ಮಂಗಳೂರು: ನಗರದ ಹೊರವಲಯದ ಪಣಂಬೂರು ಸಿಗ್ನಲ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿ ಮೂವರು ದುರ್ದೈವಿಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಸಿಗ್ನಲ್ನಲ್ಲಿ ಟ್ಯಾಂಕರ್ ಹಿಂದೆ ಕಾರು ಮತ್ತು ಆಟೋ ನಿಂತಿದ್ದ ವೇಳೆ, ಹಿಂಬದಿಯಿಂದ ವೇಗವಾಗಿ ಬಂದ ಮತ್ತೊಂದು ಟ್ಯಾಂಕರ್ ಆಟೋಗೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಆಟೋ ಎದುರಿನ ಕಾರಿಗೆ ಅಪ್ಪಳಿಸಿತು. ನಂತರ ಆ ಕಾರು ಮತ್ತೊಂದು ಟ್ಯಾಂಕರ್ಗೆ ಗುದ್ದಿ ಭಯಾನಕ ಸರಣಿ ಅಪಘಾತಕ್ಕೆ ಕಾರಣವಾಯಿತು. ಈ ದುರಂತದಲ್ಲಿ ಆಟೋ ಚಾಲಕ ಸೇರಿದಂತೆ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನೊಂದೆಡೆ, ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸರ್ಕಲ್ ಬಳಿ ಮತ್ತೊಂದು ದುರಂತ ಸಂಭವಿಸಿದ್ದು, ಕಾರು ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ. ಬೆಂಗಳೂರು ಪೀಣ್ಯ ಮೂಲದ 64 ವರ್ಷದ ರವಿ, 23 ವರ್ಷದ ರಮ್ಯಾ ಹಾಗೂ 75 ವರ್ಷದ ನಂಜಮ್ಮ ಮೃತರು ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಇನ್ನೋವಾ ಕಾರಿನಲ್ಲಿ ಉಡುಪಿ ಶ್ರೀಕೃಷ್ಣ ಮಠಕ್ಕೆ ದರ್ಶನಕ್ಕಾಗಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.


