Home Blog Page 3289

ಕಾಣದಂತೆ ಮಾಯವಾದನೊ..

0

ಬಾರದೂರಿಗೆ ಪುನೀತ್ ಪಯಣ

ಸಿನಿಮಾ ಮಾತ್ರವಲ್ಲ, ಶಿಕ್ಷಣ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದ ಅಪ್ಪು

ಥೇಟ್ ಅಪ್ಪನಂತೆ ಬಡವರ ಬಂಧುವಾಗಿದ್ದ ಲೋಹಿತ್

ಬಸವರಾಜ ಕರುಗಲ್.
ವಿಜಯಸಾಕ್ಷಿ ಸುದ್ದಿ, ಬೆಂಗಳೂರು: 2021ರ ಅಕ್ಟೋಬರ್ 29 ಕರುನಾಡಿಗೆ ದಿಗ್ಭ್ರಮೆ ಮೂಡಿಸಿದ ಮತ್ತೊಂದು ದಿನ. ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಠಾತ್ ಪಯಣ ಬೆಳೆಸಿದ ಕೆಟ್ಟ ದಿನ.

ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದರೂ ಸದಾ ಬಡವರ ಬಗ್ಗೆ ಕಾಳಜಿ ಹೊಂದಿದ ಚಿನ್ನದ ಹೃದಯ ಹೊಂದಿದ್ದ ಅಪ್ಪಟ ಅಪರಂಜಿ ಅಪ್ಪು.
1975, ಮಾರ್ಚ್ 17 ರಂದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ವರನಟ ಡಾ.ರಾಜಕುಮಾರ್ ಮತ್ತು ಪಾರ್ವತಮ್ಮರವರ ಕಿರಿಯ ಪುತ್ರನಾಗಿ ಜನ್ಮ ತಾಳಿದ ಪುನೀತ್, ಆರು ತಿಂಗಳಿದ್ದಾಗಲೇ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಕಾಣಿಸಿಕೊಂಡರು.

ರಾಜ್ ದಂಪತಿಯ ಕಿರಿ ಮಗುನಾಗಿದ್ದರಿಂದ ಹೆಚ್ಚು ಪ್ರೀತಿಯಲ್ಲೇ ಬೆಳೆದರೂ ಅಮ್ಮ ಮಾತ್ರ ಕಟ್ಟು ನಿಟ್ಟು, ಶಿಸ್ತನ್ನು ಮಕ್ಕಳಲ್ಲಿ ಬೆಳೆಸಿದರು. ರಾಜ್ ತಮ್ಮ ಸಿನಿಮಾಗಳ ಶೂಟಿಂಗ್‌ಗೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದುದರಿಂದ ಬಾಲ್ಯದಿಂದಲೇ ಕಲೆಯ ಜೊತೆಗಿನ ನಂಟು ಆರಂಭವಾಯಿತು.

ಇದುವರೆಗೂ ಸುಮಾರು 39ಕ್ಕೂ ಅಧಿಕ ಸಿನಿಮಾಗಳಲ್ಲಿ ( ಅತಿಥಿ ಪಾತ್ರಗಳನ್ನೂ ಸೇರಿಸಿ) ಅಭಿನಯಿಸಿದ್ದಾರೆ. ಇತ್ತಿಚೆಗೆ ತಮ್ಮದೇ ಪ್ರೋಡಕ್ಷನ್ ಹೌಸ್ ಆರಂಭಿಸಿ ಮಾಯಾಬಜಾರ್ ಹಾಗೂ ಫ್ರೆಂಚ್ ಬಿರಿಯಾನಿ ಎಂಬ ಎರಡು ಸಿನಿಮಾಗಳನ್ನು ತಮ್ಮ ಪಿಆರ್‌ಕೆ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸಿದ್ದಾರೆ. ಇನ್ನು ಎರಡು ಸಿನಿಮಾಗಳು ನಿರ್ಮಾಣವಾಗುವ ಹಂತದಲ್ಲಿದ್ದು, ಒಂದರಲ್ಲಿ ಅವರೇ ಅಭಿನಯಿಸಬೇಕಿತ್ತು. ಆದರೆ ವಿಧಿಯಾಟ ಅದಕ್ಕೆ ಅವಕಾಶ ನೀಡಲಿಲ್ಲ.

ಬರೀ ನಟನೆ, ನಿರ್ಮಾಣ ಮಾತ್ರವಲ್ಲದೇ, ಹಾಡುವಿಕೆಯಲ್ಲೂ ಪುನೀತ್ ಮೇಲುಗೈ ಸಾಧಿಸಿದ್ದರು. ರಾಜ್ ಹಾಗೂ ಶಿವಣ್ಣ, ರಾಘಣ್ಣ ಜೊತೆ ದೇವರ ಹಾಡುಗಳು ಸೇರಿದಂತೆ 150ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇತ್ತಿಚೆಗೆ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ರತ್ನನ್ ಪ್ರಪಂಚ ಸಿನಿಮಾದಲ್ಲೂ ಉತ್ತರ ಕರ್ನಾಟಕ ಭಾಷೆಯ ಗಿಚ್ ಗಿಲಿಗಿಲಿ ಹಾಡು ಅವರ ಕಂಠಸಿರಿಯಲ್ಲಿ ಮೂಡಿ ಬಂದಿದೆ.

ಬಾಲ್ಯದಲ್ಲೇ ರಾಜ್ಯ ಪ್ರಶಸ್ತಿ (ಚಲಿಸುವ ಮೋಡಗಳು) ಹಾಗೂ ರಾಷ್ಟ್ರ ಪ್ರಶಸ್ತಿ (ಬೆಟ್ಟದ ಹೂವು) ಗಳನ್ನು ಮುಡಿಗೇರಿಸಿಕೊಂಡ ರಾಜರತ್ನ ಅಪ್ಪು ಜನಪ್ರಿಯತೆಯನ್ನು ನೆತ್ತಿಗೇರಿಸಿಕೊಂಡವರಲ್ಲ. 2002ರಲ್ಲಿ ಅಪ್ಪು ಸಿನಿಮಾ ಮೂಲಕ ನಾಯಕನಟರಾಗಿ ಮತ್ತೇ ಬಣ್ಣದ ಲೋಕ ಯಾನ ಆರಂಭಿಸಿದ ಪುನೀತ್ ಹಿಂತಿರುಗಿ ನೋಡಲೇ ಇಲ್ಲ. ಪುನೀತ್ ಸಿನಿಮಾಗಳ ಸಕ್ಸಸ್ ರೇಟ್ 80%.

ಡಾ.ರಾಜ್‌ಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾ ನೋಡಿ ಪಟ್ಟಣದ ಜನ ಕೃಷಿ ಕಡೆ ಮುಖ ಮಾಡಿದ್ದನ್ನ ಕೇಳಿದ್ದೇವೆ. ಅದೇ ರೀತಿ ಪೃಥ್ವಿ ಸಿನಿಮಾದಲ್ಲಿ ಜಿಲ್ಲಾಧಿಕಾರಿಯಾಗಿ ನಟಿಸಿದ್ದ ಪುನೀತ್ ಅನೇಕ ಆಕಾಂಕ್ಷಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದರು. ಅನೇಕರು ಪೃಥ್ವಿ ಸಿನಿಮಾ ಪುನೀತ್‌ರಂತೆ ಜಿಲ್ಕಾಧಿಕಾರಿಯಾಗಬೇಕು ಎಂದು ಹೇಳಿಕೊಂಡದ್ದು ಉಂಟು.

ಪುನೀತ್ ಸಿನಿಮಾಗಳೆಂದರೆ ಫ್ಯಾಮಿಲಿ ಆಡಿಯನ್ಸ್ ಮೂವಿ ಅನ್ನೋದರಲ್ಲಿ ಅನುಮಾನಾನೇ ಇಲ್ಲ. ಬಾಲ್ಯದಲ್ಲೇ ಐತಿಹಾಸಿಕ ಪೌರಾಣಿಕ ಪಾತ್ರಗಳನ್ನು ನಿರ್ವಹಿಸಿದ್ದ ಮಾಸ್ಟರ್ ಲೋಹಿತ್ ಬೆಟ್ಟದ ಹೂವು ಸಿನಿಮಾ ಮೂಲಕ ಪುನೀತ್ ಆದರು. ಅಪ್ಪು ಸಿನಿಮಾ ಮೂಲಕ ನಾಯಕನಾಗಿ ಸಾಮಾಜಿಕ, ಆ್ಯಕ್ಷನ್, ಮೆಲೋಡ್ರಾಮಾ, ಸಸ್ಪೆನ್ಸ್ ಹೀಗೆ ವಿಭಿನ್ನ ಬಗೆಯ ಸಿನಿಮಾ ಜಾನರ್‌ಗಳಲ್ಲಿ ನಟಿಸಿರುವ ಪುನೀತ್ ಸದಾ ನಿರ್ಮಾಪಕರ ಹಿತ ಕಾಯುವ ನಟರಲ್ಲೊಬ್ಬರಾಗಿದ್ದರು.

ತ್ರಿಮೂರ್ತಿಗಳ ಸಂಗಮ:
ರಾಜ್ ಬದುಕಿದ್ದಾಗಲೇ ರಾಜ್ ಹಾಗೂ ಪುತ್ರರು ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಬಯಕೆ ಮೊದಲಿನಿಂದಲೂ ಇತ್ತಾದರೂ ಅದು ನನಸಾಗಲಿಲ್ಲ. ಇತ್ತಿಚೆಗೆ ಶಿವಣ್ಣ ಹಾಗೂ ಪುನೀತ್ ಅಭಿನಯದ ಸಿನಿಮಾ ಫೈನಲ್ ಆಗಿತ್ತಾದರೂ ಸೆಟ್ಟೇರಲೇ ಇಲ್ಲ.
ರಾಜಣ್ಣ-ಶಿವಣ್ಣ-ಪುನೀತ್ ಒಟ್ಟಿಗೆ ಅಭಿನಯಿಸಿದ್ದ ಸಿನಿಮಾ ಅಂದ್ರೆ ಅದು 1988ರಲ್ಲಿ ತೆರೆ‌ಕಂಡ ‘ಶಿವ ಮೆಚ್ಚಿದ ಕಣ್ಣಪ್ಪ’.

ಶಿಕ್ಷಣ ಕ್ಷೇತ್ರದಲ್ಲೂ ಸಾಧನೆ:
ಪುನೀತ್ ಓದಿದ್ದು 10ನೇ ತರಗತಿಯಾದರೂ ನಾಯಕರಾಗಿ ಪರಿಚಯವಾದ ನಂತರ ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳನ್ನು ಕಲಿತರು. ಇಂದು ಐಎಎಸ್/ಕೆಎಎಸ್ ಮಾಡಲು ಸಾಕಷ್ಟು ಸ್ಪರ್ಧೆ ಇರುವುದರಿಂದ ತಂದೆಯ ಹೆಸರು, ನೆನಪಿನಲ್ಲಿ ತರಬೇತಿ ಸಂಸ್ಥೆಯನ್ನು ಪುನೀತ್ ಆರಂಭಿಸಿದ್ದರು. ಇತ್ತಿಚೆಗೆ ಶೈಕ್ಷಣಿಕ ಆ್ಯಪ್‌ವೊಂದನ್ನ ಕನ್ನಡಿಗರಿಗೆ ಪರಿಚಯಿಸಿದ್ದ ಪುನೀತ್ ಸಿಎಂ ಬಸವರಾಜ ಬೊಮ್ಮಾಯಿ ಅದನ್ನ ಲೋಕಾರ್ಪಣೆ ಮಾಡಿದ್ದರು.

ತಮಿಳು ಸಿನಿಮಾ ಮೇಕಿಂಗ್‌‌ನ್ನ ಬಹುವಾಗಿ ಮೆಚ್ಚುತ್ತಿದ್ದ ಪುನೀತ್ ಹುಡುಗ್ರು ಸಿನಿಮಾ ಆ ರೇಂಜ್‌ನಲ್ಲಿತ್ತು ಎಂದು ಹಲವು ಕಡೆ ಹೇಳಿಕೊಂಡಿದ್ದರು.‌ ಆ್ಯಕ್ಷನ್ ಬಗ್ಗೆ ಒಲವಿದ್ದ ಅವರು ಇಂಗ್ಲಿಷ್ ಸಿನಿಮಾಗಳನ್ನು ಜಾಸ್ತಿ ನೋಡುತ್ತಿದ್ದರು. ತಮಿಳು, ಇಂಗ್ಲಿಷ್ ಸಿನಿಮಾಗಳನ್ನು ತಮ್ಮದೇ ಪ್ರೋಡಕ್ಷನ್ ಹೌಸ್‌ನಲ್ಲಿ ನಿರ್ಮಾಣ ಮಾಡುವ ಇಂಗಿತ ಅವರಲ್ಲಿತ್ತು.

ಬಡವರ ಬಂಧುವಾಗಿದ್ದ ರಾಜಕುಮಾರ:
ಪುನೀತ್ ಸಿರಿತನವನ್ನು ಅನುಭವಿಸಿದ್ದರೂ ತಂದೆಯಿಂದ ಬಡತನದ ಬೇಗುದಿ ಎಂಥದ್ದು ಎಂಬುದನ್ನು ಅರಿತವರು. ಹಾಗಾಗಿ ಅವರು ಯಾವುದೇ ಭಾಗಕ್ಕೆ ಚಿತ್ರೀಕರಣಕ್ಕೆ ಹೋದರೂ ಅಲ್ಲಿನ ಜನರ ಜೊತೆ ಬೆರೆಯುತ್ತಿದ್ದರು. ಬಡವ-ಬಲ್ಲಿದ ಎಂಬ ಬೇಧವಿಲ್ಲದೇ ಅವರೊಟ್ಟಿಗೆ ಊಟ ಮಾಡುತ್ತಿದ್ದರು. ಅಲ್ಲಿನ ಜನಜೀವನ ಅರಿತು, ಅಲ್ಲಿರುವ ಸಮಸ್ಯೆಗಳನ್ನು ಆಲಿಸಿ ಸಹಾಯ ಹಸ್ತ ಚಾಚುವ ನಿಷ್ಕಲ್ಮಶ ಮನಸಿನ ಯುವರತ್ನ.

ಕೊಪ್ಪಳ ಜಿಲ್ಲೆಯ ಗಂಗಾವತಿ ಸುತ್ತಮುತ್ತ ಅವರ ಅಭಿನಯದ ಜೇಮ್ಸ್ ಸಿನಿಮಾ ಶೂಟಿಂಗ್ ನಡೆಯುತ್ತಿದ್ದಾಗ ಪೊಲೀಸರ ಮನವಿ ಮೇರೆಗೆ ಏನನ್ನೂ ನಿರೀಕ್ಷೆ ಮಾಡದೇ ಕೊರೊಬಾ ಕುರಿತು ಜಾಗೃತಿ ಮೂಡಿಸಿದ್ದರು. ಗಂಗಾವತಿ ತಾಲೂಕಿನ ಮಲ್ಲಾಪುರ ಸರಕಾರಿ ಪ್ರೌಢಶಾಲೆಗೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಇಷ್ಟು ಮಾತ್ರವಲ್ಲದೇ ನಾಡಿನ ಅನೇಕ ವೃದ್ಧಾಶ್ರಮ, ಅನಾಥಾಶ್ರಮ, ಗೋಶಾಲೆಗಳಿಗೆ ಅವರ ಕೊಡುಗೆ ಅನನ್ಯ. ಆದರೆ ಎಲ್ಲೂ ಈ ಬಗ್ಗೆ ಅವರು ಹೇಳಿಕೊಂಡಿಲ್ಲ.

ಬಾರದೂರಿಗೆ ಪಯಣ ಬೆಳೆಸಿದ ಪುನೀತ್ ಆಕಾಶದಲ್ಲಿ‌ ಮಿನುಗುತ್ತಿರುವ ನಕ್ಷತ್ರಗಳಲ್ಲಿ ಒಂದಾಗಿದ್ದಾರೆ. ಅವರ ಅಗಲಿಕೆ ನಿಜಕ್ಕೂ ಅರಗಿಸಿಕೊಳ್ಳುವಂಥಲ್ಲ. ಮತ್ತೊಂದು ಜನ್ಮವಿದ್ದರೆ ನೀವು ಮತ್ತೇ ಕರುನಾಡಿನ ಪವರ್ ಸ್ಟಾರ್ ಆಗಿಯೇ ಹುಟ್ಟಿ ಬನ್ನಿ ಪುನೀತ್..


ಬಾಲ ನಟನಾಗಿ ಪುನೀತ್ ಸಿನಿಮಾಗಳು
1.ಪ್ರೇಮದ ಕಾಣಿಕೆ
2.ಭಾಗ್ಯವಂತ
3.ಎರಡು ನಕ್ಷತ್ರಗಳು
4.ಬೆಟ್ಟದ ಹೂವು
5.ಚಲಿಸುವ ಮೋಡಗಳು
6.ಶಿವ ಮೆಚ್ಚಿದ ಕಣ್ಣಪ್ಪ
7.ಪರಶುರಾಮ್
8.ಯಾರಿವನು
9.ಭಕ್ತ ಪ್ರಹ್ಲಾದ
10.ವಸಂತ ಗೀತ

ನಾಯಕನಟನಾಗಿ ಪುನೀತ್ ಸಿನಿಮಾಗಳು

1.ಅಪ್ಪು
2.ಅಭಿ

  1. ವೀರ ಕನ್ನಡಿಗ
    4.ಮೌರ್ಯ
    5.ಆಕಾಶ್
    6.ನಮ್ಮ ಬಸವ
  2. ಅಜಯ್
    8.ಅರಸು
    8.ಮಿಲನ
    10.ಬಿಂದಾಸ್
    11.ವಂಶಿ
  3. ರಾಜ್ ದ ಶೋಮ್ಯಾನ್
    13.ಪೃಥ್ವಿ
    14.ರಾಮ್
    15.ಜಾಕಿ
    16.ಹುಡುಗರು
    17.ಪರಮಾತ್ಮ
    18.ಅಣ್ಣ ಬಾಂಡ್
    19.ಯಾರೇ ಕೂಗಾಡಲಿ
  4. ನಿನ್ನಿಂದಲೇ
  5. ಮೈತ್ರಿ
  6. ಪವರ್
  7. ಧೀರ ರಣ ವಿಕ್ರಮ
  8. ಚಕ್ರವ್ಯೂಹ
    25 ದೊ‍ಡ್ಮನೆ ಹುಡುಗ
    26.ರಾಜಕುಮಾರ
  9. ಅಂಜನಿ ಪುತ್ರ
  10. ನಟಸಾರ್ವಭೌಮ
  11. 29.ಯುವರತ್ನ

ಆನಂದ ಭೋವಿ ರಚಿಸಿದ ದೀಪ ಆರುವ ಹೊತ್ತು ಗಜಲ್ ಸಂಕಲನ ಬಿಡುಗಡೆ ನಾಳೆ

ವಿಜಯಸಾಕ್ಷಿ ಸುದ್ದಿ, ನರಗುಂದ;

ನರಗುಂದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರೂ ಆಗಿರುವ ಆನಂದ ಭೋವಿ ಅವರು ರಚಿಸಿರುವ “ದೀಪ ಆರುವ ಹೊತ್ತು ಎಂಬ ಗಜಲ್ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿ ಅ.30 ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕಿನ ಬೈರನಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಆಯೋಜಿಸಲಾಗಿದೆ.

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಶ್ರೀ ದೊರೆಸ್ವಾಮಿ ವಿರಕ್ತಮಠ,‌ ಬೈರಮಹಟ್ಟಿ ಹಾಗೂ ಸಮೀರ ಪ್ರಕಾಶನ ಇವರ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಶಾಂತಲಿಂಗ ಸ್ವಾಮಿಗಳು ವಹಿಸುವರು.

ಕಾರ್ಯಕ್ರಮದಲ್ಲಿ ದೀಪ ಆರುವ ಹೊತ್ತು ಗಜಲ್ ಸಂಕಲನವನ್ನು ಗಜಲ್ ಕವಿ ಕೆ. ಅಲ್ಲಾಗಿರಿರಾಜ್ ಬಿಡುಗಡೆ ಮಾಡುವರು.

ಮುಖ್ಯ ಅತಿಥಿಗಳಾಗಿ ತಾ.ಪಂ.ಇಓ ಚಂದ್ರಶೇಖರ ಕುರ್ತಕೋಟಿ, ಗದಗ ಎಡಿಎಂ ಶಿಕ್ಷಣಾಧಿಕಾರಿ ಮಂಗಳಾ‌ ತಾಪಸ್ಕರ್, ಬಿಇಓ ರಾಜೇಶ್ವರಿ, ಕವಿಗಳಾದ ಆನಂದ ಬೋವಿ ಕಲಾವಿದ ಅಶೋಕ್ ಸುತಾರ, ಗಜಲ್ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವವರು.

ಈ ಕಾರ್ಯಕ್ರಮ ಯಶಸ್ವಿಗೆ ಚಿಕ್ಕನರಗುಂದ ಗ್ರಾಮ ಪಂಚಾಯತಿ ಅಡಳಿತ ಮಂಡಳಿ ಶುಭ ಹಾರೈಸಿದೆ.

ಫೋನ್ ಪೇ ಹ್ಯಾಕ್: ನರ್ಸ್ ಗೆ ಲಕ್ಷಾಂತರ ರೂ. ಪಂಗನಾಮ!

ವಿಜಯಸಾಕ್ಷಿ ಸುದ್ದಿ, ಗದಗ:

ದೇಶದಲ್ಲಿ ಡಿಜಿಟಲ್ ಇಂಡಿಯಾ ಜಾರಿಗೆ ಬಂದ ಬಳಿಕ ಆನ್‌ಲೈನ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಯಾವುದೇ ಹಣಕಾಸಿನ ವ್ಯವಹಾರ ಮಾಡಬೇಕಾದರೂ ಬ್ಯಾಂಕ್‌ಗೆ ಹೋಗದೆ ಬಹುತೇಕರು ಪೋನ್ ಪೇ, ಗೂಗಲ್ ಪೇನಂತಹ ಆಪ್‌ಗಳ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದಾರೆ.

ಆದರೆ, ಇಂತಹ ಆಪ್‌ಗಳನ್ನು ಬಳಸುವವರು, ಆನ್ಲೈನ್ ವ್ಯವಹಾರ ಮಾಡುವವರು ಮೋಸ ಹೋಗುತ್ತಿರುವುದು ಹೊಸತಲ್ಲ. ಇಂತಹದ್ದೇ ಒಂದು ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಖದೀಮರು ಪೋನ್ ಪೇ ಆಪ್ ಬಳಸುತ್ತಿದ್ದ ನರ್ಸ್ ವೊಬ್ಬರ ಅಕೌಂಟ್ ಹ್ಯಾಕ್ ಮಾಡಿ ವಂಚಿಸಿದ್ದಾರೆ.

ಅಪರಿಚಿತ ವ್ಯಕ್ತಿಯೋರ್ವ ಫೋನ್ ಪೇ ಅಕೌಂಟ್ ಹ್ಯಾಕ್ ಮಾಡಿ 4.98 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಗದಗ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಲಕ್ಷ್ಮೇಶ್ವರ ಪಟ್ಟಣದ ನಿವಾಸಿ ಜ್ಯೋತಿ ನಾಗರಾಜ ವಾಲಿ ಈ ಕುರಿತು ದೂರು ದಾಖಲಿಸಿದ್ದಾರೆ. ವೃತ್ತಿಯಲ್ಲಿ ನರ್ಸ್ ಆಗಿರುವ ಜ್ಯೋತಿ ಅವರ ಫೋನ್ ಪೇ ಹ್ಯಾಕ್ ಮಾಡಿರುವ ಖದೀಮರು, ಲಕ್ಷ್ಮೇಶ್ವರ ಎಸ್‌ಬಿಐ ಖಾತೆಯಿಂದ ಜೂ. 26ರಿಂದ ಅ. 10ರ ಅವಧಿಯಲ್ಲಿ ಹಂತ ಹಂತವಾಗಿ 4.98 ಲಕ್ಷ ರೂ. ಡ್ರಾ ಮಾಡಿಕೊಂಡು ವಂಚಿಸಿದ್ದಾರೆ. ಇದು ಇತರ ಪೋನ್ ಪೇ ಬಳಕೆದಾರರಿಗೆ ಆತಂಕ ಮೂಡಿಸಿದೆ.

ಸಂಜೀವಿನಿ ಯೋಜನೆಯ ಮಹಿಳಾ ಕಾಯಕೋತ್ಸವಕ್ಕೆ ಗ್ರಾ.ಪಂ.ಅಧ್ಯಕ್ಷ ಮುತ್ತು ರಾಯರಡ್ಡಿ ಚಾಲನೆ

ವಿಜಯಸಾಕ್ಷಿ ಸುದ್ದಿ, ನರಗುಂದ;

ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿ ಹಾಗೂ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಸಂಜೀವಿನಿ ಮಹಿಳಾ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.

ಕಾರ್ಯಾಗಾರಕ್ಕೆ ಗ್ರಾ.ಪಂ.ಅಧ್ಯಕ್ಷ ಮುತ್ತು ರಾಯರಡ್ಡಿ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿಮಾತನಾಡಿದ ಮುತ್ತು ರಾಯರಡ್ಡಿ, ಚಿಕ್ಕನರಗುಂದ ಗ್ರಾಮದಲ್ಲಿ ಮಹಿಳಾ ಒಕ್ಕೂಟಗಳು ಹಲವಾರು ವರ್ಷಗಳಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತರುವುದು ಖುಷಿಯ ವಿಷಯ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಹಲಾವಾರು ಯೋಜನೆಗಳು ಇದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು, ಮುಂದಿನ ದಿನಗಳಲ್ಲಿ ಆದಷ್ಟೂ ಬೇಗ ಗ್ರಾಪಂ. ವತಿಯಿಂದ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ, ಕಸ ವಿಲೇವಾರಿಗೆ ವಾಹನ ಖರೀದಿ ಮಾಡಲಾಗುವದು. ಆ ಘಟಕದ ನಿರ್ವಹಣೆಯನ್ನು, ಸ್ವ ಸಹಾಯ ಸಂಘದ ಸದಸ್ಯರಿಗೆ ಹಸ್ತಾಂತರಿಸಲಾಗುವದು ಎಂದರು.

ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯ ಮಾಹಿತಿ ಇರುವ ಬಿತ್ತಿ ಪತ್ರಗಳನ್ನು ಸ್ವಸಹಾಯ ಸಂಘದ ಸದಸ್ಯರಿಗೆ ವಿತರಿಸಲಾಯಿತು.

ಮುಖ್ಯ ಅತಿಥಿಗಳಾದ ಜಿಲ್ಲಾ ವ್ಯವಸ್ಥಾಪಕ ಬಸವರಾಜ್ ಮೂಲಿಮನಿ ಮಾತನಾಡಿ, 2015 ರಿಂದ ಮಹಿಳಾ ಒಕ್ಕೂಟಗಳನ್ನು ರಚನೆ ಮಾಡಿ, ಈ ಒಕ್ಕೂಟಗಳು ಸುಸ್ಥಿರವಾಗಿ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸಲು ಇಂತಹ ತರಬೇತಿಗಳು ಅವಶ್ಯಕವಾಗಿದೆ, ಈ ಸಂಜೀವಿನಿ ಯೋಜನಾಂಶ ಅವಶ್ಯ ಇರುವ ತರಬೇತಿಗಳನ್ನು ಸ್ವ,ಸಹಾಯ ಸಂಘಗಳಿಗೆ ನೀಡುವುದರ ಜೊತೆಗೆ ಸಾಲ ಸೌಲಭ್ಯ, ಜೀವನೋಪಾಯ ಮಾಡಲು ಮಾರ್ಗದರ್ಶನ ನೀಡಲಾಗುವದು ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಬಾಪು ಹಿರೇಗೌಡ್ರ, ಶರಣಬಸಪ್ಪ ಹಳೇಮನಿ, ಲಕ್ಷ್ಮಣ ಕಂಬಳಿ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ, ಶೋಭಾ ಕೋಣನ್ನವರ, ಶಂಕ್ರಮ್ಮ ಚಲವಾದಿ, ಪಿಡಿಓ ಶೈನಾಜ್ ಮುಜಾವರ್, ಕಾರ್ಯದರ್ಶಿ ಕೆಂಚಪ್ಪ, ಸಂಜೀವಿನಿ ವ್ಯವಸ್ಥಾಪಕ ಮೋಹನ್ ಕೃಷ್ಣ, ಮೇಲ್ವಿಚಾರಕ ಪ್ರಕಾಶ ಸೇರಿದಂತೆ ಹಲವಾರು ಮಹಿಳಾ ಸಂಘದ ಸದಸ್ಯರು ಗ್ರಾ.ಪಂ. ಸಿಬ್ಬಂದಿಗಳು ಇದ್ದರು.

ಪೊಲೀಸ್ ಠಾಣೆ ಸಮೀಪವೇ ಕಳ್ಳತನ: ಮೇಲ್ಛಾವಣಿ ಕಟ್ ಮಾಡಿ ಹಣ ಕದ್ದೋಯ್ದ ಖದೀಮರು

ವಿಜಯಸಾಕ್ಷಿ ಸುದ್ದಿ, ಗದಗ;

ಇಲ್ಲಿನ ಹಳೆ ಬಸ್ ನಿಲ್ದಾಣ (ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣ) ಬಳಿ ಇರುವ ಬ್ಯಾಂಗಲ್ಸ್ ಅಂಗಡಿಯೊಂದರ ಮೇಲ್ಛಾವಣಿ ಶೀಟ್ ಕಟ್ ಮಾಡಿ ಖದೀಮರು ಕಳ್ಳತನ ಮಾಡಿದ್ದಾರೆ.

ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ರಾಜು ಕಟಾರಿ ಎಂಬುವವರಿಗೆ ಸೇರಿದ ವಿಷ್ಣು ಬ್ಯಾಂಗಲ್ಸ್ ಸ್ಟೋರ್ಸ್’ನಲ್ಲಿದ್ದ ಸುಮಾರು 50 ಸಾವಿರ ರೂ. ಕದ್ದಿದ್ದಾರೆ.

ಅಂಗಡಿ ಮಾಲೀಕರು ನಿನ್ನೆ ರಾತ್ರಿ ಸಿ.ಸಿ ಟಿವಿ ಬಂದ್ ಮಾಡಿ ಮನೆಗೆ ಹೋಗಿದ್ದರು. ಇದು ಕಳ್ಳತನಕ್ಕೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿದ್ದು, ಖದೀಮರು ಅಂಗಡಿಯಲ್ಲಿದ್ದ ಹಣವನ್ನು ಸಲೀಸಾಗಿ ಕದ್ದೋಯ್ದಿದ್ದಾರೆ.

ದುರಂತವೆಂದರೆ ಕಳ್ಳತನವಾಗಿರುವ ವಿಷ್ಣು ಬ್ಯಾಂಗಲ್ಸ್ ಅಂಗಡಿಯ ಸಮೀಪದಲ್ಲೇ ಶಹರ ಪೊಲೀಸ್ ಠಾಣೆ ಇದ್ದರೂ, ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬಸಲಿಂಗಪ್ಪ ಮುಶಿಗೇರಿ ನಿಧನ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ರೋಣ ಪಟ್ಟಣ ಮೂಲದ ಬಸಲಿಂಗಪ್ಪ ಮುಶಿಗೇರಿ(67) ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ನಸೀಬಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಿಧನರಾದರು. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಹೃದಯಾಘಾತದಿಂದ ಕಣ್ಮುಚ್ಚಿದರು. ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಗುರುವಾರ ಮಧ್ಯಾಹ್ನ 1 ಗಂಟೆಗೆ ನಸೀಬಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು‌ ಕುಟುಂಬದ ಮೂಲಗಳು ತಿಳಿಸಿವೆ.

ಕೊಳೆತ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆ; ಕೊಲೆ ಮಾಡಿ ಬಿಸಾಕಿರುವ ದುಷ್ಕರ್ಮಿಗಳು

ವಿಜಯಸಾಕ್ಷಿ ಸುದ್ದಿ, ಗದಗ;

ಶನಿವಾರ ಸಂಜೆ ಮನೆಯಿಂದ ಕಾಣಿಯಾಗಿದ್ದ ಬಾಲಕಿಯೊಬ್ಬಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಗದಗ ತಾಲೂಕಿನ ಅಸುಂಡಿ‌ ಗ್ರಾಮದಲ್ಲಿ ನಡೆದಿದೆ.

ಕೊಲಗೀಡಾದ ಬಾಲಕಿ ಅದೇ‌ ಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ಒಂಬತ್ತನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಳು ಎನ್ನಲಾಗಿದೆ.

ಕಳೆದ ಶನಿವಾರ ಸಂಜೆ ಏಳು ಗಂಟೆಯ ಸುಮಾರಿಗೆ ಮನೆಯಿಂದ ಹೊರ ಹೋಗಿದ್ದ ಬಾಲಕಿ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ.

ಭಾನುವಾರ ಗ್ರಾಮೀಣ ಠಾಣೆಗೆ ಬಾಲಕಿಯ ಪೋಷಕರು ದೂರು ನೀಡಲು ಬಂದಿದ್ದರು. ಆದರೆ ಬಾಲಕಿಯ ಭಾವಚಿತ್ರ ಇರದ ಕಾರಣ‌ ದೂರು ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಕಳೆದ ನಾಲ್ಕು ದಿನಗಳ ಕಾಲ ಹುಡುಕಾಡಿದರೂ ಬಾಲಕಿ ಇರುವಿಕೆ ಪತ್ತೆಯಾಗಿರಲಿಲ್ಲ. ಇಂದು ಸಂಜೆ ಕೊಳೆತ ವಾಸನೆ ಬಂದಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯಕ್ಕೆ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆಯಾ ಅಥವಾ ಒಬ್ಬನೇ ಕೊಲೆ ಮಾಡಿರಬಹುದಾ ಎಂಬುದು ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲು ಮುಂದಾಗಿದ್ದಾರೆ.

ಸುದ್ದಿ ತಿಳಿದ ಎಸ್ಪಿ ಯತೀಶ್ ಎನ್, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇನ್ಸ್‌ಪೆಕ್ಟರ್ ರವಿ ಕಪ್ಪತನವರ, ಪಿಎಸ್ಐ ಅಜಿತಕುಮಾರ್ ಹೊಸಮನಿ ಸ್ಥಳದಲ್ಲಿದ್ದು ಘಟನೆಯ ಮಾಹಿತಿ ಪಡೆದಿದ್ದು, ಕೊಲೆ ಮಾಡಿರುವ ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.

ಸಾರಿಗೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಗ್ಯಾಂಗ್ ಅರೆಸ್ಟ್

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ;

ಸಾರಿಗೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 70 ಲಕ್ಷ ರೂ. ವಂಚಿಸಿದ್ದ ಗ್ಯಾಂಗ್ ವೊಂದನ್ನು ಹೊಸದುರ್ಗ ಪೊಲೀಸರು ಖೆಡ್ಡಾಗೆ ಬೀಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಕಟನಕೇರಿ ಗ್ರಾಮದ ಮಹಮದ್ ಸಾಬ್ ಅಲ್ಲಾ ಸಾಬ್ ಭಗವಾನ್, ವಿಜಯಪುರ ನಗರದ ಬಸವರಾಜ್ ನಿಂಗಪ್ಪ ಭಜಂತ್ರಿ, ಬಾಗಲಕೋಟೆಯ ವೀರಭದ್ರ ಅರಗಿನಶೆಟ್ಟಿ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ವಿಜಯಪುರ ತಾಲೂಕಿನ ಗೊಗಳಿ ತಾಂಡಾದ ಮಂಜುನಾಥ್ ಬಾಲ್ಯನಾಯ್ಕ, ಬೆಂಗಳೂರಿನ ಅನಿಲಕುಮಾರ್ ಎನ್.ವಿ. ಬಂಧಿತರು.

ಬಂಧಿತರಿಂದ 12.40 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ನಕಲಿ‌ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

2019ರಲ್ಲಿ ಸಾರಿಗೆ ಇಲಾಖೆಯು ಸಂಚಾರಿ ನಿರೀಕ್ಷಕರು, ಸಹಾಯಕ ಸಂಚಾರಿ ನಿರೀಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಆರೋಪಿಗಳು ವಿಧಾನಸೌಧ ಮತ್ತು ವಿಕಾಸ ಸೌಧದಲ್ಲಿ ತಮಗೆ ಪರಿಚಯವರಿದ್ದು, ನೌಕರಿ ಮಾಡಿಸಿಕೊಡುವುದಾಗಿ ನಂಬಿಸಿ ಹಲವರ ಬಳಿ ಹಣ ಪಡೆದು ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ್ದರು.

ಒಟ್ಟು 500 ಮಂದಿಗೆ 70 ಲಕ್ಷ ರೂ. ವಂಚಿಸಿದ್ದ ಗ್ಯಾಂಗ್ ಬಣ್ಣ ಈಗ ಬಯಲಾಗಿದೆ. ವಂಚನೆಗೆ ಒಳಗಾಗಿದ್ದ ಯುವಕ ಅಭಿಷೇಕ್ ಹೊಸದುರ್ಗ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಚಿತ್ರದುರ್ಗ ಎಸ್ಪಿ ಜಿ. ರಾಧಿಕಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಾಡುಹಗಲೇ ದಾಳಿ ಪ್ರಕರಣ; ರೌಡಿ ಶೀಟರ್ ಸೇರಿ ಮೂವರ ಬಂಧನ, ಪುರಸಭೆ ಸದಸ್ಯ ಪರಾರಿ

ವಿಜಯಸಾಕ್ಷಿ ಸುದ್ದಿ, ಗದಗ;

ಹಾಡುಹಗಲೇ ಯುವಕನ ಮೇಲೆ ನಾಲ್ಕು ಜನರ ತಂಡವೊಂದು ಲಾಂಗ್, ಮಚ್ಚು‌ ಸೇರಿದಂತೆ ಮಾರಕಾಸ್ತ್ರದಿಂದ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮೇಶ್ವರ ಪೊಲೀಸರು ರೌಡಿ ಶೀಟರ್ ಸೇರಿದಂತೆ ಮೂವರನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಪುರಸಭೆ ಸದಸ್ಯ ಪರಾರಿಯಾಗಿದ್ದಾರೆ.

ಅಬ್ದುಲ್ ಮೈನುದ್ದೀನ ಆಡೂರ, ನಿಜಾಮ್ ಮೈನುಸಾಬ್ ಚಂಗಾಪೂರಿ, ಹಜ್ಜು ಅಲಿಯಾಸ್ ಹಜರತ್ ರಿಯಾಜ್ ಅಹ್ಮದ್ ಶಿರೂರ ಎಂಬುವವರನ್ನು ಬಂಧಿಸಲಾಗಿತ್ತು, ಫಿರ್ದೋಸ್ ಮೈನುದ್ದಿನ ಆಡೂರ ಎಂಬುವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ಕೃತ್ಯಕ್ಕೆ ಬಳಸಿರುವ ಮಾರಕಾಸ್ತ್ರ, ಹಾಗೂ ಕಾರ ಜಪ್ತಿ ಮಾಡಲಾಗಿದೆ.

ಆಸ್ತಿಗೆ ಸಂಬಂಧಿಸಿದಂತೆ ವಿವಾದ ಇದ್ದು, ಅದೇ ಸೇಡಿನಿಂದ ಮೊನ್ನೆ ಶನಿವಾರ ಅ.23 ರಂದು ಹಾಡುಹಗಲೇ, ಬೈಕ್ ಮೇಲೆ ಮನೆಯತ್ತ ಹೊರಟಿದ್ದ ನೂರ ಅಹ್ಮದ್ ಮಕಾನದಾರನನ್ನು ಅಡ್ಡಗಟ್ಟಿ ಲಾಂಗ್, ಮಚ್ಚು ಹಾಗೂ ಕೊಡ್ಲಿಯಿಂದ ಬಂಧಿತ ಆರೋಪಿಗಳು ದಾಳಿ ಮಾಡಿದ್ದರು. ಇದರಿಂದಾಗಿ ಕೆಲಕಾಲ ಆತಂಕದ‌ ವಾತಾವರಣ ನಿರ್ಮಾಣವಾಗಿತ್ತು. ಗಂಭೀರ ಗಾಯಗೊಂಡಿದ್ದ ನೂರ ಅಹ್ಮದ ಮಕಾನದಾರ ಎಂಬಾತ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿಲಾಗಿತ್ತು.

ಇದನ್ನೂ ಓದಿ ಹಾಡುಹಗಲೇ ಮೂವರಿಂದ ಯುವಕನ ಮೇಲೆ ಮಾರಕಾಸ್ತ್ರಗಳಿಂದ‌ ದಾಳಿ; ಬೆಚ್ಚಿದ ಜನ

ಹಾಡುಹಗಲೇ ನಡೆದ ಈ ಕೃತ್ಯದಿಂದಾಗಿ ಪೊಲೀಸರ ಮೇಲೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು.

ಪಿಎಸ್ಐ ಡಿ ಪ್ರಕಾಶ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಪೊಲೀಸರ ಕಾರ್ಯಾಚರಣೆ; ಗಾಂಜಾ ಮಾರಾಟ ಮಾಡುತ್ತಿದ್ದ ಸೆಟ್ಲಮೆಂಟ್ ನ ನಿವಾಸಿ ಸೇರಿ ಮೂವರ ಬಂಧನ

0

ವಿಜಯಸಾಕ್ಷಿ ಸುದ್ದಿ, ಗದಗ

ಇಲ್ಲಿನ ಕಳಸಾಪುರ ರಸ್ತೆಯ ಬ್ರೈಟ್ ಹಾರಿಜೋನ್ ಶಾಲೆಯ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಗದಗ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ಸೆಟ್ಲಮೆಂಟ್ ನಿವಾಸಿ ಸುರೇಶ್ ಕಾಳೆ, ರಾಮನಗರದ ದೇವರಾಜ್ ವಿಭೂತಿ, ಬೆಟಗೇರಿಯ ವಾಸೀಂ ಈಟಿ ಸೇರಿ ಗಾಂಜಾ ಮಾರಾಟ ಮಾಡುತ್ತಿದ್ದರು ಎನ್ನಲಾಗುತ್ತಿದೆ.

ಇನ್ನು ಬಂಧಿತರಿಂದ ಸುಮಾರು 26 ಸಾವಿರ ರೂ.ಮೌಲ್ಯದ 868 ಗ್ರಾ. ಗ್ರಾಂಜಾ ವಶಪಡಿಸಿಕೊಳ್ಳಲಾಗಿದೆ.

ಈ ಮೂವರು ಸೇರಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿರುವ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಡಿಎಸ್ಪಿ ಶಿವಾನಂದ ಪವಾಡಶೆಟ್ಟರ, ಇನ್ಸ್‌ಪೆಕ್ಟರ್ ಆರ್.ಎಸ್.ಕಪ್ಪತನವರ ಮಾರ್ಗದರ್ಶನದಲ್ಲಿ ಪಿಎಸ್ಐ ಅಜಿತಕುಮಾರ್ ಹೊಸಮನಿ, ಅಪರಾಧ ವಿಭಾಗದ ಸಿಬ್ಬಂದಿಗಳಾದ ಎನ್.ಎ.ಮೌಲ್ವಿ, ಪಿ.ಎಸ್.ಗಾಣಿಗೇರ, ಎಲ್.ಬಿ.ಪೂಜಾರ ಅವರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಸಿಬ್ಬಂದಿಗಳ ಈ ಕಾರ್ಯಾಚರಣೆಗೆ ಎಸ್ಪಿ ಯತೀಶ್ ಎನ್ ಶ್ಲಾಘಿಸಿದ್ದಾರೆ.

error: Content is protected !!