ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಥೋಡ ಅವರ ಮಾರ್ಗದರ್ಶನದಲ್ಲಿ ಮಾರ್ಚ್ ತಿಂಗಳಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳ ಹಾಗೂ ತಾಲೂಕಾ ತಂಬಾಕು ನಿಯಂತ್ರಣ ತನಿಖಾ ದಳ ಗದಗ, ಮುಂಡರಗಿ, ರೋಣ, ವತಿಯಿಂದ ಗದಗ ನಗರದ ಮುಳಗುಂದ ನಾಕಾ, ಜಿಲ್ಲಾ ಆಸ್ಪತ್ರೆ ಆವರಣ, ಅಂಜುಮನ್ ಕಾಲೇಜು ಎದುರು, ಹಾತಲಗೆರಿ ನಾಕಾ, ಅಡವಿಸೊಮಪುರ, ಲಕ್ಕುಂಡಿ, ಮುಂಡರಗಿ, ಗಜೇಂದ್ರಗಡ, ಮುಂಡರಗಿ-ಕೊರ್ಲಳ್ಳಿ ಕ್ರಾಸ್, ಡಂಬಳ ಇತ್ಯಾದಿ ಸ್ಥಳಗಳಲ್ಲಿ ಕೋಟ್ಪಾ ದಾಳಿ ಹಮ್ಮಿಕೊಳ್ಳಲಾಯಿತು.
ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-2003ರ ಕುರಿತು ಸಾರ್ವಜನಿಕರಲ್ಲಿ ಹಾಗೂ ಅಂಗಡಿಕಾರರಲ್ಲಿ ಜಾಗೃತಿ ಮೂಡಿಸಲಾಯಿತು. ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳಿಂದ ದೂರವಿರುವಂತೆ, ಚಟಕ್ಕೆ ಬಲಿಯಾಗದಂತೆ ಜಾಗ್ರತಿ ಮೂಡಿಸುವ ಉದ್ದೇಶದಿಂದ ಶಾಲಾ ಕಾಲೇಜು ಆವರಣದಿಂದ 100 ಗಜದವರೆಗೆ ತಂಬಾಕು ಮಾರಾಟ ನಿಷೇಧ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಕುರಿತು ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕ ಬಿತ್ತರಿಸುವದು ಆ ಸ್ಥಳದ ಮಾಲೀಕರ ಜಾವಾಬ್ದಾರಿಯಾಗಿರುತ್ತದೆ.
ಕೆಲವು ಅಂಗಡಿಗಳ ಹಿಂದೆ ಧೂಮಪಾನ ಅಡ್ಡಾಗಳನ್ನು ಮಾಡಿಕೊಂಡಿರುವವರ ವಿರುದ್ಧ ಕೂಡಾ ಕ್ರಮ ವಹಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವದರಿಂದ ಅಮಾಯಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವದು ಕಂಡು ಬಂದಿದೆ. ತಂಬಾಕು ಕುರಿತ ಜಾಹೀರಾತು ನಿಷೇಧಿಸುವದು, 18 ವರ್ಷದೋಳಗಿನವರಿಗೆ ತಂಬಾಕು ಮಾರಾಟ ನಿಷೇಧಿಸುವದು, ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಶೇ. ೮೫ರಷ್ಟು ಆರೋಗ್ಯ ಎಚ್ಚರಿಕೆ ಚಿಹ್ನೆ ಕಡ್ಡಾಯ ಈ ಕುರಿತು ಮಾಹಿತಿ ಹಾಗೂ ಜಾಗೃತಿ ಮೂಡಿಸಿ ಉಲ್ಲಂಘನೆ ಮಾಡಿದವರ ವಿರುದ್ಧ ಎಚ್ಚರಿಕೆ ನೀಡಿ ಒಟ್ಟು 83 ಪ್ರಕರಣ ದಾಖಲಿಸಿ, ರೂ. 16350 ದಂಡ ಸಂಗ್ರಹಿಸಲಾಯಿತು. ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಅದರ ಉಪಯೋಗಕ್ಕೆ ಕೋಟ್ಪಾ ಕಾಯ್ದೆ ಅಡಿಯಲ್ಲಿ ಅವಕಾಶವಿದ್ದು, ಅದನ್ನು ಉಲ್ಲಂಘಿಸಿದಲ್ಲಿ ಕಾನೂನು ರೀತಿ ಕ್ರಮ ವಹಿಸಲಾಗುವದು.
ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ಗೋಪಾಲ ಸುರಪುರ, ಪೊಲೀಸ್ ಇಲಾಖೆಯ ಬಿ.ಎನ್. ಚಳಗೆರಾ, ಎಂ.ಆಯ್. ಮುಲ್ಲಾ, ಎಎಸ್ಐ ಕುಮಾರಸ್ವಾಮಿ, ಸಚಿನ್, ರೇಷ್ಮಾ, ಬೇಗಂ, ನದಾಫ್, ವೈ.ಎನ್. ಕಡೆಮನಿ, ಮಂಜುಳಾ ಸಜ್ಜನ್, ತಾಲೂಕಾ ಆರೊಗ್ಯ ಶಿಕ್ಷಣಾಧಿಕಾರಿ ಮುಂಡರಗಿ, ಎಂ. ಎಂ. ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು.