Home Blog Page 2

ಕೋಟ್ಪಾ ಕಾಯ್ದೆ ಉಲ್ಲಂಘನೆ ವಿರುದ್ಧ ಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಥೋಡ ಅವರ ಮಾರ್ಗದರ್ಶನದಲ್ಲಿ ಮಾರ್ಚ್ ತಿಂಗಳಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳ ಹಾಗೂ ತಾಲೂಕಾ ತಂಬಾಕು ನಿಯಂತ್ರಣ ತನಿಖಾ ದಳ ಗದಗ, ಮುಂಡರಗಿ, ರೋಣ, ವತಿಯಿಂದ ಗದಗ ನಗರದ ಮುಳಗುಂದ ನಾಕಾ, ಜಿಲ್ಲಾ ಆಸ್ಪತ್ರೆ ಆವರಣ, ಅಂಜುಮನ್ ಕಾಲೇಜು ಎದುರು, ಹಾತಲಗೆರಿ ನಾಕಾ, ಅಡವಿಸೊಮಪುರ, ಲಕ್ಕುಂಡಿ, ಮುಂಡರಗಿ, ಗಜೇಂದ್ರಗಡ, ಮುಂಡರಗಿ-ಕೊರ್ಲಳ್ಳಿ ಕ್ರಾಸ್, ಡಂಬಳ ಇತ್ಯಾದಿ ಸ್ಥಳಗಳಲ್ಲಿ ಕೋಟ್ಪಾ ದಾಳಿ ಹಮ್ಮಿಕೊಳ್ಳಲಾಯಿತು.

ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-2003ರ ಕುರಿತು ಸಾರ್ವಜನಿಕರಲ್ಲಿ ಹಾಗೂ ಅಂಗಡಿಕಾರರಲ್ಲಿ ಜಾಗೃತಿ ಮೂಡಿಸಲಾಯಿತು. ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳಿಂದ ದೂರವಿರುವಂತೆ, ಚಟಕ್ಕೆ ಬಲಿಯಾಗದಂತೆ ಜಾಗ್ರತಿ ಮೂಡಿಸುವ ಉದ್ದೇಶದಿಂದ ಶಾಲಾ ಕಾಲೇಜು ಆವರಣದಿಂದ 100 ಗಜದವರೆಗೆ ತಂಬಾಕು ಮಾರಾಟ ನಿಷೇಧ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಕುರಿತು ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕ ಬಿತ್ತರಿಸುವದು ಆ ಸ್ಥಳದ ಮಾಲೀಕರ ಜಾವಾಬ್ದಾರಿಯಾಗಿರುತ್ತದೆ.

news

ಕೆಲವು ಅಂಗಡಿಗಳ ಹಿಂದೆ ಧೂಮಪಾನ ಅಡ್ಡಾಗಳನ್ನು ಮಾಡಿಕೊಂಡಿರುವವರ ವಿರುದ್ಧ ಕೂಡಾ ಕ್ರಮ ವಹಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವದರಿಂದ ಅಮಾಯಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವದು ಕಂಡು ಬಂದಿದೆ. ತಂಬಾಕು ಕುರಿತ ಜಾಹೀರಾತು ನಿಷೇಧಿಸುವದು, 18 ವರ್ಷದೋಳಗಿನವರಿಗೆ ತಂಬಾಕು ಮಾರಾಟ ನಿಷೇಧಿಸುವದು, ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಶೇ. ೮೫ರಷ್ಟು ಆರೋಗ್ಯ ಎಚ್ಚರಿಕೆ ಚಿಹ್ನೆ ಕಡ್ಡಾಯ ಈ ಕುರಿತು ಮಾಹಿತಿ ಹಾಗೂ ಜಾಗೃತಿ ಮೂಡಿಸಿ ಉಲ್ಲಂಘನೆ ಮಾಡಿದವರ ವಿರುದ್ಧ ಎಚ್ಚರಿಕೆ ನೀಡಿ ಒಟ್ಟು 83 ಪ್ರಕರಣ ದಾಖಲಿಸಿ, ರೂ. 16350 ದಂಡ ಸಂಗ್ರಹಿಸಲಾಯಿತು. ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಅದರ ಉಪಯೋಗಕ್ಕೆ ಕೋಟ್ಪಾ ಕಾಯ್ದೆ ಅಡಿಯಲ್ಲಿ ಅವಕಾಶವಿದ್ದು, ಅದನ್ನು ಉಲ್ಲಂಘಿಸಿದಲ್ಲಿ ಕಾನೂನು ರೀತಿ ಕ್ರಮ ವಹಿಸಲಾಗುವದು.

ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ಗೋಪಾಲ ಸುರಪುರ, ಪೊಲೀಸ್ ಇಲಾಖೆಯ ಬಿ.ಎನ್. ಚಳಗೆರಾ, ಎಂ.ಆಯ್. ಮುಲ್ಲಾ, ಎಎಸ್‌ಐ ಕುಮಾರಸ್ವಾಮಿ, ಸಚಿನ್, ರೇಷ್ಮಾ, ಬೇಗಂ, ನದಾಫ್, ವೈ.ಎನ್. ಕಡೆಮನಿ, ಮಂಜುಳಾ ಸಜ್ಜನ್, ತಾಲೂಕಾ ಆರೊಗ್ಯ ಶಿಕ್ಷಣಾಧಿಕಾರಿ ಮುಂಡರಗಿ, ಎಂ. ಎಂ. ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು.

ವೆಂಕಟೇಶ್ವರ ದೇವಸ್ಥಾನದ ಕಳಸಾರೋಹಣ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಮೀಪದ ಜಕ್ಕಲಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಕಳಸಾರೋಹಣ ಮತ್ತು ನೂತನವಾಗಿ ಜೀರ್ಣೋದ್ಧಾರಗೊಂಡ ದೇವಸ್ಥಾನದ ಲೋಕಾರ್ಪಣೆ ಸಮಾರಂಭವು ಮಂಗಳವಾರ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿದವು.

ಬೆಳಿಗ್ಗೆ ನವಗ್ರಹ ಸಹಿತ ಲಕ್ಷ್ಮಿ ನಾರಾಯಣ ಹೋಮದೊಂದಿಗೆ ಧಾರ್ಮಿಕ ಕಾರ್ಯಗಳು ಪ್ರಾರಂಭಗೊಂಡವು. ಕಳಸಾರೋಹಣಕ್ಕೂ ಮುನ್ನ ಗ್ರಾಮದ ಶ್ರೀ ಹನುಮಂತ ದೇವಸ್ಥಾನದಿಂದ ವೆಂಕಟೇಶ್ವರ ದೇವಸ್ಥಾನದವರೆಗೆ ಕಳಸವನ್ನು ಮೆರವಣಿಗೆಯಲ್ಲಿ ಪೂರ್ಣ ಕುಂಭದೊಂದಿಗೆ ತರಲಾಯಿತು.

ventesha

ಈ ಎಲ್ಲ ಧಾರ್ಮಿಕ ಕಾರ್ಯಗಳ ನೇತೃತ್ವವನ್ನು ಬಳೂಟಗಿಯ ವೆಂಕಟೇಶಾಚಾರ್ ವಹಿಸಿಕೊಂಡಿದ್ದರು.
ಕಲಿಯುಗದಲ್ಲಿ ಇಂತಹ ಧಾರ್ಮಿಕ ಕಾರ್ಯಗಳ ಆಚರಣೆಯಿಂದ ಭಗವಂತನ ಒಲುಮೆ ಸಾಧ್ಯವಿದೆ. ಇಂತಹ ಮಹತ್ಕಾರ್ಯವನ್ನು ಮಾಡಿದ ಸುರೇಶ ಕುಲಕರ್ಣಿ ಮತ್ತು ದೇವಸ್ಥಾನದ ಜೋಷಿ ಬಂಧುಗಳಿಗೂ ಅನಂತ ಕೃತಜ್ಞತೆಗಳು ಸಮರ್ಪಿತವಾಗುತ್ತವೆ ಎಂದು ವೆಂಕಟೇಶಾಚಾರ್ ಹೇಳಿದರು.

 

ಜಕ್ಕಲಿಯ ಜೋಷಿ ಮನತೆನದವರಾದ ನರಸಿಂಹಾಚಾರ್, ಕೃಷ್ಟಾಚಾರ್, ಗೋವಿಂದಾಚಾರ್ ಲಕ್ಷ್ಮಿಬಾಯಿ, ಅಂಬಾಬಾಯಿ, ರಂಗಾಚಾರ್ ಮುಂತಾದವರು ಪ್ರತಿ ವರ್ಷವೂ ಶ್ರೀ ವೆಂಕಟೇಶನ ದರುಶನಕ್ಕೆ ತಿರುಪತಿಗೆ ಹೋಗಿ ಬರುತ್ತಿದ್ದರು. ಕಾಡು-ಮೇಡು ಅಲೆದು ಶ್ರೀ ವೆಂಕಟೇಶ್ವರನ ದರುಶನ ಪಡೆದು ಬರುವುದು ಸಾಹಸದ ಕೆಲಸವೇ ಆಗಿತ್ತು. ಸರಿಸುಮಾರು ಎರಡು ಶತಮಾನಗಳ ಹಿಂದೆ ಹೀಗೇ ತಿರುಪತಿಗೆ ಹೋಗಿ ಬರುವಾಗ ಮನೆಯ ಹಿರಿಯರಾದ ನರಸಿಂಹಾಚಾರ ವೆಂಕಟೇಶನಲ್ಲಿ, ಸ್ವಾಮೀ! ಇಷ್ಟು ದಿನ ನಮ್ಮ ಮೈಯಲ್ಲಿ ಶಕ್ತಿ ಇತ್ತು. ಹೇಗೋ ನಿನ್ನ ಸನ್ನಿಧಿಗೆ ಬಂದು ಹೋಗುತ್ತಿದ್ದೆವು. ಆದರೆ ಈಗ ನಮಗೂ ವಯಸ್ಸಾಗುತ್ತ ಬಂತು.

ಮುಂದಿನ ಸಾರೆ ನಮಗೆ ನಿನ್ನ ಸನ್ನಿಧಿಗೆ ಬರಲು ಆಗುತ್ತದೆಯೋ ಇಲ್ಲವೋ. ಅದಕ್ಕಾಗಿ ಭಕ್ತ ವತ್ಸಲನೆಂಬ ಹೆಸರು ಪಡೆದಿರುವ ನೀನೇ ಯಾಕೆ ಇಲ್ಲಿಗೆ ಬಂದಿರಬಾರದು? ಎಂದು ಬೇಡಿಕೊಂಡರು.

ದಾರಿ ಮಧ್ಯದಲ್ಲಿ ಬೇಡಿಕೊಂಡ ಅವರ ಬೇಡಿಕೆ ಊರು ಸಮೀಪಿಸುತ್ತಿದ್ದ ಹಾಗೆ ಪೂರ್ಣಗೊಂಡಿತು. ಇವರು ಯಾತ್ರೆಗೆಂದು ಹೊತ್ತೊಯ್ದಿದ್ದ ಜೋಳಿಗೆಯಲ್ಲಿ ದಾರಿ ಮಧ್ಯದ ಉಪಹಾರಕ್ಕೆಂದು ಇರಿಸಿಕೊಂಡಿದ್ದ ಒಂದು ಅರಳು ಹಿಟ್ಟಿನ ಗಂಟಿತ್ತು. ಅದು ಊರು ಸಮೀಪಿಸದಂತೆ ಭಾರವಾಗತೊಡಗಿತು. ಗಂಟನ್ನು ಹೊತ್ತಿದ್ದವರು ಅಚ್ಚರಿಪಟ್ಟರು. ಈವರೆಗೆ ಹಗುರವಾಗಿದ್ದ ಈ ಗಂಟು ಇಷ್ಟೊಂದು ಭಾರವಾಗುತ್ತಿದೆಯಲ್ಲ ಎನ್ನುತ್ತ ಮನೆಗೆ ಬಂದು ಬಿಚ್ಚಿ ನೋಡಿದರೆ ಅದರಲ್ಲಿ ಕರಿ ಶಿಲೆಯ ವೆಂಕಟೇಶನ ಮೂರ್ತಿಯಿತ್ತು.

ನಂತರ, ಊರ ಮಧ್ಯದಲ್ಲಿನ ದಿಬ್ಬದಲ್ಲಿ ಪ್ರತಿಷ್ಠಾಪಿಸಿ ಚಿಕ್ಕದೊಂದು ಗುಡಿ ನಿರ್ಮಿಸಿ ಪೂಜಿಸತೊಡಗಿದರು. ಮೊದಲು ಕೇವಲ ಒಂದು ಚೋಟಿನಷ್ಟು ಅಳತೆಯಿದ್ದ ವೆಂಕಟೇಶ ದಿನಗಳೆದಂತೆ ಬೆಳೆಯುತ್ತ ಬಂದ. ಈಗ ಶ್ರೀ ವೆಂಕಟೇಶನ ಎತ್ತರ ಏನಿಲ್ಲವೆಂದರೂ ಮೂರು-ಮೂರುವರೆ ಅಡಿಯವರೆಗಿದೆ. ಇದು ಭಗವಂತನ ಪವಾಡವಲ್ಲದೆ ಇನ್ನೇನು ಎನ್ನುತ್ತಾರೆ ಸಂಗಮೇಶ ಮೆಣಿಸಿಗಿ ಮತ್ತು ಜಕ್ಕಲಿಯ ಗ್ರಾಮಸ್ಥರು.

 

1984ರಲ್ಲಿ ನಿರ್ಮಾಣಗೊಂಡ ದೇವಸ್ಥಾನ ಕಾಲನ ಹೊಡೆತಕ್ಕೆ ಸಿಕ್ಕು ಜರ್ಜರಿತವಾಗಿತ್ತು. ಆಗ ಜಕ್ಕಲಿಯವರೇ ಆದ ಸುರೇಶ ಕುಲಕರ್ಣಿ ಈ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ನಮ್ಮೊಂದಿಗೆ ಚರ್ಚಿಸಿ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾದರು. ದೇವಸ್ಥಾನದ ನೂತನ ರೂಪವನ್ನು ಕಂಡು ಆನಂದವಾಗಿದೆ.
– ಶ್ರೀನಿವಾಸ ವೆಂಕಣ್ಣಾಚಾರ್ ಜೋಷಿ, ಜಕ್ಕಲಿ.

 

ಒಂದಿನ ನಮ್ಮ ಬಂಧುಗಳೊಂದಿಗೆ ಇದೇ ದೇವಸ್ಥಾನದಲ್ಲಿ ಊಟಕ್ಕೆ ಕುಳಿತಿದ್ದೆವು. ಆ ಸಮಯದಲ್ಲಿ ಜೋರಾಗಿ ಮಳೆ ಸುರಿದು ಕಾರ್ಯಕ್ಕೆ ಅಡ್ಡಿಯಾಯಿತು. ಅಂದೇ ನಾನು ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕೆಂದುಕೊಂಡೆ. ಸ್ವಪ್ನದಲ್ಲಿ ಸ್ವಾಮಿಯು ಬಂದು ನೀನು ಕೆಲಸವನ್ನು ಪ್ರಾರಂಭಿಸು, ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳಿದಂತಾಯಿತು. ಮರುದಿನ ಜೋಷಿಯವರನ್ನು ಭೇಟಿಯಾಗಿ ವಿಷಯ ತಿಳಿಸಿ ಒಪ್ಪಿಗೆ ಕೇಳಿದೆ. ಅವರೂ ತಕ್ಷಣ ಒಪ್ಪಿಗೆ ನೀಡಿ, ಜೋಷಿ ಬಂಧುಗಳು ಮತ್ತು ಕುಲಕರ್ಣಿ ಬಂಧುಗಳು ಆರ್ಥಿಕ ನೆರವನ್ನೂ ನೀಡಿದರು. ಇದೆಲ್ಲವೂ ಸ್ವಾಮಿಯ ಕೃಪೆಯಿಂದ ಆದದ್ದು.
-ಸುರೇಶ ಕುಲಕರ್ಣಿ.
ದೇವಸ್ಥಾನದ ಜೀರ್ಣೋದ್ಧಾರಕ.

ಕಡ್ಡಾಯ ಮತದಾನ ನಮ್ಮ ಹಕ್ಕು

0

ವಿಜಯಸಾಕ್ಷಿ ಸುದ್ದಿ, ನರಗುಂದ : ಮೇ 7ರ ಮತದಾನದ ದಿನದಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ನರಗುಂದ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ನರಗುಂದ ತಹಸೀಲ್ದಾರ ಶ್ರೀಶೈಲ್ ತಳವಾರ ಹೇಳಿದರು.

ನರಗುಂದ ನಗರದಲ್ಲಿ ಗದಗ ಜಿಲ್ಲಾ ಮತ್ತು ನರಗುಂದ ತಾಲೂಕು ಚುನಾವಣೆ ಸ್ವೀಪ್ ಸಮಿತಿ, ವಿವಿಧೋದ್ದೇಶ ಪುನರ್ ವಸತಿ (MRW) ಮತ್ತು ಗ್ರಾಮೀಣ ಪುನರ್ ವಸತಿ (VRW) ಹಾಗೂ ತಾಲೂಕು ಪಂಚಾಯತ ನರಗುಂದ ವತಿಯಿಂದ ಹಮ್ಮಿಕೊಂಡಿದ್ದ `ಸಾರ್ವಜನಿಕರಿಗೆ ಮತದಾನ ಜಾಗೃತಿ ಜಾಥಾ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಲೋಕಸಭೆ ಚುನಾವಣೆಯಲ್ಲಿ ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ನಮ್ಮ ಹಕ್ಕು, ನಮ್ಮ ಇಷ್ಟದ ಅಭ್ಯರ್ಥಿಗೆ ಮತ ಚಲಾಯಿಸುವ ಕೆಲಸ ನಮ್ಮದಾಗಬೇಕು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶೇ.100ರಷ್ಟು ಮತದಾನ ಮಾಡಿದರೆ ಮಾತ್ರ ಪ್ರಜಾಪ್ರಭುತ್ವದ ಪ್ರಾಮುಖ್ಯತೆಗೆ ಅರ್ಥ ಬರುತ್ತದೆ. ಹೆದರಿಕೆ-ಬೆದರಿಕೆಗೆ ಅಂಜದೇ ಧೈರ್ಯವಾಗಿ ಮತವನ್ನು ಚಲಾಯಿಸಿ, ಸಂವಿಧಾನ ನೀಡಿರುವ ಹಕ್ಕನ್ನು ಚಲಾಯಿಸಿ ಎಂದರು.

ಜಾಗೃತಿ ಜಾಥಾದಲ್ಲಿ ಭಾಗವಹಿಸಿದ ಆಶಾ ಕಾರ್ಯಕರ್ತೆಯರು, ಅಧಿಕಾರಿ-ಸಿಬ್ಬಂದಿ ವರ್ಗದವರಿಗೆ ತಾ.ಪಂ ಮಾಹಿತಿ ಮತ್ತು ಶಿಕ್ಷಣ ಸಂಯೋಜಕ ಸುರೇಶ ಬಾಳಿಕಾಯಿ ಮತದಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ನಗರದ ಪುರಸಭೆ ಮುಖ್ಯ ಕಚೇರಿಯಿಂದ ಮತದಾನ ಜಾಗೃತಿ ಜಾಥಾ ಆರಂಭವಾಗಿ ನಗರದ ಟಿಎಂಸಿ ರೋಡ್, ಸರ್ವಜ್ಞ ಸರ್ಕಲ್, ಹುಬ್ಬಳ್ಳಿ-ಬಿಜಾಪುರ ಹೆದ್ದಾರಿ ಮೂಲಕ ಸಂಚರಿಸಿ ನಗರದ ಶಿವಾಜಿ ಸರ್ಕಲ್‌ವರೆಗೆ ಸಾಗಿತು.

ಜಾಥಾದಲ್ಲಿ ನರಗುಂದ ಚುನಾವಣಾಧಿಕಾರಿ ಡಾ. ಹಂಪಣ್ಣ ಸಜ್ಜನ ತಾ.ಪಂ ಸಿಬ್ಬಂದಿ ವರ್ಗ, MRW, VRW ಕಾರ್ಯಕರ್ತರು ಹಾಜರಿದ್ದರು.

ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾ.ಪಂ ನರಗುಂದದ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ ಮಾತನಾಡಿ, ಸಾರ್ವಜನಿಕರು ಮತದಾನದಿಂದ ತಪ್ಪಿಸಿಕೊಳ್ಳದೇ ತಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಕಡ್ಡಾಯವಾಗಿ ಮತ ಚಲಾಯಿಸಿಬೇಕೆಂದು ತಿಳಿಸಿದರು.

 

ಚುನಾವಣಾ ಬಹಿಷ್ಕಾರದ ಎಚ್ಚರಿಕೆ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಕಳೆದ 40 ವರ್ಷಗಳಿಂದ ಗ್ರಾಮಕ್ಕೆ ಅಗತ್ಯವಿರುವ ಮೂಲಭೂತ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿರ್ಲಕ್ಷ್ಯ ತೋರಿರುವ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಸಮೀಪದ ತಿಮ್ಮಾಪೂರ ಗ್ರಾಮಸ್ಥರು, ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬುಧವಾರ ಧರಣಿ ಸತ್ಯಾಗ್ರಹ ಆರಂಭಿಸಿದರು.

ಮುಂಜಾನೆ 11ಕ್ಕೆ ಚಕ್ಕಡಿ,ಟ್ರ್ಯಾಕ್ಟರ್ ಗಳನ್ನು ಗದಗ-ಯಲಬುರ್ಗಾ ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಿ ಪ್ರತಿಭಟನೆ ಆರಂಭಿಸಲಾಯಿತು. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.

ಧರಣಿ ಕೈಬಿಡುವಂತೆ ಗದಗ ಗ್ರಾಮೀಣ ಪೊಲೀಸರು ರೈತ ಸಂಘದ ಮುಖಂಡರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಕೆಲಕಾಲ ಗದ್ದಲದ ವಾತವಾರಣ ಸೃಷ್ಟಿಯಾಯಿತು.

ಪಿಎಸ್‌ಐ ವಿ.ಎಮ್. ನದಾಫ, ಧರಣಿ ಮಾಡಲು ಪೊಲೀಸ್ ಠಾಣಿಯಿಂದ ಪರವಾನಿಗೆ ತೆಗೆದುಕೊಂಡಿಲ್ಲ, ಈಗ ಚುನಾವಣೆ ನೀತಿ ಸಂಹಿತೆ ಜಾರಿಯಿರುವುದರಿಂದ ಪ್ರತಿಭಟನೆ ಮಾಡುವಂತಿಲ್ಲ ಎಂದರು. ಈ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ರೈತ ಮುಖಂಡರು, ನಾವು ಡಿ.ಸಿ ಅವರನ್ನು ಸಂಪರ್ಕಿಸಿ, ಮನವಿ ಸಲ್ಲಿಸಿ ಧರಣಿ ಮಾಡುವುದಾಗಿ ತಿಳಿಸಿದ್ದೇವೆ. ಅದರ ಪ್ರತಿಯನ್ನು ಸಹ ಪೊಲೀಸ್ ಠಾಣೆಗೆ ಕೊಟ್ಟಿದ್ದೇವೆ. ನಾವು ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಧಿಕ್ಕಾರ ಕೂಗಿದರು.

ಸೋಮವಾರ ಡಿ.ಸಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದು, ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ, ದಂಡಾಧಿಕಾರಿಗಳು, ಹಾಗೂ ತಾ.ಪಂ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಸಂಧಾನ ಸಭೆ ನಡೆಸಿದರು.

ತರುವಾಯ, ಅಧಿಕಾರಿಗಳು ಪತ್ರಿಕೆಯಲ್ಲಿ ಚುನಾವಣೆ ಬಹಿಷ್ಕಾರದಿಂದ ಹಿಂದೆ ಸರಿದಿದ್ದಾರೆ ಎಂದು ಸುಳ್ಳು ಪ್ರಕಟಣೆ ನೀಡಿದ್ದಾರೆ. ಧರಣಿ ಸ್ಥಳಕ್ಕೆ ಡಿ.ಸಿ ಅವರು ಬರಬೇಕು, ಅಧಿಕಾರಿಗಳು ಕ್ಷಮೆ ಯಾಚಿಸಬೇಕು ಎಂದು ರಾಜ್ಯ ರೈತ ಸಂಘಧ ಜಿಲ್ಲಾದ್ಯಕ್ಷ ಯಲ್ಲಪ್ಪ ಬಾಬರಿ, ಗ್ರಾಮ ಘಟಕದ ಅಧ್ಯಕ್ಷ ಹುಚ್ಚೀರಪ್ಪ ಜೊಗೀನ ಆಕ್ರೋಶ ವ್ಯಕ್ತ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಮಧ್ಯ ಭಾಗದಲ್ಲಿರುವ ಮದ್ಯದಂಗಡಿಯ ಪರವಾನಿಗೆ ರದ್ದುಗೊಳಿಸಬೇಕು. ಇದರಿಂದ ಯುವಕರು, ನಮ್ಮ ಪತಿಯರು ಮಧ್ಯವ್ಯಸನಿಗಳಾಗಿ ಹಾಳಾಗುತ್ತಿದ್ದಾರೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ 50 ಕ್ಕೂ ಹೆಚ್ಚು ಜನ ಮಹಿಳೆಯರು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರಳಿ, ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಜೀರಸಾಬ ತಳಕಲ್ಲ, ಕಳಕಪ್ಪ ಕ್ಯಾದಗುಂಪಿ, ಹುಚ್ಚಪ್ಪ ನಿಂಗಣ್ಣವರ, ಮಹಾದೇವಪ್ಪ ಕೋರಿ, ಅಂದಪ್ಪ ಕೋಳೂರು ಸೇರಿದಂತೆ ಗ್ರಾಮದ ಗಣ್ಯರು, ಗ್ರಾ.ಪಂ ಸದಸ್ಯರು ಭಾಗವಹಿಸಿದ್ದರು.

ಧರಣಿ ಹಿಂದಕ್ಕೆ
ಗ್ರಾಮದ ಬೇಡಿಕೆಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳಿಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗವುದು ಎಂದು ಉಪ ತಹಸೀಲ್ದಾರ ಜಯಪ್ರಕಾಶ ಭಜಂತ್ರಿ ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರು, ಚುನಾವಣೆಗೂ ಮುನ್ನವೇ ಕಾಮಗಾರಿಗಳು ಆರಂಭವಾಗಬೇಕು. ತಪ್ಪಿದಲ್ಲಿ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿ ಪ್ರಭಟನೆಯನ್ನು ಮುಕ್ತಾಯಗೊಳಿಸಿದರು.

 

ಗ್ರಾಮದ ಹಲವು ಸಮಸ್ಯೆಗಳ ಬಗ್ಗೆ ಕಳೆದ ೪೦ ವರ್ಷಗಳಿಂದ ಸರಕಾರದ ಗಮನಕ್ಕೆ ತಂದರೂ ಕಾಳಜಿ ವಹಿಸಿಲ್ಲ. ಹೀಗಾಗಿ ಧರಣಿ ಸತ್ಯಾಗ್ರಹ ಮುಂದುವರೆಸಿ ಚುನಾವಣೆ ಬಹಿಷ್ಕಾರ ಮಾಡುತ್ತೇವೆ. ಸತ್ಯಾಗ್ರಹ ಕೈಬಿಡುವಂತೆ ಪೊಲೀಸರು ದೌರ್ಜನ್ಯವೆಸಗುತ್ತಿದ್ದು, ನಮ್ಮನ್ನು ಬಂಧಿಸಿದರೂ ಪ್ರತಿಭಟನೆ ಕೈಬಿಡುವುದಿಲ್ಲ.
– ಯಲ್ಲಪ್ಪ ಬಾಬರಿ.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರು.

ಶೃದ್ಧಾ-ಭಕ್ತಿಯಿಂದ ಜರುಗಿದ ಜಿಂದೆ ಶ್ಯಾವಲಿ ಉರುಸು

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಪವಾಡ ಪುರುಷ ಹಜರತ್ ಜಿಂದೆ ಶ್ಯಾವಲಿಯವರ 56ನೇ ಉರುಸು ಉತ್ಸವ ಬುಧವಾರ ಸಾವಿರಾರು ಹಿಂದೂ-ಮುಸಲ್ಮಾನರ ಶೃದ್ಧಾ ಭಕ್ತಿಯ ನಡುವೆ ಸಂಭ್ರಮದಿಂದ ಜರುಗಿತು. ಮುಸ್ಲಿಮ್ ಜಮಾತ ಅಂಜುಮನ್ ಏ ಇಸ್ಲಾಮ್ ಕಮಿಟಿಯ ಆಶ್ರಯದಲ್ಲಿ ಲಕ್ಕುಂಡಿ ಮತ್ತು ಕದಾಂಪೂರ ಗ್ರಾಮದ ಮಧ್ಯೆ ಇರುವ ಜಿಂದಾಶ್ಯಾವಲಿ ದರ್ಗಾದ ಗದ್ದುಗೆಗೆ ಭಕ್ತಾಧಿಗಳು ಸಕ್ಕರೆ ನೈವೇದ್ಯವನ್ನು ಅರ್ಪಿಸುವುದರ ಮೂಲಕ ತಮ್ಮ ಸಂಕಲ್ಪವನ್ನು ಸಮರ್ಪಿಸಿದರು.

ಬೆಳಿಗ್ಗೆ ಪುಷ್ಪ ಗುಚ್ಛ ಸಮರ್ಪಣೆಯ ಮೂಲಕ ಉರುಸು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಇದಕ್ಕೂ ಪೂರ್ವ ಗ್ರಾಮದಿಂದ ಮೆರವಣಿಗೆ ಮುಖಾಂತರ ಜಂದೀಸಾಬ ಮುಲ್ಲಾ ಅವರು ಹೊತ್ತುಕೊಂಡು ಬಂದಿದ್ದ ಗಂಧವನ್ನು ಗದ್ದುಗೆಗೆ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ನೂರಾರು ಭಕ್ತರು ಗಂಧವನ್ನು ಪಡೆದುಕೊಂಡು ಆಶೀರ್ವಾದವನ್ನು ಪಡೆದರು. ನಂತರ ಅನ್ನ ಸಂತರ್ಪಣೆ, ವಿಧಿ-ವಿಧಾನಗಳೊಂದಿಗೆ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ನಡೆಯಿತು.

ರಾತ್ರಿ ಕಲಕತ್ತಾದ ಜಹಾಂಗೀರ್ ಅಲಮ್‌ನೂರಿ ಅವರಿಂದ ಬಯಾನ ಕಾರ್ಯಕ್ರಮ, ರಿವಾಯತ್ ಕವಾಲಿ, ಜಾನಪದ ಸಂಗೀತ ಕಾರ್ಯಕ್ರಮಗಳು ಜನಮನ ಸೆಳೆದವು. ವಿಶೇಷವಾಗಿ ಸಂದಲ್ ಗಂಧ ಮೆರವಣಿಗೆಯಲ್ಲಿ ಪಾಲ್ಗೊಂಡ ಗುಡಗೇರಿಯ ತಾಜ್ ಮ್ಯೂಜಿಕಲ್ ಬ್ರಾಸ್ ಬ್ಯಾಂಡ್ ಕಂಪನಿಯ ಕಲಾವಿದರು ಹಾಡಿದ ಕನ್ನಡ, ಹಿಂದಿ ರಸಮಂಜರಿ ಕಾರ್ಯಕ್ರಮ ಮಂತ್ರಮುಗ್ಧರನ್ನಾಗಿಸಿತು.

ಗರಿಗೆದರಿದ ಚುನಾವಣಾ ಕಣ

ವಿಜಯಸಾಕ್ಷಿ ಸುದ್ದಿ, ಗದಗ : ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಚುನಾವಣಾ ಅಖಾಡ ನಿಧಾನವಾಗಿ ರಂಗೇರತೊಡಗಿದೆ. ಬುಧವಾರ ಒಂದೇ ದಿನ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಇಡೀ ದಿನ ಮತಬೇಟೆಯಲ್ಲಿ ನಿರತರಾಗಿದ್ದರು. ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವಳಿ ನಗರದ ಮಠ, ದೇವಸ್ಥಾನಗಳಿಗೆ ಭೇಟಿ ನೀಡಿದರಲ್ಲದೆ, ಸಭೆ ನಡೆಸಿ ಮತ ಯಾಚಿಸಿದರು.

ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪ್ರಚಾರ ಸಭೆಯೊಂದಿಗೆ ಗಂಗಾಪುರ ಪೇಟೆಯಲ್ಲಿರುವ ದುರ್ಗಾದೇವಿ ದೇವಸ್ಥಾನ, ವೀರೇಶ್ವರ ಪುಣ್ಯಾಶ್ರಮ, ತೋಂಟದಾರ್ಯ ಮಠಕ್ಕೆ ಭೇಟಿ ನೀಡಿದರು. ಜಿಲ್ಲಾ ಬಿಜೆಪಿ ಕಚೇರಿ, ಜಿಲ್ಲಾ ವಕೀಲರ ಸಂಘ, ಶಿವರತ್ನ ಪ್ಯಾಲೇಸ್‌ನಲ್ಲಿ ಮಾಜಿ ಸೈನಿಕರು, ಬೆಟಗೇರಿ ಶರಣಬಸವೇಶ್ವರ ನಗರದಲ್ಲಿ ಹಡಪದ ಅಪ್ಪಣ್ಣ ಸಮಾಜ, ಲಯನ್ಸ್ ಕ್ಲಬ್ ಹಾಲ್‌ನಲ್ಲಿ ನಿವೃತ್ತ ನೌಕರರು, ಸಂಭಾಪುರ ರಸ್ತೆಯ ಶಂಕರ ಮಠದಲ್ಲಿ ಬ್ರಾಹ್ಮಣ ಸಮಾಜ ಹಾಗೂ ಎಪಿಎಂಸಿ ವರ್ತಕರನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು.

gaddadevaramatha

 

ಈ ಸಂದರ್ಭದಲ್ಲಿ ನರಗುಂದ ಶಾಸಕ ಸಿ.ಸಿ. ಪಾಟೀಲ, ವಿ.ಪ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಜೊತೆಗಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಗದಗ ತಾಲೂಕಿನ ನಾಗಾವಿ ಗ್ರಾ.ಪಂ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ನಂತರ ಸೊರಟೂರ, ಹರ್ತಿ, ಮುಳಗುಂದ, ಹುಲಕೋಟಿ ಹಾಗೂ ಬಿಂಕದಕಟ್ಟಿ ಗ್ರಾಮದಲ್ಲಿ ಸಭೆ ನಡೆಸಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗದಗ ಜಿಲ್ಲೆಯ ಮತದಾರರು ಕಾಂಗ್ರೆಸ್ ಪರವಾಗಿದ್ದಾರೆ.

ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಮತದಾರರು ತೋರುವ ಪ್ರೀತಿ-ವಿಶ್ವಾಸ ನೋಡಿದರೆ, ಗೆಲುವು ನಿಶ್ಚಿತ ಎನ್ನುವ ವಾತಾವರಣ ಇದೆ. ಏನೇ ಆದರೂ ಎದುರಾಳಿ ಅಭ್ಯರ್ಥಿಯನ್ನು ಗೌರವದಿಂದ ಕಾಣುತ್ತೇನೆ ಎಂದರು.

pracharana

ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ವಾಸಣ್ಣ ಕುರುಡಗಿ ಮುಂತಾದವರು ಜೊತೆಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ, ಗದುಗಿನಲ್ಲಿ ಬಿಜೆಪಿ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದೇವೆ. ಈ ಬಾರಿ ಗದಗ ಜಿಲ್ಲೆಯಿಂದ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳು ಬರುವ ವಿಶ್ವಾಸವಿದೆ. ಗದಗ ಕ್ಷೇತ್ರದ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಬಿಜೆಪಿಯೊಂದಿಗಿದ್ದಾರೆ. ಶೀಘ್ರವೇ ಅವರೂ ಪ್ರಚಾರ ನಡೆಸಲಿದ್ದಾರೆ ಎಂದರು.

9ನೇ ವಾರ್ಷಿಕೋತ್ಸವ ಇಂದು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಇಲ್ಲಿನ ಈರ‍್ವ ನಗರದಲ್ಲಿನ ಶ್ರೀ ಸಾಯಿ ಬಾಬಾ ದೇವಸ್ಥಾನದ 9ನೇ ವಾರ್ಷಿಕೋತ್ಸವ ಮಾ.28ರಂದು ಜರುಗಲಿದೆ. ಬೆಳಿಗ್ಗೆ 6 ಗಂಟೆಗೆ ಶ್ರೀ ಸಾಯಿ ಬಾಬಾ ಮೂರ್ತಿಗೆ ರುದ್ರಾಭಿಷೇಕ ನಂತರ 8 ಗಂಟೆಗೆ ಸತ್ಯನಾರಾಯಣ ಪೂಜೆ ಜರುಗಲಿದ್ದು, ಮದ್ಯಾಹ್ನ 1 ಗಂಟೆಗೆ ಅನ್ನ ಪ್ರಸಾದ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ವರ್ಧಂತಿ ಮಹೋತ್ಸವ

0

ವಿಜಯಸಾಕ್ಷಿ ಸುದ್ದಿ, ಹೊನ್ನಾವರ : ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ವಿಶ್ವ ವೀರಾಂಜನೇಯ ಮಹಾ ಸಂಸ್ಥಾನ, ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾ.29 ಮತ್ತು 30ರಂದು ಶ್ರೀ ವೀರಾಂಜನೇಯ ದೇವರ, ಶ್ರೀ ಗೋಪಾಲಕೃಷ್ಣ ದೇವರ, ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಶ್ರೀ ಚೌಡೇಶ್ವರಿ ದೇವಿಯ ವರ್ಧಂತಿ ಉತ್ಸವ ಆಯೋಜನೆಗೊಂಡಿದೆ.

ಇದರಂಗವಾಗಿ ಮಾ.29ರಂದು ಗಣಪತಿ ಪೂಜೆ, ಪುಣ್ಯಾಹ, ಶ್ರೀ ದೇವರ ಕಲಾವೃದ್ಧಿ ಹವನ, 28 ನಾಳಿಕೇರ ಗಣಹವನ ಆಯೋಜಿಸಲಾಗಿದೆ. ಸಂಜೆ ರಾಕ್ಷೋಘ್ನ ಪಾರಾಯಣ, ತಾರಕ ಮಂತ್ರ ಜಪ, ಆಂಜನೇಯ ಮೂಲಮಂತ್ರ ಜಪ, ಕಲಶ ಸ್ಥಾಪನೆ, ಮಾ.30ರಂದು ಶತರುದ್ರ ಪಾರಾಯಣ, ರುದ್ರಾಭಿಷೇಕ-ರುದ್ರಹವನ, ಆಂಜನೇಯ ಮೂಲಮಂತ್ರ ಹವನ, ರಾಜೋಪಚಾರ ಸೇವೆ, ಪಲ್ಲಕ್ಕಿ ಉತ್ಸವ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಸಂತರ್ಪಣೆ ನಡೆಯಲಿದೆ.

ಈ ಸಂದರ್ಭದಲ್ಲಿ ಅಹೋರಾತ್ರಿ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 9:30ರಿಂದ ಯಕ್ಷಗಾನ ಸೇವೆ ನಡೆಯಲಿದೆ. ಮಾ.30ರಂದು ಸಂಜೆ ಪಲ್ಲಕ್ಕಿ ಉತ್ಸವ, ರಾಜೋಪಚಾರ ಸೇವೆ, ರಂಗಪೂಜೆ, ಮಂಗಳಾರತಿ, ತೀರ್ಥಪ್ರಸಾದ ವಿತರಣೆ, ಸಂತರ್ಪಣೆ ನಡೆಯಲಿದ್ದು, ಸೇವೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಸೇವಾರ್ಥಿಗಳು ದೇವಾಲಯದ ಸೇವಾ ಕಚೇರಿ, ಮೊ-6361011288, 7019342699ರಲ್ಲಿ ಸಂಪರ್ಕಿಸಬಹುದು ಎಂದು ಶ್ರೀ ಕ್ಷೇತ್ರದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಿಳಾ ಮಂಡಳದ ನೂತನ ಪದಾಧಿಕಾರಿಗಳ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಹಳೇ ಸರಾಫ್ ಬಜಾರದಲ್ಲಿರುವ ಶ್ರೀ ಜಗದಂಬಾ ದೇವಸ್ಥಾನದ ಶ್ರೀ ಸಹಸ್ರಾರ್ಜುನ ಸಮುದಾಯ ಭವನದ ಲಕ್ಷ್ಮಣಸಾ ಹಬೀಬ ಸಭಾಗೃಹದಲ್ಲಿ ಎಸ್‌ಎಸ್‌ಕೆ ಸಮಾಜದ ನೂತನ ಮಹಿಳಾ ಮಂಡಳವನ್ನು ರಚಿಸಲಾಯಿತು.

ಎಸ್‌ಎಸ್‌ಕೆ ಮಹಿಳಾ ಮಂಡಳದ ನೂತನ ಅಧ್ಯಕ್ಷರಾಗಿ ಉಮಾಬಾಯಿ ಬೇವಿನಕಟ್ಟಿ, ಉಪಾಧ್ಯಕ್ಷರಾಗಿ ಸ್ನೇಹಲತಾ ಕಬಾಡಿ, ಗೌರವ ಕಾರ್ಯದರ್ಶಿಯಾಗಿ ರೇಖಾ ಬೇವಿನಕಟ್ಟಿ, ಸಹ ಕಾರ್ಯದರ್ಶಿಯಾಗಿ ಗೀತಾ ಹಬೀಬ, ಖಜಾಂಚಿಯಾಗಿ ಕಸ್ತೂರಿಬಾಯಿ ಬಾಂಡಗೆ ಅವರನ್ನು ಆಯ್ಕೆ ಮಾಡಲಾಯಿತು.

sskmahila                                    mandali  mahila

ಈ ಸಂದರ್ಭದಲ್ಲಿ ಎಸ್‌ಎಸ್‌ಕೆ ಸಮಾಜದ ಮಹಿಳಾ ಮಂಡಳದ ಮಾಜಿ ಅಧ್ಯಕ್ಷೆ ರೇಖಾಬಾಯಿ ಖಟವಟೆ ಅವರು ನೂತನ ಅಧ್ಯಕ್ಷೆ ಉಮಾಬಾಯಿ ಬೇವಿನಕಟ್ಟಿ ಅವರಿಗೆ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅಧಿಕಾರ ಹಸ್ತಾಂತರಿಸಿದರು.

ಅಧಿಕಾರ ಸ್ವೀಕರಿಸಿ ನೂತನ ಅಧ್ಯಕ್ಷೆ ಉಮಾಬಾಯಿ ಬೇವಿನಕಟ್ಟಿ ಮಾತನಾಡಿ, ಎಸ್‌ಎಸ್‌ಕೆ ಸಮಾಜವನ್ನು ಸಂಘಟಿಸಲು ಮಹಿಳೆಯರು ಮುಂದೆ ಬರಬೇಕು. ಸಮಾಜದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೇಣುಕಾಬಾಯಿ ಕಲಬುರ್ಗಿ, ಸರೋಜಾಬಾಯಿ ಟಿಕಣದಾರ, ಸುನಂದಾ ಹಬೀಬ, ರತ್ನಾ ಹಬೀಬ, ಅನ್ನಪೂರ್ಣ ಶಿದ್ಲಿಂಗ, ವಂದನಾ ವಿನೋದ ಶಿದ್ಲಿಂಗ, ಸುನಂದಾ ಹಬೀಬ, ಲಕ್ಷ್ಮಿಬಾಯಿ ಖಟವಟೆ, ಅಂಬುಬಾಯಿ ಬೇವಿನಕಟ್ಟಿ, ಗೀತಾ ಬಾಂಡಗೆ, ಲಲಿತಾಬಾಯಿ ಬಾಕಳೆ, ಪದ್ಮಾ ಕಬಾಡಿ, ಅನ್ನಪೂರ್ಣ ಬಾಂಡಗೆ, ಭಾವನಾ ಬಾಂಡಗೆ, ಸುಶೀಲಾ ದಲಬಂಜನ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.

 

ಶ್ರೀ ರಂಭಾಪುರಿ ಪೀಠದಲ್ಲಿ ಯುಗಮಾನೋತ್ಸವಕ್ಕೆ ತೆರೆ

0

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾ ಸಂಸ್ಥಾನ ಪೀಠದಲ್ಲಿ ಮಾರ್ಚ್ 20ರಿಂದ ನಡೆದುಕೊಂಡು ಬಂದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ಎಲ್ಲಾ ಕಾರ್ಯಕ್ರಮಗಳು ಭದ್ರಾ ನದಿ ತೀರದಲ್ಲಿ ಸುರಗಿ ಸಮಾರಾಧನಾ ಪೂಜೆಯೊಂದಿಗೆ ಜಯಂತಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.

ಇದೇ ಸಂದರ್ಭದಲ್ಲಿ ಇಷ್ಟಲಿಂಗ ಮಹಾಪೂಜಾ ನೆರವೇರಿಸಿದ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವಚನ ನೀಡಿ, ಮನುಷ್ಯನ ಬುದ್ಧಿ ಶಕ್ತಿ ಬೆಳೆದಂತೆ ಭಾವನೆಗಳು ಬೆಳೆದುಕೊಂಡು ಬರಬೇಕಾಗಿದೆ. ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಬೇಕಾಗಿದೆ. ಶಿಕ್ಷಣದಿಂದ ಬುದ್ಧಿ ಶಕ್ತಿ ಬೆಳೆದರೆ, ಧರ್ಮಾಚರಣೆಯಿಂದ ಭಾವನೆಗಳು ಬೆಳೆಯಲು ಸಾಧ್ಯ. ಬದುಕಿ ಬಾಳುವ ಮನುಷ್ಯನಿಗೆ ಬುದ್ಧಿ-ಭಾವನೆಗಳೆರಡೂ ಬೇಕು. ಜ್ಞಾನ ಕ್ರಿಯಾತ್ಮಕ ಬದುಕಿನೊಂದಿಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಲೋಕೋದ್ಧಾರ ಚಿಂತನೆಗಳನ್ನು ಅರಿತು ಬಾಳಿದರೆ ಜೀವನ ಸಾರ್ಥಕಗೊಳ್ಳುವುದು.

ಈ ಅಪೂರ್ವ ಸುರಗಿ ಪೂಜಾರಾಧನಾ ಸಂದರ್ಭದಲ್ಲಿ ಎಡೆಯೂರು, ಮುಕ್ತಿಮಂದಿರ, ಸುಳ್ಳ, ಮಳಲಿಮಠ, ಕವಲೇದುರ್ಗ, ಮೈಸೂರು, ಸಂಗೊಳ್ಳಿ, ಸಿದ್ಧರಬೆಟ್ಟ, ಹಾರನಹಳ್ಳಿ ಶ್ರೀಗಳು ಮೊದಲ್ಗೊಂಡು ಸುಮಾರು 20ಕ್ಕೂ ಮಿಕ್ಕಿ ಮಠಾಧೀಶರು ಪಾಲ್ಗೊಂಡರು. ಆಗಮಿಸಿದ ಸಹಸ್ರಾರು ಭಕ್ತರು ಭದ್ರಾ ನದಿಯಲ್ಲಿ ಮಂಗಳ ಸ್ನಾನ ಮಾಡಿ ಇಷ್ಟಲಿಂಗಾರ್ಚನೆ ಪೂಜಾ ನೆರವೇರಿಸಿದರು.

error: Content is protected !!