ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಕಳೆದ 40 ವರ್ಷಗಳಿಂದ ಗ್ರಾಮಕ್ಕೆ ಅಗತ್ಯವಿರುವ ಮೂಲಭೂತ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿರ್ಲಕ್ಷ್ಯ ತೋರಿರುವ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಸಮೀಪದ ತಿಮ್ಮಾಪೂರ ಗ್ರಾಮಸ್ಥರು, ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬುಧವಾರ ಧರಣಿ ಸತ್ಯಾಗ್ರಹ ಆರಂಭಿಸಿದರು.
ಮುಂಜಾನೆ 11ಕ್ಕೆ ಚಕ್ಕಡಿ,ಟ್ರ್ಯಾಕ್ಟರ್ ಗಳನ್ನು ಗದಗ-ಯಲಬುರ್ಗಾ ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಿ ಪ್ರತಿಭಟನೆ ಆರಂಭಿಸಲಾಯಿತು. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.
ಧರಣಿ ಕೈಬಿಡುವಂತೆ ಗದಗ ಗ್ರಾಮೀಣ ಪೊಲೀಸರು ರೈತ ಸಂಘದ ಮುಖಂಡರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಕೆಲಕಾಲ ಗದ್ದಲದ ವಾತವಾರಣ ಸೃಷ್ಟಿಯಾಯಿತು.
ಪಿಎಸ್ಐ ವಿ.ಎಮ್. ನದಾಫ, ಧರಣಿ ಮಾಡಲು ಪೊಲೀಸ್ ಠಾಣಿಯಿಂದ ಪರವಾನಿಗೆ ತೆಗೆದುಕೊಂಡಿಲ್ಲ, ಈಗ ಚುನಾವಣೆ ನೀತಿ ಸಂಹಿತೆ ಜಾರಿಯಿರುವುದರಿಂದ ಪ್ರತಿಭಟನೆ ಮಾಡುವಂತಿಲ್ಲ ಎಂದರು. ಈ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ರೈತ ಮುಖಂಡರು, ನಾವು ಡಿ.ಸಿ ಅವರನ್ನು ಸಂಪರ್ಕಿಸಿ, ಮನವಿ ಸಲ್ಲಿಸಿ ಧರಣಿ ಮಾಡುವುದಾಗಿ ತಿಳಿಸಿದ್ದೇವೆ. ಅದರ ಪ್ರತಿಯನ್ನು ಸಹ ಪೊಲೀಸ್ ಠಾಣೆಗೆ ಕೊಟ್ಟಿದ್ದೇವೆ. ನಾವು ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಧಿಕ್ಕಾರ ಕೂಗಿದರು.
ಸೋಮವಾರ ಡಿ.ಸಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದು, ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ, ದಂಡಾಧಿಕಾರಿಗಳು, ಹಾಗೂ ತಾ.ಪಂ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಸಂಧಾನ ಸಭೆ ನಡೆಸಿದರು.
ತರುವಾಯ, ಅಧಿಕಾರಿಗಳು ಪತ್ರಿಕೆಯಲ್ಲಿ ಚುನಾವಣೆ ಬಹಿಷ್ಕಾರದಿಂದ ಹಿಂದೆ ಸರಿದಿದ್ದಾರೆ ಎಂದು ಸುಳ್ಳು ಪ್ರಕಟಣೆ ನೀಡಿದ್ದಾರೆ. ಧರಣಿ ಸ್ಥಳಕ್ಕೆ ಡಿ.ಸಿ ಅವರು ಬರಬೇಕು, ಅಧಿಕಾರಿಗಳು ಕ್ಷಮೆ ಯಾಚಿಸಬೇಕು ಎಂದು ರಾಜ್ಯ ರೈತ ಸಂಘಧ ಜಿಲ್ಲಾದ್ಯಕ್ಷ ಯಲ್ಲಪ್ಪ ಬಾಬರಿ, ಗ್ರಾಮ ಘಟಕದ ಅಧ್ಯಕ್ಷ ಹುಚ್ಚೀರಪ್ಪ ಜೊಗೀನ ಆಕ್ರೋಶ ವ್ಯಕ್ತ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಮಧ್ಯ ಭಾಗದಲ್ಲಿರುವ ಮದ್ಯದಂಗಡಿಯ ಪರವಾನಿಗೆ ರದ್ದುಗೊಳಿಸಬೇಕು. ಇದರಿಂದ ಯುವಕರು, ನಮ್ಮ ಪತಿಯರು ಮಧ್ಯವ್ಯಸನಿಗಳಾಗಿ ಹಾಳಾಗುತ್ತಿದ್ದಾರೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ 50 ಕ್ಕೂ ಹೆಚ್ಚು ಜನ ಮಹಿಳೆಯರು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರಳಿ, ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಜೀರಸಾಬ ತಳಕಲ್ಲ, ಕಳಕಪ್ಪ ಕ್ಯಾದಗುಂಪಿ, ಹುಚ್ಚಪ್ಪ ನಿಂಗಣ್ಣವರ, ಮಹಾದೇವಪ್ಪ ಕೋರಿ, ಅಂದಪ್ಪ ಕೋಳೂರು ಸೇರಿದಂತೆ ಗ್ರಾಮದ ಗಣ್ಯರು, ಗ್ರಾ.ಪಂ ಸದಸ್ಯರು ಭಾಗವಹಿಸಿದ್ದರು.
ಧರಣಿ ಹಿಂದಕ್ಕೆ
ಗ್ರಾಮದ ಬೇಡಿಕೆಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳಿಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗವುದು ಎಂದು ಉಪ ತಹಸೀಲ್ದಾರ ಜಯಪ್ರಕಾಶ ಭಜಂತ್ರಿ ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರು, ಚುನಾವಣೆಗೂ ಮುನ್ನವೇ ಕಾಮಗಾರಿಗಳು ಆರಂಭವಾಗಬೇಕು. ತಪ್ಪಿದಲ್ಲಿ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿ ಪ್ರಭಟನೆಯನ್ನು ಮುಕ್ತಾಯಗೊಳಿಸಿದರು.
ಗ್ರಾಮದ ಹಲವು ಸಮಸ್ಯೆಗಳ ಬಗ್ಗೆ ಕಳೆದ ೪೦ ವರ್ಷಗಳಿಂದ ಸರಕಾರದ ಗಮನಕ್ಕೆ ತಂದರೂ ಕಾಳಜಿ ವಹಿಸಿಲ್ಲ. ಹೀಗಾಗಿ ಧರಣಿ ಸತ್ಯಾಗ್ರಹ ಮುಂದುವರೆಸಿ ಚುನಾವಣೆ ಬಹಿಷ್ಕಾರ ಮಾಡುತ್ತೇವೆ. ಸತ್ಯಾಗ್ರಹ ಕೈಬಿಡುವಂತೆ ಪೊಲೀಸರು ದೌರ್ಜನ್ಯವೆಸಗುತ್ತಿದ್ದು, ನಮ್ಮನ್ನು ಬಂಧಿಸಿದರೂ ಪ್ರತಿಭಟನೆ ಕೈಬಿಡುವುದಿಲ್ಲ.
– ಯಲ್ಲಪ್ಪ ಬಾಬರಿ.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರು.