ರಾಜ್ಯದಲ್ಲಿ ಹಿಜಾಬ್ -ಕೇಸರಿ ಶಾಲು ವಿವಾದ ತಾರಕಕ್ಕೇರಿದ್ದು, ಈಗಾಗಲೇ ರಾಜ್ಯ ಸರ್ಕಾರ ಫೆ.16 ರವರೆಗೆ ಕಾಲೇಜುಗಳಿಗೆ ರಜೆ ನೀಡಿದೆ. ಇಂದಿನಿಂದ 10ನೇ ತರಗತಿವರೆಗೆ ಶಾಲೆಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಆದೇಶಿಸಿದ್ದಾರೆ.
ಗದಗ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಇಂದಿನಿಂದ ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ. ಜಿಲ್ಲೆಯಾದ್ಯಂತ ಎಲ್ಲ ಶಾಲಾ-ಕಾಲೇಜುಗಳ, ವಿದ್ಯಾ ಸಂಸ್ಥೆಗಳ ಸುತ್ತಲೂ 200 ಮೀ. ವ್ಯಾಪ್ತಿಯಲ್ಲಿ 144 ಕಲಂ ಜಾರಿಗೊಳಿಸಿ ಆದೇಶಿಸಿದ್ದಾರೆ.
ನಿಷೇಧಾಜ್ಞೆ ಜಾರಿ ಹಿನ್ನೆಲೆ ಐದಕ್ಕಿಂತ ಹೆಚ್ಚು ಜನ ಗುಂಪು ಕೂಡುವ ಹಾಗಿಲ್ಲ. ಯಾವುದೇ ರೀತಿಯ ಪ್ರತಿಭಟನೆ, ವಿಜಯೋತ್ಸವ, ಸಾರ್ವಜನಿಕ ಮೆರವಣಿಗೆ, ರ್ಯಾಲಿ, ರಾಜಕೀಯ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಆದೇಶದಲ್ಲಿ ತಿಳಿಸಿದ್ದಾರೆ.
ದೇಶಭಕ್ತಿ ಗೀತೆ ವಂದೇ ಮಾತರಂ ಹಾಡುವ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಆಕಳಿಕೆಗಳು ಭರ್ಜರಿ ಕಾಡಿದವು. ಅಲ್ಲದೇ, ಕಾರ್ಯಕ್ರಮದಲ್ಲಿ ಡಿಕೆಶಿ ಅವರನ್ನು ನಿದ್ರಾದೇವತೆ ಆವರಿಸಿದ್ದಳು.
ರವಿವಾರ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ಪ್ರಗತಿ ಪರಿಶೀಲನೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಸೇವಾದಳದ ಸದಸ್ಯರು ವಂದೇ ಮಾತರಂ ಗೀತೆ ಹಾಡುತ್ತಿದ್ದರು. ಈ ವೇಳೆ ಗೌರವಾರ್ಥವಾಗಿ ಎಲ್ಲರೂ ಎದ್ದು ನಿಂತಿದ್ದರು. ಶಾಸಕ ಎಚ್.ಕೆ.ಪಾಟೀಲ್ ಮತ್ತು ವಿಪ ಸದಸ್ಯ ಸಲೀಂ ಅಹ್ಮದ್ ಅವರ ಮಧ್ಯೆ ನಿಂತುಕೊಂಡಿದ್ದ ಡಿ.ಕೆ.ಶಿವಕುಮಾರ್ ಭರ್ಜರಿ ಆಕಳಿಕೆ ಹೊಡೆಯುವ ಮೂಲಕ ಒಂದೆ ಮಾತರಂ ಗೀತೆಗೆ ಡಿಕೆಶಿ ನಿರ್ಲಕ್ಷ್ಯ ತೋರಿದರು. ಇನ್ನು ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಡಿ.ಕೆ.ಶಿವಕುಮಾರ್ ನಿದ್ದೆಗೆ ಜಾರಿದರು.
ಕೆಂಪುಕೋಟೆಯ ಮೇಲಿರುವ ತ್ರಿವರ್ಣ ಧ್ವಜ ತೆಗೆದು ಕೇಸರಿ ಧ್ವಜ ಹಾರಿಸುವ ಕಾಲ ಬರುತ್ತದೆ ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.
ರವಿವಾರ ನಗರದ ಕಾಟನ್ ಸೇಲ್ ಸೊಸೈಟಿಯಲ್ಲಿ ನಡೆದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ತಲೆಕೆಟ್ಟ ಈಶ್ವರಪ್ಪ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಕಾಲ ಬರುತ್ತದೆ ಎಂದು ಹೇಳಿದರು. ಆದರೆ, ಈ ಬಗ್ಗೆ ಮಾತನಾಡದ ಬಸವರಾಜ್ ಬೊಮ್ಮಾಯಿ ಅವರು ಬಾಯಿಗೆ ಹೊಲಿಗೆ ಹಾಕಿಕೊಂಡಿದ್ದಾರೆ ಎಂದು ಹರಿಹಾಯ್ದರು.
‘ನಮ್ಮ ಸರ್ಕಾರವಿದ್ದಾಗ ಯಾರಾದರೂ ಹೀಗೆ ಮಾತನಾಡಿದ್ದರೆ ಹತ್ತು ನಿಮಿಷದಲ್ಲಿ ರಾಜೀನಾಮೆ ಪಡೆಯುತ್ತಿದ್ದೆವು. ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುತ್ತೇವೆ. ಈಶ್ವರಪ್ಪ ವಿರುದ್ಧ ರಾಷ್ಟ್ರ ದ್ರೋಹಿ ಪ್ರಕರಣ ದಾಖಲಿಸುತ್ತೇವೆ. ಆದರೆ, ಪೊಲೀಸ್ ಅಧಿಕಾರಿಗಳು ಸರ್ಕಾರಿ ನೌಕರರ ಬದಲು ಬಿಜೆಪಿ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ತ್ರಿವರ್ಣ ಧ್ವಜ ಕಾಂಗ್ರೆಸ್ ಪಕ್ಷದ ಧ್ವಜವಾಗಿತ್ತು. ಅಶೋಕ ಚಕ್ರ ಸೇರಿ ದೇಶದ ಧ್ವಜವಾಗಿದೆ. ಹೀಗಾಗಿ ರಾಷ್ಟ್ರ ಧ್ವಜವೇ ನಮ್ಮ ಧರ್ಮ’ ಎಂದರು.
ಬಿಜೆಪಿಯ ಅಧಿಕಾರಾವಧಿಯಲ್ಲಿ ಕಾಶ್ಮೀರ ವಿಚಾರ, 371, ಗೋಹತ್ಯೆ, ಮತಾಂತರ ಕಾಯ್ದೆ ಹೀಗೆ ಧರ್ಮಕ್ಕೆ ಸಂಬಂಧಿಸಿದಂತೆ ದೇಶ ಇಬ್ಭಾಗ ಮಾಡುವುದನ್ನು ಬಿಟ್ಟರೆ ಯಾವುದೇ ಜನಪರ ಕಾನೂನು ಜಾರಿಗೆ ತಂದಿಲ್ಲ. ಅಲ್ಲದೇ, ಕೃಷಿ ಕಾಯ್ದೆ ತಂದಿದ್ದನ್ನು ರೈತರ ಹೋರಾಟಕ್ಕೆಮಣಿದು ಬಲಿಷ್ಠ ಸರ್ಕಾರ ಕಾಯ್ದೆಗಳನ್ನು ಹಿಂಪಡೆಯಿತು.
ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಕೊಡುಗೆ ನೀಡಿದೆ. ಆದರೆ, ಕಾಂಗ್ರೆಸ್ ಆಚಾರ, ವಿಚಾರ ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡದೇ ಚುನಾವಣೆಯಲ್ಲಿ ಸೋತರಿಬಹುದು. ಆದರೆ, ಕಾರ್ಯಕರ್ತರು ಗೆಲ್ಲುವ ಆಸೆ ಕಳೆದುಕೊಳ್ಳಬಾರದು. ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಲಕ್ಷಣವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿಮ್ಮಲ್ಲಿ ಹುಮ್ಮಸ್ಸು, ಉತ್ಸಾಹ, ನಂಬಿಕೆ ಕಾಣುತ್ತಿದೆ. ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ವಿಶ್ವಾಸವಿದೆ. ಉತ್ತರ ಕರ್ನಾಟಕ ಭಾಗದ 60ಕ್ಕೂ ಅಧಿಕ ಸ್ಥಾನಗಳ ಸಮೀಕ್ಷೆ ಬಂದಿದೆ. ಕಾರ್ಯಕರ್ತರು ಚುನಾವಣೆಗೆ ವ್ಯಕ್ತಿ ಮೇಲೆ ಹೋಗದೇ ಪಕ್ಷದ ಮೇಲೆ ಹೋಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ವಿಪ ಸದಸ್ಯ ಸಲೀಂ ಅಹ್ಮದ್, ಆರ್.ವಿ.ವೆಂಕಟೇಶ್, ಬಿ.ಆರ್.ಯಾವಗಲ್, ರಾಮಕೃಷ್ಣ ದೊಡ್ಡಮನಿ, ಡಿ.ಆರ್.ಪಾಟೀಲ್, ಶ್ರೀಶೈಲಪ್ಪ ಬಿದರೂರ, ವ್ಹಿ.ಆರ್.ಗುಡಿಸಾಗರ, ಪರಮೇಶ್ವರ ನಾಯ್ಕ್, ಎಸ್.ಎನ್.ಪಾಟೀಲ್ ಇದ್ದರು.
ನೂತನ ಉಪವಿಭಾಗಾಧಿಕಾರಿ ಬಸಣ್ಯಪ್ಪ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳ ತಂಡ ಗಂಗಾವತಿ ಎಪಿಎಂಸಿ ಗೋದಾಮಿನ ಮೇಲೆ ದಾಳಿ ನಡೆಸಿದಾಗ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದು ಪತ್ತೆಯಾಗಿದೆ.
ಗೋದಾಮಿನ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಅಂದಾಜು 200 ಚೀಲ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಅಕ್ಕಿಯ ಅಕ್ರಮ ಸಾಗಣೆಗೆ ಬಳಸಿದ್ದ ಲಾರಿ ಮತ್ತು ಆಟೋವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಉಪವಿಭಾಗಾಧಿಕಾರಿ ಬಸಣ್ಯಪ್ಪ ಕಲಶೆಟ್ಟಿ, ಗುರುವಾರ ರಾತ್ರಿ ದಾಳಿ ಮಾಡಿದ್ದು ನಿಜ. ಅದಿನ್ನೂ ತನಿಖೆಯ ಹಂತದಲ್ಲಿದೆ. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಾಹಿತಿ ನೀಡುವುದಾಗಿ ತಿಳಿಸಿದರು.
ಮುಳಗುಂದ ನಾಕಾ ಸಮೀಪದ ಕೋಳಿಕೇರಿ ಕ್ರಾಸ್ ಬಳಿ ಗುರುವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ 19 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ.
ಸಿದ್ದರಾಮೇಶ್ವರ ನಗರದ ನಿವಾಸಿಯಾಗಿರುವ ರಾಜೇಸಾಬ ಬಸರಿಗಿಡದ ಎಂಬುವವರಿಗೆ ಸೇರಿದ ಗ್ಯಾರೇಜ್ ನಲ್ಲಿ ಅಗ್ನಿ ದುರಂತ ನಡೆದಿದೆ.
ಗ್ಯಾರೇಜ್ ಮುಂಭಾಗದಲ್ಲಿ ನಿಲ್ಲಿಸಿದ್ದ ಯೋಗ್ಯವಾಗಿದ್ದ 4 ಮತ್ತು ಗುಜರಿಗೆ ಸೇರಿದ್ದ 15 ಸೇರಿ 19 ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾಗಿವೆ. ಅದರಂತೆ, ಗ್ಯಾರೇಜ್ ಹಿಂದೆ ಹಿಂದಿನ ಶೆಡ್ ನಲ್ಲಿನ ಸಿಮೆಂಟ್, ಬಾರ್ ಬೈಂಡಿಂಗ್ ವೈಯರ್ ಸುಟ್ಟಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ.
ಇನ್ನು ಗ್ಯಾರೇಜ್ ಪಕ್ಕ ವಿದ್ಯುತ್ ಟಿಸಿ ಇದ್ದು, ಕಿಡಿ ಬಿದ್ದು ಅಗ್ನಿ ಅವಘಡ ಸಂಭವಿಸಿರಬಹುದು. ಇಲ್ಲದಿದ್ದರೆ, ಶಾರ್ಟ್ಸರ್ಕ್ಯೂಟ್ನಿಂದ ಅಗ್ನಿ ದುರಂತ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ರಾಯಚೂರಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದನ್ನು ಖಂಡಿಸಿ ಬುಧವಾರ ಗದಗ-ಬೆಟಗೇರಿ ನಗರಸಭೆ ಆವರಣದಲ್ಲಿರುವ ಅಂಬೇಡ್ಕರ್ರವರ ಪುತ್ಥಳಿಗೆ ಸಾಮಾಜಿಕ ಕಾರ್ಯಕರ್ತ ಸೈಯದ್ ಖಾಲಿದ್ ಕೊಪ್ಪಳ ಹಾಲಿನ ಅಭಿಷೇಕ ಮಾಡಿದರು.
ಈ ವೇಳೆ ಮಾತನಾಡಿದ ಅವರು, ‘ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ನ್ಯಾಯಾಧೀಶರನ್ನು ಶೀಘ್ರವೇ ಅಮಾನತು ಮಾಡಬೇಕು. ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಸಂವಿಧಾನ ಬದಲಾವಣೆ ಸೂರ್ಯ ಚಂದ್ರರಿರುವರೆಗೂ ಬದಲಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದ ಅವರು, ರಾಜ್ಯದಲ್ಲಿನ ಶಾಂತಿ ಕದಡಿಸುತ್ತಿರುವ ಕೋಮುವಾದಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಲ್ಲೇಶ್ ಭಜಂತ್ರಿ, ಶಫೀ ನಗರಕಟ್ಡಿ, ಎಂ.ಪಿ.ಮುಳುಗುಂದ, ಅಕ್ಬರ್ ಅಲಿ ಬೇಗ್, ಗಣೇಶ ಹುಬ್ಬಳ್ಳಿ, ಇರ್ಫಾನ್ ಡಂಬಳ, ಲಾಡಸಾಬ್ ಕಿತ್ತೂರ, ಫ್ರಾನ್ಸಿಸ್ ಕಣಯ್ಯ, ಮುಬಾರಕ್ ನರೇಗಲ್, ಮೆಹಬೂಬ್ ಕುರಹಟ್ಟಿ, ಖ್ವಾಜಾ ಸೈಯದ್, ಚಾಂದ್ ಕೊಟ್ಟೂರು, ಚಿದಾನಂದ, ಮಹಮ್ಮದ್, ದಾವಲಸಾಬ್, ತೌಸೀಫ್, ಜಿಶಾನ್ ಖಾಜಿ, ಆಂಜನೇಯ, ವೀರೇಶ್ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ನದಾಫ್ ಹಾಗೂ ಪಿಂಜಾರ ಸಮಾಜದ ಜಿಲ್ಲಾಧ್ಯಕ್ಷ ಎಸ್.ಕೆ.ನದಾಫ್ ಒತ್ತಾಯ
ವಿಜಯಸಾಕ್ಷಿ ಸುದ್ದಿ, ಗದಗ:
ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ ವೇಳೆ ನದಾಫ್ ಹಾಗೂ ಪಿಂಜಾರ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ, 50-100 ಕೋಟಿ ರೂ. ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿ ಫೆ.10ರಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ನದಾಫ್ ಹಾಗೂ ಪಿಂಜಾರ ಸಮಾಜದ ಜಿಲ್ಲಾಧ್ಯಕ್ಷ ಎಸ್.ಕೆ.ನದಾಫ್ ತಿಳಿಸಿದರು.
ಮಂಗಳವಾರ ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿರುವ ನದಾಫ್ ಹಾಗೂ ಪಿಂಜಾರ್ ಜನಾಂಗಕ್ಕೆ ಸೇರಿದ ನಾವುಗಳು ಶೋಷಿತ ಹಾಗೂ ಬಡತನದಲ್ಲಿ ಜೀವನ ಸಾಗಿಸುತ್ತಿದ್ದೇವೆ. ರಾಜ್ಯದಲ್ಲಿ 25-30 ಲಕ್ಷ ಜನಸಂಖ್ಯೆ ಇದ್ದು, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದಿದ್ದೇವೆ. ಹೀಗಾಗಿ ನಮ್ಮ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ನದಾಫ್ ಹಾಗೂ ಪಿಂಜಾರ ಸಮಾಜದವರು ಅರಳೆ ಹತ್ತಿಯ ಮೂಟೆಗಳನ್ನು ಸೈಕಲ್ಗಳ ಮೇಲೆ ಹೇರಿಕೊಂಡು ಬೀದಿ ಬೀದಿ ಸುತ್ತುವುದು, ಅನಿರ್ದಿಷ್ಟ ಸ್ಥಳ ಮತ್ತು ಕಾಲಗಳಲ್ಲಿ ಸಂಚರಿಸಿ ಜೀವನ ಸಾಗಿಸುತ್ತಿದ್ದಾರೆ. ದೂರದ ಪರ ಊರುಗಳಿಂದ ಅರೆ ಅಲೆಮಾರಿ ವೃತ್ತಿಪರರು ಅಪರಿಚಿತ ಸ್ಥಳ, ಹಾಳು ಮಂಟಪ, ಊರ ಬಯಲು, ದೇವಸ್ಥಾನ, ಮಸೀದಿಗಳ ಆವರಣದಲ್ಲಿ ಅತ್ಯಂತ ದಯನೀಯ ಸ್ಥಿತಿಯಲ್ಲಿ ರಾತ್ರಿಗಳನ್ನು ಕಳೆಯಬೇಕಾಗಿದೆ.
ರಾಜ್ಯದಲ್ಲಿ ಅಲೆಮಾರಿ ಎಂದು ಗುರುತಿಸಿರುವ ಈ ಸಮುದಾಯದ ಜನರಿಗೆ ಸದ್ಯ ಪ್ರವರ್ಗ-1 ಮೀಸಲಾತಿ ಸೌಲಭ್ಯ ನೀಡಲು ಅವಕಾಶ ಇದ್ದರೂ ಕೆಲವು ಜಿಲ್ಲೆಯಲ್ಲಿ ಇದನ್ನು ಸಹಿತ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಇನಾಮು ನೀಡಿದ ಜಮೀನನ್ನು ಸಚಿವ ಹಾಲಪ್ಪ ಆಚಾರ್ ಅವರ ಅಳಿಯ ಬಸವರಾಜ ಖರೀದಿಸಿ, ಬಡವರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಎಂದು ಹನುಮಂತಪ್ಪ ಮದ್ಲೂರು ಆರೋಪಿಸಿದರು.
ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಯಲಬುರ್ಗಾ ತಾಲ್ಲೂಕಿನ ವಜ್ರಬಂಡಿ ಸರ್ವೇ ನಂಬರ್ 17ರಲ್ಲಿ 18.12 ಗುಂಟೆ ಜಮೀನುನನ್ನು ಕಳೆದ ಐವತ್ತು ವರ್ಷಗಳಿಂದ ನಾವು ಉಳಿಮೆ ಮಾಡಿಕೊಂಡು ಬಂದಿದ್ದು, ಈಗ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಚಿವ ಹಾಲಪ್ಪ ಆಚಾರ್ ಅವರ ಅಳಿಯ ಬಸವರಾಜ ಖರೀದಿಸಿದ್ದು, ಇದಕ್ಕೆ ನಮ್ಮ ವಿರೋಧವಿದೆ ಎಂದು ಗ್ರಾಮದ ಹನುಮಂತಪ್ಪ ಮದ್ಲೂರು ತಿಳಿಸಿದರು.
ರಾಘವೇಂದ್ರ ಕಾಂತರಾಜ್ ಆಚಾರ್ ಎಂಬುವವರಿಂದ ನಮ್ಮ ತಂದೆ ಕಳಕಪ್ಪ ಜಮೀನು ಖರೀದಿಸಿದ್ದರು. ಇದರಲ್ಲಿ ನಾವು ಅನೇಕ ವರ್ಷಗಳಿಂದ ಉಳಿಮೆ ಮಾಡಿಕೊಂಡು ಬಂದಿದ್ದೇವೆ. ಇದು ಇನಾಂ ಜಮೀನು ಆಗಿದ್ದು, ಕಾನೂನು ಪ್ರಕಾರ ನಮಗೆ ಅವರು ಖರೀದಿ ಪತ್ರ ಬರೆದುಕೊಟ್ಟಿದ್ದಾರೆ. ಆದರೆ ನಾವು ಅನಕ್ಷರಸ್ಥರಾಗಿರುವುದರಿಂದ ನಮ್ಮ ಮನೆತನದವರು ಪಹಣಿ ಪತ್ರ, ಮ್ಯೂಟೇಶನ್ ಮಾಡಿಸಿಕೊಂಡಿಲ್ಲ ಎಂದರು.
ಕಾಂತಾರಾಜ್ ಎಂಬುವವರಿಗೆ ರಮಾಬಾಯಿ ಎಂಬ ಪುತ್ರಿಯನ್ನು ಸೃಷ್ಟಿಸಿ ಅವರಿಂದ ಖರೀದಿ ಬರೆಸಿಕೊಂಡಿದ್ದಾರೆ. ತಕರಾರು ಇದ್ದ ಜಮೀನನ್ನು ಖರೀದಿಸಿದ್ದಾರೆ. ಅದು ಪಹಣಿ ಆಗಿದ್ದರೂ ಇನ್ನೂ ಮ್ಯೂಟೇಶನ್ ಆಗಿಲ್ಲ. ಆದ್ದರಿಂದ ಸಚಿವರ ಅಳಿಯ ಬಸವರಾಜ ಅವರು ಪ್ರಭಾವಿಗಳು, ಶ್ರೀಮಂತರಾಗಿರುವುದರಿಂದ ನಮ್ಮ ಕಬ್ಜಾ ಇರುವ ಜಮೀನನ್ನು ಖರೀದಿಸಿ ಅನ್ಯಾಯ ಮಾಡಬಾರದು ಎಂದು ಮನವಿ ಮಾಡಿದರು.
ಅಲ್ಲದೆ ಈ ವ್ಯಾಜ್ಯ ಜಿಲ್ಲಾ ನ್ಯಾಯಾಲಯದಲ್ಲಿದೆ. ಈ ಜಮೀನಿಗೆ ಸಂಬಂಧಿಸಿದ ಖರೀದಿ ಪತ್ರ, ಸಾಗುವಳಿ ಪತ್ರ, ಕಬ್ಜಾವತಿ ಸೇರಿದಂತೆ ಎಲ್ಲ ದಾಖಲೆಗಳು ಇವೆ. ಅಲ್ಲದೆ ನಾವೇ ಉಳಿಮೆ ಮಾಡಿಕೊಳ್ಳುತ್ತಾ ಬಂದಿದ್ದೇವೆ. ಈಗ ಸಮೀಪದಲ್ಲಿ ಗ್ರ್ಯಾನೈಟ್ ಗಣಿಗಾರಿಕೆ ನಡೆಯುತ್ತಿರುವುದರಿಂದ ಈ ಜಮೀನಿನ ಮೂಲಕ ಹಾಯ್ದು ಹೋಗಲು ಇಲ್ಲದವರನ್ನು ಸೃಷ್ಟಿ ಮಾಡಿ ಖರೀದಿ ಮಾಡಿದ್ದಾರೆ. ರಮಾಬಾಯಿ ಎನ್ನುವವರು ಗ್ರಾಮದಲ್ಲಿ ಯಾರೂ ಇಲ್ಲ ಎಂದರು.
ಇನಾಂ ಜಮೀನು ನಾವು ಸಾಗುವಳಿ ಮಾಡುತ್ತಿದ್ದಾಗ, ಇಂದಿರಾ ಗಾಂಧಿ ಅವರ ಕಾಲದಲ್ಲಿ ಊಳುವವನೆ ಒಡೆಯ ಎಂಬ ಕಾನೂನು ಬಂದಾಗ ಜಮೀನಿನ ಸಂಪೂರ್ಣ ಹಕ್ಕು ನಮ್ಮದೇ ಇದೆ. 2018ರಲ್ಲಿ ಈ ಕುರಿತು ಅವರ ಸಂಬಂಧಿಕರೆಂದು ಹೇಳಿಕೊಂಡು ಕೊಪ್ಪಳ, ಹೊಸಪೇಟೆ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ಆ ಜಮೀನು ಖರೀದಿಸಲು ನಮಗೆ ತಕರಾರು ಇದೆ ಎಂದರು.
ಗ್ರಾಮದ ಬಸವರಾಜ ಬೊಮ್ಮನಾಳ ಎಂಬುವವರು ಮಾತನಾಡಿ, ರೈತರು ಉಳಿಮೆ ಮಾಡುತ್ತಿರುವ ಈ ಜಮೀನನ್ನು ಸಮೀಪದಲ್ಲಿಯೇ ಗಣಿಗಾರಿಕೆ ನಡೆಸುತ್ತಿರುವ ಸಚಿವ ಹಾಲಪ್ಪ ಆಚಾರ ಅವರ ಅಳಿಯ ಬಸವರಾಜ ರಾಜೂರು ಎಂಬುವವರು ಖರೀದಿಸಿದ್ದಾರೆ. ಈ ಜಮೀನಿನ ಮೂಲಕ ಹಾಯ್ದು ಹೋಗಲು ಸರಳವಾಗುತ್ತಿದೆ ಎಂಬ ಲೆಕ್ಕಾಚಾರದಲ್ಲಿ ಅವರು ಖರೀದಿಸಿದ್ದಾರೆ ಎಂದು ಆರೋಪಿಸಿದರು.
ದಶಕಗಳಿಂದ ಉಳಿಮೆ ಮಾಡುತ್ತಾ ಬಂದಿರುವ ನಮ್ಮ ಜಮೀನನ್ನು ಬಸವರಾಜ ರಾಜೂರು (ಗೌರಾ ಬಸವರಾಜ) ಎಂಬುವರು ಖರೀದಿಸಿದ್ದು, ಬಡವರ ಜಮೀನು ಕಿತ್ತುಕೊಳ್ಳಲು ಮಾಡಿರುವ ಹುನ್ನಾರ ಇದು. –ಹನಮಂತಪ್ಪ ಮುದ್ಲಾಪುರ, ವಜ್ರಬಂಡಿ ಗ್ರಾಮಸ್ಥ
ಸಚಿವ ಹಾಲಪ್ಪ ಆಚಾರ್ ಅವರ ಹೆಸರನ್ನು ಈ ವಿಷಯಕ್ಕೆ ತಳುಕು ಹಾಕುವುದು ಸಮಂಜಸವಲ್ಲ. ನಾನು ವ್ಯವಹಾರಸ್ಥ. ನನಗೆ ನನ್ನದೇ ಆದ ಐಡೆಂಟಿಟಿ ಇದೆ. ರಮಾಬಾಯಿ ಎಂಬುವವರಿಗೆ ಸೇರಿದ ಜಮೀನನ್ನು ದಾಖಲೆ ನೋಡಿ, ವಕೀಲರ ಸಲಹೆ ಪಡೆದು ಖರೀದಿಸಿದ್ದೇನೆ. ಈ ಜಮೀನಿಗೆ ಸಂಬಂಧಿಸಿದಂತೆ ಸಮರ್ಪಕ ದಾಖಲೆ ನೀಡಿದರೆ ಅವರೇ ಪಡೆದುಕೊಳ್ಳಲಿ. ಇದಕ್ಕೆ ನಮ್ಮ ತಕರಾರೇನಿಲ್ಲ. -ಬಸವರಾಜ ರಾಜೂರು, ಜಮೀನು ಖರೀದಿದಾರ.
ನಾಳೆಯಿಂದ ರಾಜ್ಯದ ಪದವಿ ಪೂರ್ವ ಕಾಲೇಜು, ಪದವಿ ಕಾಲೇಜುಗಳಿಗೆ ಸರ್ಕಾರ ಮೂರು ದಿನಗಳವರೆಗೆ ರಜೆ ಘೋಷಿಸಿ ಆದೇಶಿಸಿದೆ.
ಹಿಜಾಬ್-ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಕಾಲೇಜುಗಳಿಗೆ ಸರ್ಕಾರ ಮೂರು ದಿನಗಳ ಕಾಲ ರಜೆ ಘೋಷಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ರಾಜ್ಯಾದ್ಯಂತ ಹಿಜಾಬ್ ವಿವಾದ ತಾರಕಕ್ಕೇರುತ್ತಿದ್ದಂತೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಮಂಗಳವಾರ ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ನಾಳೆ 2.30ಕ್ಕೆ ವಿಚಾರಣೆ ಮುಂದೂಡಿದೆ.
–ತಿಳಿ ಹೇಳಿದರೂ ಧಮ್ಕಿ ಹಾಕಿ ಸ್ವೀಕೃತಿ ಪತ್ರ ಪಡೆದರು: ಪಿಡಿಓ
ವಿಜಯಸಾಕ್ಷಿ ವಿಶೇಷ ಸುದ್ದಿ, ಕೊಪ್ಪಳ: ಏನಾದರೂ ಸಾರ್ವಜನಿಕ ಸಮಸ್ಯೆಗಳಿದ್ದರೆ ದೂರು ನೀಡುವುದು, ಕೊಟ್ಟಿರುವ ದೂರಿಗೆ ಸ್ವೀಕೃತಿ ಪತ್ರ ಪಡೆಯುವುದು ಸಾಮಾನ್ಯ. ನೌಕರಿ, ಆಸ್ತಿ ಮತ್ತಿತರ ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಖಾಸಗಿಯಾಗಿಯೂ ಸ್ವೀಕೃತಿ ಪತ್ರ ಪಡೆಯುವುದು ಗೊತ್ತಿರುವ ಸಂಗತಿ. ಆದರೆ ಕೊಪ್ಪಳ ಜಿಲ್ಲೆಯ ಗ್ರಾಮ ಪಂಚಾಯತಿಯೊಂದು ನನ್ನ ಸಾವಿಗೆ ಗ್ರಾಮ ಪಂಚಾಯತಿ ಅಧಿಕಾರಿಗಳೇ ಕಾರಣ ಎಂದು ಕೊಟ್ಟಿರುವ ಪತ್ರಕ್ಕೆ ಸ್ವೀಕೃತಿ ನೀಡಿ, ದೂರ ಇದರ ನನ್ನು ಪರೋಕ್ಷವಾಗಿ ‘ಸತ್ತು ಹೋಗು” ಎಂದು ಹೇಳಿದಂತಿದೆ.
ವಿಷಯ ಇಷ್ಟೇ: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮ ಪಂಚಾಯತಿ ನರೇಗಾ ಯೋಜನೆಯಡಿ 2022ರ ಜನವರಿ 1ರಿಂದ 8ರವರೆಗೆ ನರೇಗಾ ಯೋಜನೆಯಡಿ ಮಂಗಳೂರಿನ ಮಂಜುನಾಥ ಕಂಬಾರ ಅವರ ಹೊಲದಲ್ಲಿ ಕೃಷಿಹೊಂಡ ನಿರ್ಮಾಣ ಮಾಡಲಾಗಿದೆ. ಈ ಕಾಮಗಾರಿಗೆ ಸುಮಾರು 65 ಸಾವಿರ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಗ್ರಾಮ ಪಂಚಾಯತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರೇಶ್.ಜಿ ಅವರು,ಅನುದಾನ ಬಿಡುಗಡೆಗೊಳಿಸಲು 15 ಸಾವಿರ ಲಂಚ ಕೇಳಿದರೆಂದು ಫಲಾನುಭವಿ ಮಂಜುನಾಥ ಕಂಬಾರ ಆರೋಪಿಸಿದರು.
ಈ ವಿಷಯ ಕುರಿತು ಮಂಗಳವಾರ ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸರಕಾರದ ನಿಯಮಾವಳಿ ಪ್ರಕಾರ ಕಾಮಗಾರಿ ನಡೆದಿದೆ. ಅವರು ಅನುದಾನ ನೀಡುವ ಭರವಸೆ ಕೊಟ್ಟ ನಂತರವೇ ಹಣ ಖರ್ಚು ಮಾಡಿ ಕೃಷಿ ಹೊಂಡ ನಿರ್ಮಿಸಲಾಗಿದೆ. ಕೇಳಿದ ಲಂಚ ಕೊಡದಿರುವುದಕ್ಕೆ ಪಿಡಿಒ ಸತಾಯಿಸುತ್ತಿದ್ದಾರೆ ಎಂದು ಮಂಜುನಾಥ ದೂರಿದರು.
ಸಾಕಷ್ಟು ಬಾರಿ ವಿನಂತಿಸಿದರೂ ಪಿಡಿಓ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ಸಾಕಷ್ಟು ಕಿರುಕುಳ ನೀಡಿದ್ದಾರೆ. ಇದರಿಂದ ರೋಸಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿ, ನನ್ನ ಸಾವಿಗೆ ಗ್ರಾಮ ಪಂಚಾಯತಿ ಅಧಿಕಾರಿಗಳೇ ಕಾರಣ ಎಂದು ಬರೆದ ಪತ್ರವನ್ನು ಗ್ರಾಪಂಗೆ ನೀಡಿದ್ದು, ಅದಕ್ಕೂ ಗ್ರಾಪಂ ಸ್ವೀಕೃತಿ ನೀಡಿರುವುದನ್ನು ಗಮನಿಸಿದರೆ ಪರೋಕ್ಷವಾಗಿ “ಸತ್ತು ಹೋಗು” ಎನ್ನುವಂತಿದೆ ಗ್ರಾಮ ಪಂಚಾಯತಿ ನಿಲುವು ಎಂದು ಅವರು ಅಲವತ್ತುಕೊಂಡರು.
ಈ ವೇಳೆ ಮಂಗಳೂರಿನ ಹನುಮಂತಪ್ಪ ಕಂಬಾರ, ಮಾರುತಿ ಕಂಬಾರ, ಮಲ್ಲನಗೌಡ ಕೋಣನಗೌಡರ ಹಾಗೂ ಮುದುಕಪ್ಪ ಪೂಜಾರಿ ಇದ್ದರು.
ಲಂಚ ಕೇಳಿರುವ ಆರೋಪ ಶುದ್ಧ ಸುಳ್ಳು. ಇದಕ್ಕೆ ಒಂದೇ ಒಂದು ಸಾಕ್ಷ್ಯ ಒದಗಿಸಿದರೂ ಕೆಲಸ ಬಿಟ್ಟು ಬಿಡುವೆ. ಹಿಂದಿನಂತೆ ಪಂಚಾಯಿತಿಯಲ್ಲಿ “ಹೊಂದಿಕೊಂಡು” ಹೋಗಲು ಅವರೇ ಆಮಿಷ ಒಡ್ಡಿದರೂ, ಸರಕಾರಿ ನಿಯಮಗಳ ಪ್ರಕಾರ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಅದು ಅವರಿಗೆ ನುಂಗಲಾರದ ತುತ್ತಾಗಿ ಈ ರೀತಿ ಷಡ್ಯಂತ್ರ ರೂಪಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಪತ್ರ ಪಂಚಾಯಿತಿಗೆ ಕೊಡಲು ಬಂದಾಗ ಕಚೇರಿಯ ಸಿಬ್ಬಂದಿ ತಿಳಿ ಹೇಳಿದರೂ ಕೇಳದೇ ನಮ್ಮ ಸಿಬ್ಬಂದಿಗೆ ಧಮ್ಕಿ ಹಾಕಿ ಸ್ವೀಕೃತಿ ಪತ್ರ ಪಡೆದಿದ್ದಾರೆ. ಈ ಬಗ್ಗೆ ಈಗಾಗಲೇ ಮೇಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಕಾನೂನು ಚೌಕಟ್ಟಿನಲ್ಲಿ ನನ್ನ ಕೆಲಸ ನಾನು ಮಾಡುತ್ತೇನೆ. ಸಾಯುವುದಾಗಿ ಹೇಳುವವರನ್ನು ಎಂದಿಗೂ ಪ್ರಚೋದಿಸುವುದಿಲ್ಲ. -ವೀರೇಶ್.ಜಿ., ಪಿಡಿಓ, ಮಂಗಳೂರು ಗ್ರಾಪಂ, ಕುಕನೂರು ತಾಲೂಕು, ಕೊಪ್ಪಳ ಜಿಲ್ಲೆ.