HomeGadag Newsಸಿಬಿಐ ತನಿಖೆಗೆ ಹಿಂಜರಿಕೆಯೇಕೆ?

ಸಿಬಿಐ ತನಿಖೆಗೆ ಹಿಂಜರಿಕೆಯೇಕೆ?

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಮುಡಾ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐ ಮೂಲಕ ತನಿಖೆ ನಡೆಸಲಿ. ಯಾವುದೇ ತಪ್ಪು ಮಾಡಿಲ್ಲ ಎಂದರೆ ಭಯ ಪಡುವ ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಸೈಟ್ ಹಂಚಿಕೆಯಲ್ಲಿ ಯಾವುದೇ ಹಗರಣ ಆಗಿಲ್ಲ, ಈ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಅಂದರೆ ಇಷ್ಟು ದೊಡ್ಡ ಚರ್ಚೆ ಆಗುತ್ತಿರಲಿಲ್ಲ. ಏನೂ ಇಲ್ಲ ಅಂದರೆ ಸ್ವತಂತ್ರ ಸಂಸ್ಥೆಯ ಮೂಲಕ ತನಿಖೆಗೆ ಯಾಕೆ ಹಿಂಜರಿಕೆ ವ್ಯಕ್ತವಾಗುತ್ತಿದೆ ಎಂದು ಪ್ರಶ್ನಿಸಿದರು.

ಒಂದು ಪ್ರಕರಣದ ವಿಚಾರಣೆ ಬೇರೆ, ತನಿಖೆ ಮಾಡುವುದು ಬೇರೆ. ಮುಡಾ ಹಗರಣ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯ ಮಾಡುತ್ತೇನೆ. ಮುಡಾದಲ್ಲಿ ಎಕ್ಸೆಂಜ್ ಸೈಟ್‌ಗಳು ಯಾವುದಿದೆ, ಯಾವ ಸಂದರ್ಭದಲ್ಲಿ, ಯಾರಿಗೆ ಸೈಟ್ ನೀಡಿದ್ದೀರಿ ಎನ್ನುವ ಬಗ್ಗೆ ಸಂಪೂರ್ಣ ತನಿಖೆ ಆಗಲಿ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿ. ಯಾವುದೇ ಹಗರಣ ಇಲ್ಲವೆಂದಾದರೆ ಭಯಪಡುವ ಅಗತ್ಯವೇನಿದೆ ಎಂದರು.

ಈ ಹಗರಣದ ಕುರಿತು ಬಹಳ ಸ್ಪಷ್ಟವಾಗಿ ಮಾಧ್ಯಮಗಳು ತೋರಿಸಿಕೊಟ್ಟಿವೆ. ಈ ಪ್ರಕರಣದ ಕುರಿತು ಸಿಎಂ ಸಿದ್ದರಾಮಯ್ಯ ಬೇಕಾದ್ದು ಹೇಳಲಿ, ಬದಲಿ ನಿವೇಶನ ಯಾವ ಯಾವ ಲೇಔಟ್‌ನಲ್ಲಿ ಪಡೆದುಕೊಳ್ಳಬೇಕು ಎನ್ನುವ ಕಾನೂನು ಸ್ಪಷ್ಟವಾಗಿ ಉಲ್ಲಂಘನೆ ಆಗಿದೆ. ಯಾವ ಕಾನೂನು ಉಲ್ಲಂಘನೆ ಆಗಿದೆ ಎಂದು ನಮ್ಮ ಪಕ್ಷದ ನಾಯಕರು ಓದಿ ಹೇಳಿದ್ದಾರೆ. 50:50 ಯಾವ ಲೇಔಟ್‌ನಲ್ಲಿ ನೀಡಬೇಕು ಅಲ್ಲಿ ನೀಡಿಲ್ಲ. ಮೇಲ್ನೋಟಕ್ಕೆ ನಿಯಮ ಉಲ್ಲಂಘನೆ ಆಗಿದ್ದು ಸ್ಪಷ್ಟವಾಗಿದೆ. ಯಾವ ಸಂದರ್ಭದಲ್ಲಿ ಸೈಟ್ ಪಡೆದುಕೊಂಡರು, ಯಾವ ರೀತಿ ಪಡೆದುಕೊಂಡರು ಎನ್ನುವ ಪ್ರಶ್ನೆ ಇದೆ ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆಯಲ್ಲಿ ನಡೆದ ಹಗರಣದ ಕುರಿತು ಕೇಳಿದ ಪ್ರಶ್ನೆಗೆ, ಆ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಹೇಳಿದರು.

ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಬಂಧನ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ಬಸವರಾಜ ಬೊಮ್ಮಾಯಿ, ವಾಲ್ಮೀಕಿ ಹಗರಣದ ಬಗ್ಗೆ ಇ.ಡಿ ಸಂಸ್ಥೆ ತನಿಖೆ ಮಾಡುತ್ತಿದೆ. ಮೊದಲು, ಮಾಜಿ ಸಚಿವ ನಾಗೇಂದ್ರರ ಪಾತ್ರ ಇಲ್ಲ ಎಂದು ಕ್ಲೀನ್ ಚಿಟ್ ಕೊಟ್ಟರು. ಈಗ ನಾಗೇಂದ್ರ ಪಾತ್ರ ಇರುವುದು ಸ್ಪಷ್ಟವಾಗಿದೆ. ಈಗ ನಾಗೇಂದ್ರ ಅವರ ಬಂಧನವಾಗಿದೆ. ಶಾಸಕ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರ ಪಾತ್ರ ಇಲ್ಲ ಎಂದರು. ಈಗ ಅದು ಕೂಡಾ ಸಾಬೀತಾಗಿದೆ. ಈ ಪ್ರಕರಣದಲ್ಲಿ ಬಗೆದಷ್ಟೂ ವಿಚಾರಗಳು ಹೊರಬರುತ್ತಿವೆ. ಬರುವ ದಿನದಲ್ಲಿ ಹಣಕಾಸು ಇಲಾಖೆಯ ಪಾತ್ರ ಸ್ಪಷ್ಟವಾಗಲಿದೆ. ಮುಂದಿನ ತನಿಖೆಯನ್ನು ಇ.ಡಿಯವರು ತಾವೇ ಮಾಡುತ್ತಾರೆ ಎಂದರು.

 

LEAVE A REPLY

Please enter your comment!
Please enter your name here

E-Paper

E-paper

Must Read

spot_img