Home Blog Page 3299

ರಾಜ್ಯಕ್ಕೆ ಕರೆಂಟ್ ಶಾಕ್ ಸಾಧ್ಯತೆ

ವಿಜಯಸಾಕ್ಷಿ ಸುದ್ದಿ, ರಾಯಚೂರು

ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ(raichur thermel power station) ಕಲ್ಲಿದ್ದಲು ಕೊರತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಅಭಾವ ಉಂಟಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಸಿಕ್ಕಿದೆ. ರಾಜ್ಯಕ್ಕೆ ಶೇ.45ರಷ್ಟು ವಿದ್ಯುತ್ ಪೂರೈಕೆ ಮಾಡುವ ಆರ್‌ಟಿಪಿಎಸ್ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದ್ದು, ವಿದ್ಯುತ್ ಉತ್ಪಾದನೆಯಲ್ಲಿ ಸಮಸ್ಯೆ ಎದುರಾಗಿದೆ.

ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಎಂಟು ಘಟಕಗಳಿಂದ ನಿತ್ಯ 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಆದರೆ, ಕಲ್ಲಿದ್ದಲು ಕೊರತೆಯಿಂದ ನಾಲ್ಕು ಘಟಕಗಳು ವಿದ್ಯುತ್ ಉತ್ಪಾದನೆ ನಿಲ್ಲಿಸಿದ್ದು, ಸದ್ಯ ನಿತ್ಯ ಕೇವಲ ಕೇವಲ 4 ಘಟಕಗಳಿಂದ 480 ರಿಂದ 500 ಮೆಗಾವ್ಯಾಟ್ ವಿದ್ಯುತ್ ಮಾತ್ರ ಉತ್ಪಾದನೆಯಾಗುತ್ತಿದೆ.

ಇಂದಿಗೆ 12,010 ಮೆಟ್ರಿಕ್ ಟನ್ ಕಲ್ಲಿದ್ದಲು ಮಾತ್ರ ಸ್ಟಾಕ್ ಇದ್ದು, ಕೇವಲ ನಾಲ್ಕು ಘಟಕಗಳಿಗೆ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಎಂಟು ಘಟಕಗಳು ಉತ್ಪಾದನೆಗೆ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಬೇಕು. ಸಿಂಗರೇಣಿ, ಮಹಾನದಿ ಮತ್ತು ವೆಸ್ಟರ್ನ್ ಕೋಲ್ ಗಣಿಯಿಂದ ದಿನಕ್ಕೆ 8 ರಿಂದ 9 ರೇಕ್ ಕಲ್ಲಿದ್ದಲು ಬರುತ್ತಿತ್ತು.

ಪ್ರಸ್ತುತ ಕೇವಲ 3 ರಿಂದ 4 ರೇಕ್ ಕಲ್ಲಿದ್ದಲು ಬರುತ್ತಿದೆ. ಇಂದು ಕಲ್ಲಿದ್ದಲು ಬಾರದಿದ್ದರೆ ವಿದ್ಯುತ್ ಉತ್ಪಾದಿಸುತ್ತಿರುವ 4 ಘಟಕಗಳೂ ಬಂದ್ ಆಗುವ ಆತಂಕ ಎದುರಾಗಿದೆ. ಇನ್ನು ವೈಟಿಪಿಎಸ್ ಒಂದೇ ಘಟಕದಿಂದ ವಿದ್ಯುತ್ ಉತ್ಪಾದನೆಯಾಗುತ್ತಿದೆ. 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಸ್ಟಾಕ್ ಇದ್ದು, ಎರಡು ದಿನಕ್ಕೆ ಮಾತ್ರ ಸಾಕಾಗಲಿದೆ. ಹೀಗಾಗಿ ರಾಜ್ಯಕ್ಕೆ ವಿದ್ಯುತ್ ಕ್ಷಾಮ ಎದುರಾಗುವ ಸಾಧ್ಯತೆ ಇದೆ ಎಂದು ಆರ್‌ಟಿಪಿಎಸ್ ಘಟಕದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಬಳ್ಳಾರಿಯ ಆರ್‌ಟಿಪಿಎಸ್‌ನಲ್ಲೂ ಕಲ್ಲಿದ್ದಲು ಕೊರತೆ:
ಬಳ್ಳಾರಿ ಥರ್ಮಲ್ ಪವರ್ ಪ್ಲಾಂಟ್ (ಬಿಟಿಪಿಎಸ್) ಮೂರು ಘಟಕಗಳಿಂದ ನಿತ್ಯ 1700 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಮರ್ಥ್ಯ ಹೊಂದಿದೆ.

ಆದರೆ, ಕಲ್ಲಿದ್ದಲು ಅಭಾವದಿಂದಾಗಿ ಒಂದೇ ಘಟಕ ಚಾಲ್ತಿಯಲ್ಲಿದ್ದು, ಎರಡು ಘಟಕ ಸ್ಥಗಿತಗೊಂಡಿವೆ. ಸದ್ಯ ಆರಂಭದಲ್ಲಿರುವ ಒಂದು ಘಟಕದಿಂದ ನಿತ್ಯ 500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.

ಸದ್ಯ ಬಿಟಿಪಿಎಸ್‌ನಲ್ಲಿ 15 ಸಾವಿರ ಟನ್ ಕಲ್ಲಿದ್ದಲು ಸ್ಟಾಕ್ ಇದ್ದು, ಒಂದು ಘಟಕ ನಡೆಯಲು ದಿನಕ್ಕೆ 8 ಸಾವಿರ ಟನ್ ಕಲ್ಲಿದ್ದಲು ಬೇಕು. ಸದ್ಯ ಇರುವ ಸ್ಟಾಕ್ ಗೆ ಕೇವಲ ಇನ್ನೆರಡು ದಿನ ಮಾತ್ರ ಒಂದು ಘಟಕ ಕಾರ್ಯ ಮಾಡಬಹುದಾಗಿದೆ.

ನಾಳೆ ನಾಡಿದ್ದು ಮತ್ತೆ ಕಲ್ಲಿದ್ದಲು ಬರಬಹುದು. ಒಂದು ವೇಳೆ ಕಲ್ಲಿದ್ದಲು ಬಾರದೆ ಹೊದಲ್ಲಿ ಆ ಒಂದು ಘಟಕವೂ ಸ್ಥಗಿತ ಸಾಧ್ಯತೆ ಇದೆ ಎಂದು ಎಂದು ಬಿಟಿಪಿಎಸ್ ಮೂಲಗಳ ಮಾಹಿತಿ ನೀಡಿವೆ.

ಗೋಹತ್ಯೆ ಕಾನೂನು ವಿಫಲವಾಗಲು ಬಿಡಬೇಡಿ

ಪೊಲೀಸರಿಗೆ ಗೃಹಸಚಿವ ಅರಗ ಜ್ಞಾನೇಂದ್ರ ಸೂಚನೆ

ವಿಜಯಸಾಕ್ಷಿ ಸುದ್ದಿ, ಉಡುಪಿ

ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ವಿಫಲ ಆಗಿಲ್ಲ. ವಿಫಲವಾಗಲು ಪೊಲೀಸರು ಬಿಡಬಾರದು. ಗೋಸಾಗಣೆ, ಗೋಹತ್ಯೆ ಸಂಪೂರ್ಣ ನಿಲ್ಲಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಹೇಳಿದರು.

ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೋಹತ್ಯೆ ಹೆಚ್ಚಳದಿಂದ ಸಾಮಾಜಿಕ ಅಶಾಂತಿಗೂ ಕಾರಣವಾಗಿದೆ. ಅಕ್ರಮ ಗೋಸಾಗಣೆ, ಗೋಹತ್ಯೆ ಸಂಪೂರ್ಣ ನಿಲ್ಲಿಸಬೇಕು. ಈ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಸಚಿವರು ಹೇಳಿದರು.

ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ 16 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ತನಿಖೆ ವೇಗವಾಗಿ ನಡೆದಿದೆ. ಬಿಗಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ನಾವು ಅತ್ಯಾಚಾರ ಪ್ರಕರಣ ಸಹಿಸುವುದಿಲ್ಲ ಎಂದು ಹೇಳಿದರು.

ಅರ್ಬಾಜ್ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು: 12 ಜನ ಆರೋಪಿಗಳ ಬಂಧನ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ


ಖಾನಾಪುರ ಪಟ್ಟಣದ ಅರ್ಬಾಜ್ ಎಂಬ ಯುವಕನ ಬರ್ಬರ್ ಹತ್ಯೆ ಪ್ರಕರಣ ಬೇಧಿಸಿರುವ ಪೊಲೀಸರು‌ 12 ಆರೋಪಿಗಳನ್ನು ಬಂಧಿಸಿದ್ದಾರೆ.
‌‌‌

ಕುಂಬಾರ್, ಸುಶೀಲ್ ಕುಂಬಾರ್, ಗಣಪತಿ ಗೊಂದಳಿ, ಕುತುಬುದ್ದೀನ್ ಬೇಪಾರಿ, ಮಾರುತಿ ಗೊಂದಳಿ,‌ ಪ್ರಶಾಂತ ಪಾಟೀಲ್, ಮಂಜು ಗೊಂದಳಿ, ಪ್ರವೀಣ್ ಪೂಜಾರಿ, ಶ್ರೀಧರ ಡೋಣಿ ಬಂಧಿತರು.

ಅನ್ಯ ಕೋಮಿನ ಯುವಕನನ್ನು ಮಗಳು ಪ್ರೀತಿಸಿದ್ದಕ್ಕೆ ಯುವಕನ ಹತ್ಯೆಗೆ ಪೋಷಕರು ಸುಫಾರಿ‌ ನೀಡಿ ಕೊಲೆ ಮಾಡಿಸಿರುವುದು ತನಿಖೆ ವೇಳೆ ಬಯಲಾಗಿದೆ.

ಬೆಳಗಾವಿ ಜಿಲ್ಲೆಯ ‌ಖಾನಾಪುರ ಪಟ್ಟಣದಲ್ಲಿ ಸೆಪ್ಟೆಂಬರ್ 28ರಂದು ಅರ್ಬಾಜ್ ಎಂಬ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿ ರೈಲ್ವೆ ಹಳಿ ಮೇಲೆ ಎಸೆಯಲಾಗಿತ್ತು. ಈ ಭೀಕರ ಹತ್ಯೆ ರಾಜ್ಯಾದ್ಯಂತ ಸದ್ದು ಮಾಡಿದ್ದರಿಂದ ಪೊಲೀಸರಿಗೆ ಪ್ರಕರಣ ಬೇಧಿಸುವುದು ಸವಾಲಾಗಿತ್ತು.

ಈ ಬಗ್ಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಮೊದಲು ಪ್ರಕರಣ ದಾಖಲಾಗಿತ್ತು. ಅ.4ರಂದು ಖಾನಾಪುರ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿತ್ತು. ಪ್ರಕರಣ ಬೇಧಿಸಲು ಎಸ್ಪಿ ಲಕ್ಷ್ಮಣ ನಿಂಬರಗಿ ಬೈಲಹೊಂಗಲ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ‌ ರಚಿಸಿದ್ದರು.

ಪ್ರಕರಣದ ಬೆನ್ನು ಹತ್ತಿದ ಖಾನಾಪುರ ಪೊಲೀಸರು ಮೊದಲು ಪುಂಡಲೀಕ ಮುತಗೇಕರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಕೊಲೆಯ ಸಂಚು ಬಯಲಾಗಿದೆ.

ಅರ್ಬಾಜ್ ಹಾಗೂ ಶ್ವೇತಾ ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವಿಚಾರವಾಗಿ ಶ್ವೇತಾ ಪೋಷಕರಿಗೆ ದೊಡ್ಡ ಸಮಸ್ಯೆ ಉಂಟು ಮಾಡಿತ್ತು. ಮಗಳನ್ನು ಅರ್ಬಾಜ್ ನಿಂದ ದೂರ ಮಾಡಿ ಬೇರೆ ಮದುವೆ ಮಾಡಲು ನಿರ್ಧರಿಸಿದ್ದರು. ಅರ್ಬಾಜ್ ನಿಂದ ಮಗಳನ್ನು ದೂರ ಮಾಡಲು ತಂದೆ ಈರಪ್ಪ ಕಂಬಾರ್, ತಾಯಿ ಸುಶೀಲಾ ಕಂಬಾರ್ ಶ್ರೀರಾಮ ಸೇನೆ ಹಿಂದುಸ್ತಾನ್ ಸಂಘಟನೆಯ ತಾಲೂಕು ಅಧ್ಯಕ್ಷ ಪುಂಡಲೀಕ್ ಮಹರಾಜ್ ಹಾಗೂ ಬಿರ್ಜೆ ಮೊರೆ ಹೋಗಿದ್ದರು.

ಈ ಇಬ್ಬರು ಅರ್ಬಾಜ್ ಗೆ ಬೆದರಿಕೆ ಹಾಕಿದ್ದರು. ಸೆಪ್ಟೆಂಬರ್ 26 ರಂದು ಪ್ರೀತಿ, ಪ್ರೇಮ ಸಂಬಂಧ ರಾಜೀ ಪಂಚಾಯತಿ ನಡೆದಿತ್ತು‌. ಬಳಿಕವೂ ಅರ್ಬಾಜ್ ಹಾಗೂ ಶ್ವೇತಾ ಫೋನ್ ನಲ್ಲಿ ಸಂಪರ್ಕದಲ್ಲಿದ್ದರು. ಇದರಿಂದ ರೋಸಿ ಹೋದ ಪೋಷಕರು ಯುವಕನ ಕೊಲೆಗೆ ಸುಫಾರಿ ನೀಡಿದ್ದರು.

ಸೆಪ್ಟೆಂಬರ್ 28 ರಂದು ಅರ್ಬಾಜ್ ನನ್ನು ಖಾನಾಪುರಕ್ಕೆ ಕರೆಸಿದ ಆರೋಪಿಗಳು, ಅರ್ಬಾಜ್ ಮೇಲೆ ಮಾರಣಾಂತಿಕ ಮೇಲೆ ಹಲ್ಲೆ ಮಾಡಿ ರುಂಡ, ಕೈ ಕಾಲು ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದರು. ‌ಪ್ರಕರಣದ ದಿಕ್ಕು ತಪ್ಪಿಸಲು ಅರ್ಬಾಜ್ ಶವ ರೈಲು ಹಳಿ ಮೇಲೆ ಬಿಸಾಡಿದ್ದರು‌.

ಅರ್ಬಾಜ್ ಮಾತುಕತೆಗೆ ಕರೆಸಿದ್ದು ಕುತುಬುದ್ದೀನ್ ಬೇಪಾರಿಯನ್ನೂ ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

ಯಡಿಯೂರಪ್ಪನವರ ಶಕ್ತಿ ಕುಂದಿಸಲು ಯಾರಿಂದಲೂ ಸಾಧ್ಯವಿಲ್ಲ: ನಿರಾಣಿ


ವಿಜಯಸಾಕ್ಷಿ ಸುದ್ದಿ, ಹಾವೇರಿ

ಕರ್ನಾಟಕದಲ್ಲಿ ಮಾತ್ರವಲ್ಲ ದೇಶದ ನಾನಾ ಭಾಗಗದಲ್ಲಿ ಐಟಿ ದಾಳಿ ಆಗುತ್ತದೆ. ಡೌಟ ಬಂದರೆ ದಾಳಿ ಮಾಡ್ತಾರೆ. ದಾಳಿ ರಾಜಕೀಯ ಪ್ರೇರಿತವಲ್ಲ ಎಂದು ಬಿ.ಎಸ್. ಯಡಿಯೂರಪ್ಪನವರೇ ಹೇಳಿದ್ದಾರೆ‌. ಅವರ ಶಕ್ತಿ ಕುಂದಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.

ಹಾನಗಲ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು 50 ವರ್ಷಗಳಿಂದ ಪಕ್ಷಕಟ್ಟಿ ಬೆಳೆಸಿದ್ದಾರೆ. ದಾಳಿಯಲ್ಲಿ ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸರ್ಕಾರದ ಪಾತ್ರ ಇಲ್ಲ ಎಂದು ಸಮರ್ಥಿಸಿಕೊಂಡರು.

ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಿದರೆ ಹುಷಾರ್!! ಸರಕಾರಿ ವೈದ್ಯರಿಗೆ ಡಿಸಿ ಖಡಕ್ ಎಚ್ಚರಿಕೆ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಕೊಪ್ಪಳ ಜಿಲ್ಲಾಸ್ಪತ್ರೆ ಮತ್ತು ಇನ್ನಿತರ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳು ಲಭ್ಯವಿದ್ದರೂ ಸರ್ಕಾರಿ ವೈದ್ಯಾಧಿಕಾರಿಗಳು ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿ ಅಲ್ಲೇ ತೆರಳಿ ಚಿಕಿತ್ಸೆ ನೀಡುತ್ತಿರುವ ಮಾಹಿತಿ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಇಂತಹ ಪ್ರಕರಣಗಳು ಸಾಬೀತಾದಲ್ಲಿ ಸಂಬಂಧಿಸಿದ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.

ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ಅಕ್ಟೋಬರ್ 04 ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಬೋಧಕ ಆಸ್ಪತ್ರೆಗೆ ಸಂಬಂಧಿಸಿದ ಸಭೆಯಲ್ಲಿ ಕೆಲವು ವೈದ್ಯಕೀಯ ವಿಭಾಗಗಳ ಮುಖ್ಯಸ್ಥರು, ಸೂಕ್ತ ವೈದ್ಯಕೀಯ ಸೇವೆ ನೀಡದೇ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುವ ಮಾಹಿತಿಯು ಸಚಿವರ ಗಮನಕ್ಕೆ ಬಂದಿದೆ.

ಈ ವಿಷಯವನ್ನು ಸಚಿವರು ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವುದು ಸರ್ಕಾರಿ ವೈದ್ಯಾಧಿಕಾರಿಗಳು ಹಾಗೂ ವಿಭಾಗ ಮುಖ್ಯಸ್ಥರ ಆದ್ಯ ಕರ್ತವ್ಯವಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿರುವ ಸೌಲಭ್ಯಗಳಿಗನುಗುಣವಾಗಿ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಬಹುದು. ಆದರೆ, ಪಸ್ತುತ ದಿನಗಳಲ್ಲಿ ಲಭ್ಯವಿರುವ ಸೌಲಭ್ಯಗಳಿಗೆ ತಕ್ಕಂತೆ ರೋಗಿಗಳಿಗೆ ಸರಿಯಾದ ಚಿಕಿತ್ಸೆಯನ್ನು ನೀಡದೇ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುತ್ತಿರುವುದು ಕಾನೂನು ಬಾಹಿರ ಕ್ರಮವಾಗಿರುತ್ತದೆ. ಅದೇ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿರುವುದು ಗಂಭೀರ ಸ್ವರೂಪದ ಕರ್ತವ್ಯ ಲೋಪವಾಗಿರುತ್ತದೆ.

ಅಪರಾಧಿಕ ದಂಡ ಪ್ರಕ್ರಿಯೆ ಸಂಹಿತೆ 1973 (ಸಿ.ಆರ್.ಪಿ.ಸಿ) ಹಾಗೂ ಭಾರತೀಯ ದಂಡ ಸಂಹಿತೆ ಪ್ರಕಾರ ಅಪರಾಧಿಕ ಪ್ರಕರಣವಾಗಿರುತ್ತದೆ. ಪ್ರಯುಕ್ತ ತಮ್ಮ ಅಧೀನದ ಎಲ್ಲಾ ವೈದ್ಯಾಧಿಕಾರಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳಿಗುಣವಾಗಿ ಸೂಕ್ತ ಚಿಕಿತ್ಸೆಗೆ ನಿರ್ದೇಶನ ನೀಡಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಕಿಮ್ಸ್ ನಿರ್ದೇಶಕರಿಗೆ, ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಹಾಗೂ ವೈದ್ಯಕೀಯ ಅಧೀಕ್ಷಕರಿಗೆ ಸೂಚಿಸಿದ್ದಾರೆ.

ಆದ್ದರಿಂದ ಆಯಾ ವಿಭಾಗದ ಮುಖ್ಯಸ್ಥರು ಮತ್ತು ಸರ್ಕಾರಿ ವೈದ್ಯಾಧಿಕಾರಿಗಳು ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳಿಗನುಗುಣವಾಗಿ ಸೂಕ್ತ ಚಿಕಿತ್ಸೆಯನ್ನು ನೀಡದೇ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿದ ಪ್ರಕರಣಗಳು ಕಂಡುಬಂದಲ್ಲಿ ಅಂತಹ ವೈದ್ಯಾಧಿಕಾರಿಗಳ ವಿರುದ್ಧ ಕರ್ನಾಟಕ ಸೇವಾ ನಿಯಮಾವಳಿಗಳು 1958 ಹಾಗೂ ಭಾರತೀಯ ದಂಡ ಸಂಹಿತೆ ಹಾಗೂ ಅಪರಾಧಿಕಾ ಸಂಹಿತೆ 1973ರ ಅಡಿಯಲ್ಲಿನ ಸಂಬಂಧಿಸಿದ ನಿಯಮಗಳನ್ವಯ ಸೂಕ್ತ ಕ್ರಮ ಜರುಗಿಸಲಾಗುವುದು ಹಾಗೂ ಜಿಲ್ಲಾಸ್ಪತ್ರೆಗೆ ವಿವಿಧ ಮೂಲಗಳಿಂದ ಕೋವಿಡ್ 1ನೇ, 2ನೇ ಅಲೆಯಲ್ಲಿ ಮತ್ತು 3ನೇ ಅಲೆಯ ಸಂಭವದ ಹಿನ್ನೆಲೆಯಲ್ಲಿ ವೈದ್ಯಕೀಯ ಪರಿಕರಗಳನ್ನು ಖರೀದಿಸಿ ಸರಬರಾಜು ಮಾಡಲಾಗಿದೆ. ಸರಬರಾಜಾದ ವೈದ್ಯಕೀಯ ಪರಿಕರಗಳನ್ನು ಸುಸ್ಥಿತಿಯಲ್ಲಿಡಲು ಕ್ರಮ ವಹಿಸಬೇಕು. ಯಾವುದೇ ವೈದ್ಯಕೀಯ ಪರಿಕರಗಳು ಸುಸ್ಥಿತಿಯಲ್ಲಿ ಇಲ್ಲದಿದ್ದಲ್ಲಿ ಅದಕ್ಕೆ ಸಂಬಂಧಿಸಿದವರನ್ನೇ ಹೊಣೆಗಾರರನ್ನಾಗಿಸಿ ಸೂಕ್ತ ಕ್ರಮ ಜರುಗಿಸಲಾಗುವುದು.

ಈ ಬಗ್ಗೆ ಸಂಸ್ಥೆಯ ಮುಖ್ಯಸ್ಥರುಗಳ ಗಮನದಲ್ಲಿದ್ದೂ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಸಹಕಾರ ನೀಡಿದಂತಾಗುತ್ತದೆ. ಆದ್ದರಿಂದ ಸಹಕರಿಸಿದ ಕಾರಣಕ್ಕಾಗಿ ಸಂಬಂಧಿಸಿದ ಮುಖ್ಯಸ್ಥರನ್ನೇ ಜವಾಬ್ದಾರರನ್ನಾಗಿಸಿ ಅವರ ವಿರುದ್ಧ ದಂಡನಾ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳಿಗೆ 22 ವರ್ಷ ಜೈಲು ಶಿಕ್ಷೆ!!

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರಾದ (ಪೋಕ್ಸೋ) ಶಂಕರ ಎಂ. ಜಾಲವಾದಿ ಅವರು ತೀರ್ಪು ಪ್ರಕಟಿಸಿದ್ದಾರೆ.

ಪ್ರಕರಣ-1: ಗಂಗಾವತಿ ತಾಲ್ಲೂಕಿನ ತೊಂಡಿಹಾಳ ಗ್ರಾಮದ ಚಂದ್ರಶೇಖರ ಎಂಬ ವ್ಯಕ್ತಿಯು ಅಪ್ರಾಪ್ತ ವಯಸ್ಸಿನ ಬಾಲಕಿಯು ಹೋಟೆಲ್‌ನಲ್ಲಿ ಒಬ್ಬಳೇ ಇದ್ದಾಗ ಅವಳಿಗೆ ಹೊರಗಿನಿಂದ ತಿಂಡಿ-ತಿನಿಸು ಮತ್ತು ಐಸ್‌ಕ್ರೀಂ ಕೊಟ್ಟು ಅವಳೊಂದಿಗೆ ಸಲುಗೆಯಿಂದ ಮಾತನಾಡುತ್ತಾ, ಮದುವೆಯಾಗುವುದಾಗಿ ನಂಬಿಸಿ, ಅವಳು ಶಾಲೆಗೆ ಹೋಗುತ್ತಿದ್ದಾಗ ಗ್ರಾಮದ ಯಮನಪ್ಪ ಮೂಲಿಮನಿ ಎಂಬಾತನ ಪ್ರಚೋದನೆಯಿಂದ ಮೋಟರ್ ಸೈಕಲ್ ಮೇಲೆ ಫಿರ್ಯಾದಿದಾರಳನ್ನು ಹಿಂಬಾಲಿಸಿ ಶಾಲೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಮೋಟರ್ ಸೈಕಲ್ ಹತ್ತಲು ಒತ್ತಾಯ ಮಾಡಿದ್ದು, ಹತ್ತದಿದ್ದಲ್ಲಿ ಎಣ್ಣೆ ಕುಡಿದು ಸಾಯುವುದಾಗಿ ಹೆದರಿಸಿ ನಂತರ 2016ರ ಮಾರ್ಚ್ 28 ಅವಳ ಇಚ್ಛೆಗೆ ವಿರುದ್ಧವಾಗಿ ಬಲತ್ಕಾರದಿಂದ ಅತ್ಯಾಚಾರ ಮಾಡಿರುವ ಆರೋಪವು ತನಿಖೆಯಲ್ಲಿ ಸಾಬೀತಾಗಿದ್ದರಿಂದ ಆರೋಪಿತನ ವಿರುದ್ಧ ಗಂಗಾವತಿ ಗ್ರಾಮೀಣ ವೃತ್ತ ಸಿಪಿಐ ಪ್ರಭಾಕರ್ ಎಸ್.ಧರ್ಮಟ್ಟಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.


ಪ್ರಕರಣದ ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 12 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.50 ಸಾವಿರಗಳ ದಂಡ ವಿಧಿಸಿ, ದಂಡದ ಮೊತ್ತದಲ್ಲಿ ರೂ. 40 ಸಾವಿರಗಳನ್ನು ಸಂತ್ರಸ್ತಳಿಗೆ ನೀಡುವಂತೆ ಮತ್ತು ಬಾಧಿತ ಬಾಲಕಿಗೆ ಅತ್ಯಾಚಾರ ನಡೆಸಲು ಚಂದ್ರಶೇಖರನಿಗೆ ಪ್ರಚೋದನೆ ನೀಡಿದ ಯಮನಪ್ಪ ಮೂಲಿಮನಿ ಈತನ ಮೇಲಿನ ಆಪಾದನೆ ಸಾಬೀತಾಗಿಲ್ಲವೆಂದು ಬಿಡುಗಡೆ ಮಾಡಿ ನ್ಯಾಯಾಧೀಶರು ತೀರ್ಪು ಹೊರಡಿಸಿದ್ದಾರೆ.

ಪ್ರಕರಣ-2: ಕುಷ್ಟಗಿ ತಾಲ್ಲೂಕಿನ ಬಳೂಟಗಿ ಗ್ರಾಮದ ರಾಜಾ ಅಲಿಯಾಸ್ ರಾಜಾಸಾಬ್ ನದಾಫ್ ಎಂಬ ಆರೋಪಿತನು 2016ರ ಡಿಸೆಂಬರ್ 14 ರಂದು ಸಂಜೆ 05 ಗಂಟೆ ಸುಮಾರಿಗೆ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ಅಪಹರಣ ಮಾಡಿಕೊಂಡು ಗ್ರಾಮದ ಹೊರವಲಯದಲ್ಲಿ ಕರೆದುಕೊಂಡು ಬಂದು ಆಕೆಗೆ ಅತ್ಯಾಚಾರವೆಸಗಿ ನಂತರ ಬೆಂಗಳೂರಿನ ಕೋಣನಕುಂಟೆ ಏರಿಯಾದ ಒಂದು ಶೆಡ್ಡಿನಲ್ಲಿಟ್ಟು ಅವಳನ್ನು ಅತ್ಯಾಚಾರ ಮಾಡಿದ ಆರೋಪವು ತನಿಖೆಯಲ್ಲಿ ಸಾಬೀತಾಗಿದ್ದರಿಂದ ಆರೋಪಿತನ ವಿರುದ್ಧ ಕುಷ್ಟಗಿ ವೃತ್ತ ಸಿಪಿಐ ಗಿರೀಶ್ ಪಿ.ರೋಡಕರ್ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.35 ಸಾವಿರಗಳ ದಂಡ ವಿಧಿಸಿ, ದಂಡದ ಮೊತ್ತದಲ್ಲಿ ರೂ. 20 ಸಾವಿರಗಳನ್ನು ಸಂತ್ರಸ್ತಳಿಗೆ ನೀಡುವಂತೆ ನ್ಯಾಯಾಧೀಶರು ತೀರ್ಪು ಹೊರಡಿಸಿರುತ್ತಾರೆ.

ಈ ಎರಡೂ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಪ್ರಕರಣವನ್ನು ನಡೆಸಿ ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಸ್ವಾರಿ ಸಾ.ರಾ. ಮಹೇಶ್! ಸಾ.ರಾ.ಮಹೇಶ್‌ಗೆ ತಲೆಬಾಗಿದ ರೋಹಿಣಿ ಸಿಂಧೂರಿ

ವಿಜಯಸಾಕ್ಷಿ ಸುದ್ದಿ, ಮೈಸೂರು

ಸಾ.ರಾ. ಮಹೇಶ್ ವರ್ಸಸ್ ರೋಹಿಣಿ ಸಿಂಧೂರಿ ಸಂಘರ್ಷಕ್ಕೆ ಹೊಸ ಟ್ವಿಸ್ಟ್ ದೊರಕಿದ್ದು, ಸಾ.ರಾ. ಮಂಡಿಸಿದ್ದ ಹಕ್ಕುಚ್ಯುತಿಗೆ ಸಮಿತಿ ಎದುರು ರೋಹಿಣಿ ಸಿಂಧೂರಿ ಕ್ಷಮಾಪಣೆ ಕೇಳಿದ್ದಾರೆ ಎನ್ನಲಾಗಿದೆ.

ಜನವರಿ 12ರಂದು ಸಾ.ರಾ. ಮಹೇಶ್ ಅಧ್ಯಕ್ಷತೆಯಲ್ಲಿ ಸಮಿತಿ ನಡೆಸಿದ್ದ ಮುಡಾ ಸಭೆ, ಶ್ರೀರಾಮ ಸಕ್ಕರೆ ಕಾರ್ಖಾನೆಯ ಸಭೆಗೆ ಗೈರಾಗಿ ರೋಹಿಣಿ ಸಿಂಧೂರಿ ಉದ್ಧಟತನ ಪ್ರದರ್ಶಿಸಿದ್ದರು.

ರೋಹಿಣಿ ವರ್ತನೆಗೆ ಸಿಡಿಮಿಡಿಗೊಂಡಿದ್ದ ಸಾ.ರಾ.ಮಹೇಶ್ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಲು ಮುಂದಾಗಿದ್ದರು. ಅಷ್ಟರಲ್ಲೇ ಹಕ್ಕುಭಾದ್ಯತೆಗಳ ಸಮಿತಿ ಸಭೆಗೆ ಹಾಜರಾದ ಸಿಂಧೂರಿ ಕ್ಷಮಾಪಣೆ ಕೇಳಿದ್ದು, ಇನ್ನು ಮುಂದೆ ಯಾವುದೇ ಸಮಿತಿ, ಶಾಸಕರೊಂದಿಗೆ ಅಗೌರವದಿಂದ ನಡೆದುಕೊಳ್ಳುವುದಿಲ್ಲ. ಸರ್ಕಾರದ ಶಿಷ್ಟಾಚಾರ ಪರಿಪಾಲನೆ ಮಾಡುತ್ತೇನೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೋಹಿಣಿ ಸಿಂಧೂರಿ ಸ್ವಾರಿ ಕೇಳಿದ ಸಮಿತಿಯ ವರದಿ ಬಹಿರಂಗವಾಗಿದೆ.

ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಸರಕಾರಿ ಜಾಗೆ ಅಕ್ರಮ ಒತ್ತುವರಿ ಹಾಗೂ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಅವರು ತೆಗೆದುಕೊಂಡ ಕೆಲ ಕ್ರಮಗಳು ಸಾ.ರಾ. ಮಹೇಶರನ್ನು ಕೆರಳಿಸಿದ್ದವು.

ಈ ವಿಚಾರವಾಗಿ ಶಾಸಕರು ಜಿಲ್ಲಾಧಿಕಾರಿ ವಿರುದ್ಧ ತಿರುಗಿ ಬಿದ್ದಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಡಿಸಿ ರೋಹಿಣಿ ಸಿಂಧೂರಿ ಸಾ.ರಾ. ಅವರಿಗೆ ಸೇರಿದ ಚೌಟ್ರಿ ಒತ್ತುವರಿ ಜಾಗದಲ್ಲಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದರು.

ಇದರಿಂದ ತೀವ್ರ ಕೆಂಡಾಮಂಡಲವಾಗಿದ್ದ ಸಾ.ರಾ.ಮಹೇಶ್, ಇಲಾಖೆಗೆ ಬ್ಯಾಗ್ ವಿತರಣೆಯಲ್ಲಿ ಜಿಲ್ಲಾಧಿಕಾರಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಬಹಿರಂಗ ಆರೋಪ ಮಾಡಿ ಸದನದಲ್ಲೂ ವಿಷಯ ಪ್ರಸ್ತಾಪಿಸಿದ್ದರು.

ಐಪಿಎಲ್ ಬೆಟ್ಟಿಂಗ್ ದಂಧೆ; ಬೆಟಗೇರಿಯ ಬಟ್ಟೆ ವ್ಯಾಪಾರಿ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಬೆಟಗೇರಿಯ ರಾಮಮಂದಿರ ಬಳಿ ರಸ್ತೆ ಮೇಲೆ ಐಪಿಎಲ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಬಟ್ಟೆ ವ್ಯಾಪಾರಿಯನ್ನು ಗದಗ ಸೈಬರ್ ಕ್ರೈಮ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ‌.

ಬೆಟಗೇರಿಯ ಬಟ್ಟೆ ವ್ಯಾಪಾರಿಯಾದ ಮಾಧು ತುಳಸಿನಾಥ ಮೆಹರವಾಡೆ ಬಂಧಿತ ಆರೋಪಿ.

ಆರ್ ಸಿಬಿ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ತಂಡಗಳ ನಡುವೆ ನಡೆದಿದ್ದ ಐಪಿಎಲ್ ಪಂದ್ಯಕ್ಕೆ ಮೊಬೈಲ್ ಆ್ಯಪ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಪ್ರಮುಖ ಆರೋಪಿ, ಬುಕ್ಕಿ ಗಜೇಂದ್ರಗಡದ ಅರ್ಜುನ ಎಂಬಾತನ ಸೂಚನೆ ಮೇರೆಗೆ ಮಾಧು ಬೆಟ್ಟಿಂಗ್ ನಲ್ಲಿ ತೊಡಗಿದ್ದಾಗ ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ 24 ಸಾವಿರದ 500 ನೂರು ರೂಪಾಯಿಗಳನ್ನು ಜಪ್ತಿ ಮಾಡಿದ್ದಾರೆ.

ಚಿಕ್ಕಪ್ಪನ ಪುತ್ರನಿಂದಲೇ ಯುವತಿ ಮೇಲೆ ಅತ್ಯಾಚಾರ

ವಿಜಯಸಾಕ್ಷಿ ಸುದ್ದಿ, ಯಾದಗಿರಿ

ಚಿಕ್ಕಪ್ಪನ ಪುತ್ರನೇ ಯುವತಿ ಮೇಲೆ ಅತ್ಯಾಚಾರ ಎಸಗಿ ಜೀವಬೆದರಿಕೆ ಹಾಕಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ‌ದ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಕ್ಟೋಬರ್ 4ರಂದು ಜಿಲ್ಲೆಯ ಸುರಪುರ ತಾಲೂಕಿನ ವ್ಯಾಪ್ತಿಯ ‌ನಿವಾಸಿಯಾದ ಸಂತ್ರಸ್ತೆಯನ್ನು ಚಿಕ್ಕಪ್ಪನ ಪುತ್ರ ಸೀತಾಫಲ ಹಣ್ಣು ತರಲು ಹೋಗೋಣ ಎಂದು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಬುಧವಾರ ಗೋಗಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ.

ಪೊಲೀಸರು ಆರೋಪಿಯನ್ನು ಬಂಧಿಸಿ ಸೆಕ್ಷನ್ 376 ಮತ್ತು 506ರಡಿ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿಕೊಂಡಿದ್ದಾರೆ.

ಬಿಎಸ್ ವೈ ಆಪ್ತನಿಗೆ ಐಟಿ ಶಾಕ್

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಬೆಳ್ಳಂಬೆಳಿಗ್ಗೆ ಐಟಿ ಅಧಿಕಾರಿಗಳು ಬಿಎಸ್ ವೈ ಆಪ್ತನ ಮನೆ ಸೇರಿ ನಾಲ್ಕು ಕಡೆ ಸ್ಥಳಗಳ ಮೇಲೆ ರೇಡ್ ನಡೆಸುವ ಮೂಲಕ ಮಾಜಿ ಸಿಎಂ ಬಿಎಸ್ ವೈಗೆ ಶಾಕ್ ನೀಡಿದ್ದಾರೆ.

ಬಿಎಸ್ ವೈ ಆಪ್ತ ಸೇರಿದಂತೆ ಬೆಂಗಳೂರಿನ ಆಪ್ತರು, ಉದ್ಯಮಿಗಳು ಸೇರಿ 50 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಕರ್ನಾಟಕ, ಗೋವಾ ವಿಭಾಗದ 300 ಐಟಿ ಅಧಿಕಾರಿಗಳು ಬೆಂಗಳೂರಿನ 50 ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಹಾಯಕನಾಗಿದ್ದ ಉಮೇಶ್ ಅವರ ಅವರ ಭಾಷ್ಯಂ ಸರ್ಕಲ್ ನಲ್ಲಿರುವ ಮನೆ, ಕಚೇರಿ ಸೇರಿ ಅವರಿಗೆ ಸೇರಿದ್ದ 4 ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

error: Content is protected !!