ವಿಜಯಸಾಕ್ಷಿ ಸುದ್ದಿ, ಗದಗ:
ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಅಂತರ ರಾಜ್ಯ ಮನೆಗಳ್ಳರನ್ನು ಗದಗ ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜ.3 ರಂದು ಗದಗ ಬಾಪೂಜಿ ನಗರದ ನಿವಾಸಿ ರೇಖಾ ಸೋಮಪ್ಪ ಬೇಲೇರಿ ಅವರ ಮನೆಯ ಮನೆಯ ಬೀಗ ಮುರಿದು ಟ್ರಝುರಿಯಲ್ಲಿದ್ದ 1.20 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಹಾಗೂ 6 ಸಾವಿರ ರೂ. ಬೆಲೆಬಾಳುವ 60 ಗ್ರಾಂ ತೂಕದ ಬೆಳ್ಳಿಯ ಲಕ್ಷ್ಮೀ ಮುಖ ಕದ್ದೋಯ್ದಿದ್ದ ಅಂತರ ರಾಜ್ಯ ಮನಗಳ್ಳರನ್ನು ಕೊನೆಗೂ ಗದಗ ಶಹರ ಪೊಲೀಸರು ಬಂಧಿಸಿದ್ದಾರೆ.
ನೆರೆಯ ಮಹಾರಾಷ್ಟ್ರ ಮೂಲದ ಶಂಕರ ಸಾಹೇಬರಾವ್ ಜಾಧವ ಹಾಗೂ ಶಿವಾ ಚಿಮ್ಮಾಜಿ ಜಾಧವ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 1.26 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಲ್ಲದೇ, ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣದಲ್ಲಿ ಕಳ್ಳತನವಾಗಿದ್ದ ಒಟ್ಟು 2,27,500 ರೂ. ಮೌಲ್ಯದ 60 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಜಪ್ತಿ ಮಾಡಿದ್ದಾರೆ. ಅದರಂತೆ, ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಒಟ್ಟು 1,03,900 ರೂ. ಮೌಲ್ಯದ 1,940 ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದಾಗಿ ಆರೋಪಿತರಿಂದ ಒಟ್ಟು 4,57,400 ರೂ.ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿಯ ಸಾಮಾಗ್ರಿಗಳನ್ನು ಜಪ್ತಿ ಮಾಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರ ಮಾರ್ಗದರ್ಶನದಲ್ಲಿ, ಡಿಎಸ್ಪಿ ಶಿವಾನಂದ ಪವಾಡಶೆಟ್ಟರ ಅವರ ನೇತೃತ್ವದಲ್ಲಿ ಪ್ರಕರಣ ಭೇದಿಸಿದ ಗದಗ ಶಹರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪಿ.ವ್ಹಿ.ಸಾಲಿಮಠ, ಮಹಿಳಾ ಪಿಎಸ್ಐ ಜಿ.ಟಿ.ಜಕ್ಕಲಿ, ಎಎಸ್ಐ ವೈ.ಬಿ.ಪಾಟೀಲ್, ಸಿಬ್ಬಂದಿಗಳಾದ ವ್ಹಿ.ಎಸ್.ಭಿಕ್ಷಾವತಿಮಠ, ವ್ಹಿ.ಎಸ್.ಶೆಟ್ಟಣ್ಣವರ, ಎಸ್.ಎ.ಗುಡ್ಡಿಮಠ, ಎಸ್.ಎಸ್.ಮಾವಿನಕಾಯಿ, ಕೆ.ಡಿ.ಜಮಾದರ, ಪಿ.ಎಸ್.ಕಲ್ಲೂರ, ಆರ್.ಎನ್.ಬಾಲರಡ್ಡಿ ಅವರನ್ನೊಳಗೊಂಡ ವಿಶೇಷ ತಂಡದ ಕಾರ್ಯಕ್ಕೆ ಎಸ್ಪಿ ಶಿವಪ್ರಕಾಶ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.