ವಿಜಯಸಾಕ್ಷಿ ಸುದ್ದಿ, ಗದಗ : ಗಜೇಂದ್ರಗಡ ತಾಲೂಕಿನ ಮಾರನಬಸರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದಿಹಾಳ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಲೋಕಸಭೆ ಚುನಾವಣೆ ಕುರಿತು ಕೂಲಿಕಾರರಿಗೆ ಮತದಾನ ಜಾಗೃತಿ ಮೂಡಿಸಲಾಯಿತು.
ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಬಡಿಗೇರ್ ಮಾತನಾಡಿ, ಮತದಾನ ಎಂಬುದು ಭಾರತ ಸಂವಿಧಾನ ನಮಗೆ ನೀಡಿರುವ ಹಕ್ಕು. ಪ್ರಜಾಪ್ರಭುತ್ವದ ಏಳಿಗೆಗಾಗಿ ಉತ್ತಮ ಪ್ರಜೆಯನ್ನು ಆಯ್ಕೆ ಮಾಡಿಕೊಳ್ಳುವುದಕೋಸ್ಕರ ನಾವೆಲ್ಲರೂ ನಮ್ಮ ಎಲ್ಲ ಕೆಲಸಗಳನ್ನೂ ಬದಿಗಿಟ್ಟು ಮೇ 7ರಂದು ತಪ್ಪದೇ ಮತದಾನ ಮಾಡೋಣ ಎಂದು ಕರೆ ನೀಡಿದ ಅವರು, ಭಾರತದ ಪ್ರತಿಯೊಬ್ಬ ಪ್ರಜೆಯೂ ಮತದಾನದಲ್ಲಿ ಭಾಗಿಯಾಗಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಶ್ರಮಿಸೋಣ ಎಂದರು.
ಎಲ್ಲಾ ಮತದಾರರು ತಮ್ಮ ಮತಗಟ್ಟೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮೇ 7ರಂದು ನಡೆಯುವ ಮತದಾನದ ದಿನ ತಪ್ಪದೇ ನಿಮ್ಮ ಹಕ್ಕು ಚಲಾಯಿಸಿ ಎಂದರಲ್ಲದೆ, ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ದೂರುಗಳನ್ನು ನೀಡಬೇಕು ಹಾಗೂ ಸುಲಲಿತ ಹಾಗೂ ನ್ಯಾಯಬದ್ಧ ಚುನಾವಣೆಗಾಗಿ ಚುನಾವಣಾ ಆಯೋಗ ನೀಡಿರುವ ವೋಟರ್ ಹೆಲ್ಪ್ ಲೈನ್, ಸಕ್ಷಾಮ್ ಆ್ಯಪ್, ಸಿವಿಜಿಲ್ ಆ್ಯಪ್ಗಳನ್ನು ಬಳಸಿ ನೈತಿಕ ಮತದಾನಕ್ಕೆ ಸಹಕರಿಸಬೇಕು ಎಂದರು.
ಸಾರ್ವಜನಿಕರು, ಕೂಲಿಕಾರರೆಲ್ಲರೂ ಕಡ್ಡಾಯವಾಗಿ ಮೇ 7ರಂದು ಮತದಾನ ಮಾಡಬೇಕು. ಮತದಾನ ನಮಗೆ ಸಂವಿದಾನ ನೀಡಿರುವ ಒಂದು ವರ. ಹಾಗಾಗಿ ಯಾರೂ ಮತದಾನದಿಂದ ವಂಚಿತರಾಗದೇ ಶೇ. 100ರಷ್ಟು ಮತದಾನಕ್ಕೆ ಶ್ರಮೀಸೋಣ ಎಂದು ಹೇಳಿದರು. ನಂತರ ಎಲ್ಲಾ ಕೂಲಿಕಾರರಿಗೆ ಮತದಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಪಿಡಿಒ ಎಸ್.ಬಿ. ಸಂಕನೂರು, ಎಂಐಎಸ್ ಸಂಯೋಜಕರಾದ ವಸಂತ ಅನ್ವರಿ, ಐಇಸಿ ಸಂಯೋಜಕರಾದ ಮಂಜುನಾಥ ಹಳ್ಳದ, ತಾಂತ್ರಿಕ ಸಹಾಯಕರಾದ ಪ್ರವೀಣ ದೂಳಣ್ಣನವರ, ಬಿಎಫ್ಟಿ ಚಂದ್ರಕಾಂತ ಲಮಾಣಿ, ಕರ ವಸೂಲಿಗಾರ ಚನ್ನಬಸಪ್ಪ ಹೂಗಾರ, ಪಂಚಾಯಿತಿ ಸಿಬ್ಬಂದಿಗಳು, ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದರು.
ಮೇ 7ರಂದು ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆ ದಾಕ್ಷಿಣ್ಯಗಳಿಗೆ ಪ್ರಭಾವಿತರಾಗದೆ ವಿವೇಚನೆಯಿಂದ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗೆಲ್ಲಿಸೋಣ. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಕಡ್ಡಾಯವಾಗಿ ಮತದಾನ ಮಾಡಿ ಎಂದು ಬಸವರಾಜ ಬಡಿಗೇರ್ ಕರೆ ನೀಡಿದರು.