಹಕರು ಇಂದಿನ ತಂತ್ರಜ್ಞಾನದ ತಿಳುವಳಿಕೆ ಹೊಂದುವುದು ಹಾಗೂ ಬಳಕೆ ಮಾಡುವುದು ಸಹ ಅಗತ್ಯವಾಗಿದೆ. ಯಾವುದೇ ಲಿಂಗಬೇಧವಿಲ್ಲದೇ ಸಮಾನವಾಗಿ ಹಾಗೂ ಜವಾಬ್ದಾರಿಯುತವಾಗಿ ಗ್ರಾಹಕರಿಗೆ ನ್ಯಾಯ ಒದಗಿಸುವುದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾರ್ಯವಾಗಿದೆ. ಸಾಮಾಜಿಕ ಜವಾಬ್ದಾರಿ ಅರಿತು ಉತ್ಪಾದನೆ ಮತ್ತು ಮಾರಾಟ ಮಾಡುವುದು ಇಂದಿನ ಅಗತ್ಯವಾಗಿದೆ ಎಂದರು.

ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎಸ್.ಜಿ. ಪಲ್ಲೇದ ಮಾತನಾಡಿ, ಗ್ರಾಹಕರಿಗೆ ವಸ್ತುಗಳನ್ನು ಖರೀದಿಸಿದಾಗ ಮೋಸವಾದಲ್ಲಿ ಆಯೋಗದಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದರೆ ಗ್ರಾಹಕರು ಮಾರಾಟಗಾರರ ಮೇಲೆ ವೃಥಾ ಸುಳ್ಳು ಆರೋಪಗಳನ್ನು ಮಾಡಬಾರದು. ನ್ಯಾಯಯುತವಾಗಿ ವರ್ತಿಸಬೇಕಾಗುತ್ತದೆ ಎಂದು ವಿವರಿಸಿದರು.

ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯರಾದ ಯಶೋಧಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ವಿಶ್ವ ಗ್ರಾಹಕರ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ವಸ್ತು ಪ್ರದರ್ಶನ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸುರೇಖಾ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ರಾಜು ನಾಮದೇವ ಮೇತ್ರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಐ. ಹಿರೇಮನಿ ಪಾಟೀಲ, ಎಲ್.ಪಿ.ಜಿ ವ್ಯವಸ್ಥಾಪಕರು, ಕಾನೂನು ಮಾಪನ ಶಾಸ್ತç ಇಲಾಖೆಯ ಸಹಾಯಕ ನಿಯಂತ್ರಕರಾದ ಎಸ್.ಬಿ. ಪೂಜಾರಿ, ವಿವಿಧ ಇಲಾಖೆ ಅಧಿಕಾರಿಗಳು, ನ್ಯಾಯಬೆಲೆ ಅಂಗಡಿಕಾರರು, ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳು ಹಾಜರಿದ್ದರು.

column

ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಡಾ.ಹಂಪಣ್ಣ ಸಜ್ಜನ ಸ್ವಾಗತಿಸಿದರು. ಆಹಾರ ಸುರಕ್ಷತಾ ಅಧಿಕಾರಿ ಡಾ. ರಾಜೇಂದ್ರ ಗಡಾದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆಯೋಗದ ಅಧ್ಯಕ್ಷ ರಾಚಪ್ಪ ಕೆ.ತಾಳಿಕೋಟಿ ಮಾತನಾಡಿ, ಈಗ ನಾವೆಲ್ಲ ಆರ್ಟಿಫಿಶಿಯಲ್ ಇಂಟಲಿಜೆನ್ಸಿಯಲ್ಲಿ ವ್ಯವಹರಿಸುತ್ತಿದ್ದೇವೆ. ಇದರಿಂದ ಕೆಲವೊಂದು ಸಾಧಕ-ಬಾಧಕಗಳಿವೆ. ಬ್ಯಾಂಕ್, ಇನ್ಸುರೆನ್ಸ್ ಕಂಪನಿಯಲ್ಲಿನ ಸೇವೆಗಳ ಕುರಿತು ಗ್ರಾಹಕರಿಗೆ ನ್ಯೂನತೆಗಳು ಕಂಡುಬಂದಲ್ಲಿ ಅಂತರ್ಜಾಲದ ಮೂಲಕ ಸಂದೇಶಗಳನ್ನು ರವಾನಿಸಿ ಅವುಗಳ ಪ್ರಿಂಟ್ ಕಾಪಿಯನ್ನು ಹಾಗೂ ಸೇವೆಗಳ ರಸೀದಿಯನ್ನು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಹಾಜರುಪಡಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಗುರುಪ್ರಸಾದ ಮಾತನಾಡಿ, 1962ರ ಮಾರ್ಚ್ 15ರಂದು ಗ್ರಾಹಕರ ಹಕ್ಕುಗಳ ಬಗ್ಗೆ ಪ್ರಸಾಪವಾಯಿತು. 1986ರಲ್ಲಿ ಗ್ರಾಹಕರ ರಕ್ಷಣಾ ಕಾಯ್ದೆ ಜಾರಿಗೆ ಬಂದಿತು. 2019ರಲ್ಲಿ ಗ್ರಾಹಕರ ರಕ್ಷಣಾ ಕಾಯ್ದೆ ಹೊಸದಾಗಿ ಅಧಿನಿಯಮಗೊಳಿಸಲಾಯಿತು. ಗ್ರಾಹಕರಿಗೆ ವಸ್ತುಗಳನ್ನು ಖರೀದಿಸುವಾಗ ಆಯ್ಕೆ ಮಾಡುವ ಹಕ್ಕು, ಅವುಗಳ ಗುಣಮಟ್ಟಗಳ ಕುರಿತು ತಿಳಿಯುವ ಹಕ್ಕು ಹಾಗೂ ಮೋಸ ಹೋದರೆ ಪರಿಹಾರ ಪಡೆಯುವ ಹಕ್ಕು ಕೂಡ ಇರುತ್ತದೆ. ಈ ಹಕ್ಕುಗಳ ಕುರಿತು ಗ್ರಾಹಕರು ತಿಳುವಳಿಕೆ ಹೊಂದಬೇಕು ಎಂದು ವಿವರಿಸಿದರು.

error: Content is protected !!