ವಿಜಯಸಾಕ್ಷಿ ಸುದ್ದಿ, ರೋಣ
ಕಳೆದ ವಾರ ಗಜೇಂದ್ರಗಡ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷದ ವದಂತಿಯ ಬೆನ್ನಲ್ಲಿಯೇ ಈಗ ತಾಲೂಕಿನ ಮಾರನಬಸರಿ ಗ್ರಾಮದ ಹಳ್ಳದಲ್ಲಿ ಮುಂಜಾನೆ ಚಿರತೆ ಪ್ರತ್ಯಕ್ಷವಾಗಿದೆ ಎನ್ನಲಾಗಿದೆ. ಇದನ್ನು ನೋಡಿದ ವ್ಯಕ್ತಿ ಗ್ರಾಮಸ್ಥರಿಗೆ ಹೇಳಿದ್ದಾನೆ. ಇದರಿಂದಾಗಿ ಆತಂಕಗೊಂಡ ಜನ ಊರು ಬಿಟ್ಟು ಹೊರಗೆ ಬಾರದಂತಾಗಿದೆ. ಗ್ರಾಮದಲ್ಲಿ ಗುಂಪುಗೂಡಿ ಚರ್ಚೆ ಮಾಡುತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ಭೇಟಿ ಕೊಡಲು ಒತ್ತಾಯಿಸಿದ್ದಾರೆ.
ಬೆಳಿಗ್ಗೆಯೇ ಜಮೀನುಗಳಿಗೆ ತೆರಳಿದ್ದ ಜನರು ವಾಪಾಸು ಊರಿಗೆ ಬರುವಂತೆ ಗ್ರಾಮ ಪಂಚಾಯತಿ ವತಿಯಿಂದ ಧ್ವನಿವರ್ಧಕದ ಮೂಲಕ ಸಾರಲಾಗಿದೆ.
ಕೇವಲ ಮಾರನಬಸರಿ ಗ್ರಾಮದಲ್ಲಿ ಅಷ್ಟೇ ಅಲ್ಲ ಅಕ್ಕಪಕ್ಕದ ಕಳಕಾಪೂರ, ನಿಡಗುಂದಿ ಗ್ರಾಮದ ಬಳಿಯೂ ಕಾಣಿಸಿಕೊಂಡಿತ್ತು. ಅದೀಗ ಮಾರನಬಸರಿ ಗ್ರಾಮದತ್ತ ತೆರಳಿದೆ ಎಂಬ ಗಾಳಿ ಸುದ್ದಿಯೂ ಹರದಾಡುತ್ತಿದೆ. ಹೀಗಾಗಿ ಈ ಮೂರು ಗ್ರಾಮದ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಸತ್ಯಾಸತ್ಯತೆ ಕುರಿತು ಜನರಿಗೆ ಮನವರಿಕೆ ಮಾಡಿ ಮುಂಜಾಗ್ರತೆ ಕೈಗೊಳ್ಳಲು ಮುಂದಾಗಬೇಕಿದೆ.
ಕಳೆದ ಹನ್ನೆರಡು ವರ್ಷಗಳ ಹಿಂದೆ ಮಾರನಬಸರಿ ಗ್ರಾಮದಲ್ಲಿ ಕರಡಿ ಪ್ರತ್ಯಕ್ಷವಾಗಿ ಹಲವು ಜನರ ಮೇಲೆ ದಾಳಿ ಮಾಡಿತ್ತು. ಆಕ್ರೋಶಗೊಂಡ ಜನ ಕರಡಿ ಥಳಿಸಿದ್ದರು. ನಂತರ ಅಸ್ವಸ್ಥಗೊಂಡಿದ್ದ ಕರಡಿ ಮೃತಪಟ್ಟಿತ್ತು.