Home Blog Page 319

ಭೀಕರ ರಸ್ತೆ ಅಪಘಾತ; ದಂಪತಿ ಸ್ಥಳದಲ್ಲಿಯೇ ಸಾವು, 3 ವರ್ಷದ ಕಂದಮ್ಮ ಪಾರು

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಭೀಕರ ರಸ್ತೆ ಅಪಘಾತವೊಂದರಲ್ಲಿ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತರ ಮೂರು ‌ವರ್ಷದ ಕಂದಮ್ಮ ಅಪಾಯದಿಂದ ಪಾರಾದ ಘಟನೆ ಪಟ್ಟಣದ ಸಮೀಪದಲ್ಲಿ ನಿನ್ನೆ ರಾತ್ರಿ ಜರುಗಿದೆ.

ಮೃತರನ್ನು ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದ ಆನಂದ (35) ಹಾಗೂ ಸುಸ್ಮಾ (28) ಎಂದು ಗುರುತಿಸಲಾಗಿದೆ.

ವೇಗವಾಗಿ ಬಂದ ಟಿಪ್ಪರ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ದಂಪತಿ ತಮ್ಮ ಮೂರು ವರ್ಷದ ಮಗುವಿಗೆ ಚಿಕಿತ್ಸೆ ಕೊಡಿಸಲು ಬೆಳವಟಗಿ ಗ್ರಾಮದಿಂದ ನವಲಗುಂದ ಪಟ್ಟಣಕ್ಕೆ ಬರುವಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಮೂರು ವರ್ಷದ ಮಗು, ಇನ್ನೊರ್ವ ಮಂಜುನಾಥ ಎಂಬಾತ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರಸಭೆ ಚುನಾವಣೆ; ನಮ್ಮ ಅಭ್ಯರ್ಥಿಗಳ ಸೋಲಿಗೆ ನಮ್ಮವರೇ ಕಾರಣ; ಪಾಟೀಲ

ಅನಿಲ ಮೆಣಸಿನಕಾಯಿ ಸೋಲಿಗೆ ಕಾರಣ ಯಾರು?

‘ಕೆಲವೆಡೆ ನಮ್ಮವರೇ ನಮ್ಮನ್ನು ಸೋಲಿಸಿದರು!

ವಿಜಯಸಾಕ್ಷಿ ಸುದ್ದಿ, ಗದಗ:

‘ರಾಜಕಾರಣದಲ್ಲಿ ಸೋಲು ಗೆಲುವು ಎರಡು ಶಾಶ್ವತವಲ್ಲ. ಸೋತರೂ ಚುನಾವಣೆ ಮಾಡಬೇಕು. ಏಕೆಂದರೆ, ರಾಜಕೀಯ ಜೀವನದಲ್ಲಿ ಸಾಕಷ್ಟು, ಸೋಲು, ಗೆಲುವು ಕಂಡಿರುವ ನಾನು ಸೋತವರಿಗೆ ಉತ್ತಮ ಉದಾಹರಣೆ. ಆದರೆ, ನಗರಸಭೆ ಚುನಾವಣೆಯಲ್ಲಿ ಕೆಲವು ವಾರ್ಡ್‌ಗಳಲ್ಲಿ ನಮ್ಮವರೇ ನಮ್ಮನ್ನು ಸೋಲಿಸಿದರು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಸೋಮವಾರ ನಗರದ ವಿಠ್ಠಲಾರೂಢ ಸಭಾಭವನದಲ್ಲಿ ನಡೆದ ನೂತನ ನಗರಸಭೆ ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ನಗರಸಭೆ ಚುನಾವಣೆ ವೇಳೆ ಕೆಲವೆಡೆ ನಮ್ಮ ಕಾರ್ಯಕರ್ತರು ಪ್ರಚಾರ ಮಾಡಲು ಮುಕ್ತ ಅವಕಾಶ ಇರಲಿಲ್ಲ. ಅಂತಹ ಕಡೆಯೂ, ಮತದಾರರು ನಮ್ಮ ಪಕ್ಷಕ್ಕೆ ಮತ ನೀಡಿದ್ದಾರೆ. ಹೀಗಾಗಿ ಗೂಂಡಾಗಿರಿಗೆ ಹೆದರುವ ಅವಶ್ಯಕತೆ ಇಲ್ಲ ಎಂದರು.

‘ಕೆಲ ಸದಸ್ಯರು ಈಗಾಗಲೇ ಕೆಲಸ ಕಾರ್ಯಗಳನ್ನು ಆರಂಭಿಸಿದ್ದು, ಅಭಿನಂದನೀಯ. ಆದರೆ, ಇದು ಆರಂಭಿಕ ಶೂರತ್ವ ಆಗಬಾರದು. ಸರ್ಕಾರ, ಸಚಿವರು, ಶಾಸಕರು ನಮ್ಮವರಿರುವಾಗ ಕಡು ಬಡವರಿಗೆ ಅನುಕೂಲ ಕಲ್ಪಿಸಬೇಕು. ಕಾರ್ಯಕರ್ತರ ಶ್ರಮ ಮತ್ತು ಬೆಂಬಲದೊಂದಿಗೆ ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಪ್ರತಿಯೊಬ್ಬ ಕಾರ್ಯಕರ್ತನೂ ಮನೆ ಮನೆಗೆ ತೆರಳಿ, ಕಾಂಗ್ರೆಸ್ ವೈಫಲ್ಯವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಗೆಲುವಿಗೆ ಶ್ರಮಿಸಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎಂದುವುದನ್ನು ಬಿಜೆಪಿ ತನ್ನ ಸಾಮರ್ಥ್ಯದಿಂದ ತೋರಿಸಿಕೊಟ್ಟಿದ್ದು, ಕಾಂಗ್ರೆಸ್‌ನ ವಿಫಲತೆ ನಮ್ಮ ಸ್ಪಷ್ಟತೆಯಿಂದಾಗಿ ಗೆಲುವು ಸಿಕ್ಕಿದೆ. ಹೀಗಾಗಿ ವಾರ್ಡ್‌ನ ಆದ್ಯತೆಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಶಾಸಕ ಕಳಕಪ್ಪ ಬಂಡಿ ಮಾತನಾಡಿ, ‘ಜಿಲ್ಲೆಯ ರೋಣ, ನರಗುಂದ ಹಾಗೂ ಶಿರಹಟ್ಟಿಯಲ್ಲಿ ಪಕ್ಷ ತೀರ್ಮಾನಿಸುವ ಅಭ್ಯರ್ಥಿ ಪರ ಚುನಾವಣೆ ಮಾಡುತ್ತೇವೆ. ಆದರೆ, ಗದಗಿನಲ್ಲಿ ಚುನಾವಣೆ ಮಾಡುವುದು ಸುಲಭವಲ್ಲ. ನಮ್ಮಲ್ಲಿನ ಅಸಮಾಧಾನ, ಒಮ್ಮತವಿಲ್ಲದ ಕಾರಣ ಕಳೆದ ಎರಡು ಬಾರಿ ಅನಿಲ್ ಮೆಣಸಿನಕಾಯಿ ಸೋತಿದ್ದಾರೆ ಎಂದರು.

‘ಗದಗನಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬುದು ನಗರ ಹಾಗೂ ಗ್ರಾಮೀಣ ಭಾಗದ ಕಟ್ಟ ಕಡೆಯ ಕಾರ್ಯಕರ್ತನ ಅಪೇಕ್ಷೆಯಾಗಿತ್ತು. ಅದರಂತೆ ಅಧಿಕಾರಕ್ಕೆ ಬಂದಿದೆ. ಚುನಾವಣೆಯಲ್ಲಿ ಪಕ್ಷದ ಮತ್ತೊಬ್ಬರಿಗೆ ಅವಕಾಶ ಸಿಕ್ಕಿದ್ದರೆ, ಅದು ನಮಗೆ ಸಿಕ್ಕಿದೆ ಎಂದು ಭಾವಿಸಬೇಕು. ಅಲ್ಲದೇ, ಪಕ್ಷ ನಿಷ್ಠೆ ಹೊಂದುವ ಮೂಲಕ ಜನರ ಜೊತೆ ನಿಕಟ ಸಂಪರ್ಕ ಹೊಂದಿರಬೇಕು. ಜನರ ಸಮಸ್ಯೆಗಳಿಗೆ ಹಂತ ಹಂತವಾಗಿ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಮಾತನಾಡಿ, ‘ಮಿಷನ್-24 ವಾರ್ಡಗಳಲ್ಲಿ ಗೆಲ್ಲುವ ಗುರಿ ಹೊಂದಲಾಗಿತ್ತು. ಆದರೆ, 18ರಲ್ಲಿ ಗೆದ್ದಿದ್ದರೂ ತೃಪ್ತಿ ನೀಡಿಲ್ಲ. ಹೀಗಾಗಿ ಚುನಾವಣೆಯಲ್ಲಿ ಗೆದ್ದವರು ಹಿಗ್ಗಬಾರದು. ಸೋತವರು ಕುಗ್ಗಬಾರದು. ಜಯ ಸಾಧಿಸಿದವರು, ಪರಾಭಾವಗೊಂಡವರು ಒಟ್ಟಾಗಿ ವಾರ್ಡ್‌ಗಳಲ್ಲಿ ಕೆಲಸ ಮಾಡಬೇಕು. ಗೆಲುವಿಗೆ ಕಾರಣಾರಾಗಿರುವ ಜನರಿಗೆ ಕೊಟ್ಟ ಮಾತನ್ನು ಈಡೇರಿಸುವ ಮೂಲಕ ಸಚಿವರ ಗೌರವವನ್ನು ಹೆಚ್ಚಿಸಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಎಂ.ಎಸ್.ಕರಿಗೌಡ್ರ, ರಾಜು ಕುರುಡಗಿ, ಭೀಮಸಿಂಗ್ ರಾಥೋಡ, ರವಿ ದಂಡಿನ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ರಾಮಣ್ಣ ಲಮಾಣಿ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ ಸೇರಿದಂತೆ ನೂತನ ನಗರಸಭೆ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

‘ಪಕ್ಷದ ಶಾಲು ಕಾರ್ಯಕರ್ತರಿಗೆ ತಂದೆ-ತಾಯಿ ಇದ್ದಂತೆ. ಈ ಶಾಲು ಧರಿಸಿಕೊಂಡು ವಿರೋಧ ಮಾಡಿದರೆ, ವ್ಯಭಿಚಾರ ಮಾಡಿದಂತೆ ಎಂದ ಅವರು, ಸೋತವರು ಧೃತಿಗೆಡುವ ಅಗತ್ಯವಿಲ್ಲ. ಅವರೊಂದಿಗೆ ನಾವೀದ್ದೇವೆ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಜನರು ಗಟ್ಟಿಯಾಗಿ ನಿಂತು ಮತ ನೀಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಮುನ್ನಡೆಸಬೇಕು.

ಸಿ. ಸಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

ಖಾಸಗಿ ಕಾಲೇಜಿನಲ್ಲಿ ಲಸಿಕಾಕರಣಕ್ಕೆ ಚಾಲನೆ; ಬಿಜೆಪಿ ಸಮಾರಂಭವಾಗಿ ಮಾರ್ಪಟ್ಟ ಕಾರ್ಯಕ್ರಮ?

0

*ಬಿಜೆಪಿ ಕಾರ್ಯಕ್ರಮವಾದ ಲಸಿಕಾ ಉದ್ಘಾಟನಾ ಕಾರ್ಯಕ್ರಮ
*ಸಚಿವರನ್ನು ಹಿಂಬಾಲಿಸಿ ಬಂದ ನಗರಸಭೆ ನೂತನ ಚುನಾಯಿತ ಸದಸ್ಯರು
*ಪತ್ರಕರ್ತರಿಗೆ ಮಿಸಲಿದ್ದ ಜಾಗ ಅಕ್ರಮಿಸಿ ಬೇಜಾವಬ್ದಾರಿ ಮರೆತ ಕಮಲ ಸದಸ್ಯರು

ವಿಜಯಸಾಕ್ಷಿ ಸುದ್ದಿ, ಗದಗ:

ಇಲ್ಲಿನ ಆದರ್ಶ ಶಿಕ್ಷಣ ಸಮಿತಿಯ ದೇವದತ್ತ ಶಂಕರರಾವ್ ಕುರ್ತಕೋಟಿ ಮೆಮೊರಿಯಲ್ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ 15-18 ವರ್ಷದ ಮಕ್ಕಳ ಕೋವಿಡ್ ಕೋವ್ಯಾಕ್ಸಿನ್ ಲಸಿಕಾಕರಣಕ್ಕೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಚಾಲನೆ ನೀಡಿದರು.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಒಂದು ಸರ್ಕಾರಿ ಕಾಲೇಜ ಇದ್ದರು ಜಿಲ್ಲಾಡಳಿತಕ್ಕೆ ಖಾಸಗಿ‌ ಕಾಲೇಜುಗಳ ಮೇಲೆ ಮೋಹ ಹೆಚ್ಚಾದಂತೆ ಕಾಣಿಸುತ್ತಿದೆ. ಸರ್ಕಾರದ ಮಹತ್ತರ ಕೋವಿಡ್ ಲಸಿಕಾಕರಣ ಚಾಲನೆ ಕಾರ್ಯಕ್ರಮವನ್ನು ಸರ್ಕಾರಿ‌ ಕಾಲೇಜಿನಲ್ಲಿ ಏರ್ಪಡಿಸಿ ಜಾಗೃತಿ ಮೂಡಿಸುವುದು ಬಿಟ್ಟು ಅವಳಿ ನಗರದ ಅನುದಾನಿತ ಖಾಸಗಿ ಕಾಲೇಜಿನಲ್ಲಿ ಹಮ್ಮಿಕೊಂಡಿರುವುದು ವಿಪರ್ಯಾಸ.

ಇನ್ನು ಲಸಿಕಾ ಉದ್ಘಾಟನಾ ಕಾರ್ಯಕ್ರಮವು ಬಿಜೆಪಿ ಕಾರ್ಯಕ್ರಮವಾಗಿ ಮಾರ್ಪಟ್ಟಿತು. ಸಚಿವರನ್ನು ಹಿಂಬಾಲಿಸಿ ಬಂದ ಗದಗ-ಬೆಟಗೇರಿ ನಗರಸಭೆ ನೂತನ ಚುನಾಯಿತ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಮಿಸಲಿರಿದ್ದ ಫ್ರಂಟ್ ಲೈನ್ ಜಾಗವನ್ನು ಅಕ್ರಮಿಸಿ ಬೇಜಾವಬ್ದಾರಿತನ ಮರೆತರು.

ಸರ್ಕಾರದ ನಿರ್ದೇಶನದ ಪ್ರಕಾರ ಮಕ್ಕಳ ಪಾಲಕರು ಲಸಿಕೆ ಹಾಕಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ ಕಾಲೇಜುಗಳಲ್ಲಿ‌ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಸೋಮವಾರ ಲಸಿಕಾಕರಣ ಚಾಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಿದ್ದ ಕಾರಣ ಸರ್ಕಾರಿ ಕಾಲೇಜಿನಲ್ಲಿ ಇನ್ನೂವರೆಗೂ ಪಾಲಕರ ಒಪ್ಪಿಗೆ ಸೂಚಿಸದ ಕಾರಣದಿಂದಾಗಿ ಅನುದಾನಿತ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆರ್ಸಿಎಚ್ ಅಧಿಕಾರಿ ಡಾ.ಬಿ.ಎಂ.ಗೊಜನೂರ ತಿಳಿಸಿದರು. ಆದರೆ, ಸರ್ಕಾರಿ ಕಾಲೇಜುಗಳಲ್ಲಿ ಮಕ್ಕಳ ಪಾಲಕರು ಲಸಿಕೆಗೆ ಸೂಚಿಸಿಲ್ಲ ಎನ್ನುವುದು ಅತ್ಯಂತ ದುರಾದೃಷ್ಟಕರ ಸಂಗತಿ.

ಈ ಸಂದರ್ಭದಲ್ಲಿ ಶಾಸಕ ಎಚ್.ಕೆ.ಪಾಟೀಲ್, ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ಸಿಇಒ ಭರತ್, ಎಸ್ಪಿ ಶಿವಪ್ರಕಾಶ್ ದೇವರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಡಿಡಿಪಿಯು ಎಂ.ಎಂ.ಕಾಂಬಳೆ, ನಗರಸಭೆಯ ಸದಸ್ಯ ಸುರೇಶ ಕಟ್ಟಿಮನಿ, ಡಿಎಚ್ ಒ ಡಾ.ಸತೀಶ‌ಬಸರಿಗಿಡದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಗದಗ-ಬೆಟಗೇರಿ ನಗರಸಭೆ ಉಪಾಧ್ಯಕ್ಷ ಪಟ್ಟ ಯಾರಿಗೆ?; ಬಿಜೆಪಿ ಇಬ್ಬರು ಸದಸ್ಯರು ಹೈಜಾಕ್ !

*ಗದಗ-ಬೆಟಗೇರಿ ನಗರಸಭೆ ಉಪಾಧ್ಯಕ್ಷ ಪಟ್ಟಕ್ಕಾಗಿ ಶ್ವೇತಾ ದಂಡಿನ, ಸುನಂದಾ ಬಾಕಳೆ, ಶೈಲಾ ಬಾಕಳೆ ಮಧ್ಯೆ ಪೈಪೋಟಿ

ದುರಗಪ್ಪ ಹೊಸಮನಿ:

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ 14 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಭದ್ರಕೋಟೆ ಬೇಧಿಸಿರುವ ಕಮಲ ಪಡೆಯಲ್ಲೀಗ ಅಧ್ಯಕ್ಷರು ಯಾರಾಗುತ್ತಾರೆ? ಎಂಬ ಬಗ್ಗೆ ಸ್ಪಷ್ಟತೆ ಇದೆ. ಆದರೆ, ಉಪಾಧ್ಯಕ್ಷ ಕುರ್ಚಿ ಯಾರ ಪಾಲಾಗಲಿದೆ ಎಂಬ ಚರ್ಚೆ ಶುರುವಾಗಿದೆ.

ಚುನಾವಣಾ ಪೂರ್ವದಲ್ಲಿಯೇ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಿದೆ. ಹೀಗಾಗಿ ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆದಿತ್ತು. ಸದ್ಯ 18 ಜನ ಬಿಜೆಪಿ ಸದಸ್ಯರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಉಷಾ ಮಹೇಶ ದಾಸರ ಒಬ್ಬರೇ ಇದ್ದಾರೆ. ಹೀಗಾಗಿ ಯಾರೊಬ್ಬರ ಪೈಪೋಟಿ ಇರದ ಕಾರಣ ಸುಲಭವಾಗಿ ನಗರಸಭೆ ಅಧ್ಯಕ್ಷರಾಗಲಿದ್ದಾರೆ.

ನಗರಸಭೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದೆ. ಬಿಜೆಪಿಯಿಂದ ಆಯ್ಕೆಯಾದ ಸದಸ್ಯರಲ್ಲಿ ಕೆಲವರ ಮಧ್ಯೆ ಉಪಾಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಅದರಲ್ಲಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ರವಿ ದಂಡಿನ ಅವರ ಪುತ್ರಿ 11ನೇ ವಾರ್ಡಿನ ಸದಸ್ಯೆ ಶ್ವೇತಾ ದಂಡಿನ ಹಾಗೂ ಹಿಂದುಳಿದ ವರ್ಗಗಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಾಕಳೆ ಅವರ ಪತ್ನಿ 32ನೇ ವಾರ್ಡಿನ ಸುನಂದಾ ಬಾಕಳೆ ಮುಂಚೂಣಿಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರೊಂದಿಗೆ ವೈಯಕ್ತಿಕವಾಗಿ ಉತ್ತಮ ಬಾಂಧವ್ಯ ಹೊಂದಿರುವ ರವಿ ದಂಡಿನ ಅವರು ಮೊದಲ ಬಾರಿಗೆ ರಾಜಕೀಯ ರಂಗ ಪ್ರವೇಶಿಸಿರುವ ತಮ್ಮ ಮಗಳನ್ನು ಉಪಾಧ್ಯಕ್ಷ ಪಟ್ಟದಲ್ಲಿ ಕೂರಿಸಬೇಕೆಂದು ಪಣತೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಅದರಂತೆ, 31ನೇ ವಾರ್ಡಿನ ಶೈಲಾ ನರಸಿಂಗಸಾ ಬಾಕಳೆ ಸಹಿತ ಉಪಾಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ ಎನ್ನಲಾಗುತ್ತಿದ್ದು, ಕೊನೆ ಘಳಿಗೆಯಲ್ಲಿ ಯಾರಿಗೆ ಉಪಾಧ್ಯಕ್ಷ ಪಟ್ಟ ಒಲಿಯಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

ಬಿಜೆಪಿಯ ಇಬ್ಬರು ಸದಸ್ಯರು ಹೈಜಾಕ್?

ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನಗಳಲ್ಲಿ ಗೆಲುವು ಸಾಧಿಸಿ, ಅಧಿಕಾರ ಹಿಡಿಯುವಲ್ಲಿ ಸೋತು ಹತಾಶೆಗೊಂಡಿದೆ. ಹೀಗಾಗಿ ಶತಾಯಗತಾಯ ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯಲೇಬೇಕೆಂದು ರಣತಂತ್ರ ರೂಪಿಸುತ್ತಿದೆ. ಇತ್ತ ಮ್ಯಾಜಿಕ್ ಸಂಖ್ಯೆ 18 ಸ್ಥಾನಗಳಲ್ಲಿ ಜಯಿಸಿರುವ ಬಿಜೆಪಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಭರ್ಜರಿ ಸಿದ್ಧತೆ ನಡೆಸಿದೆ. ಈ ಬೆನ್ನಲ್ಲೇ ಆಪರೇಷನ್ ಹಸ್ತ ಮೂಲಕ ಬಿಜೆಪಿಯ ಇಬ್ಬರು ಸದಸ್ಯರನ್ನು ಹೇಗಾದರೂ ಮಾಡಿ ತನ್ನತ್ತ ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದೆ ಎಂಬ ಮಾತುಗಳು ಅವಳಿ ನಗರದಲ್ಲಿ ಕೇಳಿ ಬರುತ್ತಿದ್ದು, ಇದು ಅವಳಿ ನಗರದ ಜನರಲ್ಲಿ ಹಾಗೂ ನಗರಸಭೆ ಸದಸ್ಯರಲ್ಲಿ ಗೊಂದಲ ಮೂಡಿಸುವ ಸಲುವಾಗಿ ಹಬ್ಬಿರುವ ರೂಮರ್ ಎಂದೂ ಹೇಳಲಾಗುತ್ತಿದೆ.

ಸದ್ಯಕ್ಕೆ ತಟಸ್ಥರಿದ್ದೇವೆ. ನಮ್ಮ ಗೆಲುವಿಗಾಗಿ ತನು ಮನ ಧನದಿಂದ ಶ್ರಮಿಸಿದ ವಾರ್ಡಿನ ಮತದಾರರ, ವಿವಿಧ ಸಮಾಜದ ಮುಖಂಡರ, ಗೆಳೆಯರ, ಬೆಂಬಲಿಗರಮ ಅಭಿಮಾನಿಗಳ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು.

ಮೆಹಬೂಬ(ಚುಮ್ಮಿ) ನದಾಫ್ ಹಾಗೂ ಆಸ್ಮಾ ಮುನ್ನಾ ರೇಶ್ಮಿ, ವಿಜೇತ ಪಕ್ಷೇತರರು

ಇಲ್ಲಿಯವರೆಗೂ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಪಕ್ಷದವರು ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದಕ್ಕೆ ನಮ್ಮ ಸಹಮತವಿರುತ್ತದೆ. ಉಪಾಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಸಿಲ್ಲ. ಪಕ್ಷದ ಹಿರಿಯರು, ಮುಖಂಡರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧವಾಗಿದ್ದೇವೆ.

ರವಿ ದಂಡಿನ, ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯದರ್ಶಿ

ನಾಳೆಯಿಂದ ಗದಗ ಜಿಲ್ಲೆಯ 55,880 ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೋವ್ಯಾಕ್ಸಿನ್ ಲಸಿಕೆ

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ 15-18 ವರ್ಷದೊಳಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನಾಳೆಯಿಂದ(ಜ.3) ಕೋವಿಡ್ ಲಸಿಕೆ ಹಾಕಲಾಗುತ್ತಿದ್ದು, ಸೋಮವಾರ ಲಸಿಕಾಕರಣ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಚಾಲನೆ ನೀಡಲಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 55,880 ಜನ 15-18 ವರ್ಷದೊಳಗಿನ ವಿದ್ಯಾರ್ಥಿಗಳಿದ್ದು, ಲಸಿಕಾರಣಕ್ಕೆ ಆರೋಗ್ಯ ಇಲಾಖೆ 50 ಕಡೆ ಸಿದ್ಧತೆ ಮಾಡಿಕೊಂಡಿದೆ. ಅದರಂತೆ, 14 ಸಾವಿರ ಕೋವ್ಯಾಕ್ಸಿನ್ ಡೋಸ್ ಸಂಗ್ರಹವಿಟ್ಟುಕೊಂಡಿದೆ. ಲಸಿಕಾಕರಣದ ಮೊದಲ ದಿನ 5 ಸಾವಿರ ವಿದ್ಯಾರ್ಥಿಗಳಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕುವ ಗುರಿ ಹೊಂದಿದ್ದು, ಒಂದು ವಾರದೊಳಗೆ ಎಲ್ಲರಿಗೂ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.

ಸೋಮವಾರದಿಂದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೂ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಿದ್ದಾರೆ. ಇನ್ನು ಗೈರಾದ ವಿದ್ಯಾರ್ಥಿಗಳು ಸಮೀಪದ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಎಂದು ಆರ್ ಸಿಎಚ್ ಅಧಿಕಾರಿ ಡಾ.ಬಿ.ಎಂ.ಗೊಜನೂರ ‘ವಿಜಯಸಾಕ್ಷಿ’ ಗೆ ತಿಳಿಸಿದರು.

ಶಲವಡಿಯಲ್ಲಿ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ನವಲಗುಂದ:

ತಾಲ್ಲೂಕಿನ ಶಲವಡಿ ಶ್ರೀವೀರಭದ್ರೇಶ್ವರ ಮಹಾ ರಥೋತ್ಸವ ಹಾಗೂ ಲಕ್ಷ ದೀಪೋತ್ಸವ ಅಂಗವಾಗಿ ಡಿ.31 ಮತ್ತು ಜ.1 ರಂದು ಧರ್ಮ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ನರಗುಂದದ ಪತ್ರಿವನಮಠದ ಸ್ವಾಮೀಜಿ ಮತ್ತು ನವಲಗುಂದ ಗವಿಮಠದ ಸ್ವಾಮೀಜಿ, ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ, ಸಾಹಿತಿ ಶ್ರೀಶೈಲ್ ಹುದ್ದಾರ್ ಉಪಸ್ಥಿತರಿದ್ದರು.

ನಗರಸಭೆ ಬಿಜೆಪಿ ಸದಸ್ಯೆಯ ಕಾರು ಡಿಕ್ಕಿ; ಮಹಾಲಕ್ಷ್ಮಿ ದೇವಸ್ಥಾನ ಧ್ವಂಸ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಬೆಟಗೇರಿ ನಗರಸಭೆಗೆ ನೂತನವಾಗಿ ಆಯ್ಕೆಯಾಗಿರುವ 32ನೇ ವಾರ್ಡಿನ ಬಿಜೆಪಿ ಸದಸ್ಯೆಯ ಕಾರು ಡಿಕ್ಕಿ ಹೊಡೆದ ಪರಿಣಾಮ ದೇವಸ್ಥಾನ ಧ್ವಂಸಗೊಂಡಿರುವ ಘಟನೆ ಗುರುವಾರ ಮಧ್ಯೆರಾತ್ರಿ ಅವಳಿ ನಗರದ ಟಾಂಗಾಕೂಟ ಬಳಿ ನಡೆದಿದೆ.

ಬಿಜೆಪಿ ಸದಸ್ಯೆ ಸುನಂದಾ ಪ್ರಕಾಶ್ ಬಾಕಳೆಗೆ ಸೇರಿದ (ಕೆಎ 26 ಎನ್ 2360) ಕಾರನ್ನು ಸುನಂದಾ ಅವರ ಪುತ್ರ ಚಲಾಯಿಸುತ್ತಿದ್ದ ಎನ್ನಲಾಗಿದೆ.

ಕಾರು ಮೊದಲಿಗೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡಿದಿದ್ದು, ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದಿದೆ. ಬಳಿಕ ಪುರಾತನ ಕಾಲದ ಹಳೆಯ ಮಹಾಲಕ್ಷ್ಮಿ ಗುಡಿ ಧ್ವಂಸವಾಗಿದೆ.

ಇನ್ನು ಘಟನೆಯ ಭೀಕರತೆ ನೋಡಿದರೆ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಇದುವರೆಗೂ ಪ್ರಕರಣ ದಾಖಲಾಗಿಲ್ಲ.

ಮತ್ತೇ ‘ಕೈ’ ಮುಂದೆ, ಆದ್ರೂ ಅಧಿಕಾರ ಬಿಜೆಪಿಯದ್ದೇ!!

0

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ

-ಕನಕಗಿರಿಯಲ್ಲಿ ಶಾಸಕ ದಢೇಸೂಗುರುಗೆ ಮುಖಭಂಗ

-ಉಸ್ತುವಾರಿ ಸಚಿವ ಹಾಲಪ್ಪ ಕ್ಷೇತ್ರದ ಕುಕನೂರಿನಲ್ಲಿ ಸಮಬಲ!!

ಬಸವರಾಜ ಕರುಗಲ್,
ವಿಜಯಸಾಕ್ಷಿ ವಿಶೇಷ, ಕೊಪ್ಪಳ: ಸ್ಥಳೀಯ ಸಂಸ್ಥೆಗಳ ಸಂಗ್ರಾಮಕ್ಕೆ ತೆರೆ ಬಿದ್ದಿದೆ. ಕೊಪ್ಪಳ ಜಿಲ್ಲೆಯ 5 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಮೇಲ್ನೋಟಕ್ಕೆ ಕೈ ಮುಂದಿದೆಯಾದರೂ, ನಾಲ್ಕು ಕಡೆ ಗದ್ದುಗೆ ಮಾತ್ರ ಬಿಜೆಪಿಯದ್ದೇ ಎನ್ನುವ ವಾತಾವರಣ ಸದ್ಯಕ್ಕಿದೆ.

ಜಿಲ್ಲೆಯ ಕನಕಗಿರಿ, ಭಾಗ್ಯನಗರ, ಕುಕನೂರು ಮತ್ತು ತಾವರಗೇರಾ ಪಟ್ಟಣ ಪಂಚಾಯಿತಿ ಹಾಗೂ ಕಾರಟಗಿ ಪುರಸಭೆ ಸೇರಿದಂತೆ 5 ಸ್ಥಳೀಯ ಸಂಸ್ಥೆಗಳ 96 ವಾರ್ಡ್‌ಗಳ ಚುನಾವಣಾ ಫಲಿತಾಂಶ ಬಂದಿದ್ದು 49ರಲ್ಲಿ ಕಾಂಗ್ರೆಸ್, 41ರಲ್ಲಿ ಬಿಜೆಪಿ, 1ರಲ್ಲಿ ಜೆಡಿಎಸ್ ಹಾಗೂ 5 ವಾರ್ಡ್‌ಗಳಲ್ಲಿ ಪಕ್ಷೇತರರು ಗೆಲುವಿನ ನಗೆ ಬೀರಿದ್ದಾರೆ.

ಕಳೆದ ಅವಧಿಯಲ್ಲಿ ಜಿಲ್ಲೆಯ ಈ ಐದೂ ಸ್ಥಳೀಯ ಸಂಸ್ಥೆಗಳ ಪೈಕಿಯ 96 ವಾರ್ಡ್‌ಗಳಲ್ಲಿ 50ರಲ್ಲಿ ಕಾಂಗ್ರೆಸ್, 40ರಲ್ಲಿ ಬಿಜೆಪಿ ಹಾಗೂ 6 ಕಡೆ ಪಕ್ಷೇತರರು ಚುನಾಯಿತರಾಗಿದ್ದರು. ಜೆಡಿಎಸ್, ಖಾತೆಯನ್ನೇ ತೆರೆದಿರಲಿಲ್ಲ.

ಕಳೆದ ಅವಧಿಯ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ ಕಾಂಗ್ರೆಸ್‌ಗೆ 1 ಕಡೆ ನಷ್ಟವಾದರೆ, ಬಿಜೆಪಿಗೆ 1 ಕಡೆ ಲಾಭ ಆಗಿದೆ. ಜೆಡಿಎಸ್ ಸಹ 1 ಕಡೆ ಖಾತೆ ತೆರೆದಿದ್ದು ಸಾಧನೆಯೇ ಸರಿ.

ಎಲ್ಲೆಲ್ಲಿ ಯಾವ್ಯಾವ ಪಕ್ಷಕ್ಕೆ ಗದ್ದುಗೆ?
ಕಾರಟಗಿ ಪುರಸಭೆಯ 23 ಸ್ಥಾನಗಳ ಪೈಕಿ ಹಿಂದಿನ ಅವಧಿಯಲ್ಲಿ 12 ಕಾಂಗ್ರೆಸ್, 10 ಬಿಜೆಪಿ ಹಾಗೂ 1 ಪಕ್ಷೇತರ ಇದ್ದು ಎರಡೂ ಪಕ್ಷಗಳು ಅಧಿಕಾರ ಅನುಭವಿಸಿದ್ದವು. ಈ ಅವಧಿಗೆ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 11 ಸ್ಥಾನಗಳನ್ನು ಗಳಿಸಿದ್ದು, ಒಂದು ಸ್ಥಾನ‌ ಜೆಡಿಎಸ್‌ಗೂ ಲಭಿಸಿದೆ. ಜೆಡಿಎಸ್ ಇಲ್ಲಿ‌ ನಿರ್ಣಾಯಕವಾಗಿದ್ದು, ಬಹುತೇಕ ಬಿಜೆಪಿಯ ಪಾಲಿಗೆ ಗದ್ದುಗೆ ಸಿಗಲಿದೆ.

ಕನಕಗಿರಿ ಪಟ್ಟಣ ಪಂಚಾಯಿತಿಯ 17 ಸ್ಥಾನಗಳ ಪೈಕಿ ಹಿಂದಿನ ಅವಧಿಯಲ್ಲಿ 9 ಕಾಂಗ್ರೆಸ್, 5 ಬಿಜೆಪಿ ಮತ್ತು 3 ಪಕ್ಷೇತರ ಇದ್ದು, ಎರಡೂ ಪಕ್ಷಗಳು ಅಧಿಕಾರ ಅನುಭವಿಸಿದ್ದವು. ಈ ಅವಧಿಗೆ 12 ಕಾಂಗ್ರೆಸ್ ಹಾಗೂ 5 ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದು, ಗದ್ದುಗೆ ಬಹುತೇಕ ಕಾಂಗ್ರೆಸ್ ಪಾಲಾಗಿದೆ. ಆದರೆ ಆಡಳಿತಾರೂಢ ಸರಕಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಯಾವ ವರ್ಗಕ್ಕೆ ನೀಡುತ್ತದೆ ಎಂಬುದರ ಮೇಲೆ ಅದು ನಿಂತಿದೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದ ಭಾಗ್ಯನಗರ ಪಟ್ಟಣ ಪಂಚಾಯತಿಯ 19 ಸ್ಥಾನಗಳಿಗೆ ಸಂಬಂಧಿಸಿದಂತೆ ಹಿಂದಿನ‌ ಅವಧಿಗೆ 8 ರಲ್ಲಿ ಕಾಂಗ್ರೆಸ್, 10ರಲ್ಲಿ ಬಿಜೆಪಿ ಹಾಗೂ 1 ಪಕ್ಷೇತರ ಆಯ್ಕೆಯಾಗಿದ್ದು, ಇಲ್ಲೂ ಸಹ ಎರಡೂ ಪಕ್ಷಗಳು ಅಧಿಕಾರ ಅನುಭವಿಸಿವೆ. ಈ ಬಾರಿ ಮತ್ತೇ 8 ರಲ್ಲಿ ಕಾಂಗ್ರೆಸ್, 9ರಲ್ಲಿ ಬಿಜೆಪಿ ಹಾಗೂ 2 ಪಕ್ಷೇತರರು ಆಯ್ಕೆಯಾಗಿದ್ದು, ಪಕ್ಷೇತರರು ಯಾವ ಪಕ್ಷದ ಕಡೆ ವಾಲುತ್ತಾರೊ, ಅದೇ ಪಕ್ಷ ಗದ್ದುಗೆಗೆ ಏರಲಿದೆ. ಕಮಲ ಅಧಿಕಾರಕ್ಕೆ ಬರುವುದು ಬಹುತೇಕ ಫೈನಲ್.

ಕುಷ್ಟಗಿ ವಿಧಾನಸಭಾ ಕ್ಷೇತ್ರದ ತಾವರಗೇರಾ ಪಟ್ಟಣ ಪಂಚಾಯಿತಿಯ 18 ಸ್ಥಾನಗಳಲ್ಲಿ ಹಿಂದಿನ ಅವಧಿಗೆ 10 ಕಾಂಗ್ರೆಸ್, 7 ಬಿಜೆಪಿ ಹಾಗೂ 1 ಪಕ್ಷೇತರ ಆಯ್ಕೆಯಾಗಿದ್ದು ಕಾಂಗ್ರೆಸ್ ಆಡಳಿತ ನಡೆಸಿತ್ತು. ಈ ಸಲ 8ರಲ್ಲಿ ಕಾಂಗ್ರೆಸ್, 7ರಲ್ಲಿ ಬಿಜೆಪಿ, 3 ಪಕ್ಷೇತರರು ಆಯ್ಕೆಯಾಗಿದ್ದು, ಪಕ್ಷೇತರರೇ ನಿರ್ಣಾಯಕ. ಇಲ್ಲೂ ಸಹ ಈ ಸಲ ಬಿಜೆಪಿಯೇ ಗದ್ದುಗೆ ಹಿಡಿಯುವ ಸಾಧ್ಯತೆಗಳು ನಿಶ್ಚಳವಾಗಿವೆ.

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುಕನೂರು ಪಟ್ಟಣ ಪಂಚಾಯಿತಿಯ 19 ಸ್ಥಾನಗಳ ಪೈಕಿ ಹಿಂದಿನ ಅವಧಿಗೆ 11 ಕಾಂಗ್ರೆಸ್, 8 ಬಿಜೆಪಿ ಸ್ಥಾನಗಳಿದ್ದು ಎರಡೂ ಪಕ್ಷಗಳು ಅಧಿಕಾರ ಕಂಡಿದ್ದವು. ಈ ಸಲ 10 ಕಾಂಗ್ರೆಸ್, 9 ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದು, ಮೇಲ್ನೋಟಕ್ಕೆ ಕಾಂಗ್ರೆಸ್ ಮುಂಚೂಣಿ ಎನಿಸಿದರೂ ಉಸ್ತುವಾರಿ ಸಚಿವರ ಕ್ಷೇತ್ರ ಆಗಿರುವುದರಿಂದ ಗದ್ದುಗೆ ಗುದ್ದಾಟ ನಿಶ್ಚಿತ. ಸಂಸದ, ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯ ಮತ ಚಲಾಯಿಸಿದರೂ ಸಮಬಲವನ್ನ ಇಲ್ಲಿ ಕಾಣಬಹುದು. ಈ ಸ್ಥಳೀಯ ಸಂಸ್ಥೆ ಯಾವ ಪಕ್ಷದ ಪಾಲಾಗಲಿದೆ ಎಂಬುದು ಮಾತ್ರ ಕುತೂಹಲದ ಸಂಗತಿಯಾಗಿ ಉಳಿದುಕೊಂಡಿದೆ.

ಉಷಾ ದಾಸರ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ? ಮತ್ತೊಮ್ಮೆ ಅಧಿಕಾರ ಹಿಡಿಯಲು ‘ಆಪರೇಷನ್’ಗೆ ಮುಂದಾಗುತ್ತಾ ಕಾಂಗ್ರೆಸ್!

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿರುವ ಬೆನ್ನಲ್ಲೇ ಸ್ಥಳೀಯ ಸಂಸ್ಥೆಯ ಸಿಂಹಾಸನಾಧೀಶ ಯಾರಾಗುತ್ತಾರೆಂಬ ಚರ್ಚೆ ಶುರುವಾಗಿದೆ. ಈಗಾಗಲೇ 18 ಸ್ಥಾನ ಗೆದ್ದಿರುವ ಬಿಜೆಪಿ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬೇಕಾಗಿರುವ ಸ್ಪಷ್ಟ ಬಹುಮತ ಹೊಂದಿದ್ದು, 35ನೇ ವಾರ್ಡಿನಲ್ಲಿ ಜಯಶೀಲರಾಗಿರುವ ಉಷಾ ಮಹೇಶ ದಾಸರ ಅವರು ಅಧ್ಯಕ್ಷರಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.

ಚುನಾವಣೆ ಪೂರ್ವದಲ್ಲೇ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಪ್ರಕಟಗೊಂಡಿದ್ದು, ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಪ್ರವರ್ಗ-2ಎಗೆ ಮೀಸಲಿರಿಸಲಾಗಿದೆ. ಹೀಗಾಗಿ ಆಯ್ಕೆಗೊಂಡಿರುವ 18 ಜನ ಬಿಜೆಪಿ ಅಭ್ಯರ್ಥಿಗಳಲ್ಲಿ ಉಷಾ ದಾಸರ ಅವರೊಬ್ಬರೇ ಪರಿಶಿಷ್ಟ ಜಾತಿಗೆ ಸೇರಿದ ಸದಸ್ಯರಿದ್ದು, ಬಹುತೇಕ ಉಸಾ ದಾಸರ ಅವರೇ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅವಳಿ ನಗರದ 35ನೇ ವಾರ್ಡಿನಲ್ಲಿ ಈ ಹಿಂದೆ ನಗರಸಭೆ ಅಧ್ಯಕ್ಷರಾಗಿದ್ದ ನಾಗರತ್ನಾ ಶಿವಪ್ಪ ಮುಳಗುಂದ ಎಂಬ ಪ್ರಭಾವಿ ಅಭ್ಯರ್ಥಿಯ ವಿರುದ್ಧ ಭರ್ಜರಿ ಜಯ ಸಾದಿಸುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಪರಿಶಿಷ್ಟ ಜಾತಿಯಲ್ಲಿ ಬರುವ ದಾಸರ ಸಮುದಾಯ ರಾಜ್ಯದಲ್ಲಿ 52 ಸಾವಿರ ಜನಸಂಖ್ಯೆ ಹೊಂದಿದ್ದು, ರಾಜ್ಯದಲ್ಲಿಯೇ ಉಷಾ ಅವರು ಪ್ರಥಮ ಮಹಿಳಾ ನಗರಸಭೆ ಸದಸ್ಯರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಅದರಂತೆ, 2001ರಲ್ಲಿ ಕೊಪ್ಪಳದ ನಗರಸಭೆ ಚುನಾವಣೆಯಲ್ಲಿ ಮಾಜಿ ನಗರಸಭೆ ಅಧ್ಯಕ್ಷರ ವಿರುದ್ಧ ಉಷಾ ದಾಸರ ಅವರ ತಂದೆ ವೆಂಕಟೇಶ ದಾಸರ ಗೆಲುವಿನ ನಗೆ ಬೀರಿದ್ದರು. ಸುಮಾರು 21 ವರ್ಷಗಳ ಬಳಿಕ ನೆರೆಯ ಗದಗ ಜಿಲ್ಲೆಯಲ್ಲಿ ತಂದೆಯ ಹಾದಿಯಲ್ಲಿಯೇ ಸಾಗಿದ ಮಗಳು ಉಷಾ ದಾಸರ ಸಹಿತ ಮಾಜಿ ಅಧ್ಯಕ್ಷರ ವಿರುದ್ಧವೇ ಜಯಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಪಕ್ಷೇತರರತ್ತ ಕಾಂಗ್ರೆಸ್ ಚಿತ್ತ

ಗದಗ-ಬೆಟಗೇರಿ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದ್ದರೂ, ಆಪರೇಷನ್ ಕಾಂಗ್ರೆಸ್‌ನ ಭೀತಿ ಶುರುವಾಗಿದೆ. ಬಿಜೆಪಿ 18 ಸ್ಥಾನಗಳಲ್ಲಿ ಜಯಸಿದ್ದು, ಕಾಂಗ್ರೆಸ್ 15 ಹಾಗೂ ಪಕ್ಷೇತರರು ಎರಡು ಸ್ಥಾನಗಳಲ್ಲಿ ಗೆದ್ದಿದ್ದಾರೆ. ಇನ್ನು ಗೆದ್ದಿರುವ ಪಕ್ಷೇತರ ಅಭ್ಯರ್ಥಿಗಳಿಬ್ಬರೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿರುವುದು ವಿಶೇಷ. ಹೀಗಾಗಿ ಪಕ್ಷೇತರರನ್ನು ತನ್ನತ್ತ ಸೆಳೆಯುವ ಮೂಲಕ ಸಂಖ್ಯೆ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ ಎನ್ನಲಾಗಿದೆ.

ಇತ್ತ ಬಿಜೆಪಿ ನಾಯಕರೂ ಸಹಿತ ಸೇಫರ್ ಸೈಡ್ ಆಗಿ ಪಕ್ಷೇತರ ಅಭ್ಯರ್ಥಿಗಳಿಗೆ ಗಾಳ ಹಾಕಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಪಕ್ಷೇತರರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದೇ ಆದಲ್ಲಿ, ಬಿಜೆಪಿಗೆ ಮತ್ತಷ್ಟು ತಲೆನೋವು ಶುರುವಾಗಲಿದೆ. ಅಲ್ಲದೆ, 14 ವರ್ಷಗಳ ಬಳಿಕ ಸಿಕ್ಕಿರುವ ಸುವರ್ಣಾವಕಾಶ ‘ಕೈ’ ತಪ್ಪುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುವುದನ್ನು ಕಾದು ನೋಡಬೇಕಿದೆ.

ಪಕ್ಷದಿಂದ ಗೆದ್ದಿರುವ ಎಲ್ಲರೂ ಅಪ್ಪಟ ಬಿಜೆಪಿಗರು. ಅವರ ರಕ್ತದಲ್ಲೇ ಬಿಜೆಪಿ ಇದೆ. ನಮ್ಮವರನ್ನು ಹೈಜಾಕ್ ಮಾಡುವ ಅವಕಾಶ ಕಾಂಗ್ರೆಸ್‌ಗೆ ಕೊಡುವುದಿಲ್ಲ. ನಮ್ಮದು ಯುವ ಪಡೆಯಾಗಿದ್ದು, ಘಟಾನುಘಟಿಗಳಿಗೆ ಸೋಲಿನ ರುಚಿ ಉಣಬಡಿಸಿದ್ದಾರೆ. ಪಕ್ಷೇತರವಾಗಿ ಗೆದ್ದಿರುವ ಇಬ್ಬರು ಅಭ್ಯರ್ಥಿಗಳು ಕೂಡ ನಮ್ಮನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ಅನಿಲ್ ಮೆಣಸಿನಕಾಯಿ, ಬಿಜೆಪಿ ಯುವ ಮುಖಂಡರು.

ಬಿಜೆಪಿ ವನವಾಸ ಅಂತ್ಯ? ಮಿಷನ್ -30 ಹೆಸರಿನಲ್ಲಿ ಸಂಘಟಿತ ಪ್ರಚಾರದಿಂದ ಗೆದ್ದ ಕೇಸರಿ ಪಡೆ, ಕೈ ಕೊಟ್ಟ ಮುಖಂಡರು

ದುರಗಪ್ಪ ಹೊಸಮನಿ:

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ- ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಅವಳಿ ನಗರದ 35 ವಾರ್ಡ್‌ಗಳ ಪೈಕಿ 18 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ 14 ವರ್ಷಗಳ ವನವಾಸದಿಂದ ಬಿಜೆಪಿ ಮುಕ್ತಿ ಹೊಂದಿದಂತಾಗಿದ್ದು, ಕೇವಲ 15 ವಾರ್ಡ್‌ಗಳಲ್ಲಿ ಜಯಿಸಿರುವ ಕಾಂಗ್ರೆಸ್‌ಗೆ ಭಾರೀ ಮುಖಭಂಗವಾಗಿದೆ.

ಕಳೆದ ನಗರಸಭೆ ಚುನಾವಣೆಯಲ್ಲಿ ಹೀನಾಯ ಸೋಲುಂಡಿದ್ದ ಬಿಜೆಪಿ ಈ ಬಾರಿ 18 ಸ್ಥಾನ ಗೆದ್ದು ಬೀಗುತ್ತಿದ್ದರೆ, ಈ ಹಿಂದೆ 23 ಸ್ಥಾನಗಳೊಂದಿಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಕೇವಲ 15 ಸ್ಥಾನಗಳನ್ನಷ್ಟೇ ಪಡೆಯಲು ಶಕ್ತವಾಗಿದೆ. ಅದರಂತೆ, ಈ ಸಲ ಇಬ್ಬರು ಪಕ್ಷೇತರ ಅಭ್ಯರ್ಥಿಗಳಿಗೆ ಜಾಕ್‌ಪಾಟ್ ಹೊಡೆದಿದೆ.

ಕಾಂಗ್ರೆಸ್ ಸೋಲಿಗೆ ಕಾರಣವೇನು?

ಜಿಲ್ಲೆಯ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಹಿಡಿತ ಸಾಧಿಸಿರುವ ಕಾಂಗ್ರೆಸ್ ಪಕ್ಷ, ಈ ಬಾರಿ ನಗರಸಭೆ ಅಧಿಕಾರದ ಚುಕ್ಕಾಣೆ ಹಿಡಿಯುವಲ್ಲಿ ವಿಫಲವಾಗಿದೆ. ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ನಗರಸಭೆಯಲ್ಲಿ ಹಿಡಿತ ಸಾಧಿಸಿತ್ತು. ಯಾವ ಪಕ್ಷಕ್ಕೂ ಅಧಿಕಾರ ಬಿಟ್ಟಕೊಡದೇ ನಿರಂತರವಾಗಿ ಆಡಳಿತ ನಡೆಸಿತ್ತು. ಆದರೆ, ಇಷ್ಟು ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್‌ನಿಂದ ಅವಳಿ ನಗರದ ಜನ ನಿರೀಕ್ಷಿಸದಷ್ಟು ಅಭಿವೃದ್ಧಿ ಕೆಲಸಗಳಾಗಿಲ್ಲ. ಅಲ್ಲದೇ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳ ಸ್ಪರ್ಧೆ, ಪಕ್ಷದಲ್ಲಿನ ಒಳಜಗಳ, ಪಕ್ಷದಲ್ಲಿದ್ದುಕೊಂಡೆ ಬೇರೆ ಪಕ್ಷ, ಪಕ್ಷೇತರ ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ, ಗೌಡರ ಕುಟುಂಬದ ಕುಡಿಯೊಂದು ಪಕ್ಷೇತರ ಅಭ್ಯರ್ಥಿಗಳ ಪರ ಪ್ರಚಾರ ಮಾಡಿರುವುದು, ಗೆದ್ದೇ ಗೆಲ್ಲಿಸುತ್ತಾರೆ ಎಂಬ ಅಹಂಭಾವ, ಪಕ್ಷದ ಕಾರ್ಯಕರ್ತರು ಹಾಗೂ ಅವಳಿ ನಗರದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಕಾಂಗ್ರೆಸ್ ಸೋಲಿಗೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ ಗೆಲ್ಲಿಸಿದ ಅಂಶಗಳು

ಹಲವು ವರ್ಷಗಳಿಂದ ನಗರಸಭೆ ಅಧಿಕಾರಕ್ಕಾಗಿ ಕನವರಿಸುತ್ತಿದ್ದ ಬಿಜೆಪಿಯ ಕನಸು ಕಡೆಗೂ ಈಡೇರಿದೆ. ಅನೇಕ ವರ್ಷಗಳಿಂದ ಒಂದೇ ಪಕ್ಷ ಅಧಿಕಾರದಲ್ಲಿದ್ದರಿಂದ ಅಭಿವೃದ್ಧಿ ನಿರೀಕ್ಷಿಸುವುದು ಜನರಿಗೆ ಕಷ್ಟವಾಗಿತ್ತು. ಕಾಂಗ್ರೆಸ್ ಅಷ್ಟು ವರ್ಷ ಆಡಳಿತದಲ್ಲಿದ್ದರೂ ಅವಳಿ ನಗರದ ಜನರಿಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸಲಿಲ್ಲ. ನಗರಸಭೆ ವ್ಯಾಪ್ತಿಯ ರಸ್ತೆಗಳು ನಿರೀಕ್ಷಿಸಿದಷ್ಟು ಸುಧಾರಣೆ ಕಾಣಲಿಲ್ಲ. ಉದ್ಯಾನವನಗಳ ಪುನರುತ್ಥಾನವಾಗಲಿಲ್ಲ. ನಗರದ ಸೌಂದರ್ಯಕರಣಕ್ಕೆ ಆದ್ಯತೆ ನೀಡಲಿಲ್ಲ. ನಗರದ ನೈರ್ಮಲ್ಯ ಕಾಪಾಡಲಿಲ್ಲ. ಹೀಗಾಗಿ ಹೊಸ ಪಕ್ಷಕ್ಕೆ ಅಧಿಕಾರ ನೀಡಿದರೆ ಅಭಿವೃದ್ಧಿ ನೀರೀಕ್ಷಿಸಬಹುದು ಎಂಬ ಭಾವನೆಯಿಂದಾಗಿ ಜಿಡ್ಡು ಹಿಡಿದ ಕಾಂಗ್ರೆಸ್ ಆಡಳಿತದಿಂದ ಬೇಸತ್ತಿದ್ದ ಜನರು ಈ ಬಾರಿ ಬದಲಾವಣೆ ಬಯಿಸಿ ಬಿಜೆಪಿಯತ್ತ ಹೆಚ್ಚು ಒಲವು ತೋರಿದ್ದಾರೆ. ಇನ್ನು ಕಮಲ ಪಾಳೆಯದಲ್ಲಿ ಮೂಲ ಹಾಗೂ ವಲಸಿಗರು ಎಂಬ ಎರಡು ಬಣಗಳಿದ್ದು, ಚುನಾವಣಾ ಪೂರ್ವದಲ್ಲಿ ವೈಷಮ್ಯ, ವೈಮನಸ್ಸು ಮರೆತು ಜನರ ಭಾವನೆಗಳಿಗೆ ಪೂರಕವಾಗಿ ಸಂಘಟನಾತ್ಮಕವಾಗಿ ಚುನಾವಣೆ ಎದುರಿಸಿದ್ದೇ ಬಿಜೆಪಿ ಗೆಲುವಿಗೆ ಕಾರಣ ಎಂದು ಬಣ್ಣಿಸಲಾಗುತ್ತಿದೆ.

ಶ್ರೀರಾಮುಲು, ಅನಿಲ್ ಕ್ಯಾಂಪೇನ್ ಫಲಶೃತಿ!?

ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಹಾಗೂ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಅವಳಿ ನಗರದಲ್ಲಿ ಭರ್ಜರಿ ಪ್ರಚಾರ ನಡೆಸುವ ಮೂಲಕ ಸ್ಟಾರ್ ಪ್ರಚಾರಕರಾಗಿ ಗುರುತಿಸಿಕೊಂಡಿದ್ದರು. ಶ್ರೀರಾಮುಲು ಬಹಿರಂಗ ಪ್ರಚಾರ ನಡೆಸಿದರೆ, ಅನಿಲ್ ಮೆಣಸಿನಕಾಯಿ ಮನೆ ಮನೆಗಳಿಗೆ ಭೇಟಿ ನೀಡಿ ಮತಭಿಕ್ಷೆ ನಡೆಸಿದ್ದರು. ಈ ವೇಳೆ ಜನರಿಂದ ಅಲ್ಲಿನ ಸ್ಥಳೀಯ ಸಮಸ್ಯೆಗಳ ಬಗ್ಗೆ ಸ್ಥಳೀಯರಿಂದಲೇ ಅರಿತುಕೊಳ್ಳುವ ಮೂಲಕ ಜನರ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರಿದರು. ಈ ಇಬ್ಬರೂ ನಾಯಕರ ಪ್ರಚಾರದಿಂದಾಗಿ ಬಿಜೆಪಿಯ ಅಭ್ಯರ್ಥಿಗಳಲ್ಲಿ ಹೆಚ್ಚು ಉತ್ಸಾಹ ನೀಡಿತ್ತು. ಗೆಲ್ಲುವ ನಿರೀಕ್ಷೆಗಳನ್ನು ಹೆಚ್ಚಿಸಿತ್ತು. ಹೀಗಾಗಿ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿದೆ ಎನ್ನುತ್ತವೆ ಬಿಜೆಪಿ ಮೂಲಗಳು.

ಸುಳಿಯಲಿಲ್ಲ ಕಾಂಗ್ರೆಸ್ ಮುಖಂಡರು

ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್, ಶಾಸಕ ಕಳಕಪ್ಪ ಬಂಡಿ, ಎಸ್.ವಿ. ಸಂಕನೂರ ಅವರು ಬಿಡುವು ಮಾಡಿಕೊಂಡು ಬಂದು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡುವ ಮೂಲಕ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ಕುರಿತು ಜನರಲ್ಲಿ ಭರವಸೆ ಮೂಡಿಸಿ ಯಶಸ್ವಿಯಾದರು. ಆದರೆ, ಕಾಂಗ್ರೆಸ್‌ನಲ್ಲಿ ಶಾಸಕ ಎಚ್.ಕೆ. ಪಾಟೀಲ್ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ್ ಅವರನ್ನು ಹೊರತುಪಡಿಸಿದರೆ ರಾಜ್ಯದ ಯಾವೊಬ್ಬ ನಾಯಕರೂ ಇತ್ತ ಸುಳಿಯಲಿಲ್ಲ. ಇಲ್ಲೇ ನೂರಾರು ಕಿ.ಮೀ. ದೂರದ ಬೆಳಗಾವಿಯಲ್ಲಿದ್ದರೂ ಯಾರೊಬ್ಬರೂ ಅವಳಿ ನಗರಕ್ಕೆ ಬಂದು ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿಲ್ಲ. ಅಲ್ಲದೇ, ದೊಡ್ಡಮಟ್ಟದ ಈ ಇಬ್ಬರು ನಾಯಕರನ್ನು ಬಿಟ್ಟರೆ, ಸ್ಥಳೀಯ ನಾಯಕರ‍್ಯಾರು ಮತದಾರರ ಮೇಲೆ ಪ್ರಭಾವ ಬೀರಲಿಲ್ಲ. ಪಕ್ಷದ ಪ್ರಣಾಳಿಕೆ ಜನರ ಮನವನ್ನು ಅಷ್ಟಾಗಿ ತಲುಪದಿರುವುದೇ ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

error: Content is protected !!