ಉಡುಪಿ: ಬಿಹಾರ ವಿಧಾನಸಭೆ ಚುನಾವಣೆಯ ಸ್ಪಷ್ಟ ಫಲಿತಾಂಶ ಬಹುತೇಕ ಪ್ರಕಟವಾದಂತಿದೆ. ಎನ್ಡಿಎ ಒಕ್ಕೂಟ ಬರೋಬ್ಬರಿ 199 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆ ಮೂಲಕ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ಗೆ ಭಾರೀ ಮುಖಭಂಗ ಆಗಿದೆ. ಇನ್ನೂ ಈ ವಿಚಾರವಾಗಿ ಬಿಜೆಪಿ ಶಾಸಕ ಸುನಿಲ್ ಕುಮಾರ್ ಪ್ರತಿಕ್ರಿಯೇ ನೀಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ನಮೋ’ ಆಡಳಿತವನ್ನು ಬಿಹಾರದ ಜನ ಒಪ್ಪಿದ್ದಾರೆ. ಇವಿಎಂ ಸರಿಯಿಲ್ಲ, ಮತಪಟ್ಟಿ ಸರಿ ಇಲ್ಲ ಎನ್ನುತ್ತಿದ್ದ ಕಾಂಗ್ರೆಸ್ ಈಗ ಮತದಾರರೇ ಸರಿ ಇಲ್ಲ ಎನ್ನುವ ಮನಸ್ಥಿತಿಗೂ ಬರಬಹುದು ಎಂದು ಲೇವಡಿ ಮಾಡಿದ್ದಾರೆ.
ಮಹಾಘಟಬಂಧನ್ ಗೆದ್ದು ದೇಶದಲ್ಲಿ ಏನೋ ಮಾಡಲು ಹುನ್ನಾರ ನಡೆಸಿದ್ದರು. ಎಡಪಂಥೀಯರ ಕೆಟ್ಟ ತಂತ್ರಗಳು ಕಾರ್ಯರೂಪಕ್ಕೆ ಬರಲಿಲ್ಲ. ಬಿಹಾರ ಫಲಿತಾಂಶ ಕರ್ನಾಟಕದ ನವಂಬರ್ ಕ್ರಾಂತಿಯ ಮೇಲೆ ಯಾವ ಪರಿಣಾಮ ಬೀಳುತ್ತದೆ ಎಂಬ ಕುತೂಹಲವಿದೆ ಎಂದರು.
ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದ ಪರಿಸ್ಥಿತಿಯನ್ನು ಕಾಂಗ್ರೆಸ್ ನಿರ್ಮಾಣ ಮಾಡಿದೆ. ನವೆಂಬರ್ ಕ್ರಾಂತಿ ಅಂತ ಹೇಳಿದ್ದು ಕಾಂಗ್ರೆಸ್. ಕಾಂಗ್ರೆಸ್ನೊಳಗೆ ಬೇಗುದಿ ಶುರುವಾಗಿದೆ. ಕಾಂಗ್ರೆಸ್ ಇಬ್ಭಾಗ ಆಗುತ್ತಾ? ಒಂದು ಗುಂಪು ಒಡೆದು ಎಲ್ಲಿಗೆ ಹೋಗುತ್ತದೆ ನೋಡಬೇಕು. ಹೈಕಮಾಂಡ್ ಯಾರ ಪರವಾಗಿ ನಿಲ್ಲುತ್ತದೆ? ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುತ್ತಾರಾ? ಡಿಕೆಶಿ ಅಧಿಕಾರಕ್ಕೆ ಬರುತ್ತಾರ ಈ ಎಲ್ಲ ಚರ್ಚೆಗಳು ಕಾಂಗ್ರೆಸ್ನೊಳಗೆ ನಡೆಯುತ್ತಿದೆ ಎಂದು ಹೇಳಿದರು.


