ಬೆಂಗಳೂರು: ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ಬಂಧನ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಿಟಿ ರವಿ ಬಂಧನದಲ್ಲಿ ರಾಜ್ಯ ಸರ್ಕಾರದ ನಡೆ ವಿರುದ್ಧ ಬಿಜೆಪಿ ರಾಜ್ಯಪಾಲರ ಮೊರೆ ಹೋಗಿದ್ದರು. ಇದೀಗ ಪ್ರಕರಣ ಸಂಬಂಧ, ಮಧ್ಯಪ್ರವೇಶ ಮಾಡಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಕಚೇರಿಗೆ ಡಿಸೆಂಬರ್ 31ರಂದೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪತ್ರ ಬರೆದಿದ್ದರು ಎಂಬುದು ಈಗ ತಿಳಿದುಬಂದಿದೆ.
ಹೌದು ಸಿಟಿ ರವಿ ಅವರ ವಿರುದ್ಧ ಪೊಲೀಸರು ಅನುಮಾನಾಸ್ಪದ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಹಾಗಾಗಿ ಪ್ರಕರಣದ ವಿವರಣೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪತ್ರ ಬರೆದಿದ್ದಾರೆ. ಸಿಟಿ ರವಿ ಪ್ರಕರಣದಲ್ಲಿ ಪೊಲೀಸರು ನಡೆದುಕೊಂಡ ರೀತಿಯ ಕುರಿತು ವಿವರಣೆ ನೀಡುವಂತೆಯೂ ಸಿಎಂಗೆ ಪತ್ರ ಬರೆದಿದ್ದಾರೆ.
ಬೆಳಗಾವಿಯಲ್ಲಿ ಸಿಟಿ ರವಿ ಅವರನ್ನು ಬಂಧಿಸಿದ ಬಳಿಕ ಪೊಲೀಸರು ನಡೆದುಕೊಂಡ ನಡೆಯ ಕುರಿತು ಸಿಟಿ ರವಿ ಅವರು ಅನುಮಾನ ವ್ಯಕ್ತಪಡಿಸಿದ್ದರು. ಮಾತ್ರವಲ್ಲ ಸರ್ಕಾರದ ವಿರುದ್ಧ ಎನ್ ಕೌಂಟರ್ ಆರೋಪ ಮಾಡಿ ಗವರ್ನರ್ ಗೆ ದೂರು ನೀಡಿದ್ದರು. ಸದ್ಯ ಸಿಟಿ ರವಿ ಅವರ ದೂರನ್ನು ಗಂಭೀರವಾಗಿ ತೆಗೆದುಕೊಂಡ ರಾಜ್ಯಪಾಲರು ಸಿಎಂ ಗೆ ಸೂಚನೆ ನೀಡಿದ್ದಾರೆ.



