ವಿಜಯಸಾಕ್ಷಿ ಸುದ್ದಿ, ಚನ್ನರಾಯಪಟ್ಟಣ : ಮನುಷ್ಯ ಜೀವನದಲ್ಲಿ ಸಾಧನೆ ಮಾತನಾಡಬೇಕೇ ಹೊರತು ಮಾತನಾಡುವುದೇ ಸಾಧನೆಯಾಗಬಾರದು. ಗುರಿಯೆಡೆಗೆ ನಮ್ಮೆಲ್ಲರ ಗಮನ ಇರಬೇಕೇ ಹೊರತು ಮಧ್ಯೆ ಬರುವ ಅಡೆತಡೆಗಳ ಮೇಲಲ್ಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ತಾಲೂಕಿನ ನಾಗರನವಿಲೆ ಶ್ರೀ ನಾಗೇಶ್ವರಸ್ವಾಮಿಗೆ ಕ್ಷೀರಾಭಿಷೇಕ ನೆರವೇರಿಸಿದ ನಂತರ ಜರುಗಿದ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಿದ್ದರು.
ಜೀವನದ ಉಜ್ವಲ ಭವಿಷ್ಯಕ್ಕೆ ಧರ್ಮ ಪ್ರಜ್ಞೆ ಮತ್ತು ಧರ್ಮಾಚರಣೆ ಬಹಳ ಮುಖ್ಯ. ದೇವರು ಧರ್ಮದಲ್ಲಿ ನಮ್ಮ ನಂಬಿಕೆ ಅಚಲವಾಗಿರಬೇಕು. ದೇಹವನ್ನು ದುಡಿಮೆಗೆ, ಮನಸ್ಸನ್ನು ಭಗವಂತನಿಗೆ ಅರ್ಪಿಸಿ ಮುನ್ನಡೆದಾಗ ಜೀವನ ಉಜ್ವಲಗೊಳ್ಳುತ್ತದೆ. ಮನುಷ್ಯನಲ್ಲಿ ವೈಚಾರಿಕ ಭಾವನೆಗಳು ಬೆಳೆದು ಬರಲಿ. ಆದರೆ ಧರ್ಮ, ದೇವರಲ್ಲಿ ನಾಸ್ತಿಕ ಮನೋಭಾವ ಬೆಳೆಯಬಾರದು ಎಂದರು.
ನವಿಲೆ ಗ್ರಾಮದ ಸಿದ್ಧೇಶ್ವರ ಶಾಸ್ತಿçಗಳು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಸಾಹಿತಿ ಡಾ.ಗುರುಪಾದಯ್ಯ ಸಾಲಿಮಠ ಇವರಿಗೆ ಗುರುರಕ್ಷೆ ನೀಡಿ ಶ್ರೀಗಳು ಆಶೀರ್ವದಿಸಿದರು. ಮಾಜಿ ಶಾಸಕ ಹಾಗೂ ಹಾಸನ ಜಿಲ್ಲೆ ವೀರಶೈವ ಸಮಾಜದ ಅಧ್ಯಕ್ಷೆ ಗುರುದೇವ, ಹಾಸನ ತಾಲೂಕಾ ವೀರಶೈವ ಸಮಾಜದ ಕಟ್ಟಾಯ ಶಿವಕುಮಾರ್, ನವಿಲೆ ಮಂಜುನಾಥ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಪವನಕುಮಾರ್ ನಿರೂಪಿಸಿದರು.



